Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಕೆಲಸಕ್ಕೆ ಬಾರದ ವಿವಾದದ ಸುತ್ತಮುತ್ತ

ಕೆಲಸಕ್ಕೆ ಬಾರದ ವಿವಾದದ ಸುತ್ತಮುತ್ತ

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ21 April 2025 9:30 AM IST
share
ಕೆಲಸಕ್ಕೆ ಬಾರದ ವಿವಾದದ ಸುತ್ತಮುತ್ತ

ಬಹುತ್ವ ಭಾರತ ಮತ್ತು ಇಲ್ಲಿ ಬದುಕು ಕಟ್ಟಿಕೊಂಡವರು ನೂರಾರು ಜ್ವಲಂತ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳ ಸುಳಿಗೆ ಸಿಲುಕಿ ವಿಲಿವಿಲಿ ಒದ್ದಾಡುತ್ತಿದ್ದಾರೆ. ನಿತ್ಯದ ಬದುಕು ಅವರನ್ನು ಸುಸ್ತು ಮಾಡಿದೆ. ನಿರುದ್ಯೋಗ, ಬಡತನ, ಬೆಲೆ ಏರಿಕೆ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಕತ್ತಲು ಕವಿಯುತ್ತಿರುವ, ಬದುಕು ನೆಮ್ಮದಿಯನ್ನು ಕಳೆದುಕೊಂಡಿದೆ.

ಇನ್ನು ಕೆಲವರಿದ್ದಾರೆ. ಅವರಿಗೆ ಹಿಂದೂಗಳ ಜನಸಂಖ್ಯೆ ಕಡಿಮೆ ಆಗುತ್ತಿರುವ ಚಿಂತೆ. ಅದಕ್ಕಾಗಿ ಹಿಂದೂ ಹೆಣ್ಣು ಮಕ್ಕಳು ನಾಲ್ವರು ಮಕ್ಕಳನ್ನು ಹಡೆಯಬೇಕು ಎಂದು ಬಹಿರಂಗವಾಗಿ ಕರೆ ಕೊಡುತ್ತಾರೆ. ಅಯೋಧ್ಯೆಯ ಬಾಬರಿ ಮಸೀದಿ ಉರುಳಿಸುವಾಗ ಪ್ರಚೋದನಕಾರಿ ಭಾಷಣಗಳ ಮೂಲಕ ತುಟಿ ಸೇವೆ ಸಲ್ಲಿಸಿದ ಸಾಧ್ವಿಯೊಬ್ಬರು ಹಿಂದೂ ಮಹಿಳೆಯರು ನಾಲ್ಕು ಮಕ್ಕಳನ್ನು ಹಡೆಯಬೇಕು. ಅವರಲ್ಲಿ ಇಬ್ಬರನ್ನು ಆರೆಸ್ಸೆಸ್‌ಗೆ ಕೊಡಬೇಕೆಂದು ಕರೆ ನೀಡಿದ್ದಾರೆ. ಇನ್ನೊಂದೆಡೆ, ಯಾರು ಯಾವ ಉಡುಪುಗಳನ್ನು ಧರಿಸಬೇಕು? ಯಾವ ಊಟ ಮಾಡಬೇಕೆಂದು ಫರ್ಮಾನು ಹೊರಡಿಸುತ್ತಾರೆ.

ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಬರಕೂಡದು, ಅದು ಅಶಿಸ್ತು ಎಂದು ಕರ್ನಾಟಕದ ಹಿಂದಿನ ಶಿಕ್ಷಣ ಸಚಿವರು ಫರ್ಮಾನು ಹೊರಡಿಸಿದ್ದರು.

ಶಿವಮೊಗ್ಗ ಮತ್ತು ಬೀದರ್‌ನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಹೋಗಿದ್ದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣಗಳು ವರದಿ ಆಗಿದೆ. ಜನಿವಾರ, ಶಿವದಾರ, ಕುಂಕುಮ, ತಿಲಕ, ವಿಭೂತಿ, ಹಿಜಾಬ್ ಇರಲಿ ಇವೆಲ್ಲ ಅವರ ವೈಯಕ್ತಿಕ ನಂಬಿಕೆಯ ವಿಷಯಗಳು. ಹಿಜಾಬ್ ಯಾಕೆ ಎಂದು ಪ್ರಶ್ನಿಸಿದರೆ, ಜನಿವಾರ ಧಾರಣೆಯ ಬಗೆಗೂ ಪ್ರಶ್ನೆಗಳು ಬರುತ್ತವೆ.

ಅನೇಕ ಬಾರಿ ಅನಗತ್ಯ ಇಂಥ ವಿವಾದಗಳು ಹುಟ್ಟಿಕೊಳ್ಳುತ್ತವೆ. ಒಮ್ಮೊಮ್ಮೆ ಕೋಮುವಾದಿ ಪಕ್ಷಗಳು ಅಧಿಕಾರದಲ್ಲಿದ್ದಾಗ ಇಂಥ ವಿಚಿತ್ರ ಆದೇಶಗಳು ಸರಕಾರದ ಸೂತ್ರ ಹಿಡಿದವರಿಂದ ಬಂದ ಉದಾಹರಣೆಗಳಿವೆ.

ಇವರ ಆದೇಶಕ್ಕೆ ಏನು ಕಾರಣ ಎಂದು ಎಲ್ಲರಿಗೂ ಗೊತ್ತಿದೆ. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾಗ ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದರೆ ತಾವು ಕೇಸರಿ ಶಾಲು ಹಾಕಿಕೊಂಡು ಬರುವುದಾಗಿ ಕೋಮುವಾದಿ ಸಂಘಟನೆಯೊಂದರ ವಿದ್ಯಾರ್ಥಿಗಳು ಬೆದರಿಕೆ ಹಾಕಿದ್ದನ್ನೇ ನೆಪ ಮಾಡಿಕೊಂಡ ಆಗಿನ ಶಿಕ್ಷಣ ಮಂತ್ರಿಗಳು ಹಿಜಾಬ್ ಧರಿಸಿ ಬರಕೂಡದು ಎಂದು ಹೇಳಿದ್ದರು.

ಶಾಲೆಗಳಿಗೆ ಅನೇಕ ವಿದ್ಯಾರ್ಥಿಗಳು ಮಾತ್ರವಲ್ಲ, ಶಿಕ್ಷಕರು ಕೂಡ ಹಣೆಗೆ ಕುಂಕುಮ, ನಾಮ ಹಚ್ಚಿಕೊಂಡು ಬರುತ್ತಾರೆ. ಕೆಲವರು ಜುಟ್ಟು ಬಿಟ್ಟುಕೊಂಡು ಬರುತ್ತಾರೆ. ಸಿಖ್ ವಿದ್ಯಾರ್ಥಿಗಳು ಪೇಟ ಧರಿಸಿ ಬರುತ್ತಾರೆ. ಶಾಲೆಗಳಲ್ಲಿ ಗಣಪತಿ ಇಟ್ಟು ಪೂಜೆ ಮಾಡುತ್ತಾರೆ. ಇದು ಅವರವರ ನಂಬಿಕೆ. ಆದರೆ, ಹಿಜಾಬ್ ಧರಿಸಿಬರಬಾರದು, ಇದು ಅಶಿಸ್ತು ಎಂದು ಹೇಳುವವರು ಜನಿವಾರ, ತಿಲಕಗಳನ್ನು ಸಮರ್ಥಿಸುತ್ತಾರೆ. ಯಾವುದೇ ಧಾರ್ಮಿಕ ಸಂಕೇತಗಳು ಬೇಡವೆಂದಾದರೆ ಎಲ್ಲವನ್ನೂ ವಿರೋಧಿಸಿ. ನಿರ್ಬಂಧಿಸುವುದಾದರೆ ಎಲ್ಲವನ್ನೂ ನಿರ್ಬಂಧಿಸಿ.

ನಾನು ಅವಿಭಜಿತ ಬಿಜಾಪುರ ಜಿಲ್ಲೆಯ ಹಳ್ಳಿಯೊಂದರಿಂದ ಬಂದವನು. ಲಿಂಗಾಯತರು, ಕುರುಬರು, ಜೈನರು, ಬ್ರಾಹ್ಮಣರು ಮತ್ತು ಮುಸಲ್ಮಾನರು ಜೊತೆಯಾಗಿ ಬದುಕಿದ ದಿನಗಳನ್ನು ಕಣ್ಣಾರೆ ಕಂಡವನು. ಬಿಜಾಪುರದಿಂದ ‘ಸಂಯುಕ್ತ ಕರ್ನಾಟಕ’ದ ನೌಕರಿ ಸೇರಿ ಹುಬ್ಬಳ್ಳಿಗೆ ಬಂದಾಗಲೂ ಮುಸಲ್ಮಾನರು ನಮ್ಮ ಮನೆಯ ಅಕ್ಕಪಕ್ಕದಲ್ಲಿ ಇದ್ದರು. ಅವರ ರಮಝಾನ್, ಮೊಹರಮ್ ಬಂದರೆ ನಮ್ಮ ಮನೆಗೆ ಊಟದ ತಟ್ಟೆಗಳು ಬರುತ್ತಿದ್ದವು. ನಮ್ಮ ಮನೆಯಲ್ಲಿ ದೀಪಾವಳಿ, ಯುಗಾದಿ ಮಾಡಿದರೆ ಅವರ ಮನೆಗೆ ಊಟದ ತಟ್ಟೆಗಳು ಹೋಗುತ್ತಿದ್ದವು. ಬಾಲ್ಯದಲ್ಲಿ ಮೊಹರಮ್ ಕುಣಿತದಲ್ಲಿ ಲಿಂಗಾಯತರು, ಕುರುಬರು, ನಾಯಕರ ಹುಡುಗರನ್ನು ಕಂಡವನು. ಬಸವನ ಬಾಗೇವಾಡಿ ಬಸವಣ್ಣನ ಜಾತ್ರೆಯಲ್ಲಿ ಹುಬ್ಬಳ್ಳಿಯ ಸಿದ್ಧಾರೂಢರ ತೇರು ಎಳೆಯುವಾಗ ಮುಸ್ಲಿಮರ ಸಂಭ್ರಮ ನೋಡಿದವನು.

ಮುಸಲ್ಮಾನ ಸಮುದಾಯ ಬದಲಾವಣೆಗೆ, ಸುಧಾರಣೆಗೆ ಮುಕ್ತವಾಗಬೇಕಾದರೆ ಮೊದಲು ಆ ಸಮುದಾಯವನ್ನು ಪ್ರತ್ಯೇಕಿಸಿ ದಾಳಿಗೆ ಗುರಿ ಪಡಿಸುವುದು ನಿಲ್ಲಬೇಕು. ಭಾರತದಲ್ಲಿ ಕೋಮುವಾದಿ ಶಕ್ತಿಗಳ ನಿರಂತರ ಅಪಪ್ರಚಾರ, ದಾಳಿ ನಿಲ್ಲುವವರೆಗೆ ಜಾಗತಿಕವಾಗಿ ಅಮೆರಿಕದ ಸಾಮ್ರಾಜ್ಯಶಾಹಿ ಉಗ್ರರ ದಮನದ ಹೆಸರಿನಲ್ಲಿ ನಡೆಸುವ ದಾಳಿ ನಿಲ್ಲುವವರೆಗೆ ಏಕಾಂಗಿತನ ಅನುಭವಿಸುವ ಸಮುದಾಯ ಅದರಿಂದ ಹೊರಗೆ ಬರುವುದು ಸುಲಭವಲ್ಲ.

ತೊಂಭತ್ತರ ದಶಕದಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಂಡ ನಂತರ ಬಹುಮುಖಿ ಭಾರತದ ಪರಿಸ್ಥಿತಿ ಬದಲಾಗಿದೆ. ಧರ್ಮದ ಆಧಾರದಲ್ಲಿ ಭಾರತೀಯರನ್ನು ವಿಭಜಿಸುವಲ್ಲಿ ಕೋಮುವಾದಿ ಶಕ್ತಿಗಳು ಯಶಸ್ವಿಯಾಗಿವೆ. ಈ ವಿಭಜನೆಯ ಮೊದಲ ಬಲಿಪಶುಗಳು ಅಲ್ಪಸಂಖ್ಯಾತರಾಗಿದ್ದಾರೆ. ಅದರಲ್ಲೂ ಮುಸಲ್ಮಾನರ ಪರಿಸ್ಥಿತಿ ದಾರುಣವಾಗಿದೆ. ಆರ್ಥಿಕ, ಸಾಮಾಜಿಕವಾಗಿ ಅವರ ಜೀವನ ಮಟ್ಟ ಕುಸಿದಿದೆ. ಆದರೆ ಅದನ್ನು ಬಾಯಿ ಬಿಟ್ಟು ಹೇಳುವ, ಕೇಳುವ ಸ್ಥಿತಿಯಲ್ಲೂ ಅವರಿಲ್ಲ. ಏಕೆಂದರೆ ಈಗ ಅವರ ಮುಂದಿರುವ ಸವಾಲು ಬೇರೆಯದಾಗಿದೆ.

ಆದರೆ, ಅಂದಿನ ಆ ದಿನಗಳು ಈಗ ನೆನಪು ಮಾತ್ರ. ಮುಸಲ್ಮಾನರು ಮತ್ತು ಇತರ ಸಮುದಾಯಗಳ ನಡುವೆ ಸಂಶಯದ ಗೋಡೆಯೊಂದು ಎದ್ದು ನಿಂತಿದೆ. ಇದು ತಾನಾಗಿ ಎದ್ದು ನಿಂತಿಲ್ಲ. ರಾಜಕೀಯ ಉದ್ದೇಶಗಳಿಗಾಗಿ ಕಂದಕ ತೋಡಿ ನಿಲ್ಲಿಸಿದ ಗೋಡೆ ಇದು. ಆಗ ಲಿಂಗಾಯತರು, ಕುರುಬರು, ನಾಯಕರು ಎಂದೆಲ್ಲ ಕರೆಯಲ್ಪಡುತ್ತಿದ್ದವರು ಈಗ ಹಿಂದೂ ಬೋರ್ಡನ್ನು ಕೊರಳಿಗೆ ಹಾಕಿಕೊಂಡಿದ್ದಾರೆ. ಜನಗಣತಿಯಲ್ಲಿ ಹಿಂದೂ ಲಿಂಗಾಯತ, ಹಿಂದೂ ವೀರಶೈವ, ಹಿಂದೂ ಒಕ್ಕಲಿಗ ಎಂದು ಬರೆಸುತ್ತಾರೆ.

ಅಲ್ಪಸಂಖ್ಯಾತರು ಅದರಲ್ಲೂ ಮುಸಲ್ಮಾನರ ಶೋಚನೀಯ ಪರಿಸ್ಥಿತಿ ಬಗ್ಗೆ ಸ್ವಾತಂತ್ರ್ಯಾ ನಂತರ ಅನೇಕ ತಜ್ಞರ ಸಮಿತಿಗಳು ಅಧ್ಯಯನ ಮಾಡಿ ವರದಿಗಳನ್ನು ನೀಡಿವೆ. 2006ರಲ್ಲಿ ನ್ಯಾಯಮೂರ್ತಿ ರಾಜೀಂಧರ್ ಸಾಚಾರ್ ನೇತೃತ್ವದ ಸಮಿತಿ ನೀಡಿದ ವರದಿ ಪ್ರಕಾರ, ಭಾರತದಲ್ಲಿ ಮುಸಲ್ಮಾನರ ಪರಿಸ್ಥಿತಿ ದಲಿತರಿಗಿಂಥ ಹೀನಾಯ ಆಗಿದೆ. ಅವರ ಜನಸಂಖ್ಯೆಗೆ ಅನುಗುಣವಾಗಿ ಸರಕಾರಿ ನೌಕರಿಯಲ್ಲಿ ನ್ಯಾಯವಾದ ಪಾಲು ಅವರಿಗೆ ಸಿಕ್ಕಿಲ್ಲ. ಆ ನಂತರ ರಚಿಸಲ್ಪಟ್ಟ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಅವರ ನೇತೃತ್ವದ ಸಮಿತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಸಲ್ಮಾನರಿಗೆ ಶೇ.10ರಷ್ಟು ಮೀಸಲು ನೀಡಬೇಕೆಂದು ಶಿಫಾರಸು ಮಾಡಿತ್ತು.

ಸೀತೆ ತನ್ನ ಪಾತಿವ್ರತ್ಯದ ಅಗ್ನಿಪರೀಕ್ಷೆಗೆ ಗುರಿಯಾದಂತೆ ಮುಸಲ್ಮಾನರು ನಿತ್ಯವೂ ತಮ್ಮ ರಾಷ್ಟ್ರಭಕ್ತಿಯನ್ನು ಸಾಬೀತು ಪಡಿಸುತ್ತ ಈ ದೇಶದಲ್ಲಿ ಬದುಕಬೇಕಾಗಿದೆ. ಎಲ್ಲೇ ಬಾಂಬ್ ಸ್ಫೋಟವಾದರೂ ಭಯೋತ್ಪಾದಕರೆಂಬ ಹಣೆಪಟ್ಟಿಯನ್ನು ಅಮಾಯಕ ಮುಸಲ್ಮಾನರು ಅಂಟಿಸಿಕೊಳ್ಳಬೇಕಿದೆ.

ಉದಾಹರಣೆಗೆ, ಕೆಲ ವರ್ಷಗಳ ಹಿಂದೆ ಹುಬ್ಬಳ್ಳಿಯ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಸ್ಫೋಟವಾದಾಗ ಜಿಹಾದಿಗಳ ಕೈವಾಡ ಎಂದು ಒಂದು ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಯಿತು. ಕೆಲ ಅಮಾಯಕರ ಬಂಧನವೂ ನಡೆಯಿತು. ಆದರೆ, ಪ್ರಕರಣದ ತನಿಖೆ ನಡೆದ ನಂತರ ಬಯಲಾದದ್ದು ಬಲಪಂಥೀಯ ಕೋಮುವಾದಿ ಶಕ್ತಿಗಳ ಕೈವಾಡ. ಈ ಸ್ಫೋಟ ಮಾಡಿ ಅದನ್ನು ಒಂದು ಅಲ್ಪಸಂಖ್ಯಾತ ಸಮುದಾಯದ ತಲೆಗೆ ಕಟ್ಟಲು ಸಂಚು ಹೆಣೆಯಲಾಗಿತ್ತು. ಆ ಸಂಚು ಬಯಲಾಗಿ ಸದರಿ ಕೋಮುವಾದಿ ಸಂಘಟನೆಗಳ ಕಾರ್ಯಕರ್ತರ ಬಂಧನವೂ ನಡೆಯಿತು.

ಇದು ಒಂದು ಉದಾಹರಣೆ ಮಾತ್ರ. ಗೋಹತ್ಯೆ ನಿಷೇಧ, ದನಗಳ ಸಾಗಾಟ, ಲವ್ ಜಿಹಾದ್ ಮುಂತಾದ ಹೆಸರಿನಲ್ಲಿ ಮುಸ್ಲಿಮ್ ಸಮುದಾಯದ ಮೇಲೆ ದಾಳಿ, ಹಲ್ಲೆಗಳು ನಡೆಯುತ್ತಲೇ ಇವೆ. ಮನೆಯ ಫ್ರಿಡ್ಜ್‌ನಲ್ಲಿ ಗೋವಿನ ಮಾಂಸ ತಂದಿಡಲಾಗಿದೆ ಎಂಬ ಸುಳ್ಳು ಸುದ್ದಿ ಹರಡಿಸಿ ಉತ್ತರ ಪ್ರದೇಶದಲ್ಲಿ ಅಖ್ಲಾಕ್ ಎಂಬ ಅಮಾಯಕ ವ್ಯಕ್ತಿಯ ಹತ್ಯೆ ನಡೆಯಿತು. ಇಂಥ ಒಂದಲ್ಲ ಎರಡಲ್ಲ ನೂರಾರು ಉದಾಹರಣೆಗಳನ್ನು ಕೊಡಬಹುದು.

ಮುಸಲ್ಮಾನರ ದಾರುಣ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿದ ನ್ಯಾಯಮೂರ್ತಿ ರಾಜೀಂಧರ್ ಸಾಚಾರ್ ಹಾಗೂ ನ್ಯಾಯಮೂರ್ತಿ ರಂಗನಾಥ ಮಿಶ್ರಾ ನೇತೃತ್ವದ ಸಮಿತಿಗಳು ಆಳ ಮತ್ತು ಸಮಗ್ರವಾದ ಅಧ್ಯಯನ ನಡೆಸಿ ವಾಸ್ತವ ಪರಿಸ್ಥಿತಿಗೆ ಕನ್ನಡಿ ಹಿಡಿದಿವೆ. ಕೇಂದ್ರ ಸರಕಾರದ ನೌಕರಿಗಳಲ್ಲಿ ಶೇ.2ರಷ್ಟು ಕೂಡ ಮುಸಲ್ಮಾನರಿಲ್ಲ. ನಿರಕ್ಷರತೆ ಆ ಸಮುದಾಯದಲ್ಲಿ ತಾಂಡವವಾಡುತ್ತಿದೆ. ಬಹುತೇಕ ಮುಸಲ್ಮಾನ ಯುವಕರು ಸರಕಾರಿ ನೌಕರಿಗಳನ್ನು ಅವಲಂಬಿಸದೇ ಗ್ಯಾರೇಜುಗಳಲ್ಲಿ, ಸೈಕಲ್ ರಿಪೇರಿ ಮಾಡುವ ಅಂಗಡಿಗಳಲ್ಲಿ, ಹೋಟೆಲುಗಳಲ್ಲಿ, ಬೀಡಿ ಮತ್ತಿತರ ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ಹಗಲೂ ರಾತ್ರಿ ದುಡಿಯುತ್ತಾರೆ. ಯಾರೋ ಒಬ್ಬಿಬ್ಬರು ಅಝೀಮ್ ಪ್ರೇಮ್‌ಜಿ ಅಂಥವರು ಇರಬಹುದು. ಆದರೆ ಶೇ.99ರಷ್ಟು ಮುಸಲ್ಮಾನರು ಕಡು ಬಡತನದಲ್ಲಿ ಇದ್ದಾರೆ.

ಆದರೆ, ಕೆಲ ಮತೀಯವಾದಿ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಮಾಡುತ್ತಿರುವ ಆರೋಪವೇ ಬೇರೆ. ಅವರ ಪ್ರಕಾರ ಸರಕಾರ ಮುಸಲ್ಮಾನರ ಬಗ್ಗೆ ತುಷ್ಟೀಕರಣ ನೀತಿ ಅನುಸರಿಸುತ್ತ ಬಂದಿದೆ ಎಂಬುದು ಅವರ ಆಕ್ಷೇಪವಾಗಿದೆ. ಇದಕ್ಕೆ ಅವರ ಕೊಡುವ ಉದಾಹರಣೆ ಶಾಬಾನು ಪ್ರಕರಣದಲ್ಲಿ ರಾಜೀವ್ ಗಾಂಧಿ ಸರಕಾರ ಅನುಸರಿಸಿದ ಹಾಗೂ ಕೈಗೊಂಡ ಕ್ರಮಗಳಾಗಿವೆ.

ಭಾರತದಲ್ಲಿ ಬಲಪಂಥೀಯ ಕೋಮುವಾದಿ ಶಕ್ತಿಗಳು ಬಲಿಷ್ಠವಾಗಿ ಇಡೀ ಭಾರತೀಯ ಸಮಾಜ ಕೋಮುವಾದೀಕರಣಗೊಳ್ಳುತ್ತಿರುವ ಈ ದಿನಗಳಲ್ಲಿ ಮುಸಲ್ಮಾನರ ಬೇಡಿಕೆ ಆರ್ಥಿಕ, ಸಾಮಾಜಿಕ ನ್ಯಾಯವಲ್ಲ. ಭಾರತದಲ್ಲಿ ಸುರಕ್ಷಿತವಾಗಿ ಬದುಕುವಂಥ ವಾತಾವರಣ ಬೇಕೆಂಬುದು ಅವರ ಬೇಡಿಕೆಯಾಗಿದೆ. ನಿತ್ಯವೂ ಕೋಮುವಾದಿ ಶಕ್ತಿಗಳಿಂದ ರಕ್ಷಣೆ ನೀಡಿದರೆ ಸಾಕು ಹೇಗೋ ಬದುಕು ಕಟ್ಟಿಕೊಳ್ಳುತ್ತೇವೆ ಎಂಬುದು ಅವರ ಆಗ್ರಹವಾಗಿದೆ.

ಮುಸಲ್ಮಾನರ ಮತ ಪಡೆದು ಅಧಿಕಾರಕ್ಕೆ ಬರುವ ಪಕ್ಷಗಳು ಕೂಡ ಮುಸ್ಲಿಮರಿಗೆ ರಾಜಕೀಯ ಪ್ರಾತಿನಿಧ್ಯ ಕೊಡಲು ಹಿಂದೇಟು ಹಾಕುತ್ತಿವೆ. ರಾಜ್ಯಗಳ ಶಾಸನ ಸಭೆಗಳಲ್ಲಿ, ಲೋಕಸಭೆಯಲ್ಲಿ ಮುಸಲ್ಮಾನರ ಪ್ರಾತಿನಿಧ್ಯ ಅತ್ಯಂತ ಕಡಿಮೆ. ಸ್ವಾತಂತ್ರ್ಯಾ ನಂತರ ವರ್ಷದಿಂದ ವರ್ಷಕ್ಕೆ ಶಾಸನ ಸಭೆಗಳಲ್ಲಿ ಅವರ ಪ್ರಾತಿನಿಧ್ಯ ಕುಸಿಯುತ್ತಲೇ ಇದೆ.

ಭಾರತದ ಮುಸಲ್ಮಾನರು ಹಿಂದೂಗಳಿಗೆ ಇರುವ ಯಾವ ನಾಗರಿಕ ಸೌಕರ್ಯವನ್ನು ಕೇಳದೇ ಎರಡನೇ ದರ್ಜೆಯ ಪ್ರಜೆಗಳಂತೆ ಇರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೇ ಸರ ಸಂಘಚಾಲಕರಾಗಿದ್ದ ಮಾಧವ ಸದಾಶಿವ ಗೋಳ್ವಾಲ್ಕರ್ (ಗುರೂಜಿ) ಪ್ರತಿಪಾದಿಸಿದ್ದಾರೆ. ಅವರ ಸಿದ್ಧಾಂತವನ್ನು ನಂಬುವ ಪಕ್ಷ ಅಧಿಕಾರದಲ್ಲಿರುವುದರಿಂದ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ಆಧುನಿಕ ಭಾರತವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ಒಂದು ಬಹುದೊಡ್ಡ ಸಮುದಾಯದಲ್ಲಿ ಭೀತಿಯ ವಾತಾವರಣ ನಿರ್ಮಾಣ ಮಾಡಲಾಗಿದೆ.

ಈ ಭೀತಿಯ ವಾತಾವರಣದಿಂದಾಗಿ ಹೊಸ ಪೀಳಿಗೆಯ ಬಹುತೇಕ ಮುಸಲ್ಮಾನ ಯುವಕರಲ್ಲಿ ಒಂದು ವಿಧದ ಒಂಟಿತನ ಅಥವಾ ತಬ್ಬಲಿತನ ಕಾಡುತ್ತಿದೆ. ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ನಡುವೆ ನಡೆದ ಮಾತುಕತೆಯೊಂದು ನೆನಪಿಗೆ ಬರುತ್ತಿದೆ.

ಲಂಡನ್‌ನ ದುಂಡು ಮೇಜಿನ ಸಭೆಗೆ ಹೋಗಿ ವಾಪಸಾದ ನಂತರ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಮುಖಾಮುಖಿಯಾದ ಸಂದರ್ಭದಲ್ಲಿ ಗಾಂಧೀಜಿ ಅಂಬೇಡ್ಕರ್ ಅವರಿಗೆ ‘ನಿಮಗೆ ಮಾತೃಭೂಮಿ ಇದೆ ಮರೆಯಬೇಡಿ’ ಎಂದು ಹೇಳುತ್ತಾರೆ. ಈ ಮಾತಿಗೆ ತಿರುಗೇಟು ನೀಡಿದ ಅಂಬೇಡ್ಕರ್ ‘ನನಗೆ ಮಾತೃಭೂಮಿ ಇದೆ ಎನ್ನುತ್ತೀರಿ. ಆದರೆ ಮತ್ತೆ ಮತ್ತೆ ಹೇಳುತ್ತೇನೆ ನನಗೆ ಮಾತೃಭೂಮಿ ಇಲ್ಲ. ನಾಯಿ ಬೆಕ್ಕುಗಳಿಗಿಂತ ಕೀಳಾಗಿ ಕಾಣುವ, ಕುಡಿಯಲು ಹನಿ ನೀರು ಕೊಡದ ಇದನ್ನು ನನ್ನ ತಾಯಿ ನೆಲವೆಂದು ಹೇಗೆ ಕರೆಯಲಿ?’ ಎಂದು ವಾಪಸ್ ಪ್ರಶ್ನಿಸುತ್ತಾರೆ. ಭಾರತದ ಮುಸಲ್ಮಾನರ ಪರಿಸ್ಥಿತಿಯೂ ಇಂದು ಅದೇ ಆಗಿದೆ. ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ಅವರ ನಾಗರಿಕತ್ವವನ್ನೇ ಅಪಹರಣ ಮಾಡುವ ಹುನ್ನಾರ ನಡೆಯಿತು. ಈ ದಿನಗಳಲ್ಲಿ ಮುಸಲ್ಮಾನರಿಗೆ ಆರ್ಥಿಕ, ಸಾಮಾಜಿಕ ನ್ಯಾಯಕ್ಕಿಂತ ಮುಖ್ಯವಾಗಿ ನಿಂತ ನೆಲ ಕುಸಿಯದಂತೆ ಸುರಕ್ಷಿತವಾಗಿರಬೇಕಾಗಿದೆ.

ಇದು ಒಂದು ಮುಖವಾದರೆ ಮುಸಲ್ಮಾನರ ಬದುಕಿಗೆ ಸಂಬಂಧಿಸಿದ ಇನ್ನೊಂದು ಮುಖವೂ ಇದೆ. ಹೊಸ ಬದಲಾವಣೆ ಮತ್ತು ಸುಧಾರಣೆಗೆ ಆ ಸಮುದಾಯ ಸ್ಪಂದಿಸುತ್ತಿಲ್ಲ, ಮುಖ್ಯ ವಾಹಿನಿಗೆ ಬರುತ್ತಿಲ್ಲ ಎಂಬ ಆರೋಪಗಳೂ ಇವೆ. ಆದರೆ ಭಾರತೀಯ ಸಂಗೀತ, ಕಲೆ, ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ ಸಮುದಾಯವಿದು. ನವ ಭಾರತದ ನಿರ್ಮಾಣದಲ್ಲಿ ಈ ಸಮುದಾಯದ ಜನರ ಬೆವರೂ ಹರಿದಿದೆ. ಇವರನ್ನು ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಆ ಸಮುದಾಯದ ಸುಧಾರಣಾವಾದಿಗಳು ಮಾಡಬೇಕೆಂಬುದು ನಿಜ. ಅದಕ್ಕಿಂತ ಹೆಚ್ಚಿನ ಜವಾಬ್ದಾರಿ ಈ ದೇಶದ ಬಹುಸಂಖ್ಯಾತ ಸಮುದಾಯದ ಮೇಲಿದೆ. ಮುಸಲ್ಮಾನರ ತಬ್ಬಲಿತನ ಮಾಯವಾಗಬೇಕಾದರೆ ಅವರಿಗೆ ತಾಯ್ತನದ ಸ್ಪರ್ಶ ನೀಡುವ ಮನಸ್ಸು ಬಹುಸಂಖ್ಯಾತ ಸಮುದಾಯದ ಮೇಲ್ವರ್ಗಗಳಲ್ಲಿ ಮೂಡಬೇಕಾಗಿದೆ. ಈ ಸಮಸ್ಯೆಗೆ ಒಂದೇ ಒಂದು ಪರಿಹಾರವೆಂದರೆ ಮುಸಲ್ಮಾನರನ್ನು ನಮ್ಮವರೆಂದು ಅಂದರೆ ಭಾರತೀಯರೆಂದು ಒಪ್ಪಿಕೊಳ್ಳಬೇಕು. ಅಣ್ಣ ತಮ್ಮಂದಿರಂತೆ ಬದುಕಬೇಕು. ಭಾರತ ಎಂಬುದು ಎಲ್ಲರ ಮನೆ. ಮನೆಯೊಳಗಿನ ಒಬ್ಬಿಬ್ಬರಿಗೆ ನೀಡುವ ಊಟ, ತಿಂಡಿ ನೀಡುವಲ್ಲಿ ತಾರತಮ್ಯ ಮಾಡಿದರೆ ಸರಿಪಡಿಸಬಹುದು. ಆದರೆ ನೀವು ಈ ಮನೆಯವರೇ ಅಲ್ಲ ಎಂದು ಹೊರದಬ್ಬಲು ಹೊರಟರೆ ಅದಕ್ಕಿಂತ ಕ್ರೌರ್ಯ ಇನ್ನೊಂದಿಲ್ಲ.

ಇಲ್ಲಿನ ಮುಸಲ್ಮಾನರು ಅರಬ್ ದೇಶಗಳಿಂದ ಬಂದವರಲ್ಲ. ಅವರು ಒತ್ತಾಯದಿಂದ ಮತಾಂತರ ಆದವರೂ ಅಲ್ಲ. ಈಗ ಹಿಂದೂ ಎಂದು ಹೆಸರು ಬದಲಿಸಿಕೊಂಡ ಶ್ರೇಣೀಕೃತ ಜಾತಿ ವ್ಯವಸ್ಥೆಯ ಅಡಿಗೆ ಸಿಕ್ಕು ಹುಡಿ ಹುಡಿಯಾಗಿ ಹೋದವರು ಆ ಬಂಧನದಿಂದ ಬಿಡುಗಡೆ ಪಡೆಯಲು ಮುಸಲ್ಮಾನರಾದವರು. ಈ ಮಾತನ್ನು ಸ್ವಾಮಿ ವಿವೇಕಾನಂದರು ಬಹಳ ಮಾರ್ಮಿಕವಾಗಿ ಹೇಳಿದ್ದಾರೆ. ಹಿಂದೆ ಮತಾಂತರವಾದವರನ್ನು ಮರಳಿ ಹಿಂದೂ ಧರ್ಮಕ್ಕೆ ಮರು ಮತಾಂತರ ಮಾಡಿದರೂ ಅವರು ಇಲ್ಲಿ ಬಂದು ಯಾವ ಜಾತಿಯಲ್ಲಿ ಆಸರೆ ಪಡೆಯಬೇಕು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಈ ಪ್ರಶ್ನೆಗೆ ಉತ್ತರ ನೀಡಲಾಗದವರಿಗೆ ಮರು ಮತಾಂತರದ ಬಗ್ಗೆ ಮಾತಾಡುವ ಹಕ್ಕಿಲ್ಲ.

ಹಳೆಯದು ಹೋಗಲಿ ಬಿಡಿ ಈಗ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಜನಿವಾರ ತೆಗೆಸಿದ್ದರ ವಿರುದ್ಧ ಮಠಾಧೀಶರು ಪ್ರತಿಭಟಿಸಿದ ತಕ್ಷಣ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಮುಟ್ಟಾದ ಕಾರಣ ದಲಿತ ಹೆಣ್ಣುಮಗಳನ್ನು ಪರೀಕ್ಷೆ ಕೇಂದ್ರದ ಹೊರಗೆ ಕೂಡಿಸಿದಾಗ ಯಾಕೆ ಸುಮ್ಮನಾದಿರಿ? ಅಸಹಾಯಕ ರಾದ ಶೋಷಿತರನ್ನು ಕಕ್ಕಸ್ಸು ಗುಂಡಿಯಲ್ಲಿ ಇಳಿಸುವಾಗ ಎಲ್ಲಿ ಅಡಗಿತ್ತು ನಿಮ್ಮ ಮಾನವೀಯತೆ? ದಲಿತರ ಮರ್ಯಾದೆಗೇಡು ಹತ್ಯೆ ನಡೆದಾಗ ಎಲ್ಲಿ ಅಡಗಿತ್ತು ನಿಮ್ಮ ಆತ್ಮಸಾಕ್ಷಿ?

ದಲಿತ ಮಹಿಳೆ ಮಾಡಿದ ಬಿಸಿಯೂಟವನ್ನು ಸವರ್ಣೀಯ ಮಕ್ಕಳು ತಿನ್ನಲು ನಿರಾಕರಿಸಿದಾಗ ಎಲ್ಲಿ ಅಡಗಿತ್ತು ನಿಮ್ಮ ನ್ಯಾಯಪ್ರಜ್ಞೆ?

ಮುಸ್ಲಿಮ್ ಹೆಣ್ಣುಮಕ್ಕಳು ಹಾಕಿದ ಹಿಜಾಬ್ ಅನ್ನು ಬಲವಂತವಾಗಿ ತೆಗೆಸುವಾಗ ನೀವೆಲ್ಲ ಕೇಕೆ ಹಾಕಿ ನಕ್ಕವರಲ್ಲವೇ?

ದನದ ಮಾಂಸ ತಿಂದರು ಎಂದು ಸುಳ್ಳು ಆರೋಪಿಸಿ ಅನೇಕರನ್ನು ಕೊಲೆ ಮಾಡಿದಾಗ ನಿಮ್ಮ ಜಾಣ ಮೌನಕ್ಕೆ ಕಾರಣವೇನು? ಈ ಪ್ರಶ್ನೆಗಳಿಗೆ ಉತ್ತರ ಕೊಡಿ.

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X