ಭಾರತೀಯರನ್ನು ಕಾಡುತ್ತಿರುವ ಹಲವು ಪ್ರಶ್ನೆಗಳಿಗೆ ಉತ್ತರಿಸುವವರು ಯಾರು?

ಪಾಕಿಸ್ತಾನವೇ ಕರೆ ಮಾಡಿ ಮನವಿ ಮಾಡಿದ್ದಕ್ಕೆ ಕದನ ವಿರಾಮಕ್ಕೆ ಒಪ್ಪಿಕೊಳ್ಳಲಾಯಿತು ಎಂದು ಪ್ರಧಾನಿ ಮೋದಿ ಮೇ 12ರಂದು ದೇಶದ ಎದುರು ಹೇಳಿದರು. ಅದೇ ಸಮಯದಲ್ಲಿ, ಡೊನಾಲ್ಡ್ ಟ್ರಂಪ್ ಶ್ವೇತಭವನದ ಪತ್ರಿಕಾಗೋಷ್ಠಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪದಿದ್ದರೆ ಅವುಗಳೊಂದಿಗಿನ ವ್ಯಾಪಾರ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದೆ ಎಂದರು. ಸತ್ಯ ಏನೇ ಇದ್ದರೂ, ಮೇ 10ರಂದು ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದ ಬಗ್ಗೆ ಮೊದಲು ಘೋಷಿಸಿದವರು ಟ್ರಂಪ್. ಮತ್ತದು ಜಾರಿಯಲ್ಲಿದೆ.
ಆದರೆ ಹಲವು ಗಂಭೀರ ಪ್ರಶ್ನೆಗಳು ಹಾಗೆಯೇ ಉಳಿದಿವೆ.
ಪಹಲ್ಗಾಮ್ನಲ್ಲಿ 26 ಅಮಾಯಕರ ಹತ್ಯೆಗೆ ಪ್ರತೀಕಾರದ ಕ್ರಮ ‘ಆಪರೇಷನ್ ಸಿಂಧೂರ’ ಎಂಬುದು ಎಲ್ಲರಿಗೂ ಗೊತ್ತಿದೆ. ನಮ್ಮ ದೇಶದ ಮೇಲೆ ನಡೆದ ಆ ಭಯೋತ್ಪಾದಕ ದಾಳಿಗೆ ಭಾರತ ಪ್ರತಿಕ್ರಿಯಿಸಲೇಬೇಕಾಗಿತ್ತು ಮತ್ತು ಮಿಲಿಟರಿ ಕಾರ್ಯಾಚರಣೆಗೆ ನಿರ್ಧರಿಸಲಾಯಿತು.
ಆದರೆ ಪಹಲ್ಗಾಮ್ನಲ್ಲಿ ದಾಳಿ ಹೇಗೆ ನಡೆಯಿತು?
ಎಪ್ರಿಲ್ 22ರ ಮಧ್ಯಾಹ್ನ ಬಂದೂಕುಧಾರಿಗಳು ದಾಳಿ ಮಾಡಿದಾಗ ಬೈಸರನ್ ಕಣಿವೆ ಪ್ರದೇಶದೊಳಗೆ ನೂರಾರು ಪ್ರವಾಸಿಗರು ಇದ್ದರು.ಇಡೀ ಪ್ರದೇಶದಲ್ಲಿ ಎಲ್ಲಿಯೂ ಭದ್ರತಾ ವ್ಯವಸ್ಥೆ ಇರಲಿಲ್ಲ. ಭಯೋತ್ಪಾದಕರು ಒಬ್ಬೊಬ್ಬರನ್ನೇ ಕೊಂದು ಹಾಕಿದರು. ಹತ್ಯೆಯಾದವರ ಪತ್ನಿಯರಿಗೆ ಹಿಂದಿರುಗಿ ಹೋಗಿ ಮೋದಿ ಸರಕಾರಕ್ಕೆ ಹೇಳಿ ಎನ್ನಲಾಯಿತು.
ಭಯೋತ್ಪಾದಕರಿಗೆ ಯಾವುದೇ ಅವಸರವಿರಲಿಲ್ಲ. ಯಾರೂ ಅಲ್ಲಿ ಪ್ರವಾಸಿಗರ ಸಹಾಯಕ್ಕೆ ಬರುವುದಿಲ್ಲ ಎಂದು ಅವರಿಗೆ ತಿಳಿದಿತ್ತು.
ನಮ್ಮ ಸರಕಾರ ನಮ್ಮನ್ನು ಅಲ್ಲಿ ಅನಾಥರನ್ನಾಗಿ ಮಾಡಿತ್ತು ಎಂದು ದಾಳಿಯಲ್ಲಿ ಬಲಿಯಾದ ಶುಭಂ ಅವರ ಪತ್ನಿ ಐಶಾನ್ಯಾ ಹೇಳಿದ್ದರು. ಗುಂಡು ಹಾರಿಸಿದ ನಂತರ ತನ್ನ ಸಹೋದರ ಲೆಫ್ಟಿನೆಂಟ್ ವಿನಯ್ ನರ್ವಾಲ್ ಒಂದೂವರೆ ಗಂಟೆಗಳ ಕಾಲ ಜೀವಂತವಾಗಿದ್ದರು. ಅವರ ನೆರವಿಗೆ ಯಾರಾದರೂ ಬಂದಿದ್ದರೆ ಅವರನ್ನು ಉಳಿಸಬಹುದಿತ್ತು ಎಂದು ಶ್ರುತಿ ಹೇಳಿದ್ದರು. ಹಾಗಾದರೆ, ಬೈಸರನ್ ಪ್ರದೇಶದಲ್ಲಿ ಏಕೆ ಭದ್ರತೆ ಇರಲಿಲ್ಲ? ನೂರಾರು ಪ್ರವಾಸಿಗರು ಬರುವ ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆ ಏಕೆ ಇರಲಿಲ್ಲ?
ವಿಐಪಿಗಳಿಗೆ ಇಷ್ಟೊಂದು ಭದ್ರತೆ ಇರುವಾಗ ತೆರಿಗೆದಾರರಿಗೆ ಏಕೆ ಇಲ್ಲ?ಎಂದು ಕೂಡ ಮತ್ತೊಬ್ಬ ಬಲಿಪಶು ಶೈಲೇಶ್ ಕಲಾಥಿಯಾ ಪತ್ನಿ ಶೀತಲ್ ಸಚಿವರೊಬ್ಬರ ಬಳಿ ಪ್ರಶ್ನಿಸಿದ್ದರು.
ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ನೇರವಾಗಿ ಕೇಂದ್ರ ಸರಕಾರರದ ನದರಿನಡಿ ಬರುವಾಗ, ಸರಕಾರ ಸಾಕಷ್ಟು ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೆ ಬೈಸರನ್ನಲ್ಲಿ ಪ್ರವಾಸಿಗರು ಸುರಕ್ಷಿತವಾಗಿರುತ್ತಿದ್ದರು. ಆಗ ಇಷ್ಟು ದೊಡ್ಡ ರಾಜತಾಂತ್ರಿಕ ಸವಾಲು ಎದುರಾಗುತ್ತಿರಲಿಲ್ಲ ಹಾಗೂ ಆಪರೇಷನ್ ಸಿಂಧೂರ ನಡೆಸುವ ಪ್ರಮೇಯವೇ ಬರುತ್ತಿರಲಿಲ್ಲ.
ಎರಡನೆಯ ಪ್ರಶ್ನೆ, ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಭಾರತೀಯರೇಕೆ ಸಾಯಬೇಕಾಯಿತು?
ಆಪರೇಷನ್ ಸಿಂಧೂರಕ್ಕೆ ಪ್ರತೀಕಾರವಾಗಿ ಪಾಕಿಸ್ತಾನಿ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಕನಿಷ್ಠ 20 ಜನ ಸಾವನ್ನಪ್ಪಿದ್ದಾರೆ. ಸತ್ತವರಲ್ಲಿ ನಾಲ್ವರು ಮಕ್ಕಳು ಸೇರಿದ್ದಾರೆ. 13 ವರ್ಷದ ವಿಹಾನ್, 12 ವರ್ಷದ ಅವಳಿ ಮಕ್ಕಳಾದ ಅಯಾನ್ ಮತ್ತು ಜೋಯಾ ಮತ್ತು 7 ವರ್ಷದ ಮರಿಯಮ್ ಬಲಿಯಾಗಿದ್ಧಾರೆ. ಹಾಗಾದರೆ, ಆಪರೇಷನ್ ಸಿಂಧೂರ ಪ್ರಾರಂಭಿಸುವ ಮೊದಲು ಸರಕಾರ ಗಡಿ ಭಾಗದ ಜನರನ್ನು ಏಕೆ ಸ್ಥಳಾಂತರಿಸಲಿಲ್ಲ ಎಂಬ ಪ್ರಶ್ನೆ ಏಳುತ್ತದೆ.
ಆಪರೇಷನ್ ಸಿಂಧೂರಕ್ಕೆ ಪ್ರತಿಯಾಗಿ ಪಾಕಿಸ್ತಾನ ಯಾವುದೇ ದಾಳಿ ನಡೆಸುತ್ತದೆ ಎಂಬುದು ನಿರೀಕ್ಷಿಸದೇ ಇದ್ದ ವಿಷಯವೇನೂ ಆಗಿರಲಿಲ್ಲ. ಹಾಗಿರುವಾಗ, ಆಪರೇಷನ್ ಸಿಂಧೂರ ಆರಂಭಿಸುವ ಮೊದಲು ಸರಕಾರ ಗಡಿಯಲ್ಲಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಬೇಕಿತ್ತು. ಆಗ ಅವರು ಪಾಕಿಸ್ತಾನದ ಯಾವುದೇ ದಾಳಿಗೆ ಬಲಿಯಾಗುವುದನ್ನು ತಪ್ಪಿಸಬಹುದಿತ್ತು. ಆದರೆ ಸರಕಾರ ಹಾಗೆ ಮಾಡದೆ ಇರಲು ಏನು ಕಾರಣ? ಈ ಅಮಾಯಕರ ಸಾವುಗಳಿಗೆ ಯಾರು ಹೊಣೆ ಹೊರುತ್ತಾರೆ? ಇಲ್ಲಿಯೂ ಬಲಿಯಾದವರ ಪತ್ನಿಯರ ಸಿಂಧೂರದ ಬಗ್ಗೆ ಕಳವಳವಿರಬೇಕಲ್ಲವೆ? ಚಿಕ್ಕ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳ ನೋವು ಸರಕಾರಕ್ಕೆ ಅರ್ಥವಾಗುತ್ತದೆಯೆ?
ಮೂರನೇ ಪ್ರಶ್ನೆ, ಕದನ ವಿರಾಮ ಯಾರ ನಿರ್ಧಾರವಾಗಿತ್ತು?
ಕದನ ವಿರಾಮವನ್ನು ಭಾರತವಾಗಲೀ ಅಥವಾ ಪಾಕಿಸ್ತಾನವಾಗಲೀ ಘೋಷಿಸಲಿಲ್ಲ. ಬದಲಿಗೆ ಟ್ರಂಪ್ ಘೋಷಿಸಿದರು. ನಂತರ ಪಾಕಿಸ್ತಾನ ಅಮೆರಿಕದ ಪಾತ್ರವನ್ನು ಒಪ್ಪಿಕೊಂಡಿತು. ಆದರೆ ಭಾರತ ಅಮೆರಿಕದ ಬಗ್ಗೆ ಏನೂ ಹೇಳಲಿಲ್ಲ. ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ಕದನ ವಿರಾಮಕ್ಕಾಗಿ ಕೇಳಿಕೊಂಡಿದ್ದಾರೆ ಮತ್ತು ಭಾರತ ಅದಕ್ಕೆ ಒಪ್ಪಿಕೊಂಡಿದೆ ಎಂದು ಮೋದಿ ಹೇಳಿದರು. ಕದನ ವಿರಾಮ ಭಾರತ ತೆಗೆದುಕೊಂಡ ನಿರ್ಧಾರವೇ ಆಗಿದ್ದರೆ, ಅದನ್ನು ಅಮೆರಿಕದಲ್ಲಿ ಏಕೆ ಘೋಷಣೆ ಮಾಡಲಾಯಿತು? ಎಲ್ಲಿಯಾದರೂ ಸಂಘರ್ಷ ಉಂಟಾದಾಗ ವಿಶ್ವ ಸಮುದಾಯ ಪ್ರತಿಕ್ರಿಯಿಸುತ್ತದೆ ಮತ್ತು ಶಾಂತಿಯನ್ನು ಪ್ರತಿಪಾದಿಸುತ್ತದೆ. ಸ್ನೇಹಪರ ರಾಷ್ಟ್ರಗಳು ಮಧ್ಯಸ್ಥಿಕೆ ವಹಿಸುತ್ತವೆ. ಆದರೆ ನಿರ್ಧಾರ ಮತ್ತು ಅದರ ಘೋಷಣೆ ಮಾಡುವುದು ಸಂಬಂಧಿತ ದೇಶಗಳದ್ದೇ ಹಕ್ಕಾಗಿರುತ್ತದೆ. ಹೀಗಿರುವಾಗ, ಸಾರ್ವಭೌಮ ರಾಷ್ಟ್ರವಾದ ಭಾರತ ಈ ಹಕ್ಕನ್ನು ಅಮೆರಿಕಕ್ಕೆ ಏಕೆ ಬಿಟ್ಟುಕೊಟ್ಟಿತು?
ಅಮೆರಿಕದ ಮಧ್ಯಸ್ಥಿಕೆಯಲ್ಲಿ ದೀರ್ಘ ರಾತ್ರಿಯ ಮಾತುಕತೆಯ ನಂತರ, ಭಾರತ ಮತ್ತು ಪಾಕಿಸ್ತಾನ ಸಂಪೂರ್ಣ ಮತ್ತು ತಕ್ಷಣದ ಒಪ್ಪಂದಕ್ಕೆ ಒಪ್ಪಿಕೊಂಡಿವೆ ಎಂದು ಶನಿವಾರ ಟ್ರಂಪ್ ಹೇಳಿದ್ದರು.
ಭಾರತದ ಪರವಾಗಿ ಮೂರನೇ ದೇಶವೊಂದು ಘೋಷಣೆ ಮಾಡಿತೆಂಬುದೊಂದೇ ಇಲ್ಲಿನ ವಿಷಯವಲ್ಲ. ಟ್ರಂಪ್ ಹೇಳಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಸಮಾನವಾಗಿ ಕಾಣಲಾಯಿತು.
ಎಲ್ಲಿಯ ಪಾಕಿಸ್ತಾನ? ಎಲ್ಲಿಯ ಭಾರತ?
ಭಾರತವು ಭೀಕರ ಭಯೋತ್ಪಾದಕ ದಾಳಿಗೆ ತುತ್ತಾಗಿತ್ತು ಮತ್ತು ಪ್ರತೀಕಾರ ತೀರಿಸಿಕೊಳ್ಳುವ ಹಕ್ಕು ಭಾರತಕ್ಕಿತ್ತು. ಆದರೂ ಭಯೋತ್ಪಾದಕರಿಗೆ ನೆಲೆ ನೀಡಿದ ದೇಶವನ್ನು ಭಾರತದೊಂದಿಗೆ ಸಮವೆಂಬಂತೆ ಕಾಣಲಾಯಿತು.ಇದಲ್ಲದೆ ಟ್ರಂಪ್ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆಗೆ ಸಿದ್ಧ ಎಂದಿದ್ದರು. ಕಾಶ್ಮೀರ ಆಂತರಿಕ ಸಮಸ್ಯೆಯಾಗಿರುವಾಗ ಮತ್ತು ಮೂರನೆಯವರ ಮಧ್ಯಸ್ಥಿಕೆಗೆ ಅವಕಾಶವಿಲ್ಲ ಎಂಬುದು ಭಾರತ ದಶಕಗಳಿಂದ ಪಾಲಿಸಿಕೊಂಡು ಬಂದಿರುವ ನೀತಿಯಾಗಿರುವಾಗ, ಈಗ ಮೋದಿ ಸರಕಾರ ಟ್ರಂಪ್ ಮಧ್ಯಸ್ಥಿಕೆಯನ್ನು ಒಪ್ಪಿಕೊಂಡಿದೆಯೇ?
ಕಾಶ್ಮೀರ ಕುರಿತ ಮೂರನೆಯವರ ಮಧ್ಯಸ್ಥಿಕೆಯನ್ನು ವಿರೋಧಿಸುವ ಕೆಲಸವೂ ಬಹಳ ತಡವಾಗಿ ಆಯಿತು.
ನಾಲ್ಕನೆಯದಾಗಿ, ಪಹಲ್ಗಾಮ್ನ ಹಂತಕರು ಎಲ್ಲಿದ್ದಾರೆ?
ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ‘ಆಪರೇಷನ್ ಸಿಂಧೂರ’ ನಡೆಸಲಾಯಿತು. ಆದರೆ ಆ ನಾಲ್ವರು ಭಯೋತ್ಪಾದಕರು ಇನ್ನೂ ಸಿಕ್ಕಿಲ್ಲ.ಅವರು ಎಲ್ಲಿದ್ದಾರೆ ಮತ್ತು ಅವರನ್ನು ಇನ್ನೂ ಏಕೆ ಬಂಧಿಸಲಾಗಿಲ್ಲ? ಕದನ ವಿರಾಮ ಒಪ್ಪಿಕೊಳ್ಳುವ ಮೊದಲು ಪಾಕಿಸ್ತಾನ ಅವರನ್ನು ಹಸ್ತಾಂತರಿಸಬೇಕೆಂದು ಭಾರತ ಏಕೆ ಒತ್ತಾಯಿಸಲಿಲ್ಲ?
ಐದನೆಯ ಪ್ರಶ್ನೆ, ಆಪರೇಷನ್ ಸಿಂಧೂರ ಯಶಸ್ವಿಯಾಗಿದೆಯೇ?
ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ, ಭಾರತ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದೆ ಮತ್ತು ಅನೇಕ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದೆ ಎಂದು ಮಾತ್ರ ಹೇಳಿದರು. ಸರ್ಜಿಕಲ್ ಸ್ಟ್ರೈಕ್ಗಳು ಮತ್ತು ವಾಯುದಾಳಿಗಳ ಜೊತೆಗೆ ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಆಪರೇಷನ್ ಸಿಂಧೂರ ಹೊಸ ಆಯಾಮ ಎಂದೂ ಅವರು ಹೇಳಿದರು.
ಆದರೆ, ಅಮೆರಿಕ ಕದನ ವಿರಾಮ ಘೋಷಿಸಿದ್ದರಿಂದ, ಆಪರೇಷನ್ ಸಿಂಧೂರ ಯಶಸ್ವಿಯಾಯಿತೇ ಎಂಬ ಪ್ರಶ್ನೆಯನ್ನು ಕೇಳಲೇಬೇಕಾಗುತ್ತದೆ. ಅದನ್ನು ಸರಕಾರ ಸಂಸತ್ತಿನಲ್ಲೂ ಎದುರಿಸಬೇಕಾಗುತ್ತದೆ.
ಆರನೆಯದಾಗಿ, ಪುಲ್ವಾಮಾ ಭಯೋತ್ಪಾದಕ ದಾಳಿಯ ತನಿಖೆ ಏನಾಯಿತು?
ಪುಲ್ವಾಮಾದಲ್ಲಿ ಸಿಆರ್ಪಿಎಫ್ ಬೆಂಗಾವಲು ವಾಹನದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಭಾರತೀಯ ಸೈನಿಕರು ಸಾವನ್ನಪ್ಪಿ ಆರು ವರ್ಷಗಳು ಕಳೆದಿವೆ. 200 ಕೆ.ಜಿ.ಯಷ್ಟು ಆರ್ಡಿಎಕ್ಸ್ ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡಿ ಸಂಗ್ರಹಿಸಲಾಗಿತ್ತು. ಸೈನಿಕರನ್ನು ವಿಮಾನದ ಮೂಲಕ ಕಳುಹಿಸುವ ಬದಲು ಬಸ್ನಲ್ಲಿ ಕಳುಹಿಸಲಾಗಿದ್ದರಿಂದ ಎಲ್ಲರೂ ದಾಳಿಗೆ ಬಲಿಯಾಗಿದ್ದರು. ದೊಡ್ಡ ಮಟ್ಟದ ಗುಪ್ತಚರ ಲೋಪ ಮತ್ತು ಭದ್ರತಾ ಲೋಪವಿದ್ದುದು ಸ್ಪಷ್ಟವಿತ್ತು. ಆದರೆ ಈವರೆಗೂ ಯಾರನ್ನೂ ಹೊಣೆಗಾರರನ್ನಾಗಿ ಮಾಡಲಾಗಿಲ್ಲ.
ಪಾಕಿಸ್ತಾನದ ಮೇಲೆ ಬಾಲಕೋಟ್ ಏರ್ ಸ್ಟ್ರೈಕ್ ನಡೆಯಿತೇನೋ ಸರಿ. ಆದರೆ ಭಾರತದಲ್ಲೇ ಯಾರ ವೈಫಲ್ಯದಿಂದ ಉಗ್ರರು ಅಲ್ಲಿವರೆಗೆ ಬಂದು ನಮ್ಮ ಸೈನಿಕರನ್ನು ಕೊಂದು ಹಾಕಿದರು? ಅದಕ್ಕೆ ಈವರೆಗೂ ಉತ್ತರ ಸಿಕ್ಕಿಲ್ಲ
ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತ ಯಾವುದೇ ವಿಮಾನವನ್ನು ಕಳೆದುಕೊಂಡಿದೆಯೇ ಎಂಬುದು ಮತ್ತೊಂದು ಪ್ರಶ್ನೆ.
ಮೊನ್ನೆಯ ದಾಳಿಯಲ್ಲಿ ಭಾರತ ರಫೇಲ್ ಸೇರಿದಂತೆ ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂದು ಅಂತರ್ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಗಳಾಗಿವೆ. ಅದರ ಬಗ್ಗೆ ಕೇಳಿದಾಗ, ವಿದೇಶಾಂಗ ಕಾರ್ಯದರ್ಶಿ ಮಿಸ್ರಿ ಅವರು ಸರಿಯಾದ ಸಮಯ ಬಂದಾಗ ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಸರಿಯಾದ ಸಮಯ ಯಾವಾಗ ಬರುತ್ತದೆ?
ದಾಳಿ ವೇಳೆ ಕೆಲ ನಷ್ಟಗಳು ಸಂಭವಿಸಿವೆ ಎಂದು ಭಾರತೀಯ ವಾಯುಪಡೆ ಕಾರ್ಯಾಚರಣೆಗಳ ಮುಖ್ಯಸ್ಥರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆದರೆ ನಿರ್ದಿಷ್ಟ ಮಾಹಿತಿಯನ್ನು ಅವರು ಹಂಚಿಕೊಳ್ಳಲಿಲ್ಲ.
ಕೊನೆಯದಾಗಿ, ಭದ್ರತಾ ಲೋಪಕ್ಕೆ ಯಾರನ್ನಾದರೂ ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ?
ಒಂದು ಕಾಲದಲ್ಲಿ ಭಾರತದಲ್ಲಿ ರೈಲ್ವೆ ಅಪಘಾತಗಳು ಇಲ್ಲವೇ ಭದ್ರತಾ ವೈಫಲ್ಯಗಳಿಗೆ ಆಯಾ ಸಚಿವರನ್ನು ಹೊಣೆ ಮಾಡಲಾಗುತ್ತಿತ್ತು. 26/11 ರ ನಂತರ ದಾಳಿ ತಡೆಯುವಲ್ಲಿ ವಿಫಲವಾದ ಕಾರಣಕ್ಕಾಗಿ ಪ್ರಧಾನಿ ಮನಮೋಹನ್ ಸಿಂಗ್ ರಾಷ್ಟ್ರದ ಕ್ಷಮೆಯಾಚಿಸಿದ್ದರು. ಆಗಿನ ಕೇಂದ್ರ ಗೃಹ ಸಚಿವರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ರಾಜೀನಾಮೆ ನೀಡಿದ್ದರು. ಪಠಾಣ್ಕೋಟ್, ಉರಿ, ಪುಲ್ವಾಮಾ ಮತ್ತು ಈಗ ಪಹಲ್ಗಾಮ್ ಮೇಲಿನ ಉಗ್ರರ ದಾಳಿಗಳ ನಂತರ, ಪ್ರಧಾನಿ ಮೋದಿ ತಮ್ಮ ಸರಕಾರದಲ್ಲಿ ಯಾರನ್ನಾದರೂ ಹೊಣೆಗಾರರನ್ನಾಗಿ ಮಾಡುತ್ತಾರೆಯೇ? ದಾಳಿಗಳನ್ನು ತಡೆಯುವುದು ಸರಕಾರದ ಗುರಿಯಾಗಿರಬೇಕಲ್ಲವೆ?