Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ಯುದ್ಧ ಮತ್ತು ಯುದ್ಧೋನ್ಮಾದ ಹೇಗಿರುತ್ತದೆ...

ಯುದ್ಧ ಮತ್ತು ಯುದ್ಧೋನ್ಮಾದ ಹೇಗಿರುತ್ತದೆ ಎಂದರೆ?

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ12 May 2025 10:27 AM IST
share
ಯುದ್ಧ ಮತ್ತು ಯುದ್ಧೋನ್ಮಾದ ಹೇಗಿರುತ್ತದೆ ಎಂದರೆ?

ಕಾಳ್ಗಿಚ್ಚು ಶುರುವಾಗಲು ಬರ ಸಿಡಿಲೇ ಬಡಿಯಬೇಕು ಎಂದೇನಿಲ್ಲ. ಯಾರೋ ಹಚ್ಚಿದ ಬೀಡಿಯ ಕಿಡಿ ಸಾಕು. ಯುದ್ಧವೂ ಅಷ್ಟೇ; ಆರಂಭವಾಗಲು ಸಕಾರಣವೇ ಬೇಕಾಗಿಲ್ಲ. ಸಣ್ಣ ಕಾರಣವೇ ಸಾಕು. ಒಮ್ಮೊಮ್ಮೆ ಅದರ ಅಗತ್ಯವೂ ಇರುವುದಿಲ್ಲ. ಯಾರು ಬೇಕಾದರೂ ಯುದ್ಧವನ್ನು ಆರಂಭಿಸಬಹುದು, ಆದರೆ ತಡೆದು ನಿಲ್ಲಿಸುವುದು ಆರಂಭಿಸಿದವರ ಕೈಯಲ್ಲಿ ಇರುವುದಿಲ್ಲ.

ಕಾಳ್ಗಿಚ್ಚು ಕೆಲವೊಮ್ಮೆ ದೀರ್ಘಕಾಲದವರೆಗೆ, ಇನ್ನೂ ಕೆಲವೊಮ್ಮೆ ಋತುಪೂರ್ತಿ ಕಾಡುತ್ತದೆ. ಬೆಂಕಿ ಹಾರಿದರೂ ಬಿಸಿ ಬಾಧಿಸುತ್ತಲೇ ಇರುತ್ತದೆ. ಯುದ್ಧವೂ ಅಷ್ಟೇ; ಪರಾಕ್ರಮ ತೋರಿಬಿಡಬಹುದು. ಆದರೆ ಅದರ ಪರಿಣಾಮಗಳನ್ನು ಅರಗಿಸಿ ಕೊಳ್ಳುವುದು ಅತಿರಥ-ಮಹಾರಥರಿಗೂ ಸುಲಭ ಸಾಧ್ಯವಲ್ಲ. ಅದರಲ್ಲೂ ಯುದ್ಧಪೀಡಿತ ಪ್ರದೇಶ-ದೇಶದ ಅಮಾಯಕ ಜನರಿಗೆ ಚೇತರಿಸಿಕೊಳ್ಳಲು ವರ್ಷಾನುಗಟ್ಟಲೆ ಸಮಯ ಬೇಕಾಗುತ್ತದೆ.

ಯುದ್ಧದಿಂದ ಸಾಯುವವರು ಸೈನಿಕರು ಮತ್ತು ಜನಸಾಮಾನ್ಯರು. ಯುದ್ಧವನ್ನು ನಿರ್ಧರಿಸುವವರು ಆಳುವವರು. ಯುದ್ಧದಿಂದ ಆಹಾರ, ವ್ಯಾಪಾರ, ವ್ಯವಹಾರ ಸೇರಿದಂತೆ ಅಪಾರ ಪ್ರಮಾಣದ ನಷ್ಟ ಅನುಭವಿಸುವವರು ಅಮಾಯಕ ಜನ. ಯುದ್ಧ ಗೆದ್ದರೆ ಅದರ ಯಶಸ್ಸು, ಬಿರುದು ಬಾವಲಿಗಳು ಸೇರುವುದು ಆಳುವವರ ಮುಡಿಗೆ. ಇದೇ ಹಿನ್ನೆಲೆಯಲ್ಲೇ ಏನೋ ರೆಡ್ ಆರ್ಮಿಯ ಸಂಸ್ಥಾಪಕ ಲಿಯಾನ್ ಟ್ರಾಟ್ಸ್ ‘ಯುದ್ಧದ ಬಗ್ಗೆ ನಿಮಗೆ ಆಸಕ್ತಿ ಇಲ್ಲದಿರಬಹುದು, ಯುದ್ಧಕ್ಕೆ ನಿಮ್ಮ ಬಗ್ಗೆ ಆಸಕ್ತಿ ಇರುತ್ತದೆ’ ಎಂದು ಹೇಳಿರಬಹುದು. ಈ ಮೂಲಕ ಅವರು ಆಳುವವರಲ್ಲಿ ಯುದ್ಧವನ್ನು, ಯುದ್ಧೋನ್ಮಾದವನ್ನು ಹಾಗೂ ಜನಸಾಮಾನ್ಯರಲ್ಲಿ ನಿರಾಸಕ್ತಿಯನ್ನು, ನಿರ್ಲಿಪ್ತತೆಯನ್ನು ಕಂಡಿರಬಹುದು.

ಎಲ್ಲಾ ದಾರ್ಶನಿಕರ ಮಾತುಗಳು ಎಲ್ಲಾ ಕಾಲಕ್ಕೂ ಅನ್ವಯವಾಗುವಂತೆ ಇರುವುದಿಲ್ಲ. ಇದಕ್ಕೆ ಲಿಯಾನ್ ಟ್ರಾಟ್ಸ್ ಕೂಡ ಹೊರತಲ್ಲ. ಹಾಗಂತಾ ದಿಗ್ದರ್ಶನ ತೋರುವ ಅವರ ಮಾತುಗಳನ್ನು ಉಪೇಕ್ಷಿಸುವಂತೆಯೂ ಇಲ್ಲ. ಅವರ ದಿವ್ಯದೃಷ್ಟಿ, ದೂರದೃಷ್ಟಿಗಳು ಬಹುತೇಕ ಸಂದರ್ಭಗಳಲ್ಲಿ ಸರಿಯಾಗೇ ಇರುತ್ತವೆ ಎನ್ನುವುದು ಅವರನ್ನು ಒಪ್ಪಲು ಪ್ರಮುಖ ಕಾರಣವಾಗಬೇಕು. ಕೆಲವೇ ಕೆಲವು ಸಂದರ್ಭಗಳಲ್ಲಿ ಆಳುವವರು ತಾನು ಪರಮ ನಿರ್ಲಿಪ್ತ ಎಂದು ಬಿಂಬಿಸಿಕೊಂಡು ಜನರಿಗೆ ಆಪ್ತರಾಗಿ ಬಿಡುವುದುಂಟು. ತನ್ನೊಳಗಿರುವ ಯುದ್ಧೋನ್ಮಾದ ಜನರಲ್ಲಿ ಉಕ್ಕಿ ಬರುವಂತೆ ಪ್ರೇರೇಪಿಸುವುದುಂಟು. ಅದಕ್ಕಾಗಿ ಪರಿಪರಿಯಾದ ಪರೋಕ್ಷ ಮಾರ್ಗಗಳನ್ನು ಹುಡುಕುವುದುಂಟು. ಸುಲಭದ ದಾರಿಗಳೆಂದರೆ ದೇವರು, ಧರ್ಮ, ದೇಶ, ಇನ್ನಿತರ ಭಾವನಾತ್ಮಕ ವಿಷಯಗಳು. ಇದಕ್ಕೆ ಇತಿಹಾಸದಲ್ಲಿ ಸಾಕ್ಷಿಯೂ ಉಂಟು; ಅಡಾಲ್ಫ್ ಹಿಟ್ಲರ್, ಮುಸ್ಸೋಲಿನಿ.

ಯುದ್ಧದ ಇತಿಹಾಸ ಅತ್ಯಂತ ಕ್ರೂರ. ಯಾವ್ಯಾವಾಗ-ಎಲ್ಲೆಲ್ಲಿ ಬೌದ್ಧಿಕ ದಾರಿದ್ರ್ಯ ದಟ್ಟವಾಗಿ ಕಾಡಿದೆಯೋ, ನಿರುದ್ಯೋಗ ಸಮಸ್ಯೆ ಬಿಸಿ ರಕ್ತದವರನ್ನು ಬಾಧಿಸಿದೆಯೋ, ಆಳುವವನು ಅಸಮರ್ಥನಾಗಿದ್ದಾನೋ, ಪುಕ್ಕಲು ನಾಯಕನೊಬ್ಬ ಪ್ರಬಲ ಎನಿಸಿಕೊಳ್ಳಲು ಹಲವು ಬಗೆಯ ಪಟ್ಟು ಹಾಕುವನೋ ಅಂಥ ಸಂದರ್ಭಗಳಲ್ಲೇ, ಅಂಥ

ಕಡೆಗಳಲ್ಲೇ ಯುದ್ಧ ನಡೆದಿರುವುದು ಅಥವಾ ಯುದ್ಧದ ಹೆಸರಲ್ಲಿ ಘೋರ ಅನ್ಯಾಯಗಳಾಗಿರುವುದು. ಹಿಟ್ಲರ್ ಮತ್ತು ಮುಸ್ಸೋಲಿನಿ ಇಂಥ ಕ್ರೂರತೆಯ ರಾಯಭಾರಿಗಳು.

ಕೊಂದವರುಳಿವರೇ? ಹಿಟ್ಲರ್ ಕೂಡ ಅಳಿದ. ಮುಸ್ಸೋಲಿನಿ ಮುಗಿದ. ಹಿಟ್ಲರ್, ಮುಸ್ಸೋಲಿನಿ ಅಳಿದರೂ ಯುದ್ಧೋನ್ಮಾದ ಉಳಿದಿದೆ. ಅದು ಆಗಾಗ ಪ್ರತ್ಯಕ್ಷವಾಗುತ್ತದೆ. ಕಾಲ ಚಕ್ರದಲ್ಲಿ ಹಿಂಸೆಯೂ ಇದೆ, ಅಹಿಂಸೆಯೂ ಇದೆ. ಹುಸಿ ರಾಷ್ಟ್ರಪ್ರೇಮ ಹುಟ್ಟಿಸಿ, ಹಸಿ ಸುಳ್ಳುಗಳನ್ನು ಸೃಷ್ಟಿಸಿ, ಹಿಂಸೆಯ ಮೂಲಕ ಗೆಲ್ಲಬೇಕೆಂಬ ಹೊರಗಿನ ಹಿಟ್ಲರ್, ಮುಸ್ಸೋಲಿನಿ ಮನೋಸ್ಥಿತಿ ಮತ್ತು ದಿಟವಾದ ದೇಶಪ್ರೇಮ, ಸತ್ಯದ ಹಾದಿ, ಅಹಿಂಸಾ ಮಾರ್ಗದಲ್ಲಿ ಜಯಿಸಬೇಕೆಂಬ ಬುದ್ಧ, ಮಹಾವೀರ, ಅಶೋಕ, ಮಹಾತ್ಮಾ ಗಾಂಧಿ ಮತ್ತಿತರ ನಮ್ಮದೇ ಮಹನೀಯರ ಮನೋಸ್ಥಿತಿಗಳ ನಡುವಿನ ಸಂಘರ್ಷವೂ ಇದೆ. ಇತ್ತೀಚೆಗೆ ಹಿಟ್ಲರ್ ಹಿಂಬಾಲಕರು ಮತ್ತು ಅಹಿಂಸೆಯ ಆರಾಧಕರ ನಡುವಿನ ಸಂಘರ್ಷ ಇನ್ನಷ್ಟು ತೀವ್ರಗೊಳ್ಳುತ್ತಿದೆ.

ಯುದ್ಧೋನ್ಮಾದ ಹೇಗಿರುತ್ತದೆ ಎಂದರೆ, ಯುದ್ಧ ಎಂದರೆ ಹಿಂಸೆ, ರಕ್ತ, ಸಾವು, ನಾಶ, ಸರ್ವನಾಶ ಎನ್ನುವ ಸರಳವಾದ ಸಾರ್ವಕಾಲಿಕ ಸತ್ಯಗಳು ಸಹ ಅರ್ಥವಾಗದ ಅಂಧಕಾರವನ್ನು ಸೃಷ್ಟಿಸಿರುತ್ತದೆ. ಯುದ್ಧವೆಂದರೆ ಮೋಸ. ಜನಸಾಮಾನ್ಯರಿಗೆ ತನ್ನದೇ ರಾಜ್ಯ-ದೇಶದ ನಾಯಕರು ಮಾಡುವ ಮೋಸ. ರಾಜರು, ರಾಜಾಧಿರಾಜ ಎಂಬ ಬಿರುದಾಂಕಿತರಾಗಲು, ವೀರ, ಧೀರ, ಶೂರ, ಅಸಾಮಾನ್ಯ ಎಂಬಿತ್ಯಾದಿ ಕೀರ್ತಿ ಮುಡಿಗೇರಿಸಿಕೊಳ್ಳಲು ಮಾಡುವ ಮಹಾಮೋಸ ಎಂಬುದು ಮಾನವರಿಕೆಯಾಗದ ಮನೋಸ್ಥಿತಿಯಾಗಿರುತ್ತದೆ.

ಯುದ್ಧದಲ್ಲಿ ಸತ್ತವರ ಕತೆ ಮುಗಿಯುತ್ತದೆ. ಜೀವ ಉಳಿದವರ ಬದುಕು ಬರ್ಬರವಾಗುತ್ತದೆ. ಯುದ್ಧದಿಂದುಂಟಾಗುವ ಪರಿಸರ ಹಾನಿ, ಆರ್ಥಿಕ ಹಾನಿ, ವ್ಯಾಪಾರ-ವಹಿವಾಟಿನ ಬಿಕ್ಕಟ್ಟುಗಳು ಬದುಕುಳಿದವರ ಪಾಲಿಗೆ ಭಾರವಾಗಿ ಪರಿಣಮಿಸುತ್ತವೆ. ಯುದ್ಧವೇ ಸಮಸ್ಯೆ. ಯುದ್ಧ ಎಂದೂ ಯಾವ ಸಮಸ್ಯೆಗೂ ಪರಿಹಾರವಲ್ಲ. ಹೀಗೆ ಹೇಳುವುದು ಯುದ್ಧೋನ್ಮಾದದ ಕಾಲದಲ್ಲಿ ದೇಶದ್ರೋಹವಾಗುತ್ತದೆ. ಯುದ್ಧ ಮತ್ತು ಧರ್ಮವನ್ನು ಸಮೀಕರಿಸಿ ನಿರೂಪಣೆ ಹೆಣೆದಿರುವ ಸಂದರ್ಭದಲ್ಲಿ ವಾಸ್ತವ ಬಿಚ್ಚಿಡುವುದು ಧರ್ಮದ್ರೋಹವಾಗುತ್ತದೆ. ಹಿಂಸೆ ಇಲ್ಲವಾಗಬೇಕು ಎನ್ನುವ ಮಹಾ ಮಾನವತಾವಾದಿಗಳ, ಮುತ್ಸದ್ದಿಗಳ ಮಾತುಗಳು ಅಪಥ್ಯವಾಗುತ್ತವೆ. ಈ ಎಲ್ಲಾ ಹಿನ್ನೆಲೆಯಲ್ಲಿ ‘ಸತ್ಯ ಹೇಳುವುದೇ ಅಪರಾಧ’ ಎನ್ನುವ ಕಾಲದಲ್ಲಿಯೇ ಸತ್ಯ ಹೇಳಬೇಕಾದ ಅಗತ್ಯ ಹೆಚ್ಚಾಗಿರುವುದು.

ಬಹುತೇಕ ಯುದ್ಧಗಳು ಕೊನೆಗೊಳ್ಳುವುದಿಲ್ಲ. ಯಾವ ದೇಶ ಏನನ್ನು ಬಯಸಿ ಯುದ್ಧ ಆರಂಭಿಸಿರುತ್ತದೆಯೋ ಆ ನಿರ್ದಿಷ್ಟ ಗುರಿಯನ್ನು ಮುಟ್ಟಿರುವುದಿಲ್ಲ. ಯುದ್ಧ ನಿಂತರೂ ಅದರ ಕರಿನೆರಳು ಆವರಿಸುತ್ತಲೇ ಇರುತ್ತದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನವನ್ನೇ ನೋಡಿ. ಎರಡೂ ದೇಶಗಳು ವಿಭಜನೆಗೊಂಡ ಬೆನ್ನಲ್ಲೇ ಸಮರ ಶುರುವಾಯಿತು. ವಿಶ್ವಸಂಸ್ಥೆಯ ಮಧ್ಯಸ್ಥಿಕೆಯೊಂದಿಗೆ ಕದನ ವಿರಾಮ ಘೋಷಿಸಲಾಯಿತು. ಆದರೆ ಉದ್ದೇಶ ಈಡೇರಲಿಲ್ಲ. ಶಾಂತಿ ಸ್ಥಾಪನೆಯಾಗಲಿಲ್ಲ. 1965ರ ಯುದ್ಧವೂ ಇದಕ್ಕಿಂತ ಭಿನ್ನವಾಗಿರಲಿಲ್ಲ.

1971ರಲ್ಲಿ ಮಾತ್ರ ಭಾರತ ಜಯಿಸಿತು. ಏಕೆಂದರೆ ಆಗ ಪಾಕಿಸ್ತಾನವು ಭಾರತದ ಒತ್ತಡಕ್ಕೆ ಮಣಿದು ಬಾಂಗ್ಲಾದೇಶವನ್ನು ಬಿಟ್ಟುಕೊಟ್ಟಿತು. ಸರಿಸುಮಾರು 93,000 ಪಾಕಿಸ್ತಾನದ ಸೈನಿಕರು ಶಸ್ತ್ರಾಸ್ತ್ರ ತ್ಯಜಿಸಿದರು. ಪಾಕಿಸ್ತಾನದ ಸೇನೆ ಢಾಕಾದಲ್ಲಿ ಶರಣಾಗತಿ ಪತ್ರಕ್ಕೆ ಸಹಿ ಹಾಕಿತು. ಅದು ಎರಡನೇ ಮಹಾಯುದ್ಧದ ನಂತರದ ಅತಿದೊಡ್ಡ ಶರಣಾಗತಿ ಎನಿಸಿಕೊಂಡಿತು. ಅಷ್ಟೊತ್ತಿಗಾಗಲೇ ಎರಡು ಬಾರಿ (1948 ಮತ್ತು 1965ರಲ್ಲಿ) ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದ್ದ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಅಂದಿನ ಭಾರತದ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಯುದ್ಧ ಅಂತಿಮ ಮತ್ತು ಅನಿವಾರ್ಯ ಆಯ್ಕೆಯಾಗಿತ್ತು. ಆದ್ದರಿಂದಲೇ ಅಟಲ್ ಬಿಹಾರಿ ವಾಜಪೇಯಿ, ಇಂದಿರಾ ಗಾಂಧಿ ಅವರನ್ನು ‘ದುರ್ಗೆ’ ಎಂದು ಕರೆದಿದ್ದು.

ಇದಾದ ಮೇಲೆ 1999ರಲ್ಲಿ ಮತ್ತೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಕಾರ್ಗಿಲ್ ಯುದ್ಧ ನಡೆಯಿತು. ಆಗಲೂ ಅಂತರ್‌ರಾಷ್ಟ್ರೀಯ ಒತ್ತಡಕ್ಕೆ ಮಣಿದು ಪಾಕಿಸ್ತಾನ ತನ್ನ ಸೇನೆಯನ್ನು ಹಿಂಪಡೆಯಿತು. ಭಾರತ ಗೆದ್ದಿದ್ದರೂ ಪಾಕಿಸ್ತಾನ ಅಧಿಕೃತ ಶರಣಾಗತಿಯನ್ನು ಘೋಷಿಸಲಿಲ್ಲ. ಭಾರತ ಹಾಗೂ ಪಾಕಿಸ್ತಾನ ನಡುವಿನ ಗಡಿಯಲ್ಲಿ ಶಾಂತಿಯೂ ನೆಲೆಸಲಿಲ್ಲ. ಮೊದಲ ಮತ್ತು ಎರಡನೇ ಮಹಾಯುದ್ಧಗಳ ಬಳಿಕ ಜಗತ್ತಿಗೆ ಸಿಕ್ಕಿದ್ದು ಕೂಡ ಇಂಥದ್ದೇ ಪರಿಹಾರ. ಅಂದರೆ ಯುದ್ಧದ ಉದ್ದೇಶ ಹಾಗೂ ಸಾರ್ಥಕತೆ ಏನು?

ಜಾಣನಿಗೆ ಮಾತಿನ ಪೆಟ್ಟು ಎನ್ನುವ ನಮ್ಮ ಹಿರಿಯರ ಮಾತಿಗೆ ಹೆಚ್ಚಿನ ತೂಕವಿದೆ. ಇವೇ ಮಾತುಗಳನ್ನು ದೇಶ-ದೇಶಗಳ ಮಟ್ಟದಲ್ಲಿ ಆಡುವುದಕ್ಕೆ ರಾಜತಾಂತ್ರಿಕ ಮಾತುಕತೆ ಎನ್ನಲಾಗುತ್ತದೆ. ಎರಡೂ ದೇಶಗಳ ನಡುವೆ ವ್ಯಾಪಾರ, ವ್ಯವಹಾರ, ಆಮದು, ರಫ್ತು, ತಂತ್ರಜ್ಞಾನ ವಿನಿಮಯ ಮತ್ತಿತರ ವಿಚಾರಗಳಲ್ಲಿ ಏರ್ಪಡುವ ಒಡಂಬಡಿಕೆಗಳನ್ನು ರಾಜತಾಂತ್ರಿಕ ಸಂಬಂಧಗಳೆಂದು ಹೇಳಲಾಗುತ್ತದೆ. ‘ರಾಜತಾಂತ್ರಿಕ’ ಎಂದರೆ ಅಳೆದು-ತೂಗಿ ಯಾವ ದೇಶಕ್ಕೂ ಅನ್ಯಾಯವಾಗದಂತಹ ಸೂಕ್ತ ನಿರ್ಧಾರ ಮಾಡುವ ಕ್ರಮವಾಗಿರುತ್ತದೆ. ಒಂದೊಮ್ಮೆ ಎರಡು ದೇಶಗಳ ನಡುವೆ ಭಿನ್ನಾಭಿಪ್ರಾಯ, ಮುನಿಸು

ಉಂಟಾದರೆ ಈ ‘ರಾಜತಾಂತ್ರಿಕ ಕ್ರಮ’ದ ಮೂಲಕವೇ ಪರಿಹರಿಸಿ ಕೊಳ್ಳಬೇಕಾಗುತ್ತದೆ.

ಇಂಥ ಹತ್ತು-ಹಲವು ಹಾದಿಯಿದ್ದರೂ ಯುದ್ಧವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಚಾಣಾಕ್ಷತೆ ಎನ್ನಲಾಗದು. ಅದರಲ್ಲೂ ಅಮೆರಿಕದಂತಹ ಯುದ್ಧ ಸಾಮಗ್ರಿಗಳನ್ನು ಮಾರಿ ಲಾಭ ಮಾಡಿಕೊಳ್ಳುವ ವ್ಯಾಪಾರಿ ಮನೋಸ್ಥಿತಿಯ ದೇಶದ ಮಧ್ಯಸ್ಥಿಕೆಯಲ್ಲಿ ಮುಂದಡಿ ಇಡುವುದು ಮುತ್ಸದ್ದಿತನದ ಲಕ್ಷಣವಾಗದು.

‘ದೊಡ್ಡಣ್ಣನ ಪಟ್ಟ’ಕ್ಕೆ ಸವಾಲೆಸೆದಿರುವ ಚೀನಾ, ಪಾಕಿಸ್ತಾನವನ್ನು ಬೆಂಬಲಿಸುತ್ತದೆ ಎನ್ನುವ ಕಾರಣಕ್ಕಾಗಿ ಶತ್ರುವಿನ ಶತ್ರು ಮಿತ್ರ ಎಂಬ ಮಾತಿನಂತೆ ಅಮೆರಿಕವು ಭಾರತವನ್ನು ಬೆಂಬಲಿಸುತ್ತಿದೆ. ಇದನ್ನು ಅಸಲಿ ಬೆಂಬಲ ಎಂದು ಪರಿಗಣಿಸಲಾಗದು. ಹಿಂದೆಯೂ 1999ರಲ್ಲಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲೂ ಅಮೆರಿಕ ಮಧ್ಯಪ್ರವೇಶ ಮಾಡಿತ್ತು. ಅಂದು ಶಾಂತಿ ಸ್ಥಾಪನೆ ಮಾಡುವುದಾಗಿ ತಲೆಯಾಡಿಸಿದ್ದ ಪಾಕಿಸ್ತಾನ 1999ರಿಂದ ಇಲ್ಲಿಯವರೆಗೆ ಹಲವು ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಅಮೆರಿಕ ಎಂದೂ ಪಾಕಿಸ್ತಾನಕ್ಕೆ ಎಚ್ಚರಿಸುವ

ಗೋಜಿಗೆ ಹೋಗಿಲ್ಲ. ಬದಲಿಗೆ ನೆರವು ಮತ್ತು ಸಾಲದ ರೂಪದಲ್ಲಿ ಸಹಸ್ರಾರು ಕೋಟಿ ರೂಪಾಯಿಗಳನ್ನು ಹರಿಸಿದೆ. ತಿಂದು ಕೊಬ್ಬಿರುವ ಪಾಕಿಸ್ತಾನ, ಭಾರತದ ವಿರುದ್ಧ ಅಬ್ಬರಿಸುತ್ತಿದೆ. ಭಾರತ, ಪಾಕಿಸ್ತಾನದನಂತಹ ಪ್ರತ್ಯಕ್ಷ ಎದುರಾಳಿಯ ಬಗ್ಗೆ ವಹಿಸುವಷ್ಟೇ ಎಚ್ಚರಿಕೆಯನ್ನು ಅಮೆರಿಕದಂತಹ ಪರೋಕ್ಷ ವೈರಿಯ ಬಗೆಗೂ ವಹಿಸುವುದು ಅನಿವಾರ್ಯವಾಗಿದೆ.

ನಾವು ಕೆಸರಿನ ಮೇಲೆ ಬಿದ್ದರೂ, ಕೆಸರು ನಮ್ಮ ಮೇಲೆ ಬಿದ್ದರೂ ಹೊಲಸಾಗುವುದು ನಮ್ಮದೇ ದೇಹ. ಭಾರತ, ಪಾಕಿಸ್ತಾನದ ಮೇಲೆ ಯುದ್ಧ ಮಾಡಿದರೂ, ಪಾಕಿಸ್ತಾನ, ಭಾರತದ ಮೇಲೆ ಯುದ್ಧ ಮಾಡಿದರೂ ಹೆಚ್ಚು ನಷ್ಟವಾಗುವುದು ಭಾರತಕ್ಕೆ. ಕಾರ್ಗಿಲ್ ಯುದ್ಧದಲ್ಲಿ ಭಾರತವು ದಿನವೊಂದಕ್ಕೆ ಮಾಡಿದ ಅಂದಾಜು ಖರ್ಚು 14.6 ಶತಕೋಟಿ ರೂಪಾಯಿ. ಪಾಕಿಸ್ತಾನ ಮಾಡಿದ ಅಂದಾಜು ಖರ್ಚು ದಿನವೊಂದಕ್ಕೆ 3.7 ಶತಕೋಟಿ

ರೂಪಾಯಿ. ಪ್ರಸ್ತುತ ಭಾರತದ ರಕ್ಷಣಾ ಬಜೆಟ್ 6.8 ಲಕ್ಷ ಕೋಟಿ ರೂಪಾಯಿ. ಪಾಕಿಸ್ತಾನದ ರಕ್ಷಣಾ ಬಜೆಟ್ 2.5 ಲಕ್ಷ ಕೋಟಿ ರೂಪಾಯಿ. ಯುದ್ಧದ ಸಂದರ್ಭದಲ್ಲಿ ಆಗುವ ಜೀವಹಾನಿಯ ಲೆಕ್ಕ ಇನ್ನೊಂದು ಮೋಸ. ಒಟ್ಟಿನಲ್ಲಿ ಅಂತರ್‌ರಾಷ್ಟ್ರೀಯ ಸಮುದಾಯವನ್ನು ಬಳಸಿಕೊಂಡು, ರಾಜತಾಂತ್ರಿಕ ಕ್ರಮಗಳನ್ನು ಅಸ್ತ್ರವನ್ನಾಗಿಸಿಕೊಂಡು ಪಾಠ ಕಲಿಸಬೇಕೇ ವಿನಃ ಯುದ್ಧದ ಹಾದಿ ತುಳಿಯುವಂತಾಗಬಾರದು.

share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X