ಬಯಸಿದ್ದು ಉಪನ್ಯಾಸಕ ಹುದ್ದೆ: ಕೈ ಹಿಡಿದಿದ್ದು ಕೃಷಿ
ಸತೀಶ್ಗೆ ಬದುಕು ಕಟ್ಟಿಕೊಟ್ಟ ನಾಟಿ ಕೋಳಿ ಸಾಕಣೆ

ಮಂಡ್ಯ: ಮದ್ದೂರು ತಾಲೂಕಿನ ಪುಟ್ಟ ಊರು ಗೊಲ್ಲರದೊಡ್ಡಿ ಗ್ರಾಮದ ತಿಮ್ಮೇಗೌಡರ ಪುತ್ರ ಜಿ.ಟಿ.ಸತೀಶ್, ಉಪನ್ಯಾಸಕನಾಗಬೇಕೆಂಬ ಛಲತೊಟ್ಟು ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ(ಎಂ.ಎ.) ಪದವಿಯನ್ನು ಪಡೆದರು. ಆದರೆ, ಅವರ ಕೈ ಹಿಡಿದಿದ್ದು ತನ್ನ ಕುಟುಂಬ ಅನುಸರಿಸಿಕೊಂಡು ಬಂದಿದ್ದ ಕೃಷಿಯೇ. ನಾಲ್ಕಾರು ಖಾಸಗಿ ಕಾಲೇಜುಗಳಲ್ಲಿ ಕನಿಷ್ಠ ಕೂಲಿಯೂ ಸಿಗದ ಅರೆಕಾಲಿಕ ಉಪನ್ಯಾಸಕನಾಗಿ ಹಲವಾರು ವರ್ಷ ಕಳೆದರೂ ಸರಕಾರಿ ಕಾಲೇಜಿನ ಕೆಲಸವಂತೂ ಸಿಗಲಿಲ್ಲ. ಕೊನೆಗೆ ಉಪನ್ಯಾಸಕನಾಗುವ ಕನಸನ್ನು ಬಿಟ್ಟು ಕೃಷಿಯಲ್ಲೇ ಯಶಸ್ವಿಯಾಗಿ ಇತರರಿಗೆ ಮಾದರಿಯಾಗಿದ್ದಾರೆ.
ಕೇವಲ ಎಂಟು ಗುಂಟೆ (ಒಂದು ಎಕರೆಗೆ 40 ಗುಂಟೆ) ಭೂಮಿಯಲ್ಲಿ ನಾನಾ ಬಗೆಯ ಕೆಲವೇ ಸಂಖ್ಯೆಯಲ್ಲಿನ ತೋಟಗಾರಿಕೆ ಬೆಳೆಗಳ ಜೊತೆಗೆ ಉಪಕಸುಬುಗಳಾದ ಹಸು, ಮೇಕೆ, ಕೋಳಿ ಸಾಕಣೆ ಮಾಡುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಇತ್ತೀಚೆಗೆ ನಾಟಿ ಕೋಳಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಕೃಷಿಯಲ್ಲಿ ನಾಟಿ ಕೋಳಿ ಸಾಕಣೆಗೆ ಒತ್ತು ನೀಡಿರುವ ಸತೀಶ್ಗೆ ಇದು ಸಾಕಷ್ಟು ಆದಾಯವನ್ನು ತಂದುಕೊಡುತ್ತಿದೆ.
8 ಗುಂಟೆ ಜಮೀನಿನಲ್ಲಿ 12 ತೆಂಗು, 15 ಕರಿಬೇವಿನ ಸೊಪ್ಪು, 10 ಅಡಿಕೆ, 2 ಮಾವು, 5 ನಿಂಬೆ, 5 ನುಗ್ಗೆ ಗಿಡಗಳನ್ನು ಬೆಳೆದಿದ್ದಾರೆ. 8 ಮೇಕೆಗಳು, 2 ನಾಟಿ ಹಸುಗಳನ್ನು ಸಾಕುತ್ತಿದ್ದಾರೆ. ಇದರ ಜೊತೆಗೆ ಸುಮಾರು 50 ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ. ಒಂದು ಕೆಜಿ ನಾಟಿ ಕೋಳಿಗೆ ಮಾರುಕಟ್ಟೆಯಲ್ಲಿ 500 ರೂ.ಗಳಿಂದ 600 ರೂಗಳ ದರವಿದೆ. ಒಂದು ನಾಟಿ ಕೋಳಿ ಮೊಟ್ಟೆಯ ದರ 12 ರೂ.ನಿಂದ 15 ರೂಪಾಯಿ.
‘ರೈತನೇ ರಾಜ. ನನ್ನ ಬೆಳೆ ನನ್ನ ಬೆಲೆ’ ಎಂಬ ಘೋಷವಾಕ್ಯದಡಿ ಅಂಗಡಿಯೊಂದನ್ನು ತೆರೆದು ಕೋಳಿ ಮತ್ತು ಕೋಳಿ ಮೊಟ್ಟೆಗಳನ್ನು ಸತೀಶ್ ತಾವೇ ಮಾರಾಟ ಮಾಡುತ್ತಿದ್ದಾರೆ. ತಾವೇ ರೈತರಿಗೆ ಕೋಳಿ ಮರಿಗಳನ್ನು ಕೊಟ್ಟು, ಬೆಳೆಸಿದ ನಂತರ ಅವರಿಂದ ಕೋಳಿ ಮತ್ತು ಮೊಟ್ಟೆಗಳನ್ನು ಖರೀದಿಸಿ ಮಾರಾಟ ಮಾಡುವ ಮೂಲಕ ಸುತ್ತಮುತ್ತಲ ಗ್ರಾಮಗಳ ರೈತರಿಗೆ, ಅದರಲ್ಲೂ ಯುವಕರಲ್ಲಿ ಆತ್ಮಸ್ಥೈರ್ಯ ಮೂಡಿಸುತ್ತಿದ್ದಾರೆ. ಯುವಕರು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲರಾಗಿ ಸ್ವಾಭಿಮಾನಿಗಳಾಗಿ ಬದುಕಬೇಕು ಎಂಬುದು ಸತೀಶ್ ಅವರ ಆಶಯವಾಗಿದೆ.
ಸತೀಶ್ ಅವರು ನಾಟಿ ಕೋಳಿ ಸಾಕಣೆಯಿಂದ ಹಲವರಿಗೆ ಪ್ರೇರಣೆಯಾಗಿದ್ದಾರೆ. ಎಲ್ಲರಿಗೂ ಅವರನ್ನು ಭೇಟಿ ಮಾಡಿ ಮಾಹಿತಿಯನ್ನು ಪಡೆದು ತಾವು ನಾಟಿ ಕೋಳಿ ಸಾಕಣೆಗೆ ಮುಂದಾಗಿದ್ದಾರೆ. ಕೃಷಿ ಮತ್ತು ಪಶು ಸಂಗೋಪನಾ ಇಲಾಖೆಯವರು ಕೂಡ ಇವರು ಮಾಡುತ್ತಿರುವ ನಾಟಿಕೋಳಿ ಸಾಕಣೆ ಸ್ಥಳಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಲಾಖೆಗಳಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸುವುದಾಗಿ ಹೇಳಿದ್ದಾರೆ.
ಗ್ರಾಮಾಂತರ ಪ್ರದೇಶದ ರೈತರಿಗೆ ಏನಾದರೂ ಅನುಕೂಲ ಮಾಡಬೇಕು ಮತ್ತು ನಿರುದ್ಯೋಗ ಸಮಸ್ಯೆ ಹೋಗಲಾಡಿಸಬೇಕೆಂಬ ಉದ್ದೇಶದಿಂದ ಸಣ್ಣದಾಗಿ ಸಣ್ಣ ಪ್ರಮಾಣದಲ್ಲಿ ನಾಟಿ ಕೋಳಿ ಮತ್ತು ಮೊಟ್ಟೆ ಮಾರಾಟ ಮಾಡುವುದನ್ನು ಆರಂಭಿಸಿದೆ. ಇದರಿಂದ ಹೆಚ್ಚಿನ ಲಾಭ ಬರುವ ಜತೆಗೆ ಒಳ್ಳೆಯ ಪ್ರತಿಕ್ರಿಯೆ ಕಂಡು ಬಂದ ಹಿನ್ನೆಲೆಯಲ್ಲಿ ಅರೆಕಾಲಿಕ ಉಪನ್ಯಾಸಕ ವೃತ್ತಿಯನ್ನು ಬಿಟ್ಟು ಕೋಳಿ ಸಾಕಣೆ ಮಾಡುವುದನ್ನೇ ಮುಂದುವರಿಸಿಕೊಂಡು ಬರುತ್ತಿದ್ದೇನೆ. ಇದರಿಂದ ಉತ್ತಮ ಲಾಭದ ಜತೆಗೆ ನೆಮ್ಮದಿ ಇದೆ. ನನ್ನ ಕಾಯಕಕ್ಕೆ ಪತ್ನಿ ತೇಜಸ್ವಿನಿ, ಸಹೋದರರಾದ ಜಿ.ಟಿ.ಸುರೇಶ್, ಜಿ.ಟಿ.ಲೋಕೇಶ್ ಬೆಂಬಲವಾಗಿ ನಿಂತಿದ್ದಾರೆ.
-ಜಿ.ಟಿ.ಸತೀಶ್, ಗೊಲ್ಲರದೊಡ್ಡಿ
ಮುಂದಿನ ದಿನಗಳಲ್ಲಿ ವೈಜ್ಞಾನಿಕವಾಗಿ, ದೊಡ್ಡ ಪ್ರಮಾಣದಲ್ಲಿ ಕುಕ್ಕುಟೋದ್ಯಮವನ್ನು ಆರಂಭಿಸಲು ಅಗತ್ಯ ಇರುವ ತಾಂತ್ರಿಕ ಸಲಹೆ, ಮಾಹಿತಿ ಹಾಗೂ ಇಲಾಖೆಯ ಅನುದಾನಗಳನ್ನು ಸತೀಶ್ ಅವರಿಗೆ ಕೊಡಿಸಲಾಗುವುದು.
-ಡಾ.ಗೋವಿಂದ, ಸಹಾಯಕ ನಿರ್ದೇಶಕರು, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಮದ್ದೂರು
ಜಿ.ಟಿ.ಸತೀಶ್ ಉತ್ತಮ ರೀತಿಯಲ್ಲಿ ನಾಟಿ ಕೋಳಿ ಸಾಕಣೆ ಮತ್ತು ಮೊಟ್ಟೆ ಉದ್ದಿಮೆಯನ್ನು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕೃಷಿ ಇಲಾಖೆಯಿಂದ ಇವರಿಗೆ ಅಗತ್ಯ ಮಾಹಿತಿ ಮತ್ತು ಸಹಕಾರ ನೀಡಲಾಗುವುದು.
-ಡಿ.ಸಿ.ಕುಸುಮ, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ, ಕೃಷಿ ಇಲಾಖೆ, ಮದ್ದೂರು.