ರಸ್ತೆ ತುಂಬಾ ಗುಂಡಿಗಳು: ವಾಹನ ಸವಾರರ ನಿತ್ಯ ಪರದಾಟ

ಯಾದಗಿರಿ : ಈ ಗ್ರಾಮಕ್ಕೆ ಹೋಗಲು ಕಾಲಿಟ್ಟರೆ ಸಾಕು ಗ್ರಾಮ ಮುಟ್ಟುವವರೆಗೆ ರಸ್ತೆ ತುಂಬೆಲ್ಲಾ ಗುಂಡಿಗಳದ್ದೇ ದರ್ಬಾರಾಗಿದ್ದು, ದಿನನಿತ್ಯ ಈ ರಸ್ತೆಯ ಮೇಲೆ ವಾಹನ ಸವಾರರು ಮತ್ತು ಸಾರ್ವಜನಿಕರು ಸಂಚರಿಸಲು ಪರದಾಡುವಂತಾಗಿದೆ.
ಯಾದಗಿರಿ ಜಿಲ್ಲೆಯಿಂದ ಕೇವಲ 4 ಕಿ.ಮೀ. ಅಂತರದಲ್ಲೇ ಇರುವ ಬೀರನಾಳ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯವೋ ಅಥವಾ ಅಧಿಕಾರಿಗಳ ನಿರ್ಲಕ್ಷ್ಯವೋ ಗೊತ್ತಿಲ್ಲ. ಗುಂಡಿಗಳು ಬಿದ್ದಿರುವುದರಿಂದ ಈ ಗ್ರಾಮಕ್ಕಿದ್ದ ಬಸ್ ಸಂಪರ್ಕ ಕೂಡ ಕಡಿತವಾಗಿದ್ದು, ಮಕ್ಕಳು ಶಾಲೆಗೆ ಹೋಗಲು ಖಾಸಗಿ ವಾಹನಗಳಿಗೆ ದುಪ್ಪಟ್ಟು ಹಣ ನೀಡಿ ಪ್ರಯಾಣಿಸುವಂತಹ ಸ್ಥಿತಿ ಈ ಗ್ರಾಮದ ಶಾಲಾ ಮಕ್ಕಳ ಪಾಡು ಹೇಳತೀರದಾಗಿದೆ.
ರೈತರು ತಮ್ಮ ಜಮೀನುಗಳಿಗೆ ಹೋಗಲು ಎತ್ತಿನ ಬಂಡಿಗಳು ಎಷ್ಟೋ ಬಾರಿ ಆಯತಪ್ಪಿ ಬಿದ್ದಿರುವ ಘಟನೆಗಳು ಕೂಡ ನಡೆದಿವೆ ಎಂದು ಈ ಗ್ರಾಮದ ನಿವಾಸಿಗಳು ಹೇಳುತ್ತಿದ್ದಾರೆ.
ಇಂತಹ ತಗ್ಗು ಗುಂಡಿಗಳ ನಡುವಿಯೇ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ನಿತ್ಯ ಪ್ರಯಾಣಿಸಬೇಕಿದೆ. ರಸ್ತೆಗಳ ಮೇಲಿನ ಗುಂಡಿಗಳನ್ನ ತಪ್ಪಿಸಲು ಸಾಕಷ್ಟು ವಾಹನ ಸವಾರರು ಅಪಘಾತಗಳಿಗೆ ತುತ್ತಾಗಿದ್ದಾರೆ. ಈ ಮಾರ್ಗದ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಕಟ್ಟಿಟ್ಟಬುತ್ತಿಯಾಗಿದೆ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳಿವೆ. ಇದು ದ್ವಿಚಕ್ರ ಸೇರಿದಂತೆ ಆಟೊ, ಕಾರು, ಬೈಕ್, ಟ್ರ್ಯಾಕ್ಟರ್, ರೈತರ ಎತ್ತಿನ ಬಂಡಿ ಸೇರಿದಂತೆ ಹಲವು ವಾಹನಗಳ ಸವಾರರಿಗೆ ನುಂಗಲಾರದ ತುತ್ತಾಗಿದೆ.
ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ನಿಮ್ಮ ಗ್ರಾಮದಲ್ಲಿನ ಎಲ್ಲ ಮೂಲಭೂತ ಸೌಕರ್ಯಗಳನ್ನು ಸರಿಪಡಿಸುತ್ತೇವೆ ಎಂದು ಭರವಸೆ ನೀಡುತ್ತಾರೆ. ಒಮ್ಮೆ ಗೆದ್ದು ಬಂದ ಮೇಲೆ ಈ ಕಡೆ ಮತ್ತೆ ವಾಪಸ್ ಬರುವುದಿಲ್ಲ. ಇಗಲಾದರ್ರೂ ಶಾಸಕರು ರಸ್ತೆ ಮಾಡಿಕೊಡಿ ಜನರಿಗೆ ಸುಗಮವಾಗಿ ಸಂಚರಿಸಲು ರಸ್ತೆ ನಿರ್ಮಿಸಿಕೊಡಿ.
-ಹಣಮಂತ, ವಾಹನ ಚಾಲಕ
ಸಾಕಷ್ಟು ಬಾರಿ ನಾವು ಗುಂಡಿಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಇದರ ಬಗ್ಗೆ ಯಾವುದೇ ರೀತಿಯ ಸ್ಪಂದನೆ ಸಿಗುತ್ತಿಲ್ಲ ಕೂಡಲೇ ರಸ್ತೆಗೆ ಕಾಯಕಲ್ಪ ನೀಡದಿದ್ದರೆ ರಸ್ತೆ ತಡೆದು ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯ.
-ಕಾಶೀನಾಥ್ ನಾಟೇಕಾರ್, ಅಂಬೇಡ್ಕರ್ ಸ್ವಾಭಿಮಾನ ಸೇನೆಯ ರಾಜ್ಯ ಕಾರ್ಯದರ್ಶಿ
ಗುಂಡಿಗಳು ಬಿದ್ದಿರುವುದರಿಂದ ನಮ್ಮ ಗ್ರಾಮಕ್ಕೆ ಬಸ್ ಕೂಡ ಇಲ್ಲ, ನಾವು ಒಂದೊಂದು ಸಾರಿ ರೊಕ್ಕ ಇಲ್ಲದಿದ್ದಾಗ ನಡೆದುಕೊಂಡು ಹೋಗುತ್ತೇವೆ ಒಮ್ಮೊಮ್ಮೆ ಖಾಸಗಿ ವಾಹನಗಳಿಗೆ ರೊಕ್ಕಾ ಕೋಟ್ಟು ಹೋಗುತ್ತೇವೆ, ದಿನಾಲು ರೊಕ್ಕ ಕೊಟ್ಟು ಹೋಗಲು ನಮ್ಮಂತ ಬಡವರಿಗೆ ಎಲ್ಲಿಂದ ಆಗುತ್ತೆ ಸರ್ ನಮ್ಮ ಗ್ರಾಮಕ್ಕೆ ಸಂಭಂದಿಸಿದ ಅಧಿಕಾರಿಗಳು ಬಸ್ ವ್ಯವಸ್ಥೆ ಮಾಡಿಕೊಟ್ಟರೆ ಸಾಕು.
-ಮಲ್ಲಿಕಾರ್ಜುನ, ಶಾಲಾ ವಿದ್ಯಾರ್ಥಿ