ವೃತ್ತಿ ಧರ್ಮ ಮರೆತಿರುವ ಭಾರತೀಯ ಮಾಧ್ಯಮಗಳು

ಪತ್ರಿಕೋದ್ಯಮ ಅಥವಾ ವಿಶಾಲಾರ್ಥದಲ್ಲಿ ಮಾಧ್ಯಮ ಜಗತ್ತು 21ನೇ ಶತಮಾನದಲ್ಲಿ ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ರೂಪಾಂತರ ಗೊಂಡಿರುವುದು ಸಹಜ ಪ್ರಕ್ರಿಯೆ. ಜನತೆಗೆ ಸುದ್ದಿ ಮುಟ್ಟಿಸುವ ಅಕ್ಷರ ಲೋಕದ ಮುದ್ರಣ ಜಗತ್ತಿನಿಂದ ನೇರವಾಗಿ ನೋಡುವ ಅಥವಾ ಕೇಳುವ ಡಿಜಿಟಲ್ ಸಂವಹನ ಮಾದರಿಗೆ ಮನ್ವಂತರ ಪಡೆದಿರುವ ಮಾಧ್ಯಮ ಜಗತ್ತನ್ನು ವರ್ತಮಾನದ ಭಾರತದ ಸಂದರ್ಭದಲ್ಲಿ ನಿರ್ವಚಿಸುವಾಗ ಎರಡು ಪ್ರತ್ಯೇಕ ವಲಯಗಳಾಗಿಯೇ ನೋಡಬೇಕಾಗುತ್ತದೆ. ವಿದ್ಯುನ್ಮಾನ ತಂತ್ರಜ್ಞಾನದ ಅವಿಷ್ಕಾರ ಮತ್ತು ವಿಸ್ತಾರದ ಪ್ರಕ್ರಿಯೆಯಲ್ಲಿ ಸಮಾಜದ ಅಂಚಿನವರೆಗೂ ಕ್ಷಣಮಾತ್ರದಲ್ಲಿ ಸುದ್ದಿ ತಲುಪಿಸುವ ಸಾಮರ್ಥ್ಯ ಪಡೆದಿರುವ ಡಿಜಿಟಲ್ ಸಂವಹನ ಮಾಧ್ಯಮಗಳು, ಇಂದಿನ ತಲೆಮಾರಿನ ಯುವಸಮೂಹವನ್ನು ಪರಿಣಾಮಕಾರಿಯಾಗಿ ತಲುಪುತ್ತಿರುವುದರಿಂದ ಅದರ ಪ್ರಾಶಸ್ತ್ಯ ಮತ್ತು ವ್ಯಾಪ್ತಿಯೂ ಹೆಚ್ಚಾಗಿದೆ. ಮುದ್ರಣ ಮಾಧ್ಯಮಗಳು ತಮ್ಮದೇ ಆದ ಸಾಂಪ್ರದಾಯಿಕ ಓದುಗರನ್ನು ಉಳಿಸಿಕೊಂಡು, ಹೊಸಬರನ್ನು ಸೆಳೆಯಲು ಕೊಂಚ ಮಟ್ಟಿಗೆ ಪರದಾಡುವಂತಾಗಿದೆ.
ಈ ಎರಡೂ ಪ್ರಕ್ರಿಯೆಗಳಿಗೆ ಮೂಲ ಕಾರಣ ಮಾರುಕಟ್ಟೆ, ಕಾರ್ಪೊರೇಟ್ ಔದ್ಯಮಿಕ ಆಧಿಪತ್ಯ ಮತ್ತು ಸಾಮಾನ್ಯ ಜನರಲ್ಲಿ ಕುಳಿತು ಓದುವ ವ್ಯವಧಾನ ಕಡಿಮೆಯಾಗಿರುವುದು. ಇದು ಕಾಲಕ್ಕೆ ತಕ್ಕಂತಹ ಮನ್ವಂತರವಾಗಿರುವುದರಿಂದ ಆಕ್ಷೇಪಿಸಲಾಗುವುದಿಲ್ಲ. ಆದರೆ ಅತಿ ಹೆಚ್ಚು ಜನಸಂಖ್ಯೆಯನ್ನು ಯಾವುದೇ ಗಡಿನಿಮಿತ್ತಗಳಿಲ್ಲದೆ ತಲುಪುತ್ತಿರುವ ವಿದ್ಯುನ್ಮಾನ ದೃಶ್ಯ ಮಾಧ್ಯಮಗಳು ತಮ್ಮ ಈ ಬಹುದೊಡ್ಡ ಜವಾಬ್ದಾರಿಯನ್ನು ಅರಿತು ವಿಸ್ತರಿಸುತ್ತಿವೆಯೇ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ತಮ್ಮ ಕಾರ್ಪೊರೇಟ್ ಮಾಲಕತ್ವದ ಔದ್ಯಮಿಕ ಹಿತಾಸಕ್ತಿ ಒಂದೆಡೆಯಾದರೆ, ಸಂಪಾದಕೀಯ ಮುಂದಾಳತ್ವ ವಹಿಸುವ ಬೌದ್ಧಿಕ ಚಿಂತನೆಗಳ ಸೀಮಿತ ಅಥವಾ ಸಮೀಪ ದೃಷ್ಟಿಯ (Myopic) ಆಲೋಚನಾ ವಿಧಾನಗಳು ಈ ಸಂವಹನ ಕ್ಷೇತ್ರವನ್ನು ಪ್ರಧಾನವಾಗಿ ನಿರ್ದೇಶಿಸುತ್ತವೆ. ಭಾರತದ ವಿದ್ಯುನ್ಮಾನ ಮಾಧ್ಯಮಗಳು (ಕೆಲವೇ ಅಪವಾದಗಳನ್ನು ಹೊರತುಪಡಿಸಿ) ನಿರಾಸೆ ಮೂಡಿಸುವುದು ಇಲ್ಲಿ.
ಪ್ರಜಾಪ್ರಭುತ್ವದ ಆಧಾರ ಮತ್ತು ವಾಹಕ
ಮಾಧ್ಯಮ ಅಥವಾ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂಬ ಪಾರಂಪರಿಕ ವ್ಯಾಖ್ಯಾನ ಇಂದು ಅರ್ಥ ಕಳೆದುಕೊಂಡಿರುವುದು ವಾಸ್ತವ. ಏಕೆಂದರೆ ಇದು ಸಾಧ್ಯವಾಗಿದ್ದರೆ, ಕಳೆದ ಎರಡು-ಮೂರು ದಶಕಗಳಲ್ಲಿ ಭಾರತದ ಆಳ್ವಿಕೆಯಲ್ಲಿ, ಸಾಮಾಜಿಕ ಜೀವನದಲ್ಲಿ ಹಾಗೂ ಸಾಂಸ್ಕೃತಿಕ ನೆಲೆಗಳಲ್ಲಿ, ಸ್ವಾತಂತ್ರ್ಯಪೂರ್ವ ಭಾರತದ ಮೌಲ್ಯಗಳು-ಕನಸುಗಳೆಲ್ಲವೂ ಭಗ್ನಗೊಳ್ಳುತ್ತಿರುವುದರ ವಿರುದ್ಧ ಈ ಡಿಜಿಟಲ್ ಸ್ವರಗಳು ಸದ್ದು ಮಾಡಬೇಕಿತ್ತು. ಬಹುತೇಕವಾಗಿ ಮಾರುಕಟ್ಟೆ ಬಂಡವಾಳದ ಹಿಡಿತದಲ್ಲಿರುವ ಈ ಕ್ಷೇತ್ರ ಇಂದು ವಾಸ್ತವ ಬಿಂಬಿಸುವ ಬದಲು ಸುಳ್ಳುಗಳನ್ನು ಉತ್ಪಾದಿಸುವ ಅಥವಾ ಉತ್ಪಾದಿತ ಸುಳ್ಳು-ಮಿಥ್ಯೆಗಳನ್ನು ವ್ಯವಸ್ಥಿತವಾಗಿ ಪ್ರಸರಣ ಮಾಡುವ ಒಂದು ವಿಶಾಲ ಜಗತ್ತನ್ನು ಸೃಷ್ಟಿಸಿದೆ. ಮಾರುಕಟ್ಟೆ ಮತ್ತು ಬಂಡವಾಳ ದೇಶದ ಅಧಿಕಾರ ರಾಜಕಾರಣವನ್ನು ಆವರಿಸಿರುವಷ್ಟೇ ಪ್ರಮಾಣದಲ್ಲಿ ಅಥವಾ ಇನ್ನೂ ತುಸು ಹೆಚ್ಚಿನ ಮಟ್ಟದಲ್ಲಿ ಮಾಧ್ಯಮಗಳು ಔದ್ಯಮೀಕರಣಕ್ಕೊಳಗಾಗಿದ್ದು ರಾಜಕೀಯ ತತ್ವ-ಸಿದ್ಧಾಂತ, ಕಾರ್ಯಸೂಚಿ ಮತ್ತು ಗುರಿಯನ್ನು ಈಡೇರಿಸಲು ನೆರವಾಗುವ ವಾಹಕಗಳಾಗಿ ಪರಿಣಮಿಸಿವೆ.
ತಮ್ಮ ಸಾಂಸ್ಥಿಕ ಔದ್ಯಮಿಕ ಏಳಿಗೆಗಾಗಿ ಎಂತಹ ಸುಳ್ಳನ್ನಾದರೂ ಸತ್ಯ ಎಂದು ಬಿಂಬಿಸುವ ವಿಶಾಲ ಸಂಪಾದಕೀಯ ಜಗತ್ತನ್ನೇ ಇಲ್ಲಿ ಕಾಣಬಹುದು. ಇದು ಉದ್ದೇಶಪೂರಿತ ಎನ್ನುವುದಕ್ಕಿಂತಲೂ, ಜನತೆಗೆ ಸುದ್ದಿ ಮುಟ್ಟಿಸುವ ಮುನ್ನ ವಾಸ್ತವವನ್ನು ಶೋಧಿಸುವ ವ್ಯವಧಾನವನ್ನು ಮಾಧ್ಯಮಗಳು ಕಳೆದುಕೊಂಡಿವೆ. ವಾಣಿಜ್ಯೀಕರಣ ಪ್ರಕ್ರಿಯೆಯಲ್ಲಿ ಸಹಜವಾಗಿ ಉಂಟಾಗುವ ಎಲ್ಲ ವಸ್ತು-ವಿಷಯ-ವಿಚಾರಗಳ ಸರಕೀಕರಣ (Commodification) ಮಾಧ್ಯಮ ವಲಯವನ್ನೂ ಆವರಿಸಿರುವುದರಿಂದ ಸಾವು, ನೋವು, ಆಘಾತ, ಅಪರಾಧ, ವಿಪತ್ತು ಮತ್ತು ವಿಶಾಲ ಸಮಾಜ ಎದುರಿಸುವ ಬಿಕ್ಕಟ್ಟುಗಳೂ ಸಹ ಲಾಭಗಳಿಕೆಯ ಸರಕುಗಳಾಗಿ ಪರಿಣಮಿಸುತ್ತವೆ. ಈ ಕಾರ್ಪೊರೇಟ್ ದಾಹವು ಸಾಂಸ್ಥೀಕರಣಗೊಂಡಾಗ, ಮಾಧ್ಯಮ ವಲಯವನ್ನು ಪ್ರತಿನಿಧಿಸುವ ಬೌದ್ಧಿಕ ನೆಲೆಗಳೂ ಸಹ ಬಿಕರಿಗಿಟ್ಟ ವಸ್ತುಗಳಾಗುತ್ತವೆ. ಪ್ರೇಕ್ಷಕರ, ವೀಕ್ಷಕರ, ಕೇಳುಗರ ಸ್ಥಾನದಲ್ಲಿ ‘ಗ್ರಾಹಕ’ ಕಂಡುಬರುತ್ತಾನೆ. ಸಂಪಾದಕ, ನಿರೂಪಕ, ವರದಿಗಾರ ವ್ಯಕ್ತಿಗತವಾಗಿ ಎಲ್ಲರೂ ಸಹ ಈ ಮಾರುಕಟ್ಟೆ ಜಗಲಿಯ ಹರಾಜು ಮಾರುಕಟ್ಟೆಯಲ್ಲಿ ಕ್ರಿಯಾಶೀಲ ಏಜೆಂಟರಾಗಿಬಿಡುತ್ತಾರೆ.
ಈ ಅಸೂಕ್ಷ್ಮತೆ ಮತ್ತು ಬೇಜವಾಬ್ದಾರಿಯ ವಿರಾಟ್ ಸ್ವರೂಪವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದಲ್ಲಿ ನಡೆದ ಭಾರತ-ಪಾಕ್ ಸಂಘರ್ಷದ ಸಂದರ್ಭದಲ್ಲಿ ಕಾಣಬಹುದಾಗಿತ್ತು. ಉಭಯ ರಾಷ್ಟ್ರಗಳ ನಡುವಿನ ಕಲಹ ಉಲ್ಬಣಿಸುವ ಸೂಚನೆಗಳು ಸಹ ಇದ್ದುದು ವಾಸ್ತವ. ಇಂತಹ ಸನ್ನಿವೇಶದಲ್ಲಿ ಜನಸಾಮಾನ್ಯರಿಗೆ ವಸ್ತುನಿಷ್ಠ ಮಾಹಿತಿಯನ್ನು ಒದಗಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿರುತ್ತದೆ. ದುರದೃಷ್ಟವಶಾತ್ ಬಹುಪಾಲು ದೃಶ್ಯ ಮಾಧ್ಯಮಗಳು, ಕೆಲವು ಸಾಮಾಜಿಕ ತಾಣಗಳೂ ಸಹ ದೇಶದ ಜನತೆಯಲ್ಲಿ ಯುದ್ಧೋನ್ಮಾದ ಸೃಷ್ಟಿಸುವ ರೀತಿಯಲ್ಲಿ ಸುದ್ದಿಪ್ರಸರಣ ಮಾಡಿದ್ದು ಅಕ್ಷಮ್ಯ ಮತ್ತು ಬೇಜವಾಬ್ದಾರಿಯುತ ವರ್ತನೆ.
ಸಮರ ಕಾಲದ ಯುದ್ಧೋನ್ಮಾದ
ನಾಲ್ಕು ದಿನಗಳ ಭಾರತ-ಪಾಕ್ ಸಂಘರ್ಷದ ಸಮಯದಲ್ಲಿ ಭಾರತದ ಮಾಧ್ಯಮಗಳು ಬಿತ್ತರಿಸಿದ ‘ಭೀಕರ ಯುದ್ಧ’ ಸನ್ನಿವೇಶದ ಶೇಕಡಾ 90ರಷ್ಟು ದೃಶ್ಯಗಳೆಲ್ಲವೂ ಸುಳ್ಳು ಎಂದು ಸೇನಾ ಮುಖ್ಯಸ್ಥರೇ ಸಾರ್ವಜನಿಕವಾಗಿ ಹೇಳಿದ್ದು, ಭಾರತದ ಮಾಧ್ಯಮ ಜಗತ್ತನ್ನು ಬೆತ್ತಲೆಯಾಗಿಸಿತ್ತು. ಎಂತಹುದೇ ಸನ್ನಿವೇಶವಾದರೂ, ನೆರೆ ರಾಷ್ಟ್ರದೊಡನೆ ಯುದ್ಧ ನಡೆಯುವ ಸಂದರ್ಭ ಎದುರಾದಾಗ, ಮಾಧ್ಯಮಗಳು ಜನತೆಯಲ್ಲಿ ಅತ್ಮಸ್ಥೈರ್ಯ ತುಂಬುವ, ವಿಶ್ವಾಸ ಮೂಡಿಸುವ ಮತ್ತು ಐಕಮತ್ಯವನ್ನು ಸಾಧಿಸುವ ನಿಟ್ಟಿನಲ್ಲಿ ಸುದ್ದಿ ಬಿತ್ತರಿಸಬೇಕು. ಆದರೆ ಭಾರತದ ವಿದ್ಯುನ್ಮಾನ ಮಾಧ್ಯಮಗಳು ಹಾಲಿವುಡ್ ಚಿತ್ರದ, ಅನಿಮೇಟೆಡ್ ದೃಶ್ಯಗಳ, ವೀಡಿಯೊ ಗೇಮ್ಗಳ ಚಿತ್ರಣವನ್ನೇ ನೈಜ ಯುದ್ಧದಂತೆ ಪ್ರಸರಣ ಮಾಡುವ ಮೂಲಕ ಜನರಲ್ಲಿ ಯುದ್ಧೋನ್ಮಾದ ಸೃಷ್ಟಿಸಲು ಯತ್ನಿಸಿದ್ದೇ ಹೆಚ್ಚು. ಪರಮಾಣು ಅಸ್ತ್ರ ಬಳಕೆಯ ಅನಿವಾರ್ಯತೆ ಎದುರಾದಾಗಲೂ, ಅದರಿಂದ ಉಂಟಾಗುವ ವಿನಾಶಕಾರಿ ವಿಪತ್ತಿನ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕಾದ ಮಾಧ್ಯಮಗಳು, ಈ ಮನುಕುಲ ವಿರೋಧಿ ಅಸ್ತ್ರದ ಬಳಕೆಯನ್ನೇ ವೈಭವೀಕರಿಸಿದ್ದು, ಸೂಕ್ಷ್ಮಸಂವೇದನೆ ಮತ್ತು ಸಂಯಮದ ಕೊರತೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಜನರ ಯೋಗಕ್ಷೇಮ ಮತ್ತು ದೇಶದ ಅಖಂಡತೆಗಿಂತಲೂ, ತಮ್ಮ ಸಾಂಸ್ಥಿಕ-ಔದ್ಯಮಿಕ ಮಾರುಕಟ್ಟೆ ಹಿತಾಸಕ್ತಿಗಳೇ ಪ್ರಾಮುಖ್ಯತೆ ಪಡೆದಾಗ ಮಾಧ್ಯಮಗಳು ಹೀಗೆ ವರ್ತಿಸುತ್ತವೆ. ಇದು ಬೇಜವಾಬ್ದಾರಿತನದ ಪರಾಕಾಷ್ಠೆ ಎನ್ನಬಹುದು.
ವಿಶ್ವದ ಯಾವುದೇ ಭಾಗದಲ್ಲಿ ಯುದ್ಧ ಸಂಭವಿಸಿದರೂ ಇಡೀ ಜಗತ್ತು ತಲ್ಲಣಗೊಳ್ಳುತ್ತದೆ. ಏಕೆಂದರೆ ಇದು ನ್ಯೂಕ್ಲಿಯರ್ ಯುಗ. ನ್ಯೂಕ್ಲಿಯರ್ ಯುದ್ಧದಲ್ಲಿ ‘ನಾವು ಹೆದರುವುದಿಲ್ಲ, ನಾವೂ ಸಿದ್ಧವಾಗಿದ್ದೇವೆ, ನಮ್ಮ ಶಕ್ತಿ ತೋರಿಸುತ್ತೇವೆ’ ಮೊದಲಾದ ಭಾವಾವೇಶದ ಮಾತುಗಳು ಅಸಂಬದ್ಧವಾಗಿ ಕಾಣುತ್ತವೆ. ಏಕೆಂದರೆ ಅಲ್ಲಿ ಮಾನವ ಜಗತ್ತಿನ ಮುಂದಿರುವುದು ಎರಡೇ ಆಯ್ಕೆಗಳು. ಮನುಕುಲದ ವಿನಾಶ ಮತ್ತು ಉಳಿದುಕೊಂಡಿರುವ ಜನರಿಗೆ ಭವಿಷ್ಯದ ಕರಾಳ ಜಗತ್ತು. ಇದನ್ನು ಜನರಿಗೆ ಮನವರಿಕೆ ಮಾಡುವುದು ಮಾಧ್ಯಮದ ಸಾಂವಿಧಾನಿಕ ಹಾಗೂ ಮಾನವೀಯ-ನೈತಿಕ ಕರ್ತವ್ಯ. ಭಾರತದ ಸುದ್ದಿಮನೆಗಳು, ವಿಶೇಷವಾಗಿ ಕನ್ನಡ ವಾಹಿನಿಗಳು ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತವೆ. ಮತ್ತೊಂದು ದೃಷ್ಟಿಯಲ್ಲಿ ನೋಡಿದಾಗ ಯುದ್ಧೋನ್ಮಾದ ಎನ್ನುವುದು ದೇಶಭಕ್ತಿ, ಐಕ್ಯತೆ-ಅಖಂಡತೆ, ದೇಶಪ್ರೇಮ ಮೊದಲಾದ ಉದಾತ್ತ ಲಕ್ಷಣಗಳನ್ನು ಮೀರಿ ಸಾಮಾನ್ಯ ಜನರನ್ನು ಭಾವಾತಿರೇಕದ ಮನಸ್ಥಿತಿಗೆ ಕೊಂಡೊಯ್ಯುತ್ತದೆ.
ವೃತ್ತಿ ಧರ್ಮ ಮತ್ತು ನೈತಿಕತೆಯ ನೆಲೆಯಲ್ಲಿ
ಇತ್ತೀಚಿನ ಭಾರತ-ಪಾಕ್ ಸಂಘರ್ಷದ ಸಮಯದಲ್ಲಿ ಬಿತ್ತರಿಸಲಾದ ಸುದ್ದಿಗಳು ಮತ್ತು ಅವುಗಳ ಮಾದರಿಯನ್ನು ಗಮನಿಸಿದಾಗ, ಭಾರತದ ಮಾಧ್ಯಮ ಸಮೂಹಗಳು ಇಂತಹ ಸನ್ನಿವೇಶಗಳಲ್ಲಿ ಅನುಸರಿಸಬೇಕಾದ ನಿಯಮಗಳನ್ನು ರೂಪಿಸಿಕೊಳ್ಳದಿರುವುದು ಢಾಳಾಗಿ ಕಾಣುತ್ತದೆ. ಜನತೆಗೆ ಮಾಹಿತಿ-ಸುದ್ದಿ ಒದಗಿಸುವುದಷ್ಟೇ ಮಾಧ್ಯಮಗಳ ಆದ್ಯತೆಯಾಗಕೂಡದು. ಪ್ರಸರಣವಾಗುವ ಮಾಹಿತಿಗಳ ಸತ್ಯಾಸತ್ಯತೆಗಳನ್ನು ಹಲವು ಮೂಲಗಳ ಮೂಲಕ ಶೋಧಿಸುವುದು ಮುಖ್ಯ. ಹಾಗೆಯೇ ‘ನಾವು ವೀಕ್ಷಕರಿಗೆ ಸುಳ್ಳು ಸುದ್ದಿ ನೀಡಕೂಡದು’ ಎಂಬ ಕನಿಷ್ಠ ನೈತಿಕ ಪರಿಜ್ಞಾನ ಇರಲೇಬೇಕಲ್ಲವೇ? ಪ್ರಚಾರ ಮತ್ತು ನೈಜ ಸುದ್ದಿಯ ನಡುವಿನ ಅಂತರವನ್ನು ಅರಿತಿರುವುದು ಅತ್ಯವಶ್ಯ. ದುರಂತ ಎಂದರೆ ಎರಡು ದೇಶಗಳ ನಡುವೆ ಯುದ್ಧ ಸನ್ನಿವೇಶ ಸೃಷ್ಟಿಯಾದಾಗ ಈ ನೈತಿಕ ನಿಯಮಗಳೇ ಮೊದಲು ಬಲಿಯಾಗುತ್ತವೆ. ಪಾಕಿಸ್ತಾನದ ಮಾಧ್ಯಮಗಳೂ ಇದೇ ಕೆಟ್ಟ ಮಾದರಿಯನ್ನು ಅನುಸರಿಸಿರುವುದು ಕಾರ್ಪೊರೇಟ್ ಮಾರುಕಟ್ಟೆಯ ವಿಸ್ತಾರ, ವ್ಯಾಪ್ತಿ ಮತ್ತು ಪ್ರಭಾವದ ಸಂಕೇತವಾಗಿ ಕಾಣುತ್ತದೆ.
ವಾಸ್ತವದಲ್ಲಿ ಇಂತಹ ಸಂದಿಗ್ಧ ಪರಿಸ್ಥಿತಿಗಳು ಪತ್ರಿಕೋದ್ಯಮಕ್ಕೆ, ದೃಶ್ಯ ಮಾಧ್ಯಮಗಳಿಗೆ ತಮ್ಮ ವೃತ್ತಿ ಧರ್ಮವನ್ನು ಕಾಪಾಡಿಕೊಳ್ಳುವ ಸದವಕಾಶವನ್ನು ಒದಗಿಸುತ್ತವೆ. ಆದರೆ ಮತ್ತೊಂದು ರೀತಿಯಲ್ಲಿ ಇದು ಲಾಭಕೋರ ಮನಸ್ಥಿತಿಯನ್ನೂ ಸೃಷ್ಟಿಸುತ್ತದೆ. ಹಾಗಾಗಿಯೇ ನಾಲ್ಕು ದಿನಗಳ ಭಾರತ-ಪಾಕ್ ಸಂಘರ್ಷ ಮಾಧ್ಯಮಗಳಿಗೆ ‘ಟಿಆರ್ಪಿ ಹೆಚ್ಚಿಸಿಕೊಳ್ಳುವ ಉತ್ತಮ ಅವಕಾಶವಾಗಿ’ ಕಾಣುತ್ತದೆ. ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ನ್ಯೂಕ್ಲಿಯರ್ ಅಸ್ತ್ರಗಳನ್ನು ಪಟಾಕಿಗಳ ಹಾಗೆ ಬಿಂಬಿಸಲಾಗುತ್ತದೆ. ಸಾಮಾನ್ಯ ಜನತೆಗೆ ಅದರ ಸಮೂಹನಾಶದ ಲಕ್ಷಣಗಳ ಅರಿವು ಇರುವುದಿಲ್ಲ. ಆದರೆ ಯಾವುದೇ ಸುದ್ದಿಮನೆಯಲ್ಲೂ ನ್ಯೂಕ್ಲಿಯರ್ ಅಸ್ತ್ರ ಬಳಕೆಯ ಇತಿಮಿತಿಗಳೇನು, ಅದು ಉಲ್ಬಣಿಸುವುದರಿಂದ ಆಗುವ ದುಷ್ಪರಿಣಾಮಗಳೇನು, ಅದನ್ನು ತಡೆಗಟ್ಟುವುದು ಹೇಗೆ, ಒಂದು ವೇಳೆ ನ್ಯೂಕ್ಲಿಯರ್ ಸಮರ ಸಂಭವಿಸಿದರೆ ಏನಾಗುತ್ತದೆ ಇತ್ಯಾದಿ ವಿಚಾರಗಳನ್ನು ಚರ್ಚೆ ಗೊಳಪಡಿಸಲಿಲ್ಲ. ಇದು ಮಾಧ್ಯಮಗಳ ಬೇಜವಾಬ್ದಾರಿ ನಡವಳಿಕೆಗೆ ಸಾಕ್ಷಿ.
ಇದೇ ನಡವಳಿಕೆಯನ್ನು ಇನ್ನಿತರ ಪರಿಸ್ಥಿತಿಗಳಲ್ಲೂ ಗಮನಿಸಬಹುದು. ಭಾರತದ, ಅದರಲ್ಲೂ ಕನ್ನಡದ ವಿದ್ಯುನ್ಮಾನ ಸುದ್ದಿಮನೆಗಳು, ಸಮಾಜದ ನಿರ್ಲಕ್ಷಿತ-ಅವಕಾಶವಂಚಿತ-ಶೋಷಿತ ಜನಸಮುದಾಯಗಳನ್ನು ನಿತ್ಯ ಕಾಡುವ ದೌರ್ಜನ್ಯ, ಅತ್ಯಾಚಾರ, ಅಸಮಾನತೆ, ತಾರತಮ್ಯ ಮತ್ತು ಮೇಲ್ಪದರ ಸಮಾಜದ ದಬ್ಬಾಳಿಕೆಗಳನ್ನು ಚರ್ಚೆಯ ವಿಷಯವಾಗಿ ಬಿತ್ತರಿಸುವ ಪ್ರಸಂಗಗಳು ಕಾಣುವುದೇ ಇಲ್ಲ. ರಾಜಕೀಯ ಪಕ್ಷಗಳು, ಸಾಂಸ್ಕೃತಿಕ ಸಂಘಟನೆಗಳು ಮತ್ತು ಮತೀಯವಾದಿಗಳು ಸೃಷ್ಟಿಸುವ ಭಾವಾವೇಶವನ್ನೇ ಮತ್ತಷ್ಟು ವಿಸ್ತರಿಸುವ ಅಥವಾ ಇನ್ನೂ ರೋಚಕವಾಗಿಸುವ ತಮ್ಮ ಪ್ರಯತ್ನದಲ್ಲಿ ಈ ಸುದ್ದಿಮನೆಗಳು ಸಮಾಜದಲ್ಲಿ ಅಲ್ಪಸ್ವಲ್ಪ ಉಳಿದಿರುವ ಸೂಕ್ಷ್ಮ ಮನುಜ ಸಂವೇದನೆಗಳನ್ನೂ ಸಹ ಇಲ್ಲವಾಗಿಸಿಬಿಡುತ್ತವೆ. ಪ್ರತಿಯೊಂದು ಮಾಧ್ಯಮ ಸಮೂಹವೂ ಯಾವುದೋ ಒಂದು ರಾಜಕೀಯ ಪಕ್ಷ-ಸಿದ್ಧಾಂತ ಹಾಗೂ ಅದನ್ನು ಪೋಷಿಸುವ ಕಾರ್ಪೊರೇಟ್ ಮಾರುಕಟ್ಟೆಯ ಅಧೀನದಲ್ಲಿರುವುದರಿಂದ, ಸುದ್ದಿ ಎನ್ನುವುದು ಸ್ಟುಡಿಯೋಗಳಲ್ಲಿ ಉತ್ಪಾದಿಸಲಾಗುವ ಸ್ವ-ಅಭಿಪ್ರಾಯಗಳ ಕಂತೆ ಆಗಿಬಿಡುತ್ತದೆ.
ಪ್ರಜಾಪ್ರಭುತ್ವ ಮತ್ತು ಭವಿಷ್ಯದ ನೆಲೆಯಲ್ಲಿ
ಇದು ಪ್ರಜಾಪ್ರಭುತ್ವವನ್ನು ಮತ್ತಷ್ಟು ದುರ್ಬಲಗೊಳಿಸುವ ಸಾಧ್ಯತೆಗಳೇ ಹೆಚ್ಚು. ರಾಜದೀಪ್ ಸರ್ದೇಸಾಯಿ ತಮ್ಮ ಖಾಸಗಿ ಯೂಟ್ಯೂಬ್ ವಾಹಿನಿಯ ಕಾರ್ಯಕ್ರಮದಲ್ಲಿ ಯುದ್ಧ ಸಮಯದಲ್ಲಿ ಬಿಂಬಿಸಲಾದ ಸುಳ್ಳು ಸುದ್ದಿಗಳ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾ ಕೊನೆಗೆ ಇಡೀ ಮಾಧ್ಯಮ ಸಮೂಹಗಳ ಪರವಾಗಿ ಕ್ಷಮೆ ಯಾಚಿಸಿದ್ದು ಅಪರೂಪದ ಆದರೆ ಶ್ಲಾಘನೀಯ ನಡೆ. ಎಲ್ಲ ವಾಹಿನಿಗಳೂ ಹೀಗೆ ಮಾಡಲು ಸಾಧ್ಯವೇ? ನೋಟು ರದ್ದತಿಯಿಂದ ಕೋವಿಡ್ ಲಾಕ್ಡೌನ್ವರೆಗೆ, ಬಾಲಕೋಟ್ನಿಂದ ಪಹಲ್ಗಾಮ್ವರೆಗೂ ಮಾಧ್ಯಮ ನಡಿಗೆಯನ್ನು ಗಮನಿಸಿದಾಗ, ಮಾರುಕಟ್ಟೆ ವಿಸ್ತರಣೆಯ ಉದ್ದೇಶದಿಂದ ತಮ್ಮ ಸುದ್ದಿಗಳನ್ನು ತಯಾರಿಸುವ ಪರಂಪರೆಯನ್ನು ಗುರುತಿಸಬಹುದು. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಪರಿಣಮಿಸುತ್ತದೆ.
ಬದಲಾಗಿ ಕಾರ್ಪೊರೇಟ್ ಮಾರುಕಟ್ಟೆಯ ಮತ್ತು ಆಡಳಿತಾರೂಢ ಪಕ್ಷಗಳು ಅವಲಂಬಿಸಬಹುದಾದ ಒರಗುಗೋಡೆಗಳಾಗಿ ಮನ್ವಂತರ ಹೊಂದಿವೆ. ಭಾರತ ಹೀಗಿರಲಿಲ್ಲ ಎನ್ನುವುದಂತೂ ಸತ್ಯ. ಇದನ್ನು ಅರಿಯಲು ಶತಮಾನಗಳ ಚರಿತ್ರೆಯನ್ನು ನೋಡಬೇಕಿಲ್ಲ, ಕೇವಲ ಐವತ್ತು ವರ್ಷಗಳಷ್ಟು ಹಿಂದಕ್ಕೆ ಜಾರಿದರೆ, ತುರ್ತುಪರಿಸ್ಥಿತಿಯ ಸಂದರ್ಭ ನಮ್ಮೆದುರು ನಿಲ್ಲುತ್ತದೆ. ಆಗಲೂ ಪತ್ರಿಕಾ ಮಾಧ್ಯಮಗಳ ಮೇಲೆ ಔದ್ಯಮಿಕ ಆಧಿಪತ್ಯ ಇತ್ತು ಆದರೆ ಅಲ್ಲಿ ‘ಪತ್ರಿಕಾ ಧರ್ಮ’ ಎನ್ನುವ ಔದಾತ್ಯ ಜೀವಂತವಾಗಿತ್ತು. ‘ಜನಪರ ಕಾಳಜಿ ಅಥವಾ ಸಮಾಜಮುಖಿ’ ಎನ್ನುವ ಉನ್ನತಾದರ್ಶಗಳು ಉಸಿರಾಡುತ್ತಿದ್ದವು. ಔದ್ಯಮಿಕ ಹಿತಾಸಕ್ತಿ ಇದ್ದಿತಾದರೂ, ಸಾಮಾನ್ಯ ಜನತೆಗೆ ವಾಸ್ತವ ಸುದ್ದಿ ತಿಳಿಸುವ ವೃತ್ತಿ ಧರ್ಮವನ್ನು ಮೀರಿ ಇರಲಿಲ್ಲ. ಐವತ್ತು ವರ್ಷಗಳಲ್ಲಿ ನಾವು ಯಾವ ಹಾದಿಯಲ್ಲಿ ಸಾಗಿ ಬಂದಿದ್ದೇವೆ?
ವರ್ತಮಾನದ ಸಮಾಜಕ್ಕೆ, ಭವಿಷ್ಯದ ತಲೆಮಾರಿಗೆ, ಮಿಲೇನಿಯಂ ಸಮೂಹಕ್ಕೆ ಮತ್ತು ಇಂದಿಗೂ ಮಾಧ್ಯಮಗಳಲ್ಲಿ ಹೇಳುವುದನ್ನೇ ಪರಮಸತ್ಯ ಎಂದು ಭಾವಿಸುವ ಕೋಟ್ಯಂತರ ಜನರಿಗೆ, ಯಾವ ಸಂದೇಶವನ್ನು ಬಿಟ್ಟುಹೋಗಲಿದ್ದೇವೆ? ಇದು ಕೇವಲ ಮುದ್ರಣ-ದೃಶ್ಯ ಮಾಧ್ಯಮಗಳ ಸಂಪಾದಕೀಯ ಮಂಡಲಿ ಅಥವಾ ಮಾಲಕತ್ವವನ್ನು ಕಾಡಬೇಕಾದ ಪ್ರಶ್ನೆಯಲ್ಲ. ಬದಲಾಗಿ ವಿಕಸಿತ ಭಾರತ ಆಗಲು ಮುನ್ನಡೆದಿರುವ ಭಾರತದ ಚಿಂತನಾಶೀಲ ಸಮಾಜವನ್ನು, ಕಲಿತ ಜನತೆಯನ್ನು, ಬೌದ್ಧಿಕ ವಲಯಗಳನ್ನು ಹಾಗೂ ಬಹುಮುಖ್ಯವಾಗಿ ರಾಜಕೀಯ ಪಕ್ಷಗಳನ್ನು ಕಾಡಬೇಕಾದ ಜಟಿಲ ಸವಾಲು. ಈ ನಿಟ್ಟಿನಲ್ಲಿ ನಿರ್ಬಂಧಕವಾಗದ, ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳದ ಮಾಧ್ಯಮ ಸಂಹಿತೆಯನ್ನು ಸ್ವತಃ ಮಾಧ್ಯಮ ಸಮೂಹಗಳೇ ರೂಪಿಸಿಕೊಳ್ಳುವುದು ಜಾಣತನವಷ್ಟೇ ಅಲ್ಲ, ಪ್ರಬುದ್ಧತೆಯ ದ್ಯೋತಕವೂ ಆಗಿ ಕಾಣುತ್ತದೆ.