Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ಬದಲಾಗುತ್ತಾ ಕಾಂಗ್ರೆಸ್?

ಬದಲಾಗುತ್ತಾ ಕಾಂಗ್ರೆಸ್?

ಪಹಲ್ಗಾಮ್ To ಫುಲೆ, ದಿಲ್ಲಿ To ಮಾವಳ್ಳಿ

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ26 May 2025 9:30 AM IST
share
ಬದಲಾಗುತ್ತಾ ಕಾಂಗ್ರೆಸ್?

ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಪಹಲ್ಗಾಮ್ ನರಮೇಧದ ಬಳಿಕ ಒಂದರ ಮೇಲೊಂದು ಆಘಾತಗಳಾಗುತ್ತಿವೆ. ಪಹಲ್ಗಾಮ್ ಉಗ್ರ ಕೃತ್ಯಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಬೇಹುಗಾರಿಕಾ ಮತ್ತು ಭದ್ರತಾ ವೈಫಲ್ಯಗಳೇ ಕಾರಣ. ಪ್ರಧಾನಿ ನರೇಂದ್ರ ಮೋದಿ ಪಹಲ್ಗಾಮ್ ಕುಕೃತ್ಯ ನಡೆದು 24 ಗಂಟೆ ಕಳೆಯುವುದರೊಳಗೆ ಬಿಹಾರಕ್ಕೆ ಹೋಗಿ ಚುನಾವಣಾ ಭಾಷಣ ಮಾಡಿದ್ದು ಅತ್ಯಂತ ಹೇಯ ಮತ್ತು ಅಪರಾಧಿ ಕೆಲಸ. ಪಾಕಿಸ್ತಾನದ ಮೇಲೆ ನಿಯಂತ್ರಣ ಸಾಧಿಸುವ ಹಂತದಲ್ಲೇ ಕದನ ವಿರಾಮ ಘೋಷಿಸಿ ಆ ದೇಶಕ್ಕೆ ಪಾಠ ಕಲಿಸಬಹುದಾದ ಅವಕಾಶವನ್ನು ಕೈಚೆಲ್ಲಿದ್ದಾರೆ. ನಂಬಿಕೆಗೆ ಅರ್ಹವಲ್ಲದ ಅಮೆರಿಕಕ್ಕೆ ಮಧ್ಯಸ್ಥಿಕೆ ವಹಿಸಲು ಹೇಳಿ ದೊಡ್ಡ ಪ್ರಮಾದ ಎಸಗಿದ್ದಾರೆ. ಮೋದಿ ಒಬ್ಬ ಅಸಮರ್ಥ ನಾಯಕ ಮಾತ್ರವಲ್ಲ, ಧೈರ್ಯ ಮತ್ತು ದೂರದೃಷ್ಟಿ ಇಲ್ಲದ ಪ್ರಧಾನ ಮಂತ್ರಿ ಎಂದು ದೇಶವಾಸಿಗಳಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ ಕಾಂಗ್ರೆಸ್ ನಾಯಕರು ಪೂರ್ಣ ಪ್ರಮಾಣದಲ್ಲಿ ಯಶಸ್ಸು ಕಾಣಲಿಲ್ಲ.

ಎರಡನೆಯದಾಗಿ ಕೇಂದ್ರ ಸರಕಾರ ಪಹಲ್ಗಾಮ್ ನರಮೇಧ ನಡೆದು ವಾರ ಕಳೆಯುವುದರೊಳಗೆ ಜನಗಣತಿಯ ಜೊತೆಗೆ ಜಾತಿಗಣತಿಯನ್ನೂ ನಡೆಸುವುದಾಗಿ ಘೋಷಿಸಿತು. ಇದನ್ನು ‘ಬೇಹುಗಾರಿಕಾ ಮತ್ತು ಭದ್ರತಾ ವೈಫಲ್ಯಗಳಿಂದ ಪಹಲ್ಗಾಮ್ ದಾಳಿಯಾಯಿತೆಂದು ಮರೆ ಮಾಚಲು ಹಾಗೂ ರಾಹುಲ್ ಗಾಂಧಿ ಅವರು ದೇಶಾದ್ಯಂತ ಜಾತಿಗಣತಿ ಬಗ್ಗೆ ಆಡುತ್ತಿದ್ದ ಪ್ರಖರ ಮಾತುಗಳಿಗೆ ಹೆದರಿ ಕೇಂದ್ರ ಸರಕಾರ ಜಾತಿಗಣತಿಯ ಘೋಷಣೆ ಮಾಡಿತು’ ಎಂದು ಬಿಂಬಿಸಲು ಕಾಂಗ್ರೆಸ್ ನಾಯಕರು ಪ್ರಯತ್ನಿಸಿದರು. ಆದರೆ ಅವರಿಂದ ಸಂಪೂರ್ಣವಾದ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ.

ಮೂರನೆಯದಾಗಿ ಕಾಂಗ್ರೆಸ್ ಬಿಹಾರ ಚುನಾವಣೆಗೆ ಸೂಕ್ತವಾದ ತಯಾರಿ ಮಾಡಿಕೊಳ್ಳಬೇಕಾಗಿದೆ. ಕಳೆದ ಬಾರಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿತ್ತು. ಅದಕ್ಕಿಂತ ಹೆಚ್ಚಾಗಿ ಲೋಕಸಭಾ ಚುನಾವಣೆ ಬಳಿಕ ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಮತ್ತು ಅಸಮರ್ಪಕ ಕಾರ್ಯತಂತ್ರದಿಂದ ಸೋಲುಂಟಾಗಿತ್ತು. ಬಿಹಾರದ ಗೆಲುವು ಮುಂದಿನ ಚುನಾವಣೆಗಳಿಗೆ ಸ್ಫೂರ್ತಿಯಾಗಬಲ್ಲದಾದುದರಿಂದ ಬೇರೆಲ್ಲಾ ಪಕ್ಷಗಳಿಗಿಂತ ಕಾಂಗ್ರೆಸಿಗೆ ಅದು ಹೆಚ್ಚು ಅಗತ್ಯವಾಗಿದೆ.

ನಾಲ್ಕನೆಯದಾಗಿ ‘ಮೋದಿ ಶಿವಲಿಂಗದ ಮೇಲಿರುವ ಚೇಳಿನಂತೆ, ಹೊಡೆದು ಓಡಿಸಲು ಸಾಧ್ಯವಿಲ್ಲ. ಅಲ್ಲೇ ಇರಲೆಂದು ಬಿಡುವುದಕ್ಕೂ ಆಗಲ್ಲ’ ಎಂದು ಹೇಳಿದ್ದ ಶಶಿ ತರೂರ್ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಸೆರಗಿಗೆ ಬಿದ್ದ ಬೆಂಕಿಯಾಗಿದ್ದಾರೆ. ಅರ್ಹತೆ ಇಲ್ಲದಿದ್ದರೂ ಆಸೆ ಪಡುವುದು ಕಾಂಗ್ರೆಸಿನಲ್ಲಿ ತುಸು ಜಾಸ್ತಿ. ಅತಿಯಾಸೆ ಪಡುವವರು ಇನ್ನೂ ಜಾಸ್ತಿ. ಪದವಿ ಮತ್ತು ಪ್ರಚಾರ ಮಾತ್ರ ಇರಲಿ, ಜವಾಬ್ದಾರಿ ಬೇಡ ಎನ್ನುವವರು ಅದಕ್ಕಿಂತಲೂ ಜಾಸ್ತಿ. ಶಶಿ ತರೂರ್ ಕಳೆದ ಯುಪಿಎ ಸರಕಾರದ ಅವಧಿಯಲ್ಲಿ ವಿದೇಶಾಂಗ ಇಲಾಖೆಯ ರಾಜ್ಯ ಸಚಿವರಾಗಿದ್ದರೂ ತೃಪ್ತರಾಗಿರಲಿಲ್ಲ. ಇದು ತನ್ನ ಪ್ರತಿಭೆಗೆ ತಕ್ಕದಾದ ಸ್ಥಾನಮಾನವಲ್ಲ ಎಂಬ ಅಸಮಾಧಾನ ಅವರದಾಗಿತ್ತು. ಬಳಿಕ ಕಾರ್ಯಕರ್ತರ ಜೊತೆಗೆ ಬೆರೆತ ಅನುಭವವೇ ಇಲ್ಲದ ತರೂರ್ ಎಐಸಿಸಿ ಅಧ್ಯಕ್ಷರಾಗಬೇಕೆಂದು ಹಪಹಪಿಸಿದರು. ಆದರೆ ಅದಕ್ಕೆ ಅಗತ್ಯ ಇರುವಷ್ಟು ಮತಗಳು ಸಿಗಲಿಲ್ಲ. ಇತ್ತೀಚೆಗೆ ಅವರು ನಿರೀಕ್ಷಿಸಿದ್ದ ಲೋಕಸಭೆಯ ಪ್ರತಿಪಕ್ಷದ ಉಪನಾಯಕ ಸ್ಥಾನವೂ ಸಿಗಲಿಲ್ಲ. ಎಲ್ಲ ಕಾರಣಗಳಿಂದ ಅವರು ಸ್ವಪಕ್ಷೀಯರ ವಿರುದ್ಧ ಮುನಿದಿದ್ದಾರೆ. ಕಾಂಗ್ರೆಸ್‌ನಲ್ಲಿ ಮುನಿದವರಿಗೆ ಬಿಜೆಪಿಯಲ್ಲಿ ಮಣೆ ಇದ್ದೇ ಇರುತ್ತದೆ. ಅದರಿಂದಾಗಿಯೇ ಅವರೀಗ ವಿದೇಶಗಳಲ್ಲಿ ಭಾರತದ ಬಿಜೆಪಿ ಸರಕಾರದ ರಾಯಭಾರಿ. ಸಹಜವಾಗಿ ಇದು ಕಾಂಗ್ರೆಸಿಗೆ ಕಿರಿಕಿರಿ.

ಕಡೆಯದಾಗಿ ಮತ್ತು ಮುಖ್ಯವಾಗಿ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ 142 ಕೋಟಿ ರೂಪಾಯಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಈಗ ‘ಇಲ್ಲ’ ಎಂದು ಸಾಬೀತು ಮಾಡಬೇಕಾದ ಸವಾಲನ್ನು ಎದುರಿಸುತ್ತಿದ್ದಾರೆ. ಇದು ಇಡೀ ಕಾಂಗ್ರೆಸ್ ಪಕ್ಷದ ಜಂಘಾಬಲವನ್ನೇ ಅಲುಗಾಡಿಸಿದೆ.

ಈ ಎಲ್ಲಾ ವಿದ್ಯಮಾನಗಳನ್ನು ಕಾಂಗ್ರೆಸ್ ದಿಟ್ಟವಾಗಿ ಎದುರಿಸಬೇಕಾಗಿದೆ. ಸಮರ್ಪಕವಾದ ಕಾರ್ಯತಂತ್ರಗಳನ್ನೂ ರೂಪಿಸಬೇಕಾಗಿದೆ. ಮುಖ್ಯವಾಹಿನಿ ಮಾಧ್ಯಮವು ಬಿಜೆಪಿ ಪರ ನಿಂತಿರುವುದರಿಂದ ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗೆಗಳನ್ನು ಹುಡುಕಬೇಕಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣ ಕಾರ್ಯಪ್ರವೃತ್ತವಾಗಿದೆ. ಸ್ವತಃ ರಾಹುಲ್ ಗಾಂಧಿ ಕಾಂಗ್ರೆಸ್ ವಕ್ತಾರರ ಜೊತೆ ಸಭೆ ನಡೆಸಿ ‘ನಾವು ಹೇಳಬೇಕೆಂದು ಇಚ್ಛಿಸುವ ವಿಷಯಗಳನ್ನು ಮಾತ್ರ ಜನರ ಮುಂದೆ ಇಡಿ. ಟಿ.ವಿ. ಚರ್ಚೆಗಳ ಖೆಡ್ಡಾಕ್ಕೆ ಬೀಳಬೇಡಿ’ ಎಂದು ಎಚ್ಚರಿಸಿದ್ದಾರೆ. ಇದಲ್ಲದೆ ಇನ್ನೂ ಹಲವು ಸಭೆ-ಸಮಾಲೋಚನೆಗಳು ನಡೆಯುತ್ತಿವೆ. ಹೀಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರ ಲಕ್ಷ್ಯವೇ ಬೇರೆಯೇ ಇರುವುದರಿಂದ ಮುಖ್ಯಮಂತ್ರಿ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಅಥವಾ ರಾಜ್ಯ ಸರಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನರ್‌ರಚನೆ ವಿಷಯಗಳು ದಿಲ್ಲಿಯಲ್ಲಿ ಅಪ್ರಸ್ತುತ ವಾಗಿವೆ. ರಾಜ್ಯದಲ್ಲಿ ಕೇಳಿಬರುತ್ತಿರುವ ಸಂಪುಟ ಪುನರ್ ರಚನೆ ಕುರಿತಾದ ಸುದ್ದಿಗಳಿಂದ ಚೆನ್ನಾಗಿ ಕೆಲಸ ಮಾಡುತ್ತಿರುವ ಎಂಟತ್ತು ಸಚಿವರು ಧೃತಿಗೆಟ್ಟಿಲ್ಲ. ಎಂಟತ್ತು ಮಂದಿ ಜಾತಿಬಲದ ಕಾರಣಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಉಳಿದ ಸಂಪುಟದ ಅರ್ಧದಷ್ಟು ಸಚಿವರಿಗೆ ಯಾವಾಗ ಬೇಕಾದರೂ ಸಂಪುಟ ಪುನರ್‌ರಚನೆ ಆಗಿಬಿಡಬಹುದು ಎಂಬ ಆತಂಕವಿದೆ. ಆದರೂ ಹೈಕಮಾಂಡ್ ಸಂಕಷ್ಟಕ್ಕೆ ಸಿಲುಕಿರುವುದರಿಂದ ನಾವಿಲ್ಲಿ ಸುರಕ್ಷಿತ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.

ಇವುಗಳ ಹೊರತಾಗಿ ವಿಧಾನ ಪರಿಷತ್ ನಾಮ ನಿರ್ದೇಶನ ಮತ್ತು ಜಾತಿ ಜನಗಣತಿ ಜಾರಿ ಬಗ್ಗೆ ಸರಕಾರ ಏನು ಮಾಡುತ್ತದೆ ಎನ್ನುವ ಕುತೂಹಲ ಬಾಕಿ ಉಳಿದಿದೆ. ಈಗಾಗಲೇ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿ ಹೆಸರುಗಳು ಅಂತಿಮಗೊಂಡಿದ್ದರೂ ಅವುಗಳನ್ನು ಅಧಿಕೃತವಾಗಿ ರಾಜಭವನಕ್ಕೆ ಕಳುಹಿಸಿಕೊಡಲು ಸರಕಾರ ಅಳೆದು-ತೂಗುತ್ತಿರುವುದೇಕೆ ಎನ್ನುವುದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಪರಮಾಪ್ತರಿಗೂ ತಿಳಿಯದಾಗಿದೆ. ಇನ್ನೂ ಹೆಚ್ಚು ಸಮಯ ತೆಗೆದುಕೊಂಡರೆ ಈಗ ಅಂತಿಮಗೊಂಡಿರುವ ಹೆಸರುಗಳು ಬದಲಾಗಿ ಬೇರೆಯವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ವಿಧಾನ ಪರಿಷತ್ ನಾಮ ನಿರ್ದೇಶನ ವಿಷಯಕ್ಕೆ ಸಂಬಂಧಿಸಿದಂತೆ ಈ ಹಂತದಲ್ಲಿ ಸರಕಾರಕ್ಕೆ ಕೆಲವು ವಿಷಯಗಳನ್ನು ಹೇಳಲೇಬೇಕಾಗುತ್ತದೆ. ಚುನಾವಣೆಗಳ ಮೂಲಕ ಅವಕಾಶ ಕಲ್ಪಿಸಿಕೊಡುವಾಗ ತನಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಿ. ನಾಮ ನಿರ್ದೇಶನ ಮಾಡುವಾಗ ಅರ್ಹತೆಯುಳ್ಳ ಮತ್ತು ಸೂಕ್ತ ವ್ಯಕ್ತಿಗಳನ್ನೇ ಆಯ್ಕೆ ಮಾಡುವಂತಾಗಬೇಕಾಗಿದೆ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಬಂದಾಗಿನಿಂದಲೂ ಅತಿ ಹೆಚ್ಚು ಪ್ರಮಾಣದಲ್ಲಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ಜಾತಿಗಳ (ಅಹಿಂದ) ಮತಗಳನ್ನು ಪಡೆಯುತ್ತಿದೆ. ಪ್ರತಿಯಾಗಿ ಪರಿಷತ್ ನಾಮ ನಿರ್ದೇಶನ ಮಾಡುವಾಗ ಆ ಸಮುದಾಯಗಳನ್ನು ಮರೆತುಬಿಡುತ್ತದೆ.

ಇದನ್ನು ಉದಾಹರಣೆ ಒಂದರೊಂದಿಗೆ ಹೇಳುವುದಾದರೆ ಸದ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಅದು ಅರ್ಹವಾದ ಒತ್ತಡವೂ ಹೌದು. ರಾಜ್ಯದಲ್ಲಿ ಸಕ್ರಿಯವಾಗಿರುವ ಮುಂಚೂಣಿ ದಸಂಸ ನಾಯಕರ ಪೈಕಿ ಮಾವಳ್ಳಿ ಶಂಕರ್ ಅವರ ತೂಕ ಒಂಚೂರು ಹೆಚ್ಚಾಗಿಯೇ ಇದೆ. ಸರಕಾರ ಇಂಥ ವಿಷಯ ಮತ್ತು ವ್ಯಕ್ತಿಗಳನ್ನು ಗುರುತಿಸುವಷ್ಟು ಸೂಕ್ಷ್ಮಮತಿಯಾಗಬೇಕು. ಪರಿಶಿಷ್ಟ ಜಾತಿಯ ವಾರಸುದಾರರಂತೆ ಮಾತನಾಡುವ ಕಾಂಗ್ರೆಸ್ ಪಕ್ಷ ಹಿಂದೆ ಬೌದ್ಧಿಕ ವಲಯದಿಂದ ಡಾ. ಎಲ್. ಹನುಮಂತಯ್ಯ ಅವರನ್ನು ನಾಮ ನಿರ್ದೇಶನ ಮಾಡಿತ್ತು.

ಅದೇ ಕಡೆ. ಇದಲ್ಲದೆ ದಲಿತ ಸಂಘಟನೆಗಳು ಮತ್ತು ಹೋರಾಟದಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಲಾಭ ಪಡೆದುಕೊಳ್ಳುತ್ತಿರುವ ಕಾಂಗ್ರೆಸ್ ಎಂದೂ ಸಂಘಟನೆಯ ಹಿನ್ನೆಲೆಯುಳ್ಳ ವ್ಯಕ್ತಿಗೆ ಅವಕಾಶವನ್ನೇ ಮಾಡಿಕೊಟ್ಟಿಲ್ಲ. ಈಗ ಅಂಥದೊಂದು ಅವಕಾಶವಿದೆ. ಸರಕಾರ ಏನು ಮಾಡುತ್ತದೆ ಎನ್ನುವುದನ್ನು ಕಾದುನೋಡಬೇಕು.

ಕಾಂಗ್ರೆಸ್ ಇಂಥ ಹಲವು ಬದಲಾವಣೆಗೆ ಒಡ್ಡಿಕೊಳ್ಳಬೇಕಾಗಿದೆ. ಅದಕ್ಕೆ ಇನ್ನೊಂದು ಉದಾಹರಣೆ (ಕಳೆದ ವಾರ ಮಂಡಲ್ ವರದಿಯನ್ನು ವಿರೋಧಿಸಿದ್ದ ರಾಜೀವ್ ಗಾಂಧಿಯ ಪುತ್ರ ರಾಹುಲ್ ಗಾಂಧಿ ಜಾತಿಗಣತಿ ಜಾರಿಯಾಗಬೇಕು ಎಂಬ ಬಗ್ಗೆ ಗಟ್ಟಿಯಾಗಿ, ದಿಟ್ಟವಾಗಿ ಮಾತನಾಡುತ್ತಿದ್ದಾರೆ ಎಂದು ಬರೆದಿದ್ದೆ) ಸಂಪ್ರದಾಯವಾದಿ ಚಿಂತನೆಗಳ ಕಾಂಗ್ರೆಸ್ ಪಕ್ಷವನ್ನು ತೀಕ್ಷ್ಣವಾಗಿ ವಿರೋಧಿಸುತ್ತಿದ್ದ ಸಮಾಜ ಸುಧಾರಕರಾದ ಜ್ಯೋತಿ ಭಾ ಪುಲೆ ಮತ್ತು ಅವರ ಪತ್ನಿ ಸಾವಿತ್ರಿಬಾಯಿ ಫುಲೆ ಅವರ ಜೀವನಾಧಾರಿತ ಸಿನೆಮಾ ‘ಫುಲೆ’ಯನ್ನು ರಾಹುಲ್ ಗಾಂಧಿ ವೀಕ್ಷಣೆ ಮಾಡಿದ್ದಾರೆ. ಅದೂ ಚುನಾವಣಾ ಪ್ರಚಾರಕ್ಕೆಂದು ಪಾಟ್ನಾಕ್ಕೆ ತೆರಳಿದ್ದಾಗ ಸಾಮಾಜಿಕ ಹೋರಾಟಗಾರರ ಜೊತೆಗೂಡಿ ‘ಫುಲೆ’ಯನ್ನು ಕಣ್ಮನ ತುಂಬಿಕೊಂಡಿದ್ದಾರೆ. ಇಂಥ ಬದಲಾವಣೆಗಳು ಕಾಲದ ಅಗತ್ಯ.

ರಾಹುಲ್ ಗಾಂಧಿ ಅವರ ನಡೆಯಿಂದ ಪ್ರೇರೇಪಿತರಾಗಿರುವ ಗುಜರಾತಿನ ವಡ್ಗಾಮ್ ಶಾಸಕ ಮತ್ತು ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ, ರಾಜ್ಯಾದ್ಯಂತ ಫುಲೆ ಸಿನೆಮಾದ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದಾರೆ. ಫುಲೆ ಅವರ ಸಾಮಾಜಿಕ ನ್ಯಾಯದಪರಿಕಲ್ಪನೆ ಎಲ್ಲರಿಗೂ ತಿಳಿಯುವಂತಾಗಬೇಕು. ಅದಕ್ಕಾಗಿ ಉಚಿತವಾಗಿ ಫುಲೆ ಚಿತ್ರಪ್ರದರ್ಶನ ಆಯೋಜಿಸುತ್ತಿದ್ದೇವೆ ಎಂದಿದ್ದಾರೆ. ಅಲ್ಲದೆ ಗುಜರಾತ್ ಸರಕಾರ ಫುಲೆ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೊಡಬೇಕೆಂದು ಒತ್ತಾಯ ಮಾಡಿದ್ದಾರೆ. ಗುಜರಾತಿನಂಥ ಪ್ರತಿಕೂಲ ಪರಿಸ್ಥಿತಿ ಇರುವ ಕಡೆಯೇ ಜಿಗ್ನೇಶ್ ಮೇವಾನಿ ಅಂಥ ಕ್ರಮ ಕೈಗೊಂಡಿದ್ದಾರೆಂದರೆ ಅಧಿಕಾರ ಅನುಭವಿಸುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ಕರ್ನಾಟಕದಾದ್ಯಂತ ಫುಲೆ ಸಿನೆಮಾವನ್ನು ಉಚಿತವಾಗಿ ಪ್ರದರ್ಶಿಸುವುದು ಮತ್ತು ತೆರಿಗೆ ವಿನಾಯಿತಿ ನೀಡುವುದು ಕಷ್ಟದ ಕೆಲಸವೇ?

share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X