ಮೈಸೂರ್ ಸ್ಯಾಂಡಲ್ ರಾಯಭಾರಿಯಾಗಿ ತಮನ್ನಾ : ಸರಕಾರದ ನಿರ್ಧಾರಕ್ಕೆ ಟೀಕೆ, ವಿರೋಧ ವ್ಯಕ್ತವಾಗುತ್ತಿರುವುದೇಕೆ?

ಕರ್ನಾಟಕ ಸರಕಾರ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್ಡಿಎಲ್) ಸಂಸ್ಥೆಗೆ ಅಂದರೆ ಮುಖ್ಯವಾಗಿ ಮೈಸೂರ್ ಸ್ಯಾಂಡಲ್ ಸೋಪ್ಗೆ ಖ್ಯಾತ ಚಿತ್ರ ನಟಿ ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಂಡಿದೆ. ಇದು ಈಗ ವಿವಾದವಾಗಿದೆ.
ಕನ್ನಡಪರ ಹೋರಾಟಗಾರರು ಮತ್ತು ವಿರೋಧ ಪಕ್ಷದವರು ತಮನ್ನಾ ಭಾಟಿಯಾ ಏಕೆ? ಅವರಿಗೆ ಅಷ್ಟೊಂದು ದುಡ್ಡು ಕೊಡುವುದು ಏಕೆ? ಎಂದು ಕೇಳುತ್ತಿವೆ. ಸರಕಾರ ಮೈಸೂರ್ ಸ್ಯಾಂಡಲ್ ಸೋಪ್ ಗೆ ಜಾಗತಿಕ ಮನ್ನಣೆ ತಂದುಕೊಡಬೇಕು ಎನ್ನುವ ಕಾರಣಕ್ಕೆ ತಮನ್ನಾ ಭಾಟಿಯಾ ಸೂಕ್ತ ರಾಯಭಾರಿ ಎನ್ನುತ್ತಿದೆ. ಎರಡು ವರ್ಷಗಳ ಅವಧಿಗೆ ಕೆಎಸ್ಡಿಎಲ್ ಪ್ರಚಾರ ರಾಯಭಾರಿಯಾಗಲು ತಮನ್ನಾ ಅವರಿಗೆ ಸರಕಾರ ಕೊಡುತ್ತಿರುವ ದುಡ್ಡು 6.2 ಕೋಟಿ ರೂಪಾಯಿ.
ಸರಕಾರ ಏನು ಹೇಳುತ್ತೆ?
ಯಾವುದೇ ಸಂಸ್ಥೆ ಅಥವಾ ವಸ್ತುಗಳಿಗೆ ರಾಯಭಾರಿ ಹುಡುಕುವಾಗ ಆ ಸೆಲಬ್ರಿಟಿಯ ವರ್ಚಸ್ಸು, ಡಿಜಿಟಲ್ ಪ್ರೆಸೆನ್ಸ್ ಮತ್ತು ಮುಖ್ಯವಾಗಿ ಯುವ ಸಮುದಾಯದ ಜೊತೆಗಿನ ಸಂಪರ್ಕ ಹೇಗಿದೆ ಎನ್ನುವ ಅಂಶಗಳನ್ನು ಪರಿಗಣಿಸಲಾಗುತ್ತದೆ. ಎರಡನೇ ಅಂಶ ಕೆಎಸ್ಡಿಎಲ್ ವಸ್ತುಗಳಿಗೆ ವಿಶೇಷವಾಗಿ ಮೈಸೂರ್ ಸ್ಯಾಂಡಲ್ ಸೋಪ್ ಗೆ ಜಾಗತಿಕ ಮಾರುಕಟ್ಟೆ ರೂಪಿಸಬೇಕು ಅದಕ್ಕೆ ಅಂತಾರಾಷ್ಟ್ರೀಯ ಮೌಲ್ಯ ತಂದುಕೊಡಬೇಕು. ಅದಕ್ಕಾಗಿ ಪಾನ್ ಇಂಡಿಯಾ ಲೆವೆಲ್ ನಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ವ್ಯಕ್ತಿಯನ್ನು ಗುರುತಿಸಿ ರಾಯಭಾರಿಯನ್ನಾಗಿ ಮಾಡಲಾಗಿದೆ.
ಕೆಎಸ್ಡಿಎಲ್ ಕಳೆದ ವರ್ಷ 1,785 ಕೋಟಿ ರೂಪಾಯಿ ವಹಿವಾಟು ನಡೆಸಿದೆ. ಇದರಲ್ಲಿ ಕರ್ನಾಟಕದ ಪಾಲು ಶೇ 18ರಷ್ಟಿದೆ. ಉಳಿದದ್ದು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದಿಂದ ಬಂದಿದೆ. ಈ ವಹಿವಾಟನ್ನು 2030ರ ವೇಳೆಗೆ 5,000 ಕೋಟಿ ರೂಪಾಯಿಗೆ ಏರಿಸುವ ಗುರಿ ಸಂಸ್ಥೆಯದ್ದು.
ಅದಕ್ಕೋಸ್ಕರ ತಮನ್ನಾ ಭಾಟಿಯಾ ಅವರನ್ನು ಕರೆತಂದಿದ್ದೇವೆ. ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಪೂಜಾ ಹೆಗಡೆ, ಕಿಯಾರಾ ಅಡ್ವಾಣಿ ಅವರನ್ನೂ ಪರಿಗಣಿಸಿ ನೋಡಿದೆವು. ಆದರೆ ತಮನ್ನಾ ಅವರು ಡಿಜಿಟಲ್ ಲೋಕದಲ್ಲಿ 2.8 ಕೋಟಿ ಪಾಲೋಯರ್ಸ್ ಹೊಂದಿ, ಉಳಿದವರಿಗಿಂತ ಮುಂದಿದ್ದಾರೆ. ಅದಕ್ಕಾಗಿ ಅವರನ್ನು ಆಯ್ಕೆ ಮಾಡಿದ್ದೇವೆ. ಹೀಗೆ ಮಾಡಿ ಕೆಎಸ್ಡಿಎಲ್ ಲಾಭ ಗಳಿಸಿದರೆ ಅದರಿಂದ ಕರ್ನಾಟಕಕ್ಕೆ ಕನ್ನಡಿಗರಿಗೆ ಅನುಕೂಲವಾಗುತ್ತದೆ. ಇಲ್ಲಿನ ಎಲ್ಲಾ ಉದ್ಯೋಗಿಗಳು ಕನ್ನಡಿಗರೇ. ಅವರಿಗೆ ಹೋಗುತ್ತದೆ. ಅದಲ್ಲದೆ ಲಾಭಾಂಶದಲ್ಲಿ ಶೇಕಡ 30ರಷ್ಟನ್ನು ಸರಕಾರಕ್ಕೆ ಕೊಡಲಾಗುತ್ತಿದೆ. ಈಗ ಯೂರೋಪ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಲಾಗುತ್ತಿದೆ. ಇವುಗಳ ಭಾಗವಾಗಿ 435 ವಿತರಕರನ್ನು ಹೊಸದಾಗಿ ನೇಮಿಸಿಕೊಳ್ಳಲಾಗಿದೆ. ಜತೆಗೆ ಇ-ಕಾಮರ್ಸ್ ಮೂಲಕ 500 ಕೋಟಿ ರೂಪಾಯಿ ವಹಿವಾಟು ನಡೆಸುವ ಮತ್ತು ರಫ್ತಿನಿಂದ 150 ಕೋಟಿ ರೂಪಾಯಿ ಗಳಿಸುವ ಗುರಿ ಹೊಂದಿದ್ದೇವೆ. ಹೀಗೆ ಸರಕಾರದ ಪರವಾಗಿ ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು ಹೇಳಿದ್ದಾರೆ.
ಇದಲ್ಲದೆ 109 ವರ್ಷಗಳ ಇತಿಹಾಸವಿರುವ ಕೆಎಸ್ಡಿಎಲ್ ಕರ್ನಾಟಕದ ಹೆಮ್ಮೆಯ ಉದ್ಯಮವಾಗಿದೆ. ಇದಕ್ಕೆ ಸಂಪೂರ್ಣ ಹೊಸತನದ ಸ್ಪರ್ಶ ನೀಡುತ್ತಿದ್ದು, ಉತ್ತರ ಭಾರತ ಮತ್ತು ವಿದೇಶಗಳಲ್ಲೂ ಮಾರುಕಟ್ಟೆ ವಿಸ್ತರಣೆ ಮಾಡಲಾಗುತ್ತಿದೆ. ಇದರಲ್ಲಿ ಗೆಲ್ಲಬೇಕೆಂದರೆ ನಾವು ಅದಕ್ಕೆ ತಕ್ಕಂತೆ ಕಾರ್ಯತಂತ್ರ ರೂಪಿಸಬೇಕು. ಆದುದರಿಂದ ತಮನ್ನಾ ಭಾಟಿಯಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಂಡಿದ್ದೇವೆ. ಯಾರೂ ತಪ್ಪಾಗಿ ಭಾವಿಸಬಾರದು ಅಂತಾ ಕೆಎಸ್ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ ತಿಳಿಸಿದ್ದಾರೆ.
ವಿರೋಧ ವ್ಯಕ್ತಪಡಿಸುತ್ತಿರುವವರ ವಾದವೇನು?
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅಷ್ಟೊಂದು ದುಡ್ಡು ಏಕೆ ಕೊಟ್ಟಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಮುಖ್ಯಸ್ಥ ಟಿ ನಾರಾಯಣ ಗೌಡ ಮೈಸೂರು ಸ್ಯಾಂಡಲ್ ಸೋಪ್ ಬ್ರ್ಯಾಂಡ್ನ ಬ್ರಾಂಡ್ ರಾಯಭಾರಿಯಾಗಿ ಕನ್ನಡಿಗನಲ್ಲದ ನಟಿಯನ್ನು ಹೆಸರಿಸುವುದು "ಅವಮಾನ" ಎಂದು ಹೇಳಿದರು. ಕವಿತಾ ಲಂಕೇಶ್, ಸರಕಾರ ಮಿಲ್ಕಿ ಬ್ಯುಟಿಯ ಹಿಂದೆ ಬಿದ್ದಿದೆ ಅಂತಾ ಕಾಲೆಳೆದಿದ್ದಾರೆ. ರೂಪೇಶ್ ರಾಜಣ್ಣ, ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯ ಮುಂದೆ ಈ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ ಮತ್ತು ಅಧಿಕಾರಿಗಳು ತಮ್ಮ ನಿರ್ಧಾರವನ್ನು ಬದಲಾಯಿಸಬೇಕೆಂದು ಒತ್ತಾಯಿಸಿದ್ದಾರೆ. ಹೀಗೆ ಕೆಲವರು ತಮನ್ನಾ ಭಾಟಿಯಾ ಬೇಡವಾಗಿತ್ತು
ಕನ್ನಡಿಗರಿಗೆ ಅವಕಾಶ ಕೊಡಬೇಕಾಗಿತ್ತು. ಕನ್ನಡಿಗರು ಸಿಗಲಿಲ್ಲ ಎಂದರೆ ಕಡೇ ಪಕ್ಷ ದಕ್ಷಿಣ ಭಾರತದವರಿಗೆ ಅವಕಾಶ ಮಾಡಿಕೊಡಬೇಕಾಗಿತ್ತು ಎನ್ನುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇಂಥ ನಟ-ನಟಿಯರೇ ಇಲ್ಲವೇ ಅಂತಾ ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ತಮನ್ನಾಗೆ 6.20 ಕೋಟಿ ರೂ. ಕೊಟ್ಟಿದ್ದು ಜಾಸ್ತಿಯಾಯ್ತು ಎನ್ನುತ್ತಿದ್ದಾರೆ. ನಮ್ಮ ತೆರಿಗೆ ನಮ್ಮ ಹಕ್ಕು ರೀತಿ ನಮ್ಮ ಪ್ರಾಡೆಕ್ಟ್ ನಮ್ಮ ಅಂಬಾಸಿಡರ್ ಕೂಡ ಇರಬೇಕು ಎಂದಿದ್ದಾರೆ. ಹೀಗೆ ಮೈಸೂರ್ ಸ್ಯಾಂಡಲ್ ರಾಯಭಾರಿಯಾಗಿ ತಮನ್ನಾ ಆಯ್ಕೆ ಕುರಿತು ನಾನಾ ರೀತಿ ಅಭಿಪ್ರಾಯಗಳು ಬರುತ್ತಿದೆ.