ಉಗ್ರರ ಅಟ್ಟಹಾಸಕ್ಕೆ ಭಾರತೀಯರ ಬಲಿ

ಪಾಕಿಸ್ತಾನವನ್ನು ನೆಲೆಯಾಗಿಸಿಕೊಂಡು ನಿರಂತರ ಕುಕೃತ್ಯದಲ್ಲಿ ತೊಡಗಿಸಿಕೊಂಡಿರುವ ಲಷ್ಕರ್ ಸಂಘಟನೆಯ ಉಗ್ರಗಾಮಿಗಳು ಇಪ್ಪತ್ತೈದು ಜನ ಭಾರತೀಯರು, ಒಬ್ಬ ನೇಪಾಳಿ ನಾಗರಿಕನನ್ನು ಅತ್ಯಂತ ವಿಕೃತವಾಗಿ ಕೊಂದು ಹಾಕಿದ್ದಾರೆ. ಪಾಕಿಸ್ತಾನ ಸರಕಾರ ಈ ಕೃತ್ಯಕ್ಕೆ ತಾನು ಹೊಣೆಗಾರನಲ್ಲ ಎಂದು ಹೇಳಿಕೊಂಡಿದೆ. ಆದರೆ ಲಷ್ಕರ್ ಸಂಘಟನೆಗೆ ಆಶ್ರಯ ನೀಡಿರುವ ಆ ದೇಶ ಈ ಪಾಪಕೃತ್ಯದಲ್ಲಿ ಪರೋಕ್ಷ ಪಾಲುದಾರ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.
ಕಳೆದ ಹನ್ನೊಂದು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರಕಾರ ಕಾಶ್ಮೀರ ಕಣಿವೆಯಲ್ಲಿ ಶಾಂತಿ ನೆಲೆಸಿದೆ ಎಂದು ಮತ್ತೆ ಮತ್ತೆ ಹೇಳಿಕೊಂಡಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮಾತುಗಳನ್ನು ಬಲವಾಗಿ ನಂಬಿದ ಪ್ರವಾಸಿಗರು ಈ ದುರಂತವನ್ನು ಎದುರಿಸುವಂತಾಗಿದೆ. ಕೇಂದ್ರ ಸರಕಾರ ಜಮ್ಮು-ಕಾಶ್ಮೀರದಲ್ಲಿನ 370ನೆ ಕಲಂ ರದ್ದು ಪಡಿಸಿದ ಮೇಲೆ ಪಾಕಿಸ್ತಾನ ಮತ್ತು ಅಲ್ಲಿ ನೆಲೆ ನಿಂತ ಉಗ್ರಗಾಮಿ ಸಂಘಟನೆಗಳು ಕೆರಳಿದ್ದವು. ಪಾಕ್ ಆಕ್ರಮಿತ ಪ್ರದೇಶ ತನಗೆ ಸೇರಿದ್ದು ಎಂಬ ಭ್ರಮೆಯಲ್ಲಿದ್ದ ಪಾಕಿಸ್ತಾನ ಮೊದಲಿನಿಂದಲೂ ಚಿತಾವಣೆ ಮಾಡುತ್ತಲೇ ಇತ್ತು.
ಜಮ್ಮು-ಕಾಶ್ಮೀರ ಭಾರತದ ಸ್ವರ್ಗ ಎಂಬ ಪ್ರತೀತಿ ಇರುವುದರಿಂದ ಸಹಜವಾಗಿಯೇ ಪ್ರವಾಸಿಗರು ಅಲ್ಲಿಗೆ ಹೋಗಲು ತುದಿಗಾಲ ಮೇಲೆ ನಿಂತಿದ್ದರು. ಪ್ರವಾಸಿಗರಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಿದ ಮೇಲೆ ಅವರಿಗೆ ಸೂಕ್ತ ರಕ್ಷಣೆ ನೀಡುವುದು ಕೇಂದ್ರ ಮತ್ತು ರಾಜ್ಯ ಸರಕಾರದ ಕರ್ತವ್ಯ. ಕಾಶ್ಮೀರ ಕಣಿವೆಯಲ್ಲಿ ಸಂಪೂರ್ಣ ಶಾಂತಿ ನೆಲೆಸಿದೆ ಎಂದು ಭಾವಿಸಿರುವ ಪ್ರವಾಸಿಗರು ಅಲ್ಲಿಗೆ ಹೋಗಿ ಬರುತ್ತಲೇ ಇದ್ದರು.
ಕಳೆದ 22ನೇ ತಾರೀಕಿನಂದು ಎಂದಿನಂತೆ ಪ್ರವಾಸಿಗರು ಕಾಶ್ಮೀರ ಕಣಿವೆಗೆ ತೆರಳಿದ್ದಾರೆ. ಕಾಶ್ಮೀರ ಪ್ರದೇಶದ ಪಹಲ್ಗಾಮ್ ಬಳಿಯ ಬೈಸರನ್ ಕಣಿವೆ ಬಳಿ ಪ್ರವಾಸಿಗರು ಸಂಭ್ರಮಿಸುತ್ತಿರುವಾಗ ಶಸ್ತ್ರಧಾರಿ ಉಗ್ರಗಾಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಒಬ್ಬ ನೇಪಾಳಿ ಇಪ್ಪತ್ತೈದು ಜನ ಭಾರತೀಯರು ಸೇರಿದಂತೆ ಒಟ್ಟು ಇಪ್ಪತ್ತಾರು ಜನ ಅಮಾಯಕರನ್ನು ಭೀಕರವಾಗಿ ಕೊಂದು ವಿಕೃತಿ ಮೆರೆದಿದ್ದಾರೆ. ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದೆ ಇರುವುದು ಎದ್ದು ಕಾಣುತ್ತಿತ್ತು ಎಂದು ಪ್ರವಾಸಿಗರು ಹೇಳಿಕೊಂಡಿದ್ದಾರೆ. ಕಳೆದ ಹನ್ನೊಂದು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಹಲವು ವರ್ಷಗಳಿಂದ ಗೃಹ ಮಂತ್ರಿಯಾಗಿ ಕಾರ್ಯ ನಿರ್ವಹಿಸಿ ಅಪಾರ ಅನುಭವ ಪಡೆದಿರುವ ಅಮಿತ್ ಶಾ ಅವರಿಗೆ ಗುಪ್ತಚರ ಇಲಾಖೆ ಮತ್ತು ಇನ್ನಿತರ ಏಜೆನ್ಸಿಗಳು ಉಗ್ರಗಾಮಿಗಳ ಚಲನವಲನದ ಮಾಹಿತಿ ಖಂಡಿತಾ ನೀಡಿರುತ್ತಾರೆ. ಕಾಶ್ಮೀರ ಕಣಿವೆ ಹೇಳಿಕೇಳಿ ಭಯೋತ್ಪಾದನಾ ಚಟುವಟಿಕೆಗಳಿಗೆ ಹಲವು ಬಾರಿ ಸುದ್ದಿ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರೆ ಹಲವು ಜನರ ಜೀವ ಉಳಿಸಬಹುದಾಗಿತ್ತು. ಜಮ್ಮು-ಕಾಶ್ಮೀರ ಪ್ರವಾಸಕ್ಕೆ ಯೋಗ್ಯ ಸ್ಥಳ ಎನಿಸಿಕೊಂಡಿದೆ ಎಂಬುದನ್ನು ಖಾತ್ರಿ ಪಡಿಸಿಕೊಂಡ ಮೇಲೆ ಅವಕಾಶ ನೀಡಬಹುದಾಗಿತ್ತು. ಕೇಂದ್ರ ಸರಕಾರ ಸಮರ್ಪಕ ಭದ್ರತಾ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿದೆ ಎಂಬುದು ಸ್ವಯಂ ಸ್ಪಷ್ಟ. ಈಗ ಸರಕಾರದ ವೈಫಲ್ಯಗಳ ಕುರಿತು ಆಡಿಕೊಳ್ಳುವ ಸಮಯವಲ್ಲ. ದೇಶ ಒಗ್ಗಟ್ಟಾಗಿ ಉಗ್ರರ ಹುಟ್ಟಡಗಿಸಲು ಮುಂದಾಗಬೇಕಿದೆ. ಭಾರತ ದೇಶ ಭಯೋತ್ಪಾದನಾ ಚಟುವಟಿಕೆಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದು ಸಾಬೀತುಪಡಿಸುವ ಕ್ಷಣ ಇದಾಗಿದೆ.
ಕೇಂದ್ರ ಸರಕಾರ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆ ಉಗ್ರರ ಅಡಗು ತಾಣಗಳನ್ನು ಪತ್ತೆ ಹಚ್ಚಿ ಅವರನ್ನು ನಿರ್ನಾಮ ಮಾಡುವ ಪಣ ತೊಡಗಬೇಕಿದೆ. ಉಗ್ರರ ಈ ಹೀನ ಕೃತ್ಯವನ್ನು ಭಾರತವೂ ಸೇರಿದಂತೆ ಎಲ್ಲೆಡೆ ಖಂಡಿಸಿದ್ದಾರೆ. ಬೇರೆ ದೇಶಗಳು ಭಾರತಕ್ಕೆ ಬೆಂಬಲ ಸೂಚಿಸಿವೆ. ಕಾಶ್ಮೀರ ರಾಜ್ಯದಲ್ಲಿ ಬಂದ್ಗೆ ಕರೆ ಕೊಡಲಾಗಿದೆ. ಸಂತ್ರಸ್ತರು ಮತ್ತು ಅವರ ಕುಟುಂಬದವರ ರೋದನದಲ್ಲಿ ಇಡೀ ದೇಶವೇ ಒಂದಾಗಿದೆ. ತಮ್ಮ ಮನೆಯ ಮಕ್ಕಳನ್ನು ಕಳೆದುಕೊಂಡ ಶೋಕ ಅನುಭವಿಸುತ್ತಿದ್ದಾರೆ. ಭಾರತೀಯರ ಆ ಜೀವಗಳ ಸಾವು ದೇಶದ ಸ್ವಾಭಿಮಾನವನ್ನು ಕೆರಳಿಸಿದೆ. ದೇಶ ಒಂದಾಗಿ ಕಂಬನಿ ಮಿಡಿಯುತ್ತಿದೆ.
ಆದರೆ ಸದಾ ಕೋಮುವಾದಿ ಕಾಮಾಲೆ ಕಣ್ಣುಗಳಿಂದ ಬದುಕನ್ನು ವಿಭಜಿಸಿ ನೋಡುವ ಕೆಲ ಮಾಧ್ಯಮ ಸಂಸ್ಥೆಗಳು ಮತ್ತು ವ್ಯಕ್ತಿಗಳು ಭಾರತದ ಅಖಂಡತೆಗೆ ಧಕ್ಕೆ ತರುತ್ತಿವೆ. ವಿಕೃತವಾಗಿ ಕೊಂದವರು ಭಯೋತ್ಪಾದಕರು, ಕೇವಲ ಭಯೋತ್ಪಾದಕರು ಮತ್ತು ತಮ್ಮ ಅಮೂಲ್ಯ ಜೀವ ಕಳೆದುಕೊಂಡವರು ಅಪ್ಪಟ ಭಾರತೀಯರು. ಆ ಕಾರಣಕ್ಕೆ ಸಮಸ್ತ ಭಾರತ ಉಗ್ರರ ಅಟ್ಟಹಾಸವನ್ನು ಖಂಡಿಸಿದೆ ಮತ್ತು ಸಂತ್ರಸ್ತರ ಹತ್ಯೆ, ಅವರ ಕುಟುಂಬದವರ ದುಃಖದಲ್ಲಿ ಭಾಗಿಯಾಗಿದೆ. ಭಾರತದ ಯಾವೊಬ್ಬ ನಾಗರಿಕನೂ ಸಾವಿನ ಮನೆಯಲ್ಲಿ ರಾಜಕಾರಣ ಮಾಡುತ್ತಿಲ್ಲ. ಪ್ರತಿಪಕ್ಷಗಳು ಉಗ್ರರ ಅಟ್ಟಹಾಸವನ್ನು ಖಂಡಿಸಿ ಕೇಂದ್ರ ಸರಕಾರದ ಜೊತೆಗೆ ನಿಂತಿವೆ. ಭದ್ರತಾ ವೈಫಲ್ಯದ ಕುರಿತು ಕಾಳಜಿ ಪೂರ್ವಕವಾಗಿ ಪ್ರಸ್ತಾಪಿಸಿವೆ ಹೊರತು, ಕಟು ಟೀಕೆಯಂತೆ ಅಲ್ಲ. ಮುಂಜಾಗೃತಾ ಕ್ರಮವಾಗಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರೆ ಸಾವು ನೋವಿನ ಪ್ರಮಾಣ ಕಡಿಮೆಯಾಗಬಹುದಿತ್ತು ಎಂಬುದು ಎಲ್ಲರ ಕಾಳಜಿಯಷ್ಟೇ. ಉಗ್ರರ ನಿರ್ನಾಮ ಮಾಡದ ಹೊರತು ಅವರ ನೀಚ ಕೃತ್ಯಗಳನ್ನು ನಿಲ್ಲಿಸಲಾಗದು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಗ್ರರ ನಿರ್ನಾಮ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಇಡೀ ಭಾರತವೇ ಉಗ್ರರ ದಾಳಿಗೆ ಬೆಚ್ಚಿ ಬಿದ್ದು ಶೋಕ ತಪ್ತವಾಗಿರುವಾಗ, ಭಾರತೀಯ ಜನತಾ ಪಕ್ಷದ ಕೆಲ ಅರೆಬೆಂದ ಮನಸ್ಸುಗಳು ಹಿಂದೂ-ಮುಸ್ಲಿಮ್ ಭೇದದ ಮಾತುಗಳನ್ನು ಆಡುತ್ತಿರುವುದು ಅತ್ಯಂತ ಖೇದಕರ ಸಂಗತಿ. ಉಗ್ರಗಾಮಿಗಳಿಗೆ ಜಾತಿ, ಧರ್ಮ, ಮತ ಇರುವುದಿಲ್ಲ. ಅವರು ರಕ್ತ ಪಿಪಾಸುಗಳು. ಭಯೋತ್ಪಾದಕರನ್ನು ಕಾನೂನು ಕಟ್ಟಳೆಗಳು ಮಾತ್ರವಲ್ಲ ಆ ದೇವರೂ ಕ್ಷಮಿಸುವುದಿಲ್ಲ. ನೀಚ ಕೃತ್ಯ ಎಸಗುವ ಉಗ್ರರನ್ನು, ಭಾರತದ ಬದುಕಿನ ಭಾಗವಾಗಿ ಸೌಹಾರ್ದ ಜೀವನ ನಡೆಸುತ್ತಿರುವ ಮುಸ್ಲಿಮ್ ಸಮುದಾಯದ ಜೊತೆಗೆ ನಂಟು ಕಲ್ಪಿಸಿ ನಾಲಿಗೆ ಹರಿ ಬಿಡುತ್ತಿರುವ ಮತಾಂಧ ಮಾಧ್ಯಮದವರನ್ನು ಮತ್ತು ಕೆಲ ವಿಕೃತ ಮನಸ್ಸಿನವರ ವಿರುದ್ಧ ಕ್ರಮ ಜರುಗಿಸಬೇಕಿದೆ.
ಕಾಶ್ಮೀರ ಕಣಿವೆಯಲ್ಲಿ ಪ್ರವಾಸದಲ್ಲಿ ಇದ್ದ ದೇಶದ ವಿವಿಧ ಭಾಗದ ಪ್ರವಾಸಿಗರನ್ನು ಕಣ್ಣ ರೆಪ್ಪೆಯಾಗಿ ಕಾಪಾಡಿದ್ದು ಸ್ಥಳೀಯ ಮುಸ್ಲಿಮ್ ಬಂಧುಗಳು. ಪಹಲ್ಗಾಮ್ ದಾಳಿಯ ಸಂದರ್ಭದಲ್ಲಿ, ಪ್ರವಾಸಿಗರನ್ನು ರಕ್ಷಿಸಲು ಉಗ್ರರ ಬಂದೂಕು ಕಿತ್ತುಕೊಳ್ಳಲು ಯತ್ನಿಸಿ ಜೀವ ಕಳೆದುಕೊಂಡ ಸೈಯದ್ ಆದಿಲ್ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಅಪ್ಪಟ ಭಾರತೀಯ ಎಂಬುದು ಈ ಮತಾಂಧರು ಮರೆಯುತ್ತಾರೆ. ಕರ್ನಾಟಕದ ಪ್ರವಾಸಿ, ಶಿವಮೊಗ್ಗ ಮೂಲದ ಮಂಜುನಾಥ್ ರಾವ್ ಅವರನ್ನು ಉಗ್ರರು ಗುಂಡಿಟ್ಟು ಕೊಲ್ಲುತ್ತಾರೆ. ಭಯಭೀತರಾದ ಮಂಜುನಾಥ್ ರಾವ್ ಅವರ ಮಗ ಮತ್ತು ಪತ್ನಿಯನ್ನು ಸುರಕ್ಷಿತ ಸ್ಥಳಕ್ಕೆ ತಲುಪಲು ನೆರವು ನೀಡಿದ ಸ್ಥಳೀಯ ವ್ಯಕ್ತಿ ಮುಸ್ಲಿಮ್ ಸಮುದಾಯಕ್ಕೆ ಸೇರಿದವರು. ಗುಜರಾತಿನ ಹನ್ನೊಂದು ಜನ ಹಿಂದೂಗಳನ್ನು ತನ್ನ ಜೀವ ಪಣಕ್ಕಿಟ್ಟು ರಕ್ಷಿಸಿದ ನಝಕತ್ ಅಲಿ ಮುಸ್ಲಿಮ್ ಸಮುದಾಯದ ಸ್ಥಳೀಯ ವ್ಯಾಪಾರಿ. ಕೊಂದವರು, ನೀಚತನ ಪ್ರದರ್ಶಿಸಿದವರು ಭಯೋತ್ಪಾದಕರಾದರೆ ಪರಸ್ಪರ ಬೆಂಬಲಕ್ಕೆ ನಿಂತು ಕಾಪಾಡಿದವರು ಅಪ್ಪಟ ಮನುಷ್ಯರು ಮತ್ತು ಭಾರತೀಯರು. ಮನುಷ್ಯ ಸಂವೇದನೆ ಅವರಲ್ಲಿ ಜೀವಂತವಾಗಿದ್ದುದರಿಂದಲೇ ಜಾತಿ, ಧರ್ಮದ ಗಡಿ ಗೆರೆ ಮೀರಿ ಗಂಡಾಂತರದ ಗಳಿಗೆಯಲ್ಲೂ ಮನುಷ್ಯತ್ವ ಮೆರೆದಿದ್ದಾರೆ. ಉಗ್ರರು ದೇವರು ಧರ್ಮದ ಎಲ್ಲೆಕಟ್ಟುಗಳನ್ನು ಮೀರಿದ ರಾಕ್ಷಸರು. ಉಗ್ರರನ್ನು ಯಾವ ಧರ್ಮದೊಂದಿಗೂ ಸಮೀಕರಿಸಬಾರದು. ಹಾಗೆ ಮಾಡಿದರೆ ಆ ಧರ್ಮದ ಆದರ್ಶಗಳಿಗೆ ಅಪಮಾನ ಮಾಡಿದಂತೆ.
ಕಳೆದ ಏಳುವರೆ ದಶಕಗಳಿಂದ ಭಾರತೀಯರಾದ ನಾವು ಒಟ್ಟಾಗಿ, ಸೌಹಾರ್ದಯುತವಾಗಿ ಬದುಕುತ್ತಿದ್ದೇವೆ. ಹಿಂದೂ, ಮುಸ್ಲಿಮ್, ಸಿಖ್, ಜೈನ್, ಬೌದ್ಧ ಮತ್ತು ಕ್ರಿಶ್ಚಿಯನ್ನರು ಅಣ್ಣ ತಮ್ಮಂದಿರಂತೆ ಕಷ್ಟ ಸುಖಗಳಲ್ಲಿ ಪರಸ್ಪರ ನೆರವಿಗೆ ನಿಂತು ಸುಂದರ ಬದುಕು ಕಟ್ಟಿಕೊಂಡಿದ್ದೇವೆ. ವೈವಿಧ್ಯತೆಯಲ್ಲಿ ಏಕತೆ ಮೆರೆದಿದ್ದೇವೆ. ಭಾಷೆ, ಸಂಸ್ಕೃತಿ, ಆಚಾರ ವಿಚಾರ ಬೇರೆ ಬೇರೆಯಾಗಿದ್ದರೂ ಅಂತರಾಳದ ಮನುಷ್ಯತ್ವ ಪ್ರೀತಿ ವಿಶ್ವಾಸದ ಸಹ ಪಯಣಿಗರನ್ನಾಗಿಸಿದೆ. ಎಲ್ಲ ಧರ್ಮಗಳಲ್ಲಿಯೂ ಕೆಟ್ಟವರಿದ್ದಾರೆ. ಹಾಗೆಯೇ ಎಲ್ಲ ಧರ್ಮಗಳಲ್ಲಿಯೂ ಮಾನವತೆಯ ಒರತೆ ಉಳಿಸಿಕೊಂಡ ಒಳ್ಳೆಯವರಿದ್ದಾರೆ. ಕೆಟ್ಟವರ ಶಿಕ್ಷೆಗೆ ಕಾನೂನು ಕಟ್ಟಳೆಗಳಿವೆ. ಒಳ್ಳೆಯವರ ಒಗ್ಗಟ್ಟಿಗೆ ಸುಂದರ ಬದುಕಿದೆ. 1947ರ ಆಸುಪಾಸಿನ ದಿನಮಾನಗಳಲ್ಲಿ ಭಾರತದಲ್ಲಿ ವಿಲೀನವಾಗಲು ಹೈದರಾಬಾದಿನ ನಿಜಾಮನಿಗೂ ಇಷ್ಟವಿರಲಿಲ್ಲ. ಖಾಸಿಂ ರಜವಿ ಎಂಬ ಸೇನಾಧಿಪತಿ ರಾಜನಲ್ಲಿ ಅಧಿಕಾರದ ದಾಹ ಹುಟ್ಟಿಸಿ ದಂಗೆ ಆರಂಭಿಸುತ್ತಾನೆ. ಆತನ ದಂಗೆಯ ಉದ್ದೇಶ ಆರಾಜಕತೆ ಸೃಷ್ಟಿಸುವುದು. ಅಮಾಯಕ ಹಿಂದೂಗಳ ಮಾರಣ ಹೋಮ ನಡೆಸುತ್ತಾನೆ. ಆದರೆ ಸ್ಥಳೀಯ ಮಟ್ಟದಲ್ಲಿ ಅಸಂಖ್ಯಾತ ಹಿಂದೂ ಬಾಂಧವರನ್ನು ಮುಸ್ಲಿಮ್ ಬಂಧುಗಳು ರಕ್ಷಿಸುತ್ತಾರೆ. ಒಬ್ಬ ಮುಸ್ಲಿಮ್ ಅತ್ತೆಯಂತೂ ಹಿಂದೂ ಯುವಕನನ್ನು ರಕ್ಷಿಸಲು ತನ್ನ ಸೊಸೆಯೊಂದಿಗೆ ಆ ಯುವಕನನ್ನು ಮಲಗಿಸುತ್ತಾಳೆ. ರಜಾಕಾರರು ಆ ಯುವಕನನ್ನು ಕೊಲ್ಲಲು ಹುಡುಕಿ ಬಂದಾಗ, ಮಗ ಸೊಸೆ ಮಲಗಿದ್ದಾರೆಂದು ಹೇಳಿ ಅವರನ್ನು ಸಾಗ ಹಾಕುತ್ತಾಳೆ. ಮತಾಂಧ ಕಣ್ಣುಗಳು ಮಾನವೀಯ ಸಂದರ್ಭಗಳನ್ನು ಗಮನಿಸುವುದೇ ಇಲ್ಲ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತವರ ಪಕ್ಷದ ಇನ್ನಿತರ ಮುಖಂಡರು ಎಲ್ಲ ಸಂದರ್ಭವನ್ನು ಚುನಾವಣಾ ಸಮಯ ಎಂದು ಭಾವಿಸಬಾರದು. ಚುನಾವಣೆಗೂ ಮೀರಿದ ಬದುಕು ಇದೆಯೆಂಬುದು ಅರ್ಥ ಮಾಡಿಕೊಳ್ಳಬೇಕು.
ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದ ಕರ್ನಾಟಕದ 178 ಜನರನ್ನು ವಿಶೇಷ ವಿಮಾನದಲ್ಲಿ ಸುರಕ್ಷಿತವಾಗಿ ತಾಯಿ ನಾಡಿಗೆ ತಲುಪಿಸುವಲ್ಲಿ ಕರ್ನಾಟಕ ಸರಕಾರ ಯಶಸ್ವಿಯಾಗಿದೆೆ. ಕಾಶ್ಮೀರ ಕಣಿವೆಯಲ್ಲಿನ ಉಗ್ರರ ದಾಳಿಯ ಸುದ್ದಿ ತಿಳಿಯುತ್ತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ತಮ್ಮ ಸಚಿವ ಸಂಪುಟದ ಸದಸ್ಯ, ಕಾರ್ಮಿಕ ಮಂತ್ರಿ ಸಂತೋಷ್ ಲಾಡ್ ಅವರನ್ನು ಅಧಿಕಾರಿಗಳ ತಂಡದೊಂದಿಗೆ ಕಾಶ್ಮೀರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಉಗ್ರರ ದಾಳಿಗೆ ಗುರಿಯಾಗಿ ಜೀವ ಕಳೆದುಕೊಂಡ ಶಿವಮೊಗ್ಗದ ಮಂಜುನಾಥ್ ರಾವ್ ಮತ್ತು ಬೆಂಗಳೂರು ನಗರದ ಮತ್ತೀಕೆರೆ ನಿವಾಸಿ ಭರತ್ ಭೂಷಣ್ ಅವರ ಮೃತ ದೇಹಗಳನ್ನು ಅವರ ಕುಟುಂಬಗಳಿಗೆ ತಲುಪಿಸಿ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ. ದುಃಖದ ಮಡುವಿನಲ್ಲಿ ಮುಳುಗಿದ ಮೃತರ ಹೆಂಡತಿ ಮಕ್ಕಳನ್ನು, ತಂದೆ ತಾಯಿಯವರನ್ನು ಸಾಂತ್ವನ ಹೇಳಿ ನಿಮ್ಮ ಜೊತೆಗೆ ನಾವಿದ್ದೇವೆ ಎಂಬ ಭರವಸೆ ಮೂಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಕಾಲಿಕ ಸ್ಪಂದನ ಮತ್ತು ಸಂತೋಷ್ ಲಾಡ್ ಅವರ ಕ್ರಿಯಾಶೀಲತೆ ಮೆಚ್ಚುಗೆ ಗಳಿಸಿವೆ.
ಭಾರತೀಯ ಜನತಾ ಪಕ್ಷದ ಕೆಲ ಮತಾಂಧ ಮನಸ್ಸುಗಳು ಈ ಘಟನೆಯಲ್ಲಿ ಹಿಂದೂ-ಮುಸ್ಲಿಮ್ ಭೇದ ಕಾಣಲು ಪ್ರಯತ್ನಿಸುತ್ತಿವೆ. ವಿಕೃತ ಮಾಧ್ಯಮಗಳು ತುಪ್ಪ ಸುರಿಯುತ್ತಿವೆ. ಪಾಕಿಸ್ತಾನ ಭಾರತದ ಶತ್ರುರಾಷ್ಟ್ರ ಮಾತ್ರ. ಆ ರಾಷ್ಟ್ರದ ನಾಗರಿಕರು ಮುಸ್ಲಿಮ್ ಸಮುದಾಯಕ್ಕೆ ಸೇರಿರಬಹುದು. ಹಾಗಂತ ಭಾರತದ ಮುಸ್ಲಿಮ್ ಸಮುದಾಯಕ್ಕೂ ಪಾಕಿಸ್ತಾನದವರಿಗೂ ನಂಟು ಕಲ್ಪಿಸುವುದು ವಿಕೃತಿಯೇ ಸರಿ. ಭಾರತದಲ್ಲಿ ಇರುವ ಎಲ್ಲರೂ ಭಾರತೀಯರು. ಉಗ್ರರು ಭೀಕರವಾಗಿ ಕೊಂದಿದ್ದು ಭಾರತೀಯರನ್ನು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದುಬೈ, ಮಸ್ಕತ್ಸೇರಿದಂತೆ ಇನ್ನಿತರ ದೇಶಗಳಿಗೆ ಭೇಟಿ ನೀಡಿದಾಗ ಸಂಭ್ರಮ ಪಡುವ ಬಿಜೆಪಿ ಮಂದಿ ಭಾರತೀಯ ಮುಸ್ಲಿಮ್ ಸಮುದಾಯವನ್ನು ಸದಾ ಗುಮಾನಿಯಿಂದ ನೋಡುತ್ತಿರುತ್ತಾರೆ. ಅರಬ್ ರಾಷ್ಟ್ರಗಳಲ್ಲಿ ಇರುವವರು ಮುಸ್ಲಿಮ್ ಧರ್ಮದ ಆಚರಣೆ ಮಾಡುತ್ತಿರುತ್ತಾರೆ ಎಂದ ಮಾತ್ರಕ್ಕೆ ಅವರು ಪಾಕಿಸ್ತಾನವನ್ನು ಬೆಂಬಲಿಸುತ್ತಾರೆ ಎಂದಲ್ಲ. ಅವರೆಲ್ಲ ಅರಬ್ ರಾಷ್ಟ್ರಗಳ ಕಾನೂನು ಕಟ್ಟಳೆಗಳಿಗೆ ಬದ್ಧರಾಗಿರುತ್ತಾರೆ.
ಭಾರತಕ್ಕೆ ಕಂಟಕವಾಗಿ ಪರಿಣಮಿಸಿರುವ ಪಾಕ್ನಲ್ಲಿ ನೆಲೆ ನಿಂತ ಉಗ್ರಗಾಮಿಗಳನ್ನು ತಕ್ಷಣವೇ ಪತ್ತೆ ಹಚ್ಚಿ ತಕ್ಕ ಪಾಠ ಕಲಿಸುವುದು ಕೇಂದ್ರ ಸರಕಾರದ ಮೊದಲ ಆದ್ಯತೆಯಾಗಬೇಕು. ಉಗ್ರರನ್ನು ಬೆಂಬಲಿಸುವ ಯಾರೇ ಆಗಿರಲಿ ಅವರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಆದರೆ, ಭಾರತೀಯ ಮುಸ್ಲಿಮ್ ಸಮುದಾಯವನ್ನು ಸದಾ ಕಟಕಟೆಯಲ್ಲಿ ನಿಲ್ಲಿಸಿ ಗುಮಾನಿಯಿಂದ ನೋಡುವುದು ನಿಲ್ಲಬೇಕು. ವಿಶೇಷವಾಗಿ ಊಹೆ ಮಾಡಿ ಮಾತನಾಡುವ ಮತಾಂಧರನ್ನು ಶಿಕ್ಷಿಸಬೇಕು.
ನರೇಂದ್ರ ಮೋದಿಯವರು ಭಾರತದಂತಹ ದೊಡ್ಡ ದೇಶದ ಪ್ರಧಾನಮಂತ್ರಿ. ಭದ್ರತಾ ವೈಫಲ್ಯ ಆಗಿದ್ದರೆ ವಿನಮ್ರತೆಯಿಂದ ಒಪ್ಪಿಕೊಳ್ಳಬೇಕು. ಈ ಹಿಂದೆ ಯುಪಿಎ ಸರಕಾರ ಅಧಿಕಾರದಲ್ಲಿ ಇದ್ದಾಗಲೂ ಭದ್ರತಾ ಲೋಪದಿಂದ ಉಗ್ರರ ದಾಳಿ ನಡೆದು ಸಾವು ನೋವು ಸಂಭಸಿವೆ. ಘಟನೆ ಸಂಭವಿಸಿದಾಗ ಒಂದು ಸಂವೇದನಾಶೀಲ ಸರಕಾರ ತಕ್ಷಣ ಕ್ರಿಯಾಶೀಲವಾಗಿ ಉಗ್ರರನ್ನು ನಿರ್ನಾಮ ಮಾಡಬೇಕು. ಮಾತಿಗಿಂತ ಕೃತಿ ಸಂತ್ರಸ್ತರಿಗೆ ಹೆಚ್ಚು ಸಮಾಧಾನ ತಂದು ಕೊಡುತ್ತದೆ. ಸರಕಾರ ಬಿಜೆಪಿಯದು. ಅಧಿಕಾರ ಅವರ ಕೈಯಲ್ಲಿದೆ. ಉಗ್ರರನ್ನು ನಿರ್ನಾಮ ಮಾಡಬೇಕಾದವರು ಅವರೇ. ಎಲ್ಲಕ್ಕೂ ಮಿಗಿಲಾಗಿ ಆಧುನಿಕ ವಿಜ್ಞಾನ-ತಂತ್ರಜ್ಞಾನದ ಯುಗದಲ್ಲಿ ನಾವು ಇದ್ದೇವೆ. ಕೇಂದ್ರ ಸರಕಾರ ಮನಸ್ಸು ಮಾಡಿದರೆ, ಉಗ್ರರ ಅಡಗು ತಾಣಗಳನ್ನು ಇಪ್ಪತ್ತನಾಲ್ಕು ಗಂಟೆಯಲ್ಲಿ ಪತ್ತೆ ಮಾಡಿ ಭಯೋತ್ಪಾದಕ ಚಟುವಟಿಕೆಗಳನ್ನು ಇನ್ನಿಲ್ಲದಂತೆ ಸದೆ ಬಡಿಯಬಹುದು. ಇಂತಹ ಸಂದರ್ಭದಲ್ಲಿ ರಾಜಕಾರಣಿಗಳು ಮನುಷ್ಯರಂತೆ ನಡೆದುಕೊಳ್ಳಬೇಕು. ರಾಜಕಾರಣ ಅಧಿಕಾರದಲ್ಲಿ ಇದ್ದಾಗ ಒಂದು ತರಹ, ಪ್ರತಿಪಕ್ಷದಲ್ಲಿ ಇದ್ದಾಗ ಇನ್ನೊಂದು ತರಹ ಮಾತನಾಡುವಂತೆ ಪ್ರೇರೇಪಿಸುತ್ತದೆ. ಆದರೆ ಮನುಷ್ಯತ್ವ ಮಾನವೀಯವಾಗಿ ನಡೆದುಕೊಳ್ಳುವಂತೆ ಒತ್ತಾಯಿಸುತ್ತದೆ. ಭಾರತಕ್ಕೆ ಕುತ್ತು ಎದುರಾಗಿರುವಾಗ ರಾಜಕಾರಣವನ್ನು ಎಲ್ಲರೂ ಪಕ್ಕಕ್ಕಿಡಬೇಕು. ಅಪ್ಪಟ ಮನುಷ್ಯರಂತೆ ನಡೆದುಕೊಳ್ಳಬೇಕು.