ನೋಡುಗರ ಗಮನ ಸೆಳೆದ ‘ಬಿಸಿಲು ಕುದುರೆ’ ಛಾಯಾಚಿತ್ರ ಪ್ರದರ್ಶನ

ಬೆಂಗಳೂರು: ಪರಿಸರದಲ್ಲಿ ಅನೇಕ ವಿಸ್ಮಯ ಜೀವಿಗಳು ಇವೆ. ಅದರಲ್ಲಿ ಬಿಸಿಲು ಕುದುರೆ ಅಥವಾ ಶಿವನ ಕುದುರೆಗಳು ವಿಶಿಷ್ಟ ಪ್ರಕಾರದ ಜೀವಿಗಳಾಗಿವೆ. ಬಿಸಿಲ ಕುದುರೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ನಿಟ್ಟಿನಲ್ಲಿ ಚಿತ್ರಕಲಾ ಪರಿಷತ್ನಲ್ಲಿ ನಡೆದ ತೇಜಸ್ವಿ ಜೀವಲೋಕ-೧೩ ‘ಬಿಸಿಲ ಕುದುರೆ’ ಛಾಯಾಚಿತ್ರ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನವು ನೋಡಗರ ಗಮನ ಸೆಳೆಯಿತು.
ಪರಿಸರ- ನಿಸರ್ಗ ಸಂರಕ್ಷಣಾ ಸಂಸ್ಥೆಯ ವತಿಯಿಂದ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಸೆ.೮ರಿಂದ ಸೆ.14ರ ವರೆಗೆ ಚಿತ್ರಕಲಾ ಪರಿಷತ್ನ ಡಿ.ದೇವರಾಜ ಅರಸು ಆರ್ಟ್ ಗ್ಯಾಲರಿಯಲ್ಲಿ ನಡೆದ ‘ಬಿಸಿಲ ಕುದುರೆ’ ಛಾಯಾಚಿತ್ರ- ಸಾಕ್ಷ್ಯಚಿತ್ರ ಪ್ರದರ್ಶನದಲ್ಲಿ ಅನೇಕ ಪ್ರಬೇಧದ ಬಿಸಿಲ ಕುದುರೆಗಳ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದರಿಂದ ಸಾರ್ವಜನಿಕರಿಗೆ ಬಿಸಿಲ ಕುದುರೆಗಳ ಪ್ರಕಾರಗಳು, ಅವುಗಳ ಜೀವನ ಶೈಲಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು.
ಬಿಸಿಲು ಕುದುರೆಗಳನ್ನು ಕನ್ನಡದಲ್ಲಿ ಪ್ರಾರ್ಥನಾ ಕೀಟ ಅಥವಾ ಶಿವನ ಕುದುರೆ ಎಂದು, ಇಂಗ್ಲಿಷ್ನಲ್ಲಿ ಪ್ರೇಯಿಂಗ್ ಮ್ಯಾಂಟಿಸ್ ಕರೆಯಲಾಗುತ್ತದೆ. ಕೀಟ ಜಗತ್ತಿನಲ್ಲಿ ಬಿಸಿಲು ಕುದುರೆಗಳದು ಅದ್ಭುತ ಸೃಷ್ಠಿ. ಹಳ್ಳಿಯ ಕಡೆ ಅದರಲ್ಲೂ ಮಕ್ಕಳು ಹೆಚ್ಚಾಗಿ ಅವುಗಳನ್ನು ಹಿಡಿದು ಆಟವಾಡುತ್ತಿರುತ್ತಾರೆ. ಪ್ರಪಂಚದಲ್ಲಿ ಸುಮಾರು ̧2400 ಬಿಸಿಲು ಕುದುರೆ ಪ್ರಭೇದಗಳಿವೆ. ಜತೆಗೆ 460 ವರ್ಗಗಳಿವೆ. ಈ ಎಲ್ಲ ವರ್ಗಗಳ ಪೈಕಿ ಕೆಲವು ಪ್ರಕಾರದ ಬಿಸಿಲು ಕುದುರೆಗಳ ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ಲಭ್ಯ ಇವೆ ಎನ್ನುವುದು ಆಯೋಜಕರ ಅಭಿಪ್ರಾಯವಾಗಿದೆ.
ಕೃಷಿ ಬೆಳೆ ಅಥವಾ ಸಸ್ಯಗಳಿಗೆ ಕಂಟಕವಾದ ಕೀಟಗಳನ್ನು ತಿಂದು ಸಸ್ಯಗಳನ್ನು ರಕ್ಷಿಸುವ ಕೆಲಸ ಮಾಡುವ ಬಿಸಿಲು ಕುದುರೆಗಳ ಬಗ್ಗೆ ಮಕ್ಕಳಿಗೆ ಹೆಚ್ಚು ಆಸಕ್ತಿ ಇರುವುದರಿಂದ ಛಾಯಾಚಿತ್ರ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಬಂದ ಮಕ್ಕಳು ಬಿಸಿಲು ಕುದುರೆಗಳನ್ನು ನೋಡಿ, ಸಂತಸ ಪಡುತ್ತಿದ್ದಾರೆ.
ಪ್ರತಿ ವರ್ಷ ತೇಜಸ್ವಿ ಜೀವಲೋಕ
ತೇಜಸ್ವಿಯವರ ಪ್ರೇರಣೆಯಿಂದ ಪರಿಸರ-ನಿಸರ್ಗ ಸಂರಕ್ಷಣಾ ಸಂಸ್ಥೆಯು ಜನಸಾಮಾನ್ಯರಲ್ಲಿ ಪರಿಸರ ಸಂರಕ್ಷಣೆ ಜವಾಬ್ದಾರಿಯನ್ನು ಜಾಗೃತವಾಗಿಸಿ ಸಂವರ್ಧನೆಯಲ್ಲಿ ತೊಡಗಿಸಲು ‘ತೇಜಸ್ವಿ ಜೀವಲೋಕ’ ಎಂಬ ಸರಣಿ ಕಾರ್ಯಕ್ರಮವನ್ನು ಅವರ ಹುಟ್ಟಿದ ದಿನದ ನೆನಪಿನಲ್ಲಿ 2013ರಿಂದ ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಹಕ್ಕಿಲೋಕ, ಕೀಟಲೋಕ, ಪುಷ್ಪಲೋಕ, ಪರಾಗಸ್ಪರ್ಶಿಲೋಕ, ಜೇಡಲೋಕ, ಬಾವಲಿಲೋಕ, ಗೂಬೆಲೋಕ, ಹದ್ದುಲೋಕ, ಕುರಿಂಜಿಲೋಕ, ಕಪ್ಪೆಲೋಕ ಹಾಗೂ ಏರೋಪ್ಲೇನ್ ಚಿಟ್ಟೆಲೋಕ, ಮಿಣುಕುಲೋಕ (ಮಿಂಚುಹುಳು)ಗಳ ಕುರಿತು ಛಾಯಾಚಿತ್ರ-ಸಾಕ್ಷ್ಯಚಿತ್ರ ಪ್ರದರ್ಶನ-ಸಂವಾದ ಹಾಗೂ ಕೈಪಿಡಿ ಬಿಡುಗಡೆಗಳಿರುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅದರಂತೆ ಈ ವರ್ಷ ಬಿಸಿಲು ಕುದುರೆ ಲೋಕ ಛಾಯಾಚಿತ್ರ, ಸಾಕ್ಷ್ಯಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದೆ ಎನ್ನುವುದು ಪರಿಸರ-ನಿಸರ್ಗ ಸಂರಕ್ಷಣಾ ಸಂಸ್ಥೆಯ ಕಾರ್ಯದರ್ಶಿ ಈಶ್ವರ್ ಪ್ರಸಾದ್ ಅಭಿಪ್ರಾಯವಾಗಿದೆ.