Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ದೇವಾಲಯಗಳ ವ್ಯಾಪಾರೀಕರಣ

ದೇವಾಲಯಗಳ ವ್ಯಾಪಾರೀಕರಣ

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ26 May 2025 9:45 AM IST
share
ದೇವಾಲಯಗಳ ವ್ಯಾಪಾರೀಕರಣ

ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ದೊಡ್ಡ, ದೊಡ್ಡ ದೇವಾಲಯಗಳು ಕಡಿಮೆ. ಮಧುರೈ ಮೀನಾಕ್ಷಿ ಮುಂತಾದ ದೇವಸ್ಥಾನಗಳು ಇಲ್ಲಿಲ್ಲ (ಈಗೀಗ ಅಲ್ಲಲಿ ಕಾಣಿಸಿಕೊಳ್ಳುತ್ತಿವೆ). ಇದಕ್ಕೆ ಕಾರಣ ಬಸವಣ್ಣ ಮತ್ತು ವಚನ ಚಳವಳಿ. 12ನೇ ಶತಮಾನದಲ್ಲಿ ಶರಣರು ಮತ್ತು ಅವರು ಮೂಡಿಸಿದ ಜಾಗೃತಿ. ಆದರೆ, ಕಲ್ಯಾಣ ಕ್ರಾಂತಿ ಯಶಸ್ವಿಯಾಗಲಿಲ್ಲ. ದೇವರು, ದೇವಾಲಯಗಳ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ ಹಾಗೂ ಅಸ್ಪಶ್ಯರಿಗೆ ಪ್ರವೇಶವಿಲ್ಲದ ಗುಡಿ , ಗುಂಡಾರಗಳನ್ನು ಕಂಡ ಬಸವಣ್ಣ ಜನಸಾಮಾನ್ಯರ ಅಂಗೈಗೆ ಇಷ್ಟಲಿಂಗವನ್ನು ಕೊಟ್ಟ ಇದೇ ನಮ್ಮ, ನಿಮ್ಮ ದೇವರು ಎಂದು ಹೇಳಿದ.

ಹೀಗಾಗಿ ಮಾನಸಿಕ ನೆಮ್ಮದಿಗಾಗಿ ಮತ್ತು ಭಕ್ತಿಯಿಂದ ದೇವಾಲಯಗಳಿಗೆ ಹೋಗುತ್ತಿದ್ದ ಜನರ ಸಂಖ್ಯೆ ಕಡಿಮೆಯಾಗುತ್ತ ಬಂದಿದೆ. ಆದರೆ, ಈಗ ಮತ್ತೆ ಅದು ಆರಂಭವಾಗಿದೆ. ಮಾನಸಿಕ ನೆಮ್ಮದಿಗೆಂದು ಮನುಷ್ಯ ಕಟ್ಟಿಕೊಂಡ ದೇವರು, ಧರ್ಮಗಳು ಈಗ ಮಾರುಕಟ್ಟೆಯ ಸರಕಾಗಿವೆ.ಜನರನ್ನು ವಿಭಜಿಸುವ ಅಸ್ತ್ರಗಳಾಗಿವೆ. ಭಕ್ತಿಯೆಂಬುದು ಹೊಟ್ಟೆ ಹೊರೆಯುವ ದಂಧೆಯಾಗಿದೆ. ಆತ್ಮಸಾಕ್ಷಾತ್ಕಾರದ ಪರಮಾತ್ಮನನ್ನು ಬೀದಿಗೆ ತಂದ ದಲ್ಲಾಳಿಗಳು ಆತನ ದರ್ಶನಕ್ಕೆ ಶುಲ್ಕ ನಿಗದಿಪಡಿದ್ದಾರೆ.

ಮಹಾನಗರಗಳಲ್ಲಂತೂ ಸಾರ್ವಜನಿಕ ಉದ್ಯಾನ, ಕಾಲ್ದಾರಿಗಳನ್ನು ಆಕ್ರಮಿಸಿ ಮಂದಿರಗಳನ್ನು ನಿರ್ಮಿಸಿ ಅಮಾಯಕ ಭಕ್ತರಿಂದ ಹಣವನ್ನು ಸುಲಿಯಲಾಗುತ್ತದೆ. ಸಾರ್ವಜನಿಕ ಆಸ್ತಿಯನ್ನು ಕಬಳಿಸಲು ದೇವರ ದುರ್ಬಳಕೆಯಾಗುತ್ತಿದೆ. ಇದು ಒಂದೆಡೆಯಾದರೆ ಅನೇಕ ಕಡೆ ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡದಲ್ಲಿ ಮಠ, ಮಂದಿರಗಳು ಕೋಮುವಾದಿ ಶಕ್ತಿಗಳ ಕೈ ವಶವಾಗಿವೆ.ಇತ್ತೀಚೆಗೆ ಬಿಜೆಪಿ ಶಾಸಕನೊಬ್ಬ ದೇವಾಲಯವೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಅನಗತ್ಯವಾಗಿ ಪ್ರಚೋದನಕಾರಿ ಮಾತುಗಳನ್ನಾಡಿದ. ಇದರಿಂದ ತೀವ್ರ ಅಸಮಾಧಾನಗೊಂಡ ಸದರಿ ದೇವಾಲಯದ ಆಡಳಿತ ಮಂಡಳಿಯವರು ಸಂಬಂಧಿಸಿದ ಸಮುದಾಯದವರನ್ನು ಕಂಡು ವಿಷಾದ ವ್ಯಕ್ತಪಡಿಸಬೇಕಾಗಿ ಬಂತು.

ದೇಹದಲ್ಲಿ ದೇವರನ್ನು ಕಂಡೆ ಎಂದು ಸಾರಿದ ಬಸವಣ್ಣನವರ ನಾಡಿನಲ್ಲಿ ಈಗ ಮೂಢ ನಂಬಿಕೆ ಹಾಗೂ ಕಂದಾಚಾರಗಳು ಜಾಸ್ತಿಯಾಗಿವೆ. ದಕ್ಷಿಣದ ಮಾತ್ರವಲ್ಲ ಉತ್ತರ ಭಾರತದ ದೇವಾಲಯಗಳು ಹಾಗೂ ಆಚಾರ, ವಿಚಾರಗಳು ಇಲ್ಲಿ ಪ್ರವೇಶಿವೆ.ಈ ನಾಡಿಗೆ ಸಂಬಂಧವಿಲ್ಲದ ಜೈ ಸಂತೋಷಿಮಾ, ಹನುಮಾನ ಚಾಲೀಸಾ, ಎಲ್ಲೆಡೆ ಕಾಣಿಸಿಕೊಳ್ಳುತ್ತಿವೆ. ದೇವರು ಮತ್ತು ದೇಗುಲದ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಚಟುವಟಿಕೆ ಗಳಿಗೆ ಕಡಿವಾಣ ಹಾಕುವವರೇ ಇಲ್ಲವಾಗಿದೆ.ಸುಪ್ರೀಂ ಕೋರ್ಟ್ ಸೇರಿದಂತೆ ಅನೇಕ ನ್ಯಾಯಾಲಯಗಳು ದೇವರ ಹೆಸರಿನಲ್ಲಿ ನಡೆಯುತ್ತಿರುವ ಈ ಅಕ್ರಮಗಳ ಬಗ್ಗೆ ಅನೇಕ ಸಲ ಆಕ್ಷೇಪವನ್ನು ವ್ಯಕ್ತಪಡಿಸಿವೆ. ಅನಧಿಕೃತ ಧಾರ್ಮಿಕ ಸ್ಥಾವರ ಕಟ್ಟಡಗಳನ್ನು ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಲು ಸರಕಾರ ಮುಂದಾದರೆ ಅದಕ್ಕೆ ಹಲವಾರು ಅಡ್ಡಿ , ಆತಂಕಗಳು ಎದುರಾಗುತ್ತವೆ. ಎಸ್.ಎಂ. ಕಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಉದ್ಯಾನ ಹಾಗೂ ಫುಟ್‌ಪಾತ್‌ನಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಕಟ್ಟಡಗಳನ್ನು ತೆರವು ಗೊಳಿಸಲು ಮುಂದಾದಾಗ ತೀವ್ರ ವಿರೋಧ ಬಂತು. ಕೋಮುವಾದಿ ಸಂಘಟನೆಗಳು ಬೀದಿಗೆ ಇಳಿದವು.

ಯಾವುದೇ ಸಮುದಾಯದವರಿರಲಿ ತಾವು ನಂಬಿರುವ ದೇವರನ್ನು ಪೂಜಿಸುವ, ಪ್ರಾರ್ಥಿಸುವ ಹಕ್ಕನ್ನು ಸಂವಿಧಾನ ನೀಡಿದೆ.ಯಾರೇ ಆಗಲಿ ಅವರ ಮನೆಯಲ್ಲಿ ಅಥವಾ ಮಂದಿರ, ಮಸೀದಿ, ಚರ್ಚುಗಳಲ್ಲಿ ಪ್ರಾರ್ಥಿಸುವುದಕ್ಕೆ ಯಾರ ಆಕ್ಷೇಪವೂ ಇಲ್ಲ. ಆದರೆ ಎಲ್ಲರಿಗೂ ಸೇರಿದ ಸಾರ್ವಜನಿಕ ಉದ್ಯಾನ, ರಸ್ತೆಗಳಲ್ಲಿ ಜಾಗಗಳನ್ನು ಆಕ್ರಮಿಸಿ ರಾತ್ರೋರಾತ್ರಿ ದಿಢೀರನೇ ದೇವರ ಮೂರ್ತಿ ಉದ್ಭವಿಸಿ ಮಂದಿರ ನಿರ್ಮಾಣ ಕಾರ್ಯ ಆರಂಭವಾಗುತ್ತಿವೆ. ಸಾರ್ವಜನಿಕರಿಗಾಗಿ ಮೀಸಲಾಗಿಟ್ಟ ಜಾಗದಲ್ಲಿ ಮಠ, ಮಂದಿರಗಳು ತಲೆ ಎತ್ತತೊಡಗಿವೆ. ಹೀಗೆ ಈ ನೆಲದ ಸಂಸ್ಕೃತಿ ಹಾಗೂ ಭಾಷೆಗಳ ಮೇಲೆ ಉತ್ತರದ ದುರಾಕ್ರಮಣ ನಡೆದಿದೆ.

ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರು ಓಡಾಡುವ ಪುಟ್ ಪಾತ್ ಗಳಲ್ಲಿ ಅನಧಿಕೃತ ದೇವಾಲಯಗಳು ನಾಯಿ ಕೊಡೆಗಳಂತೆ ತಲೆ ಎತ್ತಿದ್ದವು.ಈಗಲೂ ಕೆಲವೆಡೆ ಇವೆ.

ಇಲ್ಲಿ ದೇವರ ಭಕ್ತಿಗಿಂಥ ದೇವರನ್ನು ಮಾರಾಟಕ್ಕೆ ಇಟ್ಟು ಕಾಸು ಮಾಡಿಕೊಳ್ಳುವ ಮಾಫಿಯಾದ ಚಟುವಟಿಕೆ ವ್ಯಾಪಕವಾಗಿ ನಡೆದಿತ್ತು.ಆಗ ಸಾರ್ವಜನಿಕರು ಓಡಾಡುವುದೇ ಕಷ್ಟವಾಗಿತ್ತು.

ಕೊನೆಗೆ ಹೈಕೋರ್ಟ್ ಇಂಥ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಆದೇಶ ನೀಡಿತು. ಮುಖ್ಯಮಂತ್ರಿಯವರು ತಡಮಾಡದೇ ಫುಟ್‌ಪಾತ್ ನಲ್ಲಿ ತಲೆ ಎತ್ತಿದ ಇಂಥ ಅಕ್ರಮ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದರು. ಆದರೂ ಕೆಲ ಕಟ್ಟಡಗಳು ಉಳಿದುಕೊಂಡವು.

ಬಸವಣ್ಣನವರು ದೇಹದಲ್ಲಿ ದೇಗುಲ ಕಂಡರೆ ನಮ್ಮ ಪರಂಪರೆಯ ಅನೇಕ ಮಹಾತ್ಮರು ಅಣು ರೇಣು ತೃಣಕಾಷ್ಟದಲ್ಲಿ ದೇವರಿದ್ದಾನೆ ಎಂದು ಹೇಳಿದ್ದಾರೆ. ಆದರೂ ಮಾನಸಿಕ ನೆಮ್ಮದಿಗಾಗಿ ಒಂದು ತಾಣವಿರಲಿ ಎಂದು ಮನುಷ್ಯ ಧಾರ್ಮಿಕ ಪೂಜಾ ಸ್ಥಳಗಳನ್ನು, ಪ್ರಾರ್ಥನಾಲಯಗಳನ್ನು ಮಾಡಿಕೊಂಡ ಬಗ್ಗೆ ಅಭ್ಯಂತರವಿಲ್ಲ. ಆದರೆ ವಿವಾದ ಉಂಟಾಗಿರುವುದು ಸಾರ್ವಜನಿಕ ಜಾಗಗಳಲ್ಲಿ ನಿರ್ಮಾಣವಾದ ಅನಧಿಕೃತ ಧಾರ್ಮಿಕ ಕಟ್ಟಡಗಳ ಬಗ್ಗೆ. 2009ರ ಮೊದಲು ನಿರ್ಮಾಣ ಗೊಂಡಿರುವ ಎಲ್ಲಾ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಈ ಹಿಂದೆಯೇ ನಿರ್ದೇಶನ ನೀಡಿದೆ.

___ತೊಂಭತ್ತರ ದಶಕದಿಂದ ಈಚೆಗೆ ನಮ್ಮ ದೇಶದ ಮತ್ತು ನಾಡಿನ ಸಾರ್ವಜನಿಕ ಸ್ಥಳಗಳಲ್ಲಿ ತಲೆ ಎತ್ತಿರುವ ಧಾರ್ಮಿಕ ಕಟ್ಟಡಗಳಲ್ಲಿ ಭಕ್ತಿಗಿಂತ ವಾಣಿಜ್ಯ ಉದ್ದೇಶ ಮುಖ್ಯವಾಗಿದೆ.ಅಷ್ಟೇ ಅಲ್ಲ ಕೋಮುವಾದಿ ಸಮಾಜ ಘಾತುಕ ಶಕ್ತಿಗಳು ದೇವಾಲಯಗಳನ್ನು ವಶ ಪಡಿಸಿಕೊಂಡು ತಮ್ಮ ಕಾರ್ಯಸೂಚಿಗೆ ಬಳಸಿಕೊಳ್ಳುತ್ತಿದ್ದಾರೆ.

ಬೆಂಗಳೂರು ಮಾತ್ರವಲ್ಲ ರಾಜ್ಯದ ಯಾವುದೇ ನಗರದ ಸಾರ್ವಜನಿಕ ಉದ್ಯಾನಗಳಲ್ಲಿ ಇಂಥ ಅಕ್ರಮ ಮಂದಿರಗಳು ತಲೆ ಎತ್ತಿ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗಿದೆ. ಅನೇಕ ಕಡೆ ಇಡೀ ಉದ್ಯಾನವನ್ನೇ ನುಂಗಿ ದೇವಸ್ಥಾನ, ಮಂದಿರಗಳನ್ನು ನಿರ್ಮಿಸಿದ ಉದಾಹರಣೆಗಳಿವೆ.

ಸಾರ್ವಜನಿಕ ಜಾಗಗಳಲ್ಲಿ ಧಾರ್ಮಿಕ ಕಟ್ಟಡ ವೆಂದರೆ ಬರೀ ಮೂರ್ತಿಯನ್ನು ಇಡುವ ಪುಟ್ಟ ಮಂದಿರ ಆಗಿರುವುದಿಲ್ಲ. ಮೊದಲು ದೇವಾಲಯ ನಿರ್ಮಿಸುತ್ತಾರೆ. ನಂತರ ಅಲ್ಲೊಬ್ಬ ಪುರೋಹಿತ ಬರುತ್ತಾನೆ. ಸುತ್ತಲಿನ ಜಾಗವನ್ನು ಕಬಳಿಸಿ ಕಲ್ಯಾಣ ಮಂಟಪ ನಿರ್ಮಿಸಿ ಬಾಡಿಗೆ ಕೊಡಲು ಆರಂಭಿಸುತ್ತಾರೆ. ಗುಡಿಯ ಸುತ್ತಲೂ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ವಸೂಲಿ ಮಾಡುತ್ತಾರೆ.ಹೀಗಾಗಿ ಸಾರ್ವಜನಿಕರ ಬಳಕೆಯ ಜಾಗ ದೇವರ ಹೆಸರಿನಲ್ಲಿ ಕಬಳಿಕೆಯಾಗಿ ಹಣ ಮಾಡಿಕೊಳ್ಳುವ ದಂಧೆ ಶುರುವಾಗುತ್ತದೆ. ಅದಕ್ಕೊಂದು ಟ್ರಸ್ಟ್ ರಚನೆಯಾಗುತ್ತದೆ.ಒಂದೇ ಕುಟುಂಬದ ಸದಸ್ಯರು ಟ್ರಸ್ಟ್ ಸದಸ್ಯರಾಗಿರುತ್ತಾರೆ.ಇದು ವಾಸ್ತವ ಸಂಗತಿ.

ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿ ಈ ರೀತಿ ಸಾರ್ವಜನಿಕ ಉದ್ಯಾನವನ್ನು ಇಡಿಯಾಗಿ ನುಂಗಿ ನೀರು ಕುಡಿದಿದ್ದನ್ನು ನಾನು ಕಣ್ಣಾರೆ ಕಂಡಿರುವೆ.ಮೊದಲು ಪುಟ್ಟ ವೆಂಕಟೇಶ್ವರ ದೇವಾಲಯ ನಿರ್ಮಿಸಲಾಯಿತು. ನಂತರ ದೇವಾಲಯದ ಪಕ್ಕದ ಜಾಗದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಿ ಬಾಡಿಗೆ ವಸೂಲಿ ಶುರುವಾಯಿತು. ಇದು ಸಾಲದೆಂಬಂತೆ ದೇವಾಲಯದ ಮೇಲೆ ಇನ್ನೊಂದು ಕಲ್ಯಾಣ ಮಂಟಪ ನಿರ್ಮಾಣ ವಾಯಿತು.ಈಗ ಅದರ ಮೇಲೆ ಇನ್ನೊಂದು ಕಲ್ಯಾಣ ಮಂಟಪವನ್ನು ನಿರ್ಮಿಸಿ ಬಾಡಿಗೆ ವಸೂಲಿ ಜೋರಾಗಿ ನಡೆದಿದೆ.ಇದು ಸಾಲದೆಂಬಂತೆ ವೆಂಕಟೇಶ್ವರ ದೇವಾಲಯದ ಒಳ ಆವರಣದಲ್ಲಿ ವೀರಾಂಜನೇಯ ಮತ್ತು ಗಣಪತಿ ದೇವರ ಪುಟ್ಟ ಮಂದಿರಗಳನ್ನು ನಿರ್ಮಿಸಲಾಗಿದೆ.ಈ ಮೂರೂ ದೇವರಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜೆಗಳಿಗೆ ದರ ನಿಗದಿ ಮಾಡಿ ಬೋರ್ಡ್ ಹಾಕಲಾಗಿದೆ.ಇದರ ಜೊತೆಗೆ ಮೇಲ್ಮಧ್ಯಮ ವರ್ಗದ ಈ ಬಡಾವಣೆ ಮತ್ತು ಅಕ್ಕಪಕ್ಕದ ಬಡಾವಣೆಯ ಜನ ಯಾವುದೇ ಹೊಸ ವಾಹನ ಖರೀದಿ ಮಾಡಿದರೆ ಇಲ್ಲಿ ಬಂದು ಪುರೋಹಿತನ ಕೈಗೆ 500 ಇಲ್ಲವೇ 1,000 ರೂಪಾಯಿ ದಕ್ಷಿಣೆ ನೀಡಿ ಪೂಜೆ ಮಾಡಿಸಿಕೊಂಡು ಹೋಗುತ್ತಾರೆ.

ಈ ದೇವಾಲಯಕ್ಕೆ ಶಿಕ್ಷಣ ವ್ಯಾಪಾರಿಯೊಬ್ಬ ಟ್ರಸ್ಟ್ ಮಾಡಿ ಪುರೋಹಿತರಿಗೆ ಒಂದಿಷ್ಟು ಸಂಬಳ ಕೊಟ್ಟು ಸಾರ್ವಜನಿಕ ಜಾಗದಲ್ಲಿ ಆದಾಯದ ಹೊಸ ಮೂಲವನ್ನು ಸೃಷ್ಟಿಸಿಕೊಂಡಿದ್ದಾನೆ . ಇದು ಒಂದು ಉದಾಹರಣೆ ಮಾತ್ರ.ರಾಜ್ಯದ ನಾನಾ ಕಡೆ ಈ ರೀತಿಯ ಧಾರ್ಮಿಕ ವಾಣಿಜ್ಯ ಕೇಂದ್ರ ಗಳು ಸಾರ್ವಜನಿಕ ಜಾಗಗಳಲ್ಲಿ ತಲೆ ಎತ್ತಿವೆ.ಸುಪ್ರೀಂ ಕೋರ್ಟ್ ಹೇಳಿರುವುದು ಇಂಥ ಅಕ್ರಮ ದೇವಾಲಯಗಳ ಬಗ್ಗೆ.

ರಾಜ್ಯದಲ್ಲಿ ವಿವಿಧ ಧರ್ಮಗಳ ಶ್ರದ್ಧಾ ಕೇಂದ್ರಗಳು ಸಾಕಷ್ಟಿವೆ. ಮಂಗಳೂರಿನ ಗೋಕರ್ಣ ನಾಥೇಶ್ವರ ದೇವಾಲಯ, ಉಡುಪಿಯ ಅಷ್ಟ ಮಠಗಳು,ಕೃಷ್ಣ ಮಂದಿರ, ಶೃಂಗೇರಿಯ ಶಾರದಾಂಬೆ, ಧರ್ಮಸ್ಥಳ, ಹುಬ್ಬಳ್ಳಿಯ ಸಿದ್ದಾರೂಢ ಮಠ, ಕಲಬುರಗಿಯ ಬಂದೇ ನವಾಝ್ ದರ್ಗಾ, ಹರಿಹರದ ಆರೋಗ್ಯ ಮಾತೆ ಚರ್ಚು, ಬೆಂಗಳೂರಿನ ರಾಮಕೃಷ್ಣ ಆಶ್ರಮ ಹೀಗೆ ಸಾವಿರಾರು ಸಂಖ್ಯೆಯಲ್ಲಿ ಇರುವ ಮಠ,ಮಂದಿರ, ಚರ್ಚು , ದರ್ಗಾಗಳ ಬಗ್ಗೆ ಯಾರ ಅಭ್ಯಂತರವೂ ಇಲ್ಲ.

ನಾನು ಕೂಡ ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ,ಕಲಬುರಗಿಯ ಬಂದೆ ನವಾಝ್ ದರ್ಗಾಕ್ಕೆ ಆಗಾಗ ಹೋಗಿ ಬರುತ್ತೇನೆ. ಎಲ್ಲ ಧರ್ಮಗಳ ಜನ ಬರುವ ಇಂಥ ತಾಣಗಳಿಗೆ ಹೋಗಿ ಬರುವುದೇ ಒಂದು ನೆಮ್ಮದಿಯ ಸಂಗತಿ. ನಾನು ಬಾಲ್ಯದಲ್ಲಿ ಕೋಮುವಾದದ ವೈರಸ್ ಅಂಟಿ ಕೊಳ್ಳದಂತೆ ಬೆಳೆದದ್ದು ಬಿಜಾಪುರ ಜಿಲ್ಲೆಯ ಇಂಚಗೇರಿ ಮಠದ ಮಹಾದೇವರ ಒಡನಾಟದಿಂದ. ಇವು ಯಾವು ಅನಧಿಕೃತ ನಿರ್ಮಾಣಗಳಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆ ಸುರಕ್ಷಿತವಾಗಿ ನಡೆಯಬೇಕಾದರೆ ಅದರ ಆಧಾರ ಸ್ತಂಭಗಳಾದ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳು ಪರಸ್ಪರ ಪೂರಕವಾಗಿ ಕಾರ್ಯ ನಿರ್ವಹಿಸಬೇಕು. ಸುಪ್ರೀಂ ಕೋರ್ಟ್ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಇಲ್ಲವೇ ಸ್ಥಳಾಂತರ ಮಾಡಲು ಅಥವಾ ಸಕ್ರಮ ಗೊಳಿಸಲು ನಿರ್ದೇಶನ ನೀಡಿ ವರ್ಷಗಳೇ ಗತಿಸಿದವು. ಇದನ್ನು ಜಾರಿಗೆ ತರುವುದು ಚುನಾಯಿತ ಸರಕಾರದ ಕರ್ತವ್ಯವಾಗಿದೆ. ಸುಪ್ರೀಂ ಕೋರ್ಟ್ ಆದೇಶ ನೀಡಿ ಹದಿನೇಳು ವರ್ಷಗಳಾದರೂ ಸರ್ಕಾರ ತೆಪ್ಪಗಿದೆ ಅಂದರೆ ಅದರ ಅರ್ಥವೇನು? ಈ ಬಗ್ಗೆ ಅಂದರೆ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಆಮೆ ವೇಗದಲ್ಲಿ ಸಾಗಿದೆ ಎಂದು ಹೈಕೋರ್ಟ್ ಈ ಹಿಂದೆ ಆತಂಕವನ್ನು ವ್ಯಕ್ತಪಡಿಸಿದ ನಂತರ ಎಚ್ಚೆತ್ತ ಸರಕಾರದ ಮುಖ್ಯ ಕಾರ್ಯದರ್ಶಿಗಳು ಪ್ರತೀ ವಾರ ಒಂದಾದರೂ ಅನಧಿಕೃತ ಧಾರ್ಮಿಕ ಕಟ್ಟಡವನ್ನು ತೆರವುಗೊಳಿಸಲು ಕ್ರಿಯಾ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು.ಈ ಹಂತದಲ್ಲಿ ರಾಜಕೀಯ ಒತ್ತಡಕ್ಕೆ ಮಣಿದ ಹಿಂದಿನ ಸರಕಾರ ದೇಗಲುಗಳನ್ನು ತೆರವುಗೊಳಿಸಲು ಅವಸರ ಬೇಡ ಎಂದು ಅಡ್ಡಗಾಲು ಹಾಕಿತ್ತು. ನ್ಯಾಯಾಂಗದ ಆದೇಶದ ಜಾರಿಗೆ ಮುಂದಾದ ಅಧಿಕಾರಿಗಳ ಕೈ ಕಟ್ಟಿ ಹಾಕಲಾಯಿತು.

ತೊಂಭತ್ತರ ದಶಕದಲ್ಲಿ ಅಂದರೆ 1992 ಡಿಸೆಂಬರ್ 6 ರಂದು ಅಯೋಧ್ಯೆಯ ಬಾಬರಿ ಮಸೀದಿಯನ್ನು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಧಿಕ್ಕರಿಸಿ ಕೆಡವಿದ ನಂತರ ದೇವರು, ಧರ್ಮಗಳನ್ನು ವಾಣಿಜ್ಯ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಚಾಳಿ ಆರಂಭವಾಯಿತು.

ಆ ನಂತರ ಸಾರ್ವಜನಿಕ ಜಾಗಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸುವ ಆ ಮೂಲಕ ಹಣ ಮಾಡಿಕೊಳ್ಳುವ, ಓಟು ಬಾಚಿಕೊಳ್ಳುವ ಪ್ರವೃತ್ತಿ ಹೆಚ್ಚಾಯಿತು.

__ಅಧಿಕೃತ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಇರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ಸಂಖ್ಯೆ 6,385.ಕಳೆದ ಹದಿನೇಳು ವರ್ಷಗಳಲ್ಲಿ ಕರ್ನಾಟಕ ಸರ್ಕಾರ ತೆರವುಗೊಳಿಸಿದ ಇಲ್ಲವೇ ಸ್ಥಳಾಂತರ ಗೊಳಿಸಿದ ಅಥವಾ ಸಕ್ರಮಗೊಳಿಸಿದ ಅನಧಿಕೃತ ಪೂಜಾ ಸ್ಥಳಗಳ ಸಂಖ್ಯೆ2,887.ಈ ನಿಧಾನ ಗತಿಯ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು .ಹೀಗಾಗಿ

ರಾಜ್ಯದ ಉದ್ಯಾನಗಳು, ಮೈದಾನಗಳು, ಕ್ರೀಡಾಂಗಣ ಗಳು ಆಕ್ರಮಿಸಲ್ಪಟ್ಟು ಅನಧಿಕೃತ ಧಾರ್ಮಿಕ ಕಟ್ಟಡಗಳು ತಲೆ ಎತ್ತಿವೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಬೆಲೆಯೇ ಇಲ್ಲದಂತಾಗಿದೆ. ಅದರ ತೀರ್ಪಿನ ನಂತರವೂ ರಾಜ್ಯದ ಸಾರ್ವಜನಿಕ ಜಾಗಗಳಲ್ಲಿ ಅಕ್ರಮ ಧಾರ್ಮಿಕ ಕಟ್ಟಡಗಳು ತಲೆ ಎತ್ತಿವೆ.ಇದು ನಿಜಕ್ಕೂ ಕಳವಳಕಾರಿ ಸಂಗತಿ.

ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ವಾಗಿ ನಿರ್ಮಾಣ ಗೊಂಡಿರುವ ಮಂದಿರ , ಮಸೀದಿ, ಚರ್ಚ್, ದರ್ಗಾಗಳನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ವಾಸ್ತವಾಂಶ ಹೀಗಿರುವಾಗ ದೇವಾಲಯಗಳನ್ನು ಮಾತ್ರ ಕೆಡವಲಾಗುತ್ತಿದೆ ಎಂದು ಜನರ ಭಾವನೆಗಳನ್ನು ಕೋಮುವಾದಿಗಳು ಕೆರಳಿಸುತ್ತಿರುವುದು ಶೋಭೆ ತರುವುದಿಲ್ಲ. ಇಂಥ ಸೂಕ್ಷ್ಮ ಪ್ರಶ್ನೆಯಲ್ಲಿ ಯಾವುದೇ ಕೋಮು ಭಾವನೆಯನ್ನು ಕೆರಳಿಸುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ. ಜನಪ್ರತಿನಿಧಿಗಳಾದವರು ಜನಸಾಮಾನ್ಯರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಬೇಕು.

ಇಂಥ ಸಂದರ್ಭದಲ್ಲಿ ಜನರಿಗೆ ತಿಳುವಳಿಕೆ ನೀಡಿ ಸಾರ್ವಜನಿಕ ಜಾಗ ಅತಿಕ್ರಮಣವಾಗದಂತೆ ಸುಪ್ರೀಂ ಕೋರ್ಟ್ ತೀರ್ಪು ಜಾರಿಗೆ ಬರುವಂತೆ ನೋಡಿಕೊಳ್ಳಬೇಕಾ ದುದು ಸರಕಾರದ ಮತ್ತು ಜನಪ್ರತಿನಿಧಿಗಳ ಕರ್ತವ್ಯ. ಆದರೆ ಮೈಸೂರಿನಲ್ಲಿ ಈ ಹಿಂದೆ ಬಿಜೆಪಿ ಸಂಸದರಾಗಿದ್ದವರು ಸರಕಾರ ಅಕ್ರಮ ಕಟ್ಟಡಗಳನ್ನು ತೆಗೆದು ಹಾಕಲು ಮುಂದಾದಾಗ ಅಡ್ಡಿಯಾಗಿ ನಿಂತರು. ಸರಕಾರ ಯಾವುದೇ ಪಕ್ಷದ್ದಾಗಿರಲಿ, ಶಾಸಕರು, ಸಂಸದರು ಸಂಯಮದಿಂದ ವರ್ತಿಸುವಂತೆ ತಮ್ಮ ಪಕ್ಷದ ಶಾಸಕರು ಮತ್ತು ಸಂಸದರಿಗೆ ತಿಳಿ ಹೇಳಬೇಕು. ಪ್ರಜಾಪ್ರಭುತ್ವದಲ್ಲಿ ಸರಕಾರ ಎಂಬುದು ಯಾವುದೇ ಜಾತಿ , ಮತಕ್ಕೆ ಸೇರಿದ್ದಲ್ಲ. ಎಲ್ಲರನ್ನೂ ಪ್ರತಿನಿಧಿಸುವ ಸರಕಾರ ಸಾರ್ವಜನಿಕ ಜಾಗದ ದುರ್ಬಳಕೆಯನ್ನು ತಡೆದು ಸಂವಿಧಾನಾತ್ಮಕ ಕರ್ತವ್ಯ ವನ್ನು ನಿಭಾಯಿಸಲಿ ಎಂಬುದು ಪ್ರಜ್ಞಾವಂತ ನಾಗರಿಕರ ಆಶಯವಾಗಿದೆ.

ರಾಜ್ಯದ ಸಾರ್ವಜನಿಕ ಜಾಗಗಳನ್ನು ಕಾಪಾಡುವ ಜವಾಬ್ದಾರಿ ಜನ ಪ್ರತಿನಿಧಿಗಳ ಮೇಲಿದೆ. ಈ ಹಿಂದೆ ವಿವಾದಕ್ಕೆ ಕಾರಣವಾಗಿರುವ 93 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಸರಕಾರ ಮೈಸೂರಿನಲ್ಲಿ ಗುರುತಿಸಿದೆ. ನ್ಯಾಯಾಲಯದ ಆದೇಶದಂತೆ ಅವುಗಳ ತೆರವಿಗೆ ಸರಕಾರಿ ಅಧಿಕಾರಿಗಳು ಮುಂದಾದರೆ ಆಗಿನ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪಸಿಂಹ ಅಡ್ಡಗಾಲು ಹಾಕಿದ್ದರು. ಒಬ್ಬ ಜನಪ್ರತಿನಿಧಿಯಾಗಿ ನಡೆದು ಕೊಳ್ಳಬೇಕಾದ ಅವರು ಬರೀ ಹಿಂದೂ ಮಂದಿರಗಳನ್ನು ನೆಲಸಮಗೊಳಿಸುತ್ತಿದ್ದಾರೆ ಎಂದು ಅಂದಿನ ತಮ್ಮದೇ ಸರಕಾರದ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ದೇವರ ಹೆಸರಿನಲ್ಲಿ ನಡೆಯುವ ಆಷಾಢ ಭೂತಿತನವನ್ನು ಬಸವಣ್ಣನವರು, ಪುರಂದರದಾಸರು, ಕನಕದಾಸರು, ಸ್ವಾಮಿ ರಾಮ ತೀರ್ಥರು , ಸರ್ವಜ್ಞ, ವಿವೇಕಾನಂದರು ಸೇರಿದಂತೆ ಅನೇಕ ಸಂತರು, ಶರಣರು, ಬಲವಾಗಿ ಖಂಡಿಸಿದ್ದಾರೆ. ಆದರೂ ಈ ಅನಾಚಾರ ಮುಂದುವರಿದಿದೆ. ಪರಮಾತ್ಮನ ಹೆಸರಿನಲ್ಲಿ ಪರಮಾನ್ನ ಉಂಡ ಜನರಿಗೆ ಎಲ್ಲರಿಗೂ ಅನ್ವಯವಾಗುವ ಕಾನೂನು ಅನ್ವಯವಾಗಬೇಕು.ಇದಕ್ಕಾಗಿ ನಿರಂತರ ಜನಜಾಗೃತಿ ಅಗತ್ಯ.

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X