ಮುಚ್ಚುವ ಹಂತದಲ್ಲಿ ಕೊಪ್ಪಳ ವಿಶ್ವವಿದ್ಯಾನಿಲಯ
ವಿವಿ ಉಳಿಸಲು ಸಾರ್ವಜನಿಕರ ಆಗ್ರಹ

ಜಿಲ್ಲೆಯ ತಲಕಲ್ ಇಂಜಿನಿಯರಿಂಗ್ ಕಾಲೇಜಿನ ಕಟ್ಟಡದ ಒಂದು ಭಾಗದಲ್ಲಿ ನಡೆಯುತ್ತಿರುವ ಕೊಪ್ಪಳ ವಿಶ್ವವಿದ್ಯಾನಿಲಯ.
ಕೊಪ್ಪಳ, ಫೆ.16: ಹಿಂದುಳಿದ ಜಿಲ್ಲೆ ಎಂದೇ ಹಣೆಪಟ್ಟಿ ಕಟ್ಟಿಕೊಂಡಿರುವ ಕೊಪ್ಪಳ ಜಿಲ್ಲೆ ದಲಿತರ ಮೇಲಿನ ದೌರ್ಜನ್ಯ, ಬಾಲ್ಯ ವಿವಾಹಗಳು, ದೇವದಾಸಿ ಪದ್ಧತಿಗಳಂತಹ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಇರುವುದು ಒಂದೇ ದಾರಿ ಅದು ಜನರನ್ನು ಶಿಕ್ಷಣವಂತರಾಗಿ ಮಾಡುವುದು, ಜಿಲ್ಲೆಯ ಜನರು ಸುಶಿಕ್ಷಿತರಾಗಲು ಅನುಕೂಲಕರವಾಗಿದ್ದ ಕೊಪ್ಪಳ ವಿಶ್ವವಿದ್ಯಾಲಯವನ್ನು ಮುಚ್ಚಬೇಕೆಂದು ನಿರ್ಧರಿಸಲಾಗಿದೆ.
ಬಿಜೆಪಿ ಸರಕಾರದ ಅವಧಿಯಲ್ಲಿ ಆರಂಭಿಸಿದ್ದ 10 ವಿಶ್ವವಿದ್ಯಾನಿಲಯಗಳ ಪೈಕಿ 9 ವಿಶ್ವವಿದ್ಯಾನಿಲಯಗಳನ್ನು ಮುಚ್ಚಬೇಕೆಂದು ಸಚಿವ ಸಂಪುಟದ ಉಪಸಮಿತಿ ನಿರ್ಧರಿಸಿದೆ. ಮುಚ್ಚುವ ವಿಶ್ವವಿದ್ಯಾಲಯಗಳಲ್ಲಿ ಕೊಪ್ಪಳ ವಿಶ್ವವಿದ್ಯಾನಿಲಯವು ಒಂದು. ಈ ವಿಶ್ವವಿದ್ಯಾನಿಲಯಗಳನ್ನು ನಡೆಸಲು ಸರಕಾರದ ಬೊಕ್ಕಸಕ್ಕೆ ಹೊರೆಯಾಗಲಿದೆ ಎಂಬ ಕಾರಣ ನೀಡಿ ಬೀದರ್ ವಿವಿಯನ್ನು ಹೊರತುಪಡಿಸಿ 9 ವಿಶ್ವವಿದ್ಯಾನಿಲಯಗಳನ್ನು ಮುಚ್ಚಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೆತೃತ್ವದ ಉಪ ಸಮಿತಿ ನಿರ್ಧರಿಸಿದೆ. ಸದ್ಯ 40ಕ್ಕೂ ಹೆಚ್ಚು ವಿದ್ಯಾಲಯಗಳು ಮತ್ತು ಸುಮಾರು 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೊಪ್ಪಳ ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟಿದ್ದಾರೆ.
ವಿಶ್ವವಿದ್ಯಾನಿಲಯವನ್ನು ಮುಚ್ಚುವುದು ಬೇಡ ಎಂದು ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಪರಿಷತ್ ಶಾಸಕಿ ಹೇಮಲತಾ ನಾಯಕ ಸೇರಿದಂತೆ ರಾಜಕೀಯ ಮುಖಂಡರು ಉನ್ನತ ಶಿಕ್ಷಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿಶ್ವವಿದ್ಯಾನಿಲಯವನ್ನು ಮುಚ್ಚದಂತೆ ಪತ್ರ ಬರೆದಿದ್ದಾರೆ.
ಬಿಜೆಪಿ ಸರಕಾರ ವಿಶ್ವವಿದ್ಯಾನಿಲಯಕ್ಕೆ ಸದ್ಯಕ್ಕೆ ಜಮೀನು ಖರೀದಿಸುವಂತಿಲ್ಲ, ಕಟ್ಟಡ ನಿರ್ಮಿಸುವಂತಿಲ್ಲ ಎನ್ನುವ ಷರತ್ತುಗಳನ್ನು ವಿಧಿಸಿ ಕೊಪ್ಪಳ ವಿವಿಯನ್ನು ಆರಂಭಿಸಿತ್ತು. ಇದಕ್ಕೂ ಮೊದಲು ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಜಿಲ್ಲೆಯ ಪದವಿ ಕಾಲೇಜುಗಳಿದ್ದವು. ಜಿಲ್ಲೆಗೂ ವಿಶ್ವವಿದ್ಯಾನಿಲಯ ಬೇಕು ಎನ್ನುವ ಬೇಡಿಕೆ ವ್ಯಾಪಕವಾಗಿದ್ದ ಆ ದಿನಗಳಲ್ಲಿ ಸರಕಾರದ ಹೊಸ ವಿ.ವಿ. ಘೋಷಣೆ ಜಿಲ್ಲೆಯ ಜನರಲ್ಲಿ ಸಂಭ್ರಮಕ್ಕೆ ಕಾರಣವಾಗಿತ್ತು. ಆದರೆ ಆರ್ಥಿಕ ಹೊರೆ ನೆಪವೊಡ್ಡಿ ವಿಶ್ವವಿದ್ಯಾಲಯಗಳನ್ನು ಮುಚ್ಚಬೇಕೆಂಬ ಸಚಿವ ಸಂಪುಟದ ಉಪ ಸಮಿತಿ ನಿರ್ಧಾರವು ಜನಾಕ್ರೋಶಕ್ಕೆ ಕಾರಣವಾಗಿದೆ.
ಎಲ್ಲಾ ಸರಕಾರಗಳು ನಮ್ಮ ಜಿಲ್ಲೆಗೆ ನಿರಂತರವಾಗಿ ಅನ್ಯಾಯ ಮಾಡುತ್ತಾ ಬಂದಿವೆ. ನಮ್ಮ ಜನತೆಗೆ ಏನಾದರು ಒಳ್ಳೆಯದಾಗುವುದಿದ್ದರೆ ಅದನ್ನು ಕಸಿದುಕೊಳ್ಳಲಾಗುತ್ತದೆ. ಆದರೆ ಜನರ ಆರೋಗ್ಯ ಹಾಳು ಮಾಡುವಂತಹ ಕಾರ್ಖಾನೆಗಳು, ಅಣುಸ್ಥಾವರಗಳನ್ನು ನಮ್ಮ ಜಿಲ್ಲೆಗೆ ನೀಡಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸಂಸದರು ಮತ್ತು ಶಾಸಕರು ಇದನ್ನು ಏಕೆ ವಿರೋಧಿಸುತ್ತಿಲ್ಲ ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಮೊದಲು ಬಳ್ಳಾರಿ ವಿಶ್ವವಿದ್ಯಾನಿಲಯ ಇದ್ದಾಗ ಸಣ್ಣ ಪುಟ್ಟ ಕೆಲಸಗಳಿಗೆ ಬಳ್ಳಾರಿಗೆ ಹೋಗಬೇಕಾಗಿತ್ತು. ಆದರೆ ಕೊ ಪ್ಪಳ ವಿಶ್ವವಿದ್ಯಾನಿಲಯ ಆದಾಗ ಆ ತೊಂದರೆ ಇರಲಿಲ್ಲ. ಒಂದು ವೇಳೆ ವಿಶ್ವವಿದ್ಯಾನಿಲಯ ಮುಚ್ಚಿದರೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತದೆ. ಕೂಡಲೆ ಸರಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಹೆಸರು ಹೇಳಲು ಇಚ್ಚಿಸದ ಉಪನ್ಯಾಸಕರೋರ್ವರು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ತಂಗಡಗಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಶಾಸಕ ರಾಘವೇಂದ್ರ ಹಿಟ್ನಾಳ್, ಕಾಂಗ್ರೆಸ್ ಸಂಸದ ಮತ್ತು ಈಗಿನ ಉಪಕುಲಪತಿ ಬಿ.ಕೆ.ರವಿ ಅವರು ಕೊಪ್ಪಳ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಕೊಪ್ಪಳ ವಿಶ್ವವಿದ್ಯಾನಿಲಯವು ಸರಿಯಾದ ಸಮಯಕ್ಕೆ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸುತ್ತಾ, ವೇಳಾಪಟ್ಟಿಯಂತೆ ಪರೀಕ್ಷೆಗಳನ್ನು ನಡೆಸುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ. ಒಂದು ವೇಳೆ ವಿಶ್ವವಿದ್ಯಾನಿಲಯ ಮುಚ್ಚಿದರೆ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ.
-ಕೃಷ್ಣ ವಂಶಿ, 2ನೇ ವರ್ಷದ ಬಿಎಸ್ಇ ವಿದ್ಯಾರ್ಥಿ
ಅತ್ಯಂತ ಹಿಂದುಳಿದ ಜಿಲ್ಲೆಯಾದ ಕೊಪ್ಪಳದಲ್ಲಿ ಉನ್ನತ ಶಿಕ್ಷಣ ಸಿಗುವುದು ಕನಸಿನ ಮಾತಾಗಿತ್ತು. ವಿಶ್ವವಿದ್ಯಾನಿಲಯವು ಯಾವುದೇ ವಿಷಯದಲ್ಲಿ ಹಿಂದೆ ಉಳಿದಿಲ್ಲ. ಆದ ಕಾರಣ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದು ವಿದ್ಯಾರ್ಥಿಗಳ ಜೀವನ ರೂಪಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು.
-ಈರಣ್ಣ ಎನ್.ಪಿ ಪತ್ರಿಕೋದ್ಯಮ ವಿದ್ಯಾರ್ಥಿ