‘ಆಕ್ಸಿಯಮ್ 4 ಮಿಷನ್’ ಸುತ್ತ ಮುತ್ತ...

ಭಾರತೀಯ ವಾಯುಪಡೆಯ ಪೈಲಟ್ ಹಾಗೂ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರನ್ನು ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಕಳಿಸುವ ಆಕ್ಸಿಯಮ್ 4 ಮಿಷನ್ನ ಉಡಾವಣೆ ಮತ್ತೊಮ್ಮೆ ಮುಂದೂಡಿಕೆಯಾಗಿದೆ.
ಈಗ, ಜೂನ್ 22ಕ್ಕೆ ಅದು ಉಡಾವಣೆಗೊಳ್ಳಲಿದೆ ಎಂದು ಆಕ್ಸಿಯಮ್ ಸ್ಪೇಸ್ ಬುಧವಾರ ತಿಳಿಸಿದೆ. ಇದರೊಂದಿಗೆ ಈ ಮಿಷನ್ ಅನ್ನು ಐದನೇ ಬಾರಿಗೆ ಮುಂದೂಡಿದಂತಾಗಿದೆ.
ಆಕ್ಸಿಯಮ್ 4 ಮಿಷನ್ ಅಮೆರಿಕ, ಭಾರತ, ಪೋಲೆಂಡ್ ಮತ್ತು ಹಂಗೇರಿಗಳ ಗಗನಯಾತ್ರಿಗಳನ್ನು ಒಳಗೊಂಡಿದೆ. ಈ ಆಕ್ಸಿಯಮ್ 4 ಮಿಷನ್ನ ಪೈಲಟ್ ಆಗಿ ಶುಭಾಂಶು ಶುಕ್ಲಾ ಆಯ್ಕೆಯಾಗಿದ್ದಾರೆ.
ಜೂನ್ 19ರಂದು ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ (ಕೆಎಸ್ಸಿ) ಸ್ಪೇಸ್ಎಕ್ಸ್ನ ಫಾಲ್ಕನ್ 9 ರಾಕೆಟ್ನಲ್ಲಿ ಉಡಾವಣೆಗೊಳ್ಳುವುದೆಂದು ನಿರ್ಧರಿಸಲಾಗಿತ್ತು.
ಅದಕ್ಕೂ ಮೊದಲು, ಮೇ 29ರಂದು ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ನಂತರ ಜೂನ್ 8, ನಂತರ ಜೂನ್ 10 ಮತ್ತು ಜೂನ್ 11ಕ್ಕೆ ಮುಂದೂಡಲಾಯಿತು.
ಫಾಲ್ಕನ್ 9 ವಾಹನ ಸನ್ನದ್ಧಗೊಳಿಸುವಲ್ಲಿನ ವಿಳಂಬ, ಹವಾಮಾನ ಪರಿಸ್ಥಿತಿಗಳು, ಫಾಲ್ಕನ್ 9 ರಾಕೆಟ್ನಲ್ಲಿ ದ್ರವ ಆಮ್ಲಜನಕ ಸೋರಿಕೆ ಮತ್ತು ಐಎಸ್ಎಸ್ನಲ್ಲಿರುವ ಸೇವಾ ಮಾಡ್ಯೂಲ್ನಲ್ಲಿನ ದೋಷ ಸೇರಿದಂತೆ ಹಲವು ಸಮಸ್ಯೆಗಳಿಂದಾಗಿ ಕಾರ್ಯಾಚರಣೆಯನ್ನು ಮುಂದೂಡುತ್ತಲೇ ಬರಲಾಯಿತು.
ಈಗ ಐದನೇ ಬಾರಿಗೆ ಉಡಾವಣೆಯನ್ನು ಮುಂದೂಡಲಾಗಿದೆ.
ರಶ್ಯದ ವಿಭಾಗದಲ್ಲಿ ಇತ್ತೀಚೆಗೆ ನಡೆದ ದುರಸ್ತಿಗಳ ನಂತರ ಕಕ್ಷೆಯ ಪ್ರಯೋಗಾಲಯದಲ್ಲಿನ ಕಾರ್ಯಾಚರಣೆಗಳ ಮೌಲ್ಯಮಾಪನಕ್ಕಾಗಿ ನಾಸಾಗೆ ಅವಕಾಶ ನೀಡುವ ಸಲುವಾಗಿ ಜೂನ್ 22ಕ್ಕೆ ನಡೆಸಲು ನಿರ್ಧರಿಸಲಾಗಿದೆ.
ಏನಿದು ಆಕ್ಸಿಯಮ್ 4 ಮಿಷನ್?
ಹಲವಾರು ಕಾರಣಗಳಿಂದಾಗಿ ಆಕ್ಸಿಯಮ್ 4 ಮಿಷನ್ ಭಾರತಕ್ಕೆ ಮಹತ್ವದ್ದಾಗಿದೆ. ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗಿನ ಮಿಷನ್ ಇದಾಗಿದೆ.
ರಾಕೇಶ್ ಶರ್ಮಾ ಅವರ 1984ರ ಮಿಷನ್ ನಂತರ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಶುಭಾಂಶು ಶುಕ್ಲಾ ಪಾತ್ರವಾಗಲಿದ್ದಾರೆ. ಈ ಕಾರ್ಯಾಚರಣೆ ವೇಳೆ ಶುಭಾಂಶು ಶುಕ್ಲಾ ನಾಸಾ ಜೊತೆ ಜಂಟಿ ಸಂಶೋಧನೆಯಲ್ಲಿ ಭಾಗಿಯಾಗಲಿದ್ದಾರೆ. ಇದು ಭಾರತದ ಮಾನವ ಬಾಹ್ಯಾಕಾಶ ಮಿಷನ್ ಕಾರ್ಯಕ್ರಮದ ಗಮನಾರ್ಹ ಪ್ರಗತಿ ಎಂದು ಹೇಳಲಾಗುತ್ತಿದೆ.
ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 14 ದಿನಗಳ ವಾಸ್ತವ್ಯದ ಸಮಯದಲ್ಲಿ, ಇಸ್ರೋ ಹಲವಾರು ರಾಷ್ಟ್ರೀಯ ಸಂಶೋಧನೆ ಹಾಗೂ ಅಭಿವೃದ್ಧಿ ಪ್ರಯೋಗಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಪ್ರಸ್ತಾವಿಸಿದ ಏಳು ಮೈಕ್ರೋಗ್ರಾವಿಟಿ ಸಂಶೋಧನಾ ಪ್ರಯೋಗಗಳನ್ನು ನಡೆಸಲಿದೆ ಎಂದು ವರದಿಗಳು ಹೇಳಿವೆ.
ಈ ಪ್ರಯೋಗಗಳಲ್ಲಿ ಸಸ್ಯಗಳ ರೀತಿಯಲ್ಲಿ ಸೂರ್ಯನ ಬೆಳಕನ್ನು ಬಳಸಿಕೊಂಡು ಶಕ್ತಿ ಉತ್ಪಾದಿಸುವ, ಬ್ಲೂ ಗ್ರೀನ್ ಆಲ್ಗೇ (ಪಾಚಿ) ಎಂದೂ ಕರೆಯಲಾಗುವ ಒಂದು ವಿಧದ ಸಣ್ಣ ಬ್ಯಾಕ್ಟೀರಿಯಾಗಳ ಅಧ್ಯಯನವೂ ಸೇರಿವೆ. ಈ ಬ್ಯಾಕ್ಟೀರಿಯಾಗಳು ಗಗನಯಾತ್ರಿಗಳಿಗೆ ಅವಶ್ಯವಾದ ಆಮ್ಲಜನಕವನ್ನು ಉತ್ಪಾದಿಸಿ, ಸಜೀವ ವ್ಯವಸ್ಥೆಯೊಂದನ್ನು ನಿರ್ಮಿಸಲಿವೆ. ಇವು ಚಂದ್ರ ಅಥವಾ ಇತರ ಗ್ರಹಗಳಲ್ಲಿನ ಸುದೀರ್ಘ ವಾಸಕ್ಕೆ ನೆರವಾಗಲಿವೆ ಎನ್ನಲಾಗಿದೆ.
ಇದಲ್ಲದೆ, ಬಾಹ್ಯಾಕಾಶದಲ್ಲಿ ಸಲಾಡ್ ಬೀಜಗಳು ಮೊಳಕೆಯೊಡೆಯುವುದು ಮತ್ತು ಬಾಹ್ಯಾಕಾಶದಲ್ಲಿ ಒಂದು ಪ್ರಾಣಿಸಂತತಿಯಾದ ಟಾರ್ಡಿಗ್ರೇಡ್ಗಳ ಬದುಕುಳಿಯುವಿಕೆ, ಪುನರುಜ್ಜೀವನ, ಸಂತಾನೋತ್ಪತ್ತಿ ಕುರಿತ ಅಧ್ಯಯನವೂ ನಡೆಯಲಿದೆ.
ಏಳು ಪ್ರಯೋಗಗಳ ಹೊರತಾಗಿ, ನಾಸಾ ಮತ್ತು ಐಎಸ್ಆರ್ಪಿ ಮಾನವ ಸಂಶೋಧನಾ ಕಾರ್ಯಕ್ರಮಗಳ ಮೇಲೆ ಕೇಂದ್ರೀಕರಿಸಿದ ಐದು ಇತರ ಪ್ರಯೋಗಗಳನ್ನು ನಡೆಸುತ್ತವೆ.
ಶುಭಾಂಶು ಶುಕ್ಲಾ ಯಾರು?
ಭಾರತೀಯ ವಾಯುಪಡೆಯ (ಐಎಎಫ್) ಅನುಭವಿ ಪೈಲಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅಕ್ಟೋಬರ್ 10, 1985ರಂದು ಭಾರತದ ಉತ್ತರ ಪ್ರದೇಶದ ಲಕ್ನೊದಲ್ಲಿ ಜನಿಸಿದರು. ಜೂನ್ 2006ರಲ್ಲಿ ಐಎಎಫ್ ಫೈಟರ್ ವಿಂಗ್ಗೆ ನಿಯೋಜನೆಗೊಂಡರು.
ಅವರು Su-30 MKI, MiG-21, MiG-29 ಜಾಗ್ವಾರ್, ಹಾಕ್, ಡಾರ್ನಿಯರ್ ಮತ್ತು An-32 ಸೇರಿದಂತೆ ವಿವಿಧ ವಿಮಾನಗಳಲ್ಲಿ 2,000 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ. ಮಾರ್ಚ್ 2024ರಲ್ಲಿ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಏರಿದರು. ಇವರು ಫೈಟರ್ ಕಾಂಬ್ಯಾಟ್ ಲೀಡರ್ ಕೂಡ ಆಗಿದ್ದಾರೆ.
2019ರಲ್ಲಿ ಶುಭಾಂಶು ಅವರನ್ನು ಗಗನಯಾನಕ್ಕೆ ಇಸ್ರೋ ಆಯ್ಕೆ ಮಾಡಿತ್ತು. ಅವರು ರಶ್ಯದ ಮಾಸ್ಕೊದ ಸ್ಟಾರ್ ಸಿಟಿಯಲ್ಲಿರುವ ಯೂರಿ ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ಕಠಿಣ ತರಬೇತಿ ಪ್ರಾರಂಭಿಸಿದ್ದರು.