ಪಹಲ್ಗಾಮ್ ಉಗ್ರರ ದಾಳಿ: ಪ್ರವಾಸಿಗರ ಮೇಲೆಯೇ ಗೂಬೆ ಕೂರಿಸುತ್ತಿರುವ ಕೇಂದ್ರ ಸರಕಾರ

ರಾಮಚಂದ್ರ ಜಾಂಗ್ರ (X.com) | ಮೋದಿ (PTI)
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪಹಲ್ಗಾಮ್ನಲ್ಲಿ ಉಗ್ರರು ಅಮಾಯಕರ ಮೇಲೆ ನಡೆಸಿದ ಬರ್ಬರ ದಾಳಿಯ ಹಿಂದಿರುವ ಭದ್ರತಾ ವೈಫಲ್ಯ ಕೇಂದ್ರ ಸರಕಾರವನ್ನು ಇರಿಯುತ್ತಲೇ ಇದೆ. ಆಪರೇಷನ್ ಸಿಂಧೂರದ ಮೂಲಕ ಬೃಹತ್ ಕಾರ್ಯಾಚರಣೆಯಿಂದ ಈ ವೈಫಲ್ಯವನ್ನು ತುಂಬಬಹುದು ಎನ್ನುವ ಕೇಂದ್ರ ಸರಕಾರದ ನಿರೀಕ್ಷೆಯೂ ಹುಸಿಯಾಗಿದೆ. ಪಹಲ್ಗಾಮ್ನಲ್ಲಿ ಅಮಾಯಕರ ಮೇಲೆ ದಾಳಿ ನಡೆಸಿದ ಉಗ್ರರನ್ನು ಬಂಧಿಸುವುದಕ್ಕೋ, ಕೊಂದು ಹಾಕುವುದಕ್ಕೋ ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಈಗಾಗಲೇ ಅವರ ಬಂಧನಕ್ಕೆ ಸರಕಾರ ಬಲೆ ಬೀಸಿದೆ. ಮಾಹಿತಿ ನೀಡಿದವರಿಗೆ ಬಹುಮಾನವನ್ನೂ ಘೋಷಿಸಿದೆ. ಇದೇ ಸಂದರ್ಭದಲ್ಲಿ ಪಹಲ್ಗಾಮ್ನ ಕಳಂಕವನ್ನು ತೊಳೆದುಕೊಳ್ಳುವ ಭಾಗವಾಗಿ, ಬಿಜೆಪಿಯೊಳಗಿರುವ ಕೆಲವು ನಾಯಕರು ‘ಬೇಜವಾಬ್ದಾರಿಯುತ’ ಹೇಳಿಕೆಗಳನ್ನು ನೀಡುತ್ತಾ ಸರಕಾರಕ್ಕೆ ಇನ್ನಷ್ಟು ಮುಜುಗರವನ್ನು ತರುತ್ತಿದ್ದಾರೆ. ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿದ ಕರ್ನಲ್ ಸೋಫಿಯಾ ಖುರೇಶಿಯವರನ್ನು ಪಹಲ್ಗಾಮ್ ಭಯೋತ್ಪಾದಕರ ಸೋದರಿ ಎಂದು ಕರೆದ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಈಗಾಗಲೇ ಸುಪ್ರೀಂಕೋರ್ಟ್ನಿಂದ ತೀವ್ರ ತರಾಟೆಗೀಡಾಗಿದ್ದಾರೆ. ಮಾತ್ರವಲ್ಲ, ಆತನ ಹೇಳಿಕೆಯ ವಿರುದ್ಧ ತನಿಖೆ ನಡೆಸಲು ಆದೇಶ ನೀಡಿದೆ. ‘ನನ್ನ ದೇಹದಲ್ಲಿ ಹರಿಯುತ್ತಿರುವುದು ರಕ್ತವಲ್ಲ, ಸಿಂಧೂರ’ ಎಂಬ ಹೇಳಿಕೆಯನ್ನು ನೀಡಿರುವ ಪ್ರಧಾನಿ ಮೋದಿ ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿದ ಕರ್ನಲ್ ಬಗ್ಗೆ ತನ್ನ ಪಕ್ಷದ ನಾಯಕನೊಬ್ಬ ನೀಡಿರುವ ಹೇಳಿಕೆಯ ಬಗ್ಗೆ ಈ ವರೆಗೆ ತುಟಿ ಬಿಚ್ಚಿಲ್ಲ. ಆತನ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕನಿಷ್ಠ ಆತನನ್ನು ಸಚಿವ ಸ್ಥಾನದಿಂದಲಾದರೂ ಕೆಳಗಿಳಿಸಿ, ಆಪರೇಷನ್ ಸಿಂಧೂರದ ಘನತೆಯನ್ನು ಎತ್ತಿ ಹಿಡಿಯಬೇಕಾಗಿತ್ತು. ಅಂತಹದೇನೂ ಘಟಿಸಿಲ್ಲ. ಅದರ ಬೆನ್ನಿಗೇ ಬಿಜೆಪಿ ಮುಖಂಡ, ರಾಜ್ಯ ಸಭಾ ಸದಸ್ಯ ರಾಮಚಂದ್ರ ಜಾಂಗ್ರ ಪಹಲ್ಗಾಮ್ನಲ್ಲಿ ಉಗ್ರರ ದಾಳಿಗೆ ಬಲಿಯಾದ ಕುಟುಂಬಗಳ ಬಗ್ಗೆ ಕೇವಲವಾಗಿ ಮಾತನಾಡಿ ವಿವಾದಕ್ಕೀಡಾಗಿದ್ದಾರೆ.
ಪಹಲ್ಗಾಮ್ನಲ್ಲಿ ಕೇವಲ ನಾಲ್ಕೇ ನಾಲ್ಕು ಉಗ್ರರು ಸೇರಿ ಇಪ್ಪತೈದಕ್ಕೂ ಅಧಿಕ ಪ್ರವಾಸಿಗರನ್ನು ಬರ್ಬರವಾಗಿ ಕೊಂದು ಹಾಕುವುದಕ್ಕೆ ಮುಖ್ಯ ಕಾರಣ ಭದ್ರತಾ ಲೋಪ. ಆ ಪ್ರವಾಸಿ ತಾಣದಲ್ಲಿ ಹೆಸರಿಗೂ ಒಬ್ಬನೇ ಒಬ್ಬನನ್ನು ಗಸ್ತಿಗೆಂದು ಸರಕಾರ ನೇಮಿಸಿರಲಿಲ್ಲ. ಇದರ ಲಾಭವನ್ನು ಉಗ್ರರು ತಮ್ಮದಾಗಿಸಿ, ತಮ್ಮ ಕೃತ್ಯವನ್ನು ಸಾಧಿಸಿದರು. ಒಂದು ರೀತಿಯಲ್ಲಿ, ಪ್ರವಾಸಿಗರನ್ನು ಸರಕಾರವೇ ಹುಲಿ ಬಾಯಿಗೆ ಕೊಟ್ಟಿತು. ಆದರೆ ರಾಮಚಂದ್ರ ಜಾಂಗ್ರ ಪ್ರಕಾರ, ಮಹಿಳೆಯರು ಸೂಕ್ತ ತರಬೇತಿ ಪಡೆದು, ಉಗ್ರರ ವಿರುದ್ಧ ಪ್ರತಿದಾಳಿ ನಡೆಸದೇ ಇರುವುದೇ ಪಹಲ್ಗಾಮ್ನ ಮಾರಣಹೋಮಕ್ಕೆ ಕಾರಣವಂತೆ. ಮಹಿಳೆಯರು ಪ್ರಧಾನಿ ಮೋದಿಯವರ ಅಗ್ನಿಪಥ ಯೋಜನೆಯಡಿಯಲ್ಲಿ ತರಬೇತಿ ಪಡೆದು, ಪಹಲ್ಗಾಮ್ನಲ್ಲಿ ಉಗ್ರರನ್ನು ವೀರೋಚಿತವಾಗಿ ಎದುರಿಸಿದ್ದರೆ ದೈನ್ಯತೆಯ ಸಾವು ಅವರ ಗಂಡಂದಿರಿಗೆ ಬರುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ‘‘ಪ್ರವಾಸಿಗರು ದೈನ್ಯತೆಯಿಂದ ಇದ್ದ ಕಾರಣ ಹತ್ಯೆಗೀಡಾದರು. ಪ್ರಧಾನಿಯವರ ಯೋಜನೆಯಡಿ ತರಬೇತಿ ಪಡೆದು ದಾಳಿಕೋರರ ಜತೆ ಸಂಘರ್ಷಕ್ಕೆ ಇಳಿದಿದ್ದರೆ ಅಷ್ಟು ಸಂಖ್ಯೆಯಲ್ಲಿ ಸಾವು ಸಂಭವಿಸುತ್ತಿರಲಿಲ್ಲ. ಪ್ರವಾಸಿಗರು ಮೂಲ ಸಲಕರಣೆಗಳಾದ ಬಡಿಗೆಯನ್ನು ಹೊಂದಿ, ದಾಳಿಕೋರರ ವಿರುದ್ಧ ಹೋರಾಟ ನಡೆಸಿದ್ದರೆ ಸಾವಿನ ಸಂಖ್ಯೆ ಐದರಿಂದ ಆರಷ್ಟೇ ಆಗುತ್ತಿತ್ತು. ಮೂವರು ಉಗ್ರರನ್ನು ಸಾಯಿಸಬಹುದಿತ್ತು’’ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಅವರ ಪ್ರಕಾರ, ಪಹಲ್ಗಾಮ್ನಲ್ಲಿ ಭದ್ರತಾ ಲೋಪದ ಹೊಣೆಯನ್ನು ಸತ್ತವರ ಪತ್ನಿಯರೇ ಹೊರಬೇಕು. ಅಲ್ಲಿ ಪ್ರವಾಸ ಹೋದ ಅಮಾಯಕರ ರಕ್ಷಣೆಗೂ ಸರಕಾರಕ್ಕೂ ಯಾವ ಸಂಬಂಧವೂ ಇಲ್ಲ. ಕಾಶ್ಮೀರಕ್ಕೆ ಪ್ರವಾಸ ಹೊರಡುವ ಮೊದಲು ಎಲ್ಲ ಪ್ರವಾಸಿಗರು ಅಗ್ನಿಪಥ ಯೋಜನೆಯಡಿಯಲ್ಲಿ ತರಬೇತಿ ಪಡೆಯಬೇಕು. ಪ್ರವಾಸಕ್ಕೆ ಹೋಗುವಾಗ ಅವರು ತಮ್ಮ ಬಳಿ ಕಡ್ಡಾಯವಾಗಿ ಬಡಿಗೆಗಳನ್ನು ಇಟ್ಟುಕೊಳ್ಳಬೇಕು ಮತ್ತು ಉಗ್ರರ ವಿರುದ್ಧ ವೀರಾವೇಶದಿಂದ ಹೋರಾಡಿ ಪ್ರಾಣಾರ್ಪಣೆ ಮಾಡಬೇಕು. ಈ ಹೇಳಿಕೆಯ ಮೂಲಕ ಪಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿಗೆ ತಮ್ಮವರನ್ನು ಕಳೆದುಕೊಂಡ ಮಹಿಳೆಯರನ್ನೇ ಕಟಕಟೆಯಲ್ಲಿ ನಿಲ್ಲಿಸಿದಂತಾಗಿದೆ.
ಪಹಲ್ಗಾಮ್ನಲ್ಲಿ ಪ್ರವಾಸಿಗರಿಗೆ ಭದ್ರತೆಯನ್ನು ನೀಡುವುದು ಸರಕಾರದ ಕೆಲಸ ಎನ್ನುವುದು ಈ ಬಿಜೆಪಿ ನಾಯಕನಿಗೆ ಗೊತ್ತಿದ್ದಂತಿಲ್ಲ. ಕನಿಷ್ಠ ಅಗ್ನಿಪಥ ಯೋಜನೆ ಎಂದರೇನು ಎನ್ನುವುದರ ಬಗ್ಗೆಯೂ ಈತನಿಗೆ ಅರಿವಿಲ್ಲ. ಈ ಯೋಜನೆಯ ವಿರುದ್ಧ ದೇಶದ ಯುವಕರು, ಸೇನಾಕಾಂಕ್ಷಿಗಳು, ನಿವೃತ್ತ ಸೈನಿಕರು ಯಾಕೆ ಅಸಮಾಧಾನ ಹೊಂದಿದ್ದಾರೆ ಎನ್ನುವುದರ ಅರಿವೂ ಈತನಿಗಿಲ್ಲ. ಸೇನಾ ವೆಚ್ಚವನ್ನು ಕಡಿತ ಮಾಡುವ ಉದ್ದೇಶದಿಂದ ನಾಲ್ಕು ವರ್ಷಗಳ ಗುತ್ತಿಗೆ ಆಧಾರದಲ್ಲಿ ಯುವಕರನ್ನು ಸೇನೆಗೆ ನೇಮಕ ಮಾಡುವ ಯೋಜನೆಯ ಬಗ್ಗೆ ಈಗಾಗಲೇ ದೇಶಾದ್ಯಂತ ಆಕ್ರೋಶಗಳು ಕೇಳಿ ಬರುತ್ತಿವೆ. ಸೂಕ್ತ ತರಬೇತಿಯಿಲ್ಲದ ಈ ಯುವಕರನ್ನು ಸೇನೆಗೆ, ಯುದ್ಧಕ್ಕೆ ಬಳಸಿಕೊಳ್ಳುವುದು ಮತ್ತು ಯಾವುದೇ ಸೇನೆಯ ಪೂರ್ಣ ಸವಲತ್ತುಗಳನ್ನು ನೀಡದೆ ಇರುವುದರ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ. ಈ ಯೋಜನೆ ಬೇರೆ ಬೇರೆ ರೀತಿಯಲ್ಲಿ ದುರುಪಯೋಗವಾಗುವ ಬಗ್ಗೆಯೂ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಕಠಿಣ ಕ್ರಮ ತೆಗೆದುಕೊಂಡಿದ್ದೇವೆ ಎಂದು ಸರಕಾರ ಹೇಳುತ್ತಿದೆ. ಆದರೆ ಪಹಲ್ಗಾಮ್ನಲ್ಲಿ ಭಯೋತ್ಪಾದಕರನ್ನು ತಡೆಯಲು ಒಬ್ಬನೇ ಒಬ್ಬ ಯೋಧ ಇರಲಿಲ್ಲ. ಇದೀಗ ಸರಕಾರ ‘ಪ್ರವಾಸಿಗರೇ ಬಡಿಗೆ ತೆಗೆದುಕೊಂಡು ಭಯೋತ್ಪಾದಕರ ವಿರುದ್ಧ ಹೋರಾಡಬೇಕಾಗಿತ್ತು’ ಎಂದು ಹೇಳುತ್ತಿದೆ. ಈ ಮೂಲಕ ಪಹಲ್ಗಾಮ್ನಲ್ಲಿ ನಡೆದಿರುವ ಸಾವುನೋವುಗಳ ನೈತಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಹೊರಟಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಈ ಬಿಜೆಪಿ ನಾಯಕ ಪಹಲ್ಗಾಮ್ನಲ್ಲಿ ಬದುಕಿ ಬಂದಿರುವ ಮಹಿಳೆಯರನ್ನು ಅಪಮಾನಿಸಿದ್ದಾರೆ. ‘‘ಉಗ್ರರ ಜೊತೆಗೆ ದೈನ್ಯತೆಯಿಂದ ಕೈ ಮುಗಿದಿರುವುದು ತಪ್ಪು’’ ಎಂದು ಹೇಳಿ, ಪರೋಕ್ಷವಾಗಿ ನೀವೂ ಉಗ್ರರ ಜೊತೆಗೆ ಹೋರಾಡುತ್ತಾ ಸಾಯಬೇಕಾಗಿತ್ತು ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇದು ಕ್ರೌರ್ಯದ ಪರಮಾವಧಿಯಾಗಿದೆ. ಬದುಕುಳಿದವರನ್ನು ‘ನೀವು ಯಾಕೆ ಉಗ್ರರ ಜೊತೆಗೆ ಹೋರಾಡಿ ಸಾಯಲಿಲ್ಲ?’ ಎಂದು ನೇರವಾಗಿ ಕೇಳಿದಂತಾಗಿದೆ. ಮೊತ್ತ ಮೊದಲು ಇಂತಹ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ ರಾಜ್ಯಸಭಾ ಸದಸ್ಯನನ್ನು ಕಾಶ್ಮೀರದಲ್ಲಿರುವ ಉಗ್ರಗಾಮಿ ನೆಲೆಗಳಿಗೆ ಎಸೆದು ಬರಬೇಕಾಗಿದೆ. ಉಗ್ರರ ವಿರುದ್ಧದ ಹೋರಾಟದ ನೇತೃತ್ವವನ್ನು ಈತನಿಗೆ ವಹಿಸಬೇಕು. ಅದು ಸಾಧ್ಯವಿಲ್ಲ ಎಂದಾದರೆ, ಕನಿಷ್ಠ ತನ್ನ ಪಕ್ಷದಿಂದ ಈತನನ್ನು ವಜಾಗೊಳಿಸುವ ಕೃಪೆಯನ್ನಾದರೂ ಪ್ರಧಾನಿ ಮೋದಿ ತೋರಿಸಬೇಕು. ಸೈನಿಕರ ವಿರುದ್ಧ, ಉಗ್ರಗಾಮಿಗಳ ದಾಳಿಗೆ ಬಲಿಯಾದವರ ವಿರುದ್ಧ ಹಗುರ ಹೇಳಿಕೆಗಳನ್ನು ನೀಡುವ ಇಂತಹ ನಾಯಕರನ್ನು ಬಗಲಲ್ಲಿ ಸಾಕುತ್ತಾ ‘ನನ್ನ ರಕ್ತದಲ್ಲಿ ಸಿಂಧೂರ ಹರಿಯುತ್ತಿದೆ’ ಎಂದು ಪ್ರಧಾನಿ ಮೋದಿಯವರು ಹೇಳಿದರೆ ಅದು ನಂಬುವ ಮಾತೆ?