ಮೀಡಿಯಾ ಅಬ್ಬರ ತಾಳಕ್ಕೆ ಸಂಸತ್ತನ್ನು ಮರೆತ ಸಂಸದರು

ದಿನ ಕಳೆದಂತೆಲ್ಲ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಸಂಸತ್ತಿನ ಮಹತ್ತಿಕೆಯನ್ನು ತಗ್ಗಿಸುವ ಕೆಲಸಗಳು ನಮ್ಮ ರಾಜಕಾರಣಿಗಳಿಂದಲೇ ಆಗುತ್ತಿರುವುದು ಆತಂಕಕಾರಿ ಸಂಗತಿ. ಈ ತಿಂಗಳ ಆದಿಯಲ್ಲಿ ದೇಶದ ಭದ್ರತೆಗೆ ಸಂಬಂಧಿಸಿದಂತೆ ಮಹತ್ವದ ಘಟನೆಯೊಂದು ನಡೆಯಿತು. ಇಂತಹ ಘಟನೆಯೊಂದು ನಡೆದಾಗ, ಭಾರತ ಸರಕಾರವು ಅದನ್ನು ದೇಶದ ಸಂಸತ್ತಿನ ಗಮನಕ್ಕೆ ತರುವುದು ತನ್ನ ಪರಮ ಕರ್ತವ್ಯ ಎಂದು ಭಾವಿಸಿ ಕಾರ್ಯಾಚರಿಸಿದ್ದರೆ, ಇಂದು ಹಾದಿಬೀದಿಯಲ್ಲಿ ದೇಶದ ಸೇನಾಪಡೆಗಳ ಕುರಿತು ನಡೆದಿರುವ ರಂಪಾಟಗಳು ಇರುತ್ತಿರಲಿಲ್ಲ.
‘ಆಪರೇಷನ್ ಸಿಂಧೂರ’ ಯುದ್ಧ ಅಲ್ಲ, ಅದೊಂದು ಸೇನಾ ಕಾರ್ಯಾಚರಣೆ. ಇದನ್ನು ಭಾರತೀಯ ಸೇನೆ ಮತ್ತು ಭಾರತ ಸರಕಾರ ಈಗಾಗಲೇ ಸ್ಪಷ್ಟಪಡಿಸಿವೆ. ಒಂದು ಯುದ್ಧ, ವಿದೇಶೀ ದಾಳಿ, ಆಂತರಿಕ ದಂಗೆ ಸಂಭವಿಸಿದರೆ, ಸಂವಿಧಾನದ 352ನೇ ವಿಧಿ ಅನ್ವಯ ತುರ್ತು ಸ್ಥಿತಿಯನ್ನು ಪ್ರಕಟಿಸುವ ಬಗ್ಗೆ ಭಾರತ ಸರಕಾರದ ಕ್ಯಾಬಿನೆಟ್ ಲಿಖಿತವಾಗಿ ರಾಷ್ಟ್ರಪತಿಗಳಿಗೆ ತನ್ನ ನಿರ್ಣಯವನ್ನು ತಿಳಿಸಿ, ರಾಷ್ಟ್ರಪತಿಗಳು ಅದನ್ನು ಘೋಷಿಸಬೇಕಾಗುತ್ತದೆ ಮತ್ತು ಅದಾಗಿ 30 ದಿನಗಳ ಒಳಗೆ ಆ ಘೋಷಣೆಗೆ ಸಂಸತ್ತಿನ ಉಭಯ ಸದನಗಳ ಒಪ್ಪಿಗೆಯ ಮುದ್ರೆ ಅಗತ್ಯವಿರುತ್ತದೆ. ಆಪರೇಶನ್ ಸಿಂಧೂರ ವಿಚಾರದಲ್ಲಿ ಅದು ಆಗಿಲ್ಲ. ಹಾಗಾಗಿ, ಅದು ‘ಯುದ್ಧ’ ಅಲ್ಲ. ಅದೇನಾದರೂ ಯುದ್ಧ ಎಂದು ಸಾರ್ವಜನಿಕ ಪಟಲದಲ್ಲಿ ಬಿಂಬಿತವಾದದ್ದಿದ್ದರೆ, ಅದಕ್ಕೆ ಕಾರಣ - ಬೇಜವಾಬ್ದಾರಿಯಿಂದ ವರ್ತಿಸಿದ ಭಟ್ಟಂಗಿ ಮಾಧ್ಯಮಗಳು. ಅವರ ಈ ಅಬ್ಬರ ತಾಳಕ್ಕೆ ಚಿಲ್ಲರೆ ರಾಜಕಾರಣದ ಬೀದಿ ಕುಣಿತವು ಎಬ್ಬಿಸುತ್ತಿರುವ ರಾಡಿ, ದೇಶದ ಸೇನಾಪಡೆಗಳ ಎತ್ತರಕ್ಕೂ ಸಿಡಿಯುತ್ತಿರುವುದು ಕಳವಳಕಾರಿ. ಇಂತಹದೊಂದು ಸನ್ನಿವೇಶವನ್ನು ಜಾಣತನದಿಂದ, ನೈತಿಕವಾಗಿ ನಿಭಾಯಿಸಬೇಕಾಗಿದ್ದ ಸರಕಾರವು ನಿಯಮಗಳ ನಡುವಿನ ಸಡಿಲು ಜಾಗದಲ್ಲಿ ಜಾರಿಬಿದ್ದಿದೆ, ಈ ಜಾರುವಿಕೆಯಲ್ಲಿಯೇ ತನಗೆ ಲಾಭ ಇರಬಹುದೆಂಬ ಯೋಚನೆಯು ಆಡಳಿತದ ಹಿಂದಿರುವ ‘ರಾಜಕಾರಣಕ್ಕೆ’ ಹೊಳೆದದ್ದು ಇದಕ್ಕೆ ಕಾರಣ ಇರಬಹುದು.
ಸೇನಾ ಕಾರ್ಯಾಚರಣೆಯೊಂದನ್ನು ‘ಯುದ್ಧ’ ಎಂದು ಬಿಂಬಿಸಿ ಉನ್ಮಾದಕ್ಕೆ ಎಡೆಮಾಡಿಕೊಟ್ಟ ಮಾಧ್ಯಮಗಳು ಉದ್ದಕ್ಕೂ ಎಬ್ಬಿಸುತ್ತಾ ಬಂದಿರುವ ರಾಡಿಯಲ್ಲಿ ಲೇಟೆಸ್ಟ್ ಒಂದರ ಬಗ್ಗೆ ಗಮನಿಸಿ. ಗುರುವಾರ (ಮೇ 15) ಮಾಧ್ಯಮದೊಂದಿಗೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು, ‘‘ಪಾಕಿಸ್ತಾನದಲ್ಲಿ ಭಯೋತ್ಪಾದಕ ನೆಲೆಗಳ - ಮೂಲ ಸೌಕರ್ಯಗಳ ಮೇಲೆ ಸೇನಾಕಾರ್ಯಾಚರಣೆ ನಡೆಸಿದ ಬಗ್ಗೆ ಪಾಕಿಸ್ತಾನಕ್ಕೆ ಸಂದೇಶ ಕಳುಹಿಸಿದ್ದೆವು. ಇದು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡ ದಾಳಿ ಅಲ್ಲ ಎಂದು ಹೇಳಿದ್ದೆವು. ಪಾಕಿಸ್ತಾನ ನಮ್ಮ ಸಲಹೆ ಸ್ವೀಕರಿಸದೆ, ಈ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ಮಾಡಿದ್ದು ಉದ್ವಿಗ್ನತೆಗೆ ಕಾರಣ ಆಯಿತು’’ ಎಂದರ್ಥ ಬರುವ ಮಾತುಗಳನ್ನಾಡಿದ್ದರು. ಅವರು ಆಗ ಉಲ್ಲೇಖಿಸಿದ್ದು, ಭಾರತದ ಸೇನಾಕಾರ್ಯಾಚರಣೆಗಳ ಮಹಾನಿರ್ದೇಶಕರಾದ (ಡಿಜಿಎಂಒ) ಲೆ| ಜ| ರಾಜೀವ್ ಘಾಯ್ ಅವರು ಪಾಕಿಸ್ತಾನದ ಡಿಜಿಎಂಒ ಖಾಸಿಫ್ ಅಬ್ದುಲ್ಲಾ ಅವರಿಗೆ ಮಾಡಿದ ಕರೆಯ ಕುರಿತು.
ಆದರೆ ಈ ಹೇಳಿಕೆ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತನ್ನ X ಹ್ಯಾಂಡಲ್ನಲ್ಲಿ ಟ್ವೀಟ್ ಮಾಡಿ, ‘‘ವಿದೇಶ ಸಚಿವ ಜೈಶಂಕರ್ ಅವರ ಮೌನವೇ ಖಚಿತಪಡಿಸುತ್ತಿದೆ. ಹಾಗಾಗಿ ನಾನು ಮತ್ತೊಮ್ಮೆ ಕೇಳುತ್ತೇನೆ: ಪಾಕಿಸ್ತಾನಕ್ಕೆ ವಿಷಯ ಗೊತ್ತಾದದ್ದರಿಂದ ನಾವು ಎಷ್ಟು ಭಾರತೀಯ ಯುದ್ಧ ವಿಮಾನಗಳನ್ನು ಕಳೆದುಕೊಂಡೆವು? ಇದು ಕೇವಲ ಕರ್ತವ್ಯ ಚ್ಯುತಿ ಅಲ್ಲ, ಅಪರಾಧ. ದೇಶ ಸತ್ಯವನ್ನು ತಿಳಿಯಬಯಸುತ್ತದೆ’’ ಎಂದು ಹೇಳಿದ್ದರು.
ಈ ರೀತಿಯ ಬೆಳವಣಿಗೆಗಳೆಲ್ಲ ಸಾರ್ವತ್ರಿಕವಾಗಿ ಹೇಗೆ ಕಾಣಿಸುತ್ತಿವೆ ಎಂದರೆ, ಸದ್ಯಕ್ಕೆ ಭಾರತದ ಪ್ರತಿಪಕ್ಷಗಳದು ‘ಕ್ಯಾಚ್-22’ ಸ್ಥಿತಿ. ‘ಆಪರೇಶನ್ ಸಿಂಧೂರ’ ಸೇನಾ ಕಾರ್ಯಾಚರಣೆಯ ಬಳಿಕ ಒಂದೆಡೆ ಆಡಳಿತ ಪಕ್ಷದ ಕಡೆಯಿಂದ ಮಾತೆತ್ತಿದರೆ ‘ರಾಷ್ಟ್ರಹಿತ’ ಎಂಬ ಶಂಖನಾದ; ಇನ್ನೊಂದೆಡೆ ಪ್ರಭುತ್ವದ ಪ್ರೊಪಗಾಂಡಾ ವಿಭಾಗವೇ ಆಗಿಬಿಟ್ಟಿರುವ ಮಾಧ್ಯಮಗಳ ‘ಯುದ್ಧ’ ಭೇರಿತಾಡನ. ಇವುಗಳಿಂದ ಗೊಂದಲಕ್ಕೀಡಾಗಿರುವ ಪ್ರತಿಪಕ್ಷಗಳು, ಪ್ರತಿಕ್ರಿಯಿಸಲು ಸೂಕ್ತ ವೇದಿಕೆ ಇಲ್ಲದೆ ಗೊಂದಲದಲ್ಲಿವೆ. ಇಂತಹ ರಾಷ್ಟ್ರೀಯ ಮಹತ್ವದ ಸಂಗತಿಯಲ್ಲೂ ಜನಪ್ರತಿನಿಧಿಗಳಾದ ಅವರನ್ನು ಉದ್ದೇಶಪೂರ್ವಕವಾಗಿಯೇ ಬದಿಗೆ ಸರಿಸಿದಂತಿದೆ. ಈ ಗೊಂದಲದ ಲಾಭ ಎತ್ತುತ್ತಿರುವ ಮಾಧ್ಯಮಗಳು, ಪ್ರತಿಪಕ್ಷ ನಾಯಕರನ್ನು ಮಾತಿನ ಬೋನಿನೊಳಗೆ ಸಿಕ್ಕಿಸಿಹಾಕುತ್ತಾ ವಿಕೃತ ಆನಂದ ಅನುಭವಿಸುತ್ತಿವೆ.
ತಮಾಷೆಯೆಂದರೆ, ಈ ಆಟದಲ್ಲಿ ಆಡಳಿತ ಪಕ್ಷವು ತಾನು ಖಾಯಂ ಆಗಿ ನಾನ್ ಸ್ಟ್ರೈಕರ್ ತುದಿಯಲ್ಲಿರುವುದನ್ನು ಖಚಿತಪಡಿಸಿಕೊಂಡು, ಪ್ರತಿಪಕ್ಷಗಳೇ ಬ್ಯಾಟಿಂಗ್ ಮಾಡುತ್ತಿರಬೇಕಾದ ಅನಿವಾರ್ಯ ಸನ್ನಿವೇಶವನ್ನು ಮಾಧ್ಯಮಗಳ ಮೂಲಕ ಸೃಷ್ಟಿಸುತ್ತಿದೆ. ಒಂದು ಚೆಂಡಿಗೆ ಒಂದು ಬ್ಯಾಟು ಉತ್ತರಿಸಬಹುದು. ಬೌಲರ್ಗಳು ಮಾತ್ರವಲ್ಲದೆ ಫೀಲ್ಡರ್ಗಳು, ಸ್ಕೋರರ್ಗಳು, ಅಂಪೈರ್ಗಳು, ಕಡೆಗೆ ಗ್ಯಾಲರಿಯ ಪ್ರೇಕ್ಷಕರೂ ಏಕಕಾಲದಲ್ಲಿ ನೂರಾರು ಚೆಂಡುಗಳನ್ನು ಪ್ರತಿಪಕ್ಷಗಳತ್ತಲೇ ನುಗ್ಗಿ ಎಸೆಯುತ್ತಿದ್ದರೆ, ಯಾವುದಕ್ಕೆ ಪ್ರತಿಕ್ರಿಯಿಸುವುದು-ಯಾವುದನ್ನು ಬಿಡುವುದು? ಇದಲ್ಲವೇ ಕ್ಯಾಚ್-22 ಸನ್ನಿವೇಶ?!
ಸಂಸತ್ನ ಮುಂಗಾರು ಅಧಿವೇಶನ ಇದೇ ಜುಲೈ-ಸೆಪ್ಟಂಬರ್ ನಡುವೆ ನಡೆಯಬೇಕಿದೆ, ದಿನಾಂಕ ಇನ್ನೂ ನಿಗದಿ ಆಗಿಲ್ಲ. ಸಂಸತ್ತಿಗೆ, ಆ ಮೂಲಕ ದೇಶದ ಜನಪ್ರತಿನಿಧಿಗಳಿಗೆ ಉತ್ತರದಾಯಿ ಆಗಬೇಕಾಗಿರುವ ಸರಕಾರವು ಆಪರೇಶನ್ ಸಿಂಧೂರದಂತಹ ರಾಷ್ಟ್ರೀಯ ತುರ್ತುಸ್ಥಿತಿ ಉಂಟಾದಾಗ ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಒಟ್ಟು ಪರಿಸ್ಥಿತಿಯನ್ನು ವಿವರಿಸಬಹುದಿತ್ತು. ಸಾರ್ವಜನಿಕ ಅಭಿಪ್ರಾಯಗಳ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸಬಹುದಿತ್ತು. ಇದು ಜನಪ್ರತಿನಿಧಿಗಳಾಗಿ ಸಂಸದರ ಹಕ್ಕು ಕೂಡ. ಅದು ಸಾಧ್ಯ ಆಗಿದ್ದರೆ, ಸಂಸತ್ತಿನಿಂದ ಹೊರಗೆ ಸಂಸದರು ಸೇನೆಯ ಬಗ್ಗೆ, ದೇಶದ ಹಿತಾಸಕ್ತಿಗಳ ಬಗ್ಗೆ ಅನಗತ್ಯ ಹರಟೆಗಳಲ್ಲಿ ತೊಡಗಿಕೊಳ್ಳುವುದು ತಪ್ಪುತ್ತಿತ್ತು. ಹಾಲಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ, ಮೂರು ಬಾರಿ ಇಂತಹ ವಿಶೇಷ ಅಧಿವೇಶನಗಳು ನಡೆದಿವೆ. ಹಾಗಾಗಿ ವಿಶೇಷ ಸಂಸತ್ ಅಧಿವೇಶನ ಕರೆದಿದ್ದರೆ, ಅದೇನೂ ಹೊಸ ಪೂರ್ವೋದಾಹರಣೆ ಆಗುತ್ತಿರಲಿಲ್ಲ. ಆದರೆ ಹಾಗೆ ಮಾಡದೆ, ಮಾಧ್ಯಮಗಳ ಮೂಲಕವೇ ಪ್ರತಿಪಕ್ಷ ಗಳನ್ನು ಹಣಿಯುವುದು ತನ್ನ ರಾಜಕೀಯಕ್ಕೆ ಹೆಚ್ಚು ಲಾಭದಾಯಕ ಎಂಬ ಕಾರಣಕ್ಕೆ ಈ ರಾಡಿ ಎರಚುವಿಕೆಗೆ ಸರಕಾರ ಮೌನ ‘ಸಮ್ಮತಿ’ ಕೊಟ್ಟಂತೆ ಕಾಣಿಸುತ್ತಿದೆ.
ಸರಕಾರ ತನ್ನ ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಈಗ ಈ ಕೆಸರೆರಚಾಟಕ್ಕೆ ಅವಕಾಶ ಮಾಡಿಕೊಟ್ಟರೂ, ಒಮ್ಮೆ ಮುಂಗಾರು ಅಧಿವೇಶನ ಆರಂಭಗೊಂಡ ಬಳಿಕ ಹಲವು ಪ್ರಶ್ನೆಗಳಿಗೆ ಉತ್ತರಿಸು ವುದು ಅನಿವಾರ್ಯ ಆಗಲಿದೆ. ಪಹಲ್ಗಾಮ್ಹತ್ಯಾಕಾಂಡದ ಹಿನ್ನೆಲೆಯಲ್ಲಿರಬಹುದಾದ ಗುಪ್ತಚರ ವೈಫಲ್ಯ-ಭದ್ರತಾ ವೈಫಲ್ಯ; ಪ್ರಧಾನ ಮಂತ್ರಿಗಳ ಕಾಶ್ಮೀರ ಪ್ರವಾಸ ದಲ್ಲಾದ ಕೊನೆಕ್ಷಣದ ಬದಲಾವಣೆ, ಭಾರತ-ಪಾಕ್ ದಾಳಿ-ಪ್ರತಿದಾಳಿಗಳಿಗೆ ವಿರಾಮ ಪ್ರಕಟಿಸುವಲ್ಲಿ ಆದ ನಿರ್ವಹಣಾ ಲೋಪಗಳ ಕಾರಣದಿಂದಾಗಿ ಅಮೆರಿಕದ ಅಧ್ಯಕ್ಷರು ಅದನ್ನು ಎಲ್ಲರಿಗಿಂತ ಮೊದಲು ಪ್ರಕಟಿಸಿದ್ದರಿಂದ ಆದ ಮುಜುಗರ, ಯುದ್ಧ ಅಲ್ಲ ಸೇನಾಕಾರ್ಯಾಚರಣೆ ಎಂದು ಅಂತರ್ರಾಷ್ಟ್ರೀಯವಾಗಿ ಬಿಂಬಿಸಿದ ಹೊರತಾಗಿಯೂ ಭಾರತದ ಸೇನಾಕಾರ್ಯಾಚರಣೆಗೆ ಬೇರೆ ದೇಶಗಳಿಂದ ಸಮರ್ಥನೆ ದೊಡ್ಡ ಧ್ವನಿಯಲ್ಲಿ ಸಿಗದಿರುವುದು, ಸೇನಾಕಾರ್ಯಾ ಚರಣೆಯ ಕಾಲದಲ್ಲಿ ಸರ್ವಪಕ್ಷ ಸಭೆಗೆ ಪ್ರಧಾನಮಂತ್ರಿಯವರ ಗೈರುಹಾಜರಿ, ಸೇನಾ ಕಾರ್ಯಾಚರಣೆಯ ಫಲಶ್ರುತಿ, ಲಾಭ-ನಷ್ಟ- ಇಂತಹ ಹಲವು ಪ್ರಶ್ನೆಗಳಿಗೆ ಸರಕಾರವು ಸಂಸತ್ತಿಗೆ ಉತ್ತರದಾಯಿ ಆಗಬೇಕಾಗುತ್ತದೆ.
ಈಗ ತನ್ನ ಸೇನಾಕಾರ್ಯಾಚರಣೆಯ ಬಗ್ಗೆ, ಭಯೋತ್ಪಾದಕ ಚಟುವಟಿಕೆಗಳ ನಿಗ್ರಹ ಪ್ರಯತ್ನಗಳ ಬಗ್ಗೆ ಬೇರೆ ದೇಶಗಳಲ್ಲಿ, ಭಾರತದ ನಿಲುವನ್ನು ಪ್ರಸ್ತುತಪಡಿಸಲು ಸಂಸದರ ತಂಡಗಳನ್ನೂ ಸಂಸತ್ತಿನಿಂದ ಹೊರಗೆ ಸರಕಾರವೇ ನೇರವಾಗಿ ನೇಮಕ ಮಾಡಿದೆ. ಇದನ್ನು ಸಂಸತ್ತಿನಲ್ಲಿಯೇ ನಿರ್ಣಯಿಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದರೆ, ಆಗ ಸರಕಾರಕ್ಕೆ ಸಂಸತ್ ಅಧಿವೇಶನ ಕರೆಯುವುದು ಅನಿವಾರ್ಯ ಆಗುತ್ತಿತ್ತು. ಇಲ್ಲದಿದ್ದರೆ ತನ್ನ ಎಲ್ಲ ತೀರ್ಮಾನಗಳಿಗೆ ತಾನೇ ಹೊಣೆ ಹೊರುವ ಅನಿವಾರ್ಯತೆ ಎದುರಾಗುತ್ತಿತ್ತು. ಈ ವಿಚಾರದಲ್ಲಿ ಪ್ರತಿಪಕ್ಷಗಳೂ ತಮ್ಮ ತಂತ್ರಗಾರಿಕೆಯಲ್ಲಿ ಎಡವಿದಂತಿದೆ.
ಕೇವಲ ಮಾಧ್ಯಮ ಮ್ಯಾನೇಜ್ಮೆಂಟ್, ರಾಜಕೀಯ ಬುಲ್ಡೋಜಿಂಗ್, ಸೋಷಿಯಲ್ ಮೀಡಿಯಾ ಸ್ಪಿನ್ಗಳ ಮೂಲಕ ದೇಶದ ಆಡಳಿತ ನಡೆಸಲು ಹೊರಟು ಸಂಸತ್ತಿನ ಘನತೆಯನ್ನು ತಗ್ಗಿಸುವುದು, ಸಂಸತ್ತಿಗೆ ಮತ್ತು ಆ ಮೂಲಕ ದೇಶದ ಜನತೆಗೆ ಉತ್ತರದಾಯಿತ್ವದಿಂದ ತಪ್ಪಿಸಿಕೊಳ್ಳುವುದು ಯಾವುದೇ ಸರಕಾರಕ್ಕೆ ಶೋಭೆ ಅಲ್ಲ.