ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ...

ಇವರೆಂದೂ ಗಡಿಗೆ ಹೋಗಿ ಕೊರೆಯುವ ಚಳಿಯಲ್ಲಿ ಹೋರಾಡಿದವರಲ್ಲ. ವರ್ಷಾನುಗಟ್ಟಲೇ ಮನೆ ಮಾರು, ಹೆಂಡತಿ ಮಕ್ಕಳನ್ನು ಬಿಟ್ಟು ಇದ್ದವರಲ್ಲ. ಶತ್ರು ದೇಶದ ಸೈನಿಕರ ಗುಂಡಿಗೆ ಎದೆ ಕೊಟ್ಟವರಲ್ಲ. ಆದರೆ, ಟಿವಿ ಚಾನೆಲ್ನವರು ಮುಖದ ಮುಂದೆ ಮೈಕ್ ಹಿಡಿದರೆ, ಇವರ ದೇಶ ಭಕ್ತಿ ಉಕ್ಕೇರುತ್ತದೆ. ಹಿಂದೆ ದೇಶ ಭಕ್ತಿಯ ಬಗ್ಗೆ ಮಾತಾಡುತ್ತಿದ್ದ ಇವರು ಈಗ ಧರ್ಮ ರಕ್ಷಣೆಯ ಬಗ್ಗೆ ಅದರಲ್ಲೂ ಸನಾತನ ಧರ್ಮ ರಕ್ಷಣೆ ಬಗ್ಗೆ ಧಾರಾಳವಾಗಿ ಮಾತನಾಡುತ್ತಾರೆ.
ಇವರು ಗಡಿಗಂತೂ ಹೋಗುವುದಿಲ್ಲ. ಗಡಿಯೊಳಗೂ ಜನರನ್ನು ನೆಮ್ಮದಿಯಿಂದ ಇರಲು ಬಿಡಲ್ಲ. ಆದರೆ, ಇವರು ತಮ್ಮ ಮಕ್ಕಳನ್ನು ದುಬಾರಿ ವಸತಿ ಶಾಲೆಗಳಲ್ಲಿ ಇಟ್ಟು ಓದಿಸುತ್ತಾರೆ. ಮುಂದಿನ ಶಿಕ್ಷಣಕ್ಕಾಗಿ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ ಮುಂತಾದ ದೇಶಗಳಿಗೆ ಕಳಿಸುತ್ತಾರೆ. ಅಲ್ಲಿ ಹೋಗಲಾಗದವರು ತಮ್ಮ ತಂದೆ ಗಳಿಸಿದ ಅಪಾರ ಆಸ್ತಿಯ ವಾರಸುದಾರರಾಗುತ್ತಾರೆ. ಅಕ್ರಮ ಆಸ್ತಿ ಪಾಸ್ತಿಯನ್ನು ಸುರಕ್ಷಿತವಾಗಿ ಇಡಲು ಇವರು ಬ್ಯಾಂಕುಗಳಿಗೆ ಹೋಗುವುದಿಲ್ಲ. ಅದಕ್ಕಾಗಿ ಅವರವರ ಜಾತಿ ಮಠಗಳಿವೆ. ತಮ್ಮ ಸಂಪತ್ತು ಕಾಯಲೆಂದೇ ರಾಜಕಾರಣಿಗಳು ಹೊಸ ಮಠಗಳನ್ನು ಸೃಷ್ಟಿಸುತ್ತಾರೆ. ತಮಗೆ ಮಠ ಮಾಡಿಕೊಟ್ಟ ರಾಜಕಾರಣಿಗಳ ಹಿತಾಸಕ್ತಿಯನ್ನು ಇವರು ಕಾಪಾಡುತ್ತಾರೆ. ‘ಪ್ರಗತಿಪರ’ ಎಂದು ಹೆಸರಾದ ಒಬ್ಬಿಬ್ಬರು ಸ್ವಾಮಿಗಳು ಕೂಡ ಪಾರಮಾರ್ಥಿಕ ಚಿಂತನೆಗೆ ಎಳ್ಳು ನೀರು ಬಿಟ್ಟು ಇಂಥವರ ಕಪ್ಪು ಸಂಪತ್ತಿನ ರಕ್ಷಕರಾಗಿದ್ದಾರೆ.
ತಮ್ಮ ಮಕ್ಕಳು ಬರೀ ಆಸ್ತಿಯ ಪಾಲುದಾರರಾದರೆ ಸಾಲದೆಂದು ತಮ್ಮ ರಾಜಕೀಯ ಅಧಿಕಾರದ ವಾರಸುದಾರರನ್ನಾಗಿ ಮಾಡಲು ನಾನಾ ಕಸರತ್ತು ಮಾಡುತ್ತಾರೆ. ಎಡಪಂಥೀಯ ಪಕ್ಷಗಳನ್ನು ಹೊರತುಪಡಿಸಿ ಬಹುತೇಕ ಪಕ್ಷಗಳು ಗಾಂಧಿ, ನೆಹರೂ ಕುಟುಂಬದ ವಂಶಾಡಳಿತ ವಿರೋಧಿಸುತ್ತ ಅದನ್ನು ತೋರಿಸಿ ತಮ್ಮ ರಾಜಕೀಯ ಅಸ್ತಿತ್ವ ಕಂಡುಕೊಂಡವರು. ಆದರೆ ಗಾಂಧಿ, ನೆಹರೂ ಕುಟುಂಬಗಳು ಮಾಡಿದ ತ್ಯಾಗ ಬಲಿದಾನಗಳ ತಿಲಮಾತ್ರದಷ್ಟು ತ್ಯಾಗ ಇವರು ಮಾಡಿದವರಲ್ಲ. ಹೋರಾಟದ ರಾಜಕಾರಣಕ್ಕೆ ಇವರು ತುಂಬ ದೂರ. ಈಗ ನಮ್ಮ ಸಂಸತ್ತು ಮತ್ತು ಶಾಸನ ಸಭೆಗಳನ್ನು ನೋಡಿದರೆ ಪ್ರಭಾವೀ ರಾಜಕಾರಣಿಗಳ ಮಕ್ಕಳು, ಮೊಮ್ಮಕ್ಕಳು, ಮಡದಿಯರು, ಅಳಿಯಂದಿರು, ಒಡಹುಟ್ಟಿದ ಸೋದರರು, ಸೊಸೆಯಂದಿರು, ತಮ್ಮಂದಿರು ಹೀಗೆ ಅರ್ಧ ಸದನದ ತುಂಬ ತಮ್ಮವರನ್ನೇ ತುಂಬಿಸಿರುತ್ತಾರೆ. ದೇಶದ ಗಡಿಯಲ್ಲಿ ಭಯೋತ್ಪಾದಕರ ಹಾವಳಿ ತೀವ್ರವಾದರೆ, ಶತ್ರು ಸೇನೆಯ ದಾಳಿ ನಡೆದರೆ ಅಲ್ಲಿ ದೇಶ ಕಾಯಲು ಹೋದ ಬಡವರ, ದಲಿತರ, ಹಿಂದುಳಿದವರ ಮಕ್ಕಳು ದಾಳಿಗೆ ಬಲಿಯಾಗಿ ಹೆಣವಾಗುತ್ತಾರೆ. ಇವರ ಶವಗಳನ್ನು ಹೊತ್ತುಕೊಂಡ ಬಾಕ್ಸ್ ಗಳು ದೇಶದ ವಿವಿಧೆಡೆ ಬಡವರ ಮನೆ ಬಾಗಿಲಿಗೆ ಬರುತ್ತವೆ. ಸೇನೆಯಲ್ಲಿ ದುಡಿದು ಮನೆ ನಡೆಸುವ ಮಕ್ಕಳನ್ನು, ಪತಿಯನ್ನು ಕಳೆದುಕೊಂಡ ಕುಟುಂಬಗಳು ಬೀದಿಗೆ ಬೀಳುತ್ತವೆ. ಊರಿಗೆ ಶವ ಬಂದಾಗ ಹತ್ತು ರೂಪಾಯಿಯ ಹೂವಿನ ಹಾರ ಹಾಕಲು ಬರುವ ರಾಜಕಾರಣಿಗಳು ಯುದ್ಧದಲ್ಲಿ, ಹಿಂಸಾಚಾರದಲ್ಲಿ ಅಸುನೀಗಿದವರನ್ನು ಹಾಡಿ ಹೊಗಳಿ ಹೊರಟು ಹೋಗುತ್ತಾರೆ.
ಇದೇ ಉದಾಹರಣೆ ಕೋಮು ಹಿಂಸಾಚಾರಕ್ಕೂ ಕೊಡಬಹುದು. ಇಲ್ಲಿ ಧರ್ಮ ರಕ್ಷಣೆಯ ಹೊಣೆಯನ್ನು ಬಡವರು, ತಳ ಸಮುದಾಯದವರ ಮಕ್ಕಳ ಹೆಗಲಿಗೆ ಹೊರಿಸಿ ಅವರಿಗೆ ಕಲ್ಪಿತ ಶತ್ರುಗಳನ್ನು ತೋರಿಸಿ ಹೊಡೆದಾಟದ ವಾತಾವರಣವನ್ನು ನಿರ್ಮಿಸುತ್ತಾರೆ. ಜಾತಿ, ಮತದ ಹಾಗೂ ಕೋಮು ದ್ವೇಷದ ನಶೆ ಉಳಿದೆಲ್ಲ ಮಾದಕ ಪಾನೀಯಗಳಿಗಿಂತ ಶಕ್ತಿಶಾಲಿಯಾದುದು.ಉದಾಹರಣೆಗೆ ನೀವು ದಾಭೋಲ್ಕರ್, ಗೋವಿಂದ ಪಾನ್ಸರೆ, ಡಾ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಯ ಪ್ರಕರಣದ ಆಪಾದಿತರ ಪಟ್ಟಿಯನ್ನು ನೋಡಿ ಅವರು ಯಾರ ಮನೆಯ ಮಕ್ಕಳೆಂದು ಗೊತ್ತಾಗುತ್ತದೆ. ಕೋಮು ಹಿಂಸಾಚಾರದ ಪ್ರಕರಣಗಳಲ್ಲಿ ಕೋರ್ಟುಗಳಿಗೆ ಅಲೆದಾಡುವವರನ್ನು ನೋಡಿ ಅವರೆಲ್ಲ ಕಡು ಬಡತನದ ಯಾವುದೋ ಹಿಂದುಳಿದ ಸಮುದಾಯಗಳ ಹುಡುಗರು ಆಗಿರುತ್ತಾರೆ. ಧರ್ಮ ರಕ್ಷಣೆಗಾಗಿ ಅವರನ್ನು ಪ್ರಚೋದಿಸುವವರು ಎಲ್ಲೋ ಇರುತ್ತಾರೆ. ದಂಡನೆಗೆ ಬಲಿಯಾಗುವವರು ಮಾತ್ರ ಬಡವರ ಮಕ್ಕಳು. ಆದರೆ, ಎಲ್ಲ ಜಾತಿ, ಮತಗಳು ಧರ್ಮದ ಅಂದರೆ ಕೋಮು ನಶೆ ಏರಿಸಿಕೊಂಡು ಹೊಡೆದಾಡಿದರೆ ಎಲ್ಲ ಮತ, ಸಮುದಾಯಗಳ ರಾಜಕಾರಣಿ ಗಳು ಮತ್ತು ಸಿರಿವಂತರ ನಡುವೆ ವ್ಯಾವಹಾರಿಕ ಸಂಬಂಧಗಳಿರುತ್ತವೆ. ಉದ್ದಿಮೆಗಳಲ್ಲಿ ಪರಸ್ಪರ ಪಾಲುದಾರಿಕೆ ಬಂಡವಾಳ ಹೂಡಿರುತ್ತಾರೆ.
ಮತ್ತೆ ಯುದ್ಧದ ವಿಷಯಕ್ಕೆ ಬಂದರೆ ಅಲ್ಲೂ ಯುದ್ಧ ನಡೆಯಲೇಬೇಕೆಂದು ಪೌರುಷ ಪ್ರದರ್ಶನ ಮಾಡಲು ಮುಂದಿನ ಸಾಲಿನಲ್ಲಿ ಇರುವವರು ಕೂಡ ಇವರೇ. ಯಾಕೆಂದರೆ ಇವರ ಮಕ್ಕಳಾರೂ ಸೇನೆಯಲ್ಲಿ ಇರುವುದಿಲ್ಲ. ಉದಾಹರಣೆಗೆ, ಪಹಲ್ಗಾಮ್ ದುರಂತದ ನಂತರದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಗೊತ್ತಾಗುತ್ತದೆ.
ಸಮಾಜವಾದಿ ಹಿನ್ನೆಲೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರಕಾರಕ್ಕೆ ಬೆಂಬಲವನ್ನು ವ್ಯಕ್ತಪಡಿಸುತ್ತಲೆ, ಭದ್ರತಾ ಲೋಪಗಳ ಬಗ್ಗೆ ಮಾತನಾಡಿದರು.ಇದರ ಜೊತೆಗೆ, ‘ಪಾಕಿಸ್ತಾನದ ಜೊತೆಗೆ ಯುದ್ಧ ಬೇಡ, ಕಾಶ್ಮೀರದಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡರೆ ಸಾಕು’ ಎಂದು ಹೇಳಿದರು. ಅದರಲ್ಲಿ ತಪ್ಪೇನೂ ಇರಲಿಲ್ಲ. ಸಾಮಾನ್ಯವಾಗಿ ಸಮಾಜವಾದಿಗಳು, ಕಮ್ಯೂನಿಸ್ಟರು ಗಾಂಧಿವಾದಿಗಳು, ಲೋಹಿಯಾವಾದಿಗಳು ಹಿಂಸೆಯಿಲ್ಲದ ಸಮಾನತೆಯ ಸಮಾಜದ ಕನಸು ಕಾಣುವರು. ಮನುಷ್ಯರು ಮನುಷ್ಯರನ್ನು ಕೊಲ್ಲುವ ಯುದ್ಧವನ್ನು ಎಂದಿಗೂ ಇಷ್ಟಪಡುವುದಿಲ್ಲ. ಆದರೆ, ದೇಶಕ್ಕೆ ಗಂಡಾಂತರ ಎದುರಾದಾಗ ಅನಿವಾರ್ಯವಾದರೆ ಮಾತ್ರ ಯುದ್ಧ ನಡೆಯಲಿ ಎಂದು ಹೇಳುತ್ತಾರೆ. ಸಿದ್ದರಾಮಯ್ಯನವರು ಹೇಳಿದ್ದು ಅದನ್ನೇ. ಇದರಲ್ಲಿ ಆಕ್ಷೇಪಾರ್ಹವಾದದ್ದು ಏನೂ ಇಲ್ಲ. ಆದರೂ ಅವರ ಮಾತು ಸ್ವಯಂ ಘೋಷಿತ ದೇಶಭಕ್ತರ ಆಕ್ರೋಶಕ್ಕೆ ಗುರಿಯಾಯಿತು.
ವಿಧಾನಸಭೆಯ ಪ್ರತಿಪಕ್ಷ ನಾಯಕ ಅಶೋಕ್, ಉಪ ನಾಯಕ ಧಾರವಾಡದ ಅರವಿಂದ ಬೆಲ್ಲದ್ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಒಮ್ಮಿಂದೊಮ್ಮೆಲೆ ಮುಖ್ಯಮಂತ್ರಿ ವಿರುದ್ಧ ದಾಳಿ ಆರಂಭಿಸಿದರು.
ಸಾಮಾನ್ಯವಾಗಿ ಅಪಾರ ಪ್ರಮಾಣದ ಜೀವ ಹಾನಿ, ಆಸ್ತಿ ಪಾಸ್ತಿಯ ನಷ್ಟಕ್ಕೆ ಕಾರಣವಾಗುವ ಯುದ್ಧವನ್ನು ಯಾರೂ ಬಯಸುವುದಿಲ್ಲ. ಸಿದ್ದರಾಮಯ್ಯನವರು ಅದನ್ನೇ ಹೇಳಿದರು. ಪಾಕಿಸ್ತಾನದ ಜೊತೆಗೆ ಯುದ್ಧದ ಅಗತ್ಯವಿಲ್ಲ. ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿದರೆ ಸಾಕು ಎಂದು ಹೇಳಿದರು. ಅವರು ಹೇಳಿದ ಈ ಮಾತು ಮಹಾ ಅಪರಾಧ ಎಂಬಂತೆ ಅಶೋಕ ಸಾಮ್ರಾಟರು ಸಿದ್ದರಾಮಯ್ಯನವರಿಗೆ ಯಾವಾಗ ಏನು ಮಾತಾಡಬೇಕೆಂಬುದು ಗೊತ್ತಿಲ್ಲ ಎಂದು ಟೀಕಿಸಿದರು. ಇನ್ನು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕರಾದ ಅರವಿಂದ ಬೆಲ್ಲದ್ ಅವರು ಸಿದ್ದರಾಮಯ್ಯನವರಿಗೂ ಭಯೋತ್ಪಾದಕರಿಗೂ ವ್ಯತ್ಯಾಸವಿಲ್ಲ ಎಂದು ಹೇಳಿದರು.
ಇನ್ನು ರಾಜ್ಯದ ಮುಖ್ಯಮಂತ್ರಿಯಾಗಲು ಹೊರಟಿರುವ ವಿಜಯೇಂದ್ರ ‘ಸಿದ್ದರಾಮಯ್ಯನವರು ಸೈನಿಕರ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು ಹೊರಟಿದ್ದಾರೆ’ ಎಂದು ಧ್ವನಿಗೂಡಿಸಿದರು. ಈಗಿನ ರಾಜಕಾರಣಿಗಳು ಹಿಂದಿನವರಂತೆ ಓದಿಕೊಂಡವರಲ್ಲ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ರಮೇಶ್ ಕುಮಾರ್ರಂಥ ಕೆಲವೇ ಕೆಲವರಿಗೆ ಓದಿನ ಹಿನ್ನೆಲೆಯಿದೆ. ಉಳಿದ ಬಹುತೇಕ ರಾಜಕಾರಣಿಗಳಿಗೆ ಇಂಥ ಸಂದರ್ಭದಲ್ಲಿ ಅಗ್ಗದ ದೇಶಭಕ್ತಿಯನ್ನು ಪುಗಸಟ್ಟೆ ಪ್ರದರ್ಶಿಸುವುದು ಮಾತ್ರ ಗೊತ್ತು. ಇವರು ಎಂದೂ ಯುದ್ಧ ಭೂಮಿಗೆ ಹೋದವರಲ್ಲ. ತಮ್ಮ ಮಕ್ಕಳನ್ನು ದೇಶದ ಗಡಿ ಕಾಯಲು ಸೇನೆಗೆ ಸೇರಿಸಿದವರಲ್ಲ. ಕೋಟಿ ಕೋಟಿ ಆಸ್ತಿ ಮಾಡಿಕೊಂಡಿರುವವರು ಅದರ ರಕ್ಷಣೆಗೆಗಾಗಿ ರಾಜಕೀಯಕ್ಕೆ ಬರುತ್ತಾರೆ. ರಾಜಕೀಯಕ್ಕೆ ಬಂದು ಮತ್ತಷ್ಟು ಕೋಟಿ ಮಾಡಿಕೊಳ್ಳುತ್ತಾರೆ. ತಮ್ಮ ಮಕ್ಕಳನ್ನು ಅಮೆರಿಕ, ಇಂಗ್ಲೆಂಡ್ಗಳಲ್ಲಿ ಇಟ್ಟು ಓದಿಸುತ್ತಾರೆ. ಮಕ್ಕಳಿಗಾಗಿ ಕೋಟ್ಯಂತರ ಆಸ್ತಿ ಮಾಡಿದ್ದು ಸಾಲದೆಂಬಂತೆ ತಮ್ಮ ರಾಜಕೀಯ ಉತ್ತರಾಧಿಕಾರಿಗಳನ್ನಾಗಿ ಮಕ್ಕಳನ್ನು ತಯಾರು ಮಾಡುತ್ತಾರೆ. ಅಂದರೆ ನಿಧಾನವಾಗಿ ತಮ್ಮ ಪ್ರಭಾವವನ್ನು ಬಳಸಿಕೊಂಡು ಮಕ್ಕಳನ್ನು ವಿಧಾನ ಪರಿಷತ್ತು, ಹಾಗೂ ವಿಧಾನಸಭೆಯನ್ನು ಪ್ರವೇಶಿಸುವಂತೆ ಮಾಡುತ್ತಾರೆ. ಸಂದರ್ಭ ಬಂದಾಗ ದೇಶಭಕ್ತಿಯ ಬಿಟ್ಟಿ ಉಪದೇಶವನ್ನು ಮಾಡುತ್ತಾರೆ.
ಸ್ವತಂತ್ರ ಭಾರತದಲ್ಲಿ ಎಷ್ಟೊಂದು ಕೋಮು ಗಲಭೆಗಳು ನಡೆದಿವೆ, ನಡೆಯುತ್ತಿವೆ. ಈ ಗಲಭೆಗಳಿಂದ ಯಾರ ಮನೆಯ ದೀಪಗಳು ಆರಿ ಹೋಗಿವೆ, ಯಾರ ಮನೆಯ ದೀಪಗಳು ಬೆಳಗುತ್ತಿವೆ ಎಂಬುದನ್ನು ಒಮ್ಮೆ ಯೋಚಿಸಿ ನೋಡಿ. ನಾವು ತುಂಬಾ ಹೆಮ್ಮೆ ಪಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ ಇಂದು ಏನಾಗಿದೆ? ದೇಶದ ಆರ್ಥಿಕ ಅಭಿವೃದ್ಧಿ, ಸಾಂಸ್ಕೃತಿಕ ಆವಿಷ್ಕಾರ, ಶೈಕ್ಷಣಿಕ ಕ್ಷೇತ್ರದ ಸಾಧನೆ ಇವುಗಳಿಗೆಲ್ಲ ದಕ್ಷಿಣ ಕನ್ನಡ ಮಾದರಿಯಾಗಿತ್ತು. ಭಾರತದ ಪ್ರಮುಖ ಬ್ಯಾಂಕುಗಳಾದ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್ ಹಾಗೂ ವಿಜಯಾ ಬ್ಯಾಂಕ್ ಇವು ದೇಶವ್ಯಾಪಿ ವಿಸ್ತರಿಸಿವೆ. ಯಕ್ಷಗಾನ, ಸಾಹಿತ್ಯ ಹೀಗೆ ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಮಂಗಳೂರಿನತ್ತ ನೋಡುವ ದಿನಗಳಿದ್ದವು. ಈಗ? ದಶಕಗಳಿಂದ ಕಾಡುತ್ತಿರುವ ಕೋಮು ವ್ಯಾಧಿಯ ಬಗ್ಗೆ ಬೇರೆ ಜಿಲ್ಲೆಗಳ ಜನ ದುಗುಡದಿಂದ ಮಾತಾಡುವಂತಾಗಿದೆ. ದಕ್ಷಿಣ ಕನ್ನಡ ಮಾತ್ರವಲ್ಲ ಭಾರತದ ಬಹುತೇಕ ಕಡೆ ಕೋಮು ನಶೆಯನ್ನು ಏರಿಸಲಾಗಿದೆ. ಈ ನಶೆಯನ್ನು ಇಳಿಸಿ ಮನುಷ್ಯತ್ವ, ಅಂತಃಕರಣವನ್ನು ಅರಳಿಸುವ ದಿನಗಳಿಗಾಗಿ ಕಾಯಬೇಕಾಗಿದೆ.