ಮೂಡಿಗೆರೆ: ಹೊಳೆಕೂಡಿಗೆ ಆದಿವಾಸಿ ಕುಟುಂಬಗಳಿಗೆ ಸುಸಜ್ಜಿತ ಸೇತುವೆ ಮರೀಚಿಕೆ
➤ತೆಪ್ಪದ ಮೂಲಕ ಭದ್ರಾ ನದಿ ದಾಟುತ್ತಿರುವ ನಿವಾಸಿಗಳು ➤ ಅರಣ್ಯರೋದನವಾದ ಬೇಡಿಕೆ ➤ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕೂವೆ ಗ್ರಾಪಂ ವ್ಯಾಪ್ತಿಯ ಹೊಳೆಕೂಡಿಗೆ ಹಾದಿಓಣಿ(ಆಮ್ತಿಗುಡ್ಡ) ಗ್ರಾಮದ ಗಿರಿಜನರ ಕಾಲನಿ ನಿವಾಸಿಗಳಿಗೆ ತಮ್ಮ ಗ್ರಾಮ ಸಂಪರ್ಕಕ್ಕೆ ಸೂಕ್ತ ರಸ್ತೆ ಸೌಲಭ್ಯ ಇಲ್ಲವಾಗಿದೆ.
ಇಲ್ಲಿನ ನಿವಾಸಿಗಳು ಗ್ರಾಮ ಸಮೀಪದಲ್ಲಿ ಅಪಾಯದ ಮಟ್ಟ ಮೀರಿ ಹರಿಯುವ ಭದ್ರಾ ನದಿಯನ್ನು ಜೀವದ ಹಂಗು ತೊರೆದು ತೆಪ್ಪದ ಮೂಲಕ ದಾಟಿ ಹೊರ ಜಗತ್ತಿನ ಸಂಪರ್ಕ ಸಾಧಿಸಬೇಕಾದ ಯಾತನೆಯಲ್ಲಿ ದಿನ ಕಳೆಯುತ್ತಿದ್ದಾರೆ.
ಮೂಡಿಗೆರೆ ಅತೀ ಹೆಚ್ಚು ಗಿರಿಜನರನ್ನು ಹೊಂದಿರುವ ತಾಲೂಕಾಗಿದ್ದು, ಇಲ್ಲಿರುವ ನೂರಾರು ಗಿರಿಜನರ ಕಾಲನಿಗಳ ಪೈಕಿ ಹಲವಾರು ಕಾಲನಿಗಳಿಗೆ ನಾಗರಿಕ ಸೌಲಭ್ಯಗಳು ಇಂದಿಗೂ ಮರೀಚಿಕೆಯಾಗಿದೆ. ಈ ಪೈಕಿ ತಾಲೂಕಿನ ಬಾಳೂರು ಹೋಬಳಿ, ಕೂವೆ ಗ್ರಾಪಂ ವ್ಯಾಪ್ತಿಯಲ್ಲಿರುವ ಹೊಳೆಕೂಡಿಗೆ ಹಾದಿಓಣಿ ಗ್ರಾಮವು ಆವಂತಿ ಎಸ್ಟೇಟ್ ಸಮೀಪದಲ್ಲಿ ವರ್ಷವಿಡೀ ತುಂಬಿ ಹರಿಯುವ ಭದ್ರಾ ನದಿಯ ದಡದಲ್ಲಿದೆ. ಈ ಗ್ರಾಮದಲ್ಲಿ 18 ಮಂದಿ ವಾಸವಾಗಿದ್ದು, ಎರಡು ಕುಟುಂಬಗಳಿಗೆ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯಡಿಯಲ್ಲಿ 2.20 ಎಕರೆ ಜಮೀನು ಮಂಜೂರಾಗಿದೆ. ಆವಂತಿ ಎಸ್ಟೇಟ್ ಹಾಗೂ ಹೊಳೆಕೂಡಿಗೆ ಹಾದಿಓಣಿ ಗ್ರಾಮದ ಮಧ್ಯೆ ಭದ್ರಾ ನದಿ ಹರಿಯುತ್ತಿದ್ದು, ಈ ಗ್ರಾಮದ ನಿವಾಸಿಗಳು, ಶಾಲಾ ಕಾಲೇಜು ಮಕ್ಕಳು ಸಮೀಪದ ಮಾಗುಂಡಿ, ಬಾಳೆಹೊನ್ನೂರು, ಕಳಸ, ಬಾಳೂರು, ಮೂಡಿಗೆರೆಯಂತಹ ಗ್ರಾಮ, ಪಟ್ಟಣಗಳ ಸಂಪರ್ಕ ಸಾಧಿಸಲು ಯಾವುದೇ ರಸ್ತೆ ಸೌಲಭ್ಯ ಇಲ್ಲದ ಪರಿಣಾಮ ತುಂಬಿ ಹರಿಯುವ ಭದ್ರಾ ನದಿಯನ್ನು ದಾಟಿಕೊಂಡೇ ಹೊರ ಜಗತ್ತಿನ ಸಂಪರ್ಕ ಸಾಧಿಸಬೇಕಾಗಿದೆ.
ಈ ಗ್ರಾಮದ ನಿವಾಸಿಗಳು, ಶಾಲಾ ಕಾಲೇಜು ಮಕ್ಕಳು ಭದ್ರಾ ನದಿಯನ್ನು ದಾಟಲು ಆಧುನಿಕ ಕಾಂಕ್ರಿಟ್ ಸೇತುವೆಯಾಗಲಿ, ತೂಗು ಸೇತುವೆಯಾಗಲಿ ಇಲ್ಲವಾಗಿದೆ. ಈ ಕಾರಣದಿಂದಾಗಿ ಇಲ್ಲಿನ ನಿವಾಸಿಗಳು ಅನಾದಿಕಾಲದಿಂದಲೇ ಭದ್ರಾ ನದಿಯನ್ನು ದಾಟಲು ತೆಪ್ಪವನ್ನೇ ಬಳಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದಾರೆ. ಇಲ್ಲಿನ ಆದಿವಾಸಿ ಕುಟುಂಬಗಳು ತಮ್ಮ ಮನೆಗಳಿಗೆ ಬೇಕಾದ ದಿನಸಿ ಸೇರಿದಂತೆ ಮನೆ ನಿರ್ಮಾಣಕ್ಕೆ ಬೇಕಾದ ಹೆಂಚು, ಸಿಮೆಂಟ್, ಇಟ್ಟಿಗೆಯಂತಹ ಅಗತ್ಯ ವಸ್ತುಗಳನ್ನೂ ತೆಪ್ಪದ ಮೂಲಕವೇ ಸಾಗಿಸಬೇಕಿದೆ.
ಸದ್ಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯ ಪರಿಣಾಮ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ತೆಪ್ಪದ ಮೂಲಕ ನದಿ ದಾಟುವುದು ಅಪಾಯಕಾರಿಯಾಗಿರುವುದರಿಂದ ಇಲ್ಲಿನ ನಿವಾಸಿಗಳು ಮಳೆಗಾಲದ 6 ತಿಂಗಳುಗಳ ಕಾಲ ಮನೆ, ಗ್ರಾಮ ಬಿಟ್ಟು ಹೊರ ಬಾರದಂತಹ ಯಾತನೆಯಲ್ಲಿ ಬದುಕುತ್ತಿದ್ದಾರೆ.
ಈ ಗ್ರಾಮದ ಸಂಪರ್ಕಕ್ಕೆ ಕಚ್ಚಾ ದಾರಿ ಇದೆಯಾದರೂ ಆ ದಾರಿ ಆವಂತಿ ಎಸ್ಟೇಟ್ನವರ ಖಾಸಗಿ ಹಿಡುವಳಿ ಎನ್ನಲಾಗುತ್ತಿದ್ದು, ಈ ದಾರಿ ವಿಚಾರದ ಬಗ್ಗೆ ಎಸ್ಟೇಟ್ ಮಾಲಕರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಪರಿಣಾಮ ಈ ದಾರಿಯ ಮೂಲಕವೂ ತಿರುಗಾಡದಂತಾಗಿದೆ ಎನ್ನುವುದು ಇಲ್ಲಿನ ನಿವಾಸಿಗಳ ಆರೋಪವಾಗಿದೆ. ಇಲ್ಲಿನ ನಿವಾಸಿಗಳ ಸಮಸ್ಯೆ ಬಗ್ಗೆ ಅನೇಕ ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳೂ ಸೇರಿದಂತೆ ತಾಲೂಕು ಆಡಳಿತ, ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿ ವರದಿ ಸಲ್ಲಿಸಿದ್ದರೂ ನಿವಾಸಿಗಳ ಸಮಸ್ಯೆ ಮಾತ್ರ ಇಂದಿಗೂ ಬಗೆಹರಿಯದಂತಾಗಿದೆ. ಭದ್ರಾ ನದಿ ದಾಟಲು ಸುಸಜ್ಜಿತ ಸೇತುವೆ ನಿರ್ಮಿಸಿಕೊಡಬೇಕೆಂಬುದು ಇಲ್ಲಿನ ನಿವಾಸಿಗಳ ಬೇಡಿಕೆಯಾಗಿದೆ.
ನಾವು ಈ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ವಾಸಿಸುತ್ತಿದ್ದೇವೆ. ಸರಕಾರ ನಮಗೆ ಮನೆ, ಜಮೀನು, ವಿದ್ಯುತ್ನಂತಹ ಸೌಲಭ್ಯವನ್ನೂ ನೀಡಿದೆ. ಆದರೆ ನಮ್ಮ ಗ್ರಾಮದ ಸಂಪರ್ಕಕ್ಕೆ ಸುಸಜ್ಜಿತ ರಸ್ತೆ, ಭದ್ರಾ ನದಿ ದಾಟಲು ಸುಸಜ್ಜಿತ ಸೇತುವೆ ಇಲ್ಲವಾಗಿದೆ. ರಸ್ತೆ ಇರುವ ಜಾಗವನ್ನು ಸಮೀಪದ ಎಸ್ಟೇಟ್ನವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಜಾಗ ಗೋಮಾಳ ಜಾಗವಾಗಿದ್ದರೂ ಸರಕಾರಿ ಜಾಗದಲ್ಲಿ ರಸ್ತೆ ನಿರ್ಮಿಸಿಕೊಡಲು ಪ್ರಭಾವಿಗಳ ಒತ್ತಡದಿಂದಾಗಿ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಸಮಸ್ಯೆ ಹೇಳಿಕೊಂಡಾಗಲೆಲ್ಲ ಪರಿಶೀಲನೆಗೆ ಬರುವ ಅಧಿಕಾರಿಗಳು ಭರವಸೆ ನೀಡಿ ತೆರಳುತ್ತಿದ್ದಾರೆಯೇ ಹೊರತು ರಸ್ತೆ ಸೌಲಭ್ಯ ಮಾತ್ರ ಕಲ್ಪಿಸಿಲ್ಲ. ಸದ್ಯ ನಾವು ಭದ್ರಾ ನದಿಯನ್ನು ತೆಪ್ಪದ ಮೂಲಕ ದಾಟ ಬೇಕಿದ್ದು, ಶಾಲಾ ಕಾಲೇಜು ಮಕ್ಕಳೂ ತೆಪ್ಪದ ಮೂಲಕ ಪ್ರಾಣದ ಹಂಗು ತೊರೆದು ನದಿ ದಾಟುತ್ತಿದ್ದಾರೆ. ಭದ್ರಾ ನದಿಗೆ ಸೇತುವೆ ನಿರ್ಮಿಸಿಕೊಡಿ ಎನ್ನುವ ನಮ್ಮ ಬೇಡಿಕೆಗೆ ಸರಕಾರ ಸ್ಪಂದಿಸಿಲ್ಲ.
-ಟಿ.ಎ.ರುದ್ರಯ್ಯ, ಹೊಳೆಕೂಡಿಗೆ ನಿವಾಸಿ