‘ಆದಾಯ ತೆರಿಗೆ ಮಸೂದೆ 2025’ | ದೇಶದ ಜನರ ಖಾಸಗಿತನಕ್ಕೆ ದೊಡ್ಡ ಬೆದರಿಕೆಯಾಗಲಿದೆಯೇ?

ಹೊಸ ಕಾಯ್ದೆ ಲ್ಯಾಪ್ಟಾಪ್ಗಳು, ಹಾರ್ಡ್ಡ್ರೈವ್ಗಳು ಮತ್ತು ಇಮೇಲ್ಗಳನ್ನು ಪರಿಶೀಲಿಸಲು ಅವಕಾಶ ನೀಡಲಿದೆ.
ಅಂದರೆ, ಇದು ಹಣಕಾಸಿನ ವಂಚನೆಯನ್ನು ನಿಭಾಯಿಸುವುದನ್ನೂ ಮೀರಿದ ಬೇರೆ ಉದ್ದೇಶವನ್ನು ಹೊಂದಿದೆಯೇ ಎಂಬುದು ಈಗ ಕಾಡುವ ದೊಡ್ಡ ಪ್ರಶ್ನೆಯಾಗಿದೆ.
ಮೋದಿ ಸರಕಾರ ಈಗಾಗಲೇ ಮಂಡಿಸಿರುವ ಆದಾಯ ತೆರಿಗೆ ಮಸೂದೆ 2025 ಜನರ ಖಾಸಗಿತನಕ್ಕೆ ಬಹುದೊಡ್ಡ ಬೆದರಿಕೆಯಾಗುವ ಸೂಚನೆ ಕಾಣಿಸಿದೆ.
ಈ ಮಸೂದೆ ಪ್ರಸ್ತುತ ಆದಾಯ ತೆರಿಗೆ ಕಾಯ್ದೆ, 1961ಕ್ಕೆ ತರಲಾದ ಬದಲಾವಣೆಯಾಗಿದೆ.
ನೂತನ ಮಸೂದೆ ತೆರಿಗೆ ಕಾನೂನುಗಳನ್ನು ಸರಳಗೊಳಿಸಲಿದೆ ಎಂಬುದು ಸರಕಾರದ ವಾದ. ಆದರೆ, ಇದು ಬೇರೆಯದೇ ಸಮಸ್ಯೆಗಳನ್ನು ಹುಟ್ಟುಹಾಕುವಂತೆ ಕಾಣಿಸುತ್ತಿದೆ.
ಇದು ತೆರಿಗೆ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರವನ್ನು ಹಸ್ತಾಂತರಿಸುವ ನಿಬಂಧನೆಯನ್ನು ಹೊಂದಿದ್ದು, ತೆರಿಗೆ ಹುಡುಕಾಟಗಳ ವ್ಯಾಪ್ತಿಯನ್ನು ಈ ಹಿಂದಿನ ನಿಬಂಧನೆಯನ್ನು ಮೀರಿ ವಿಸ್ತರಿಸುವ ಷರತ್ತನ್ನು ಒಳಗೊಂಡಿದೆ.
ಈ ಹೊಸ ಮಸೂದೆಯಲ್ಲಿ, ವಿವಾದಾತ್ಮಕವೆಂದು ಪರಿಗಣಿಸಲಾಗುತ್ತಿರುವ ಕೆಲ ನಿಬಂಧನೆಗಳಿವೆ.
ಮುಖ್ಯವಾಗಿ, ಇದು ತೆರಿಗೆ ವಂಚನೆ ತನಿಖೆಯ ಭಾಗವಾಗಿ ಆದಾಯ ತೆರಿಗೆ ಅಧಿಕಾರಿಗಳಿಗೆ ಸಂಬಂಧಪಟ್ಟವರ ಸಾಮಾಜಿಕ ಮಾಧ್ಯಮ ಖಾತೆಗಳು, ಇಮೇಲ್ ವಿಳಾಸಗಳು, ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ ಇತ್ಯಾದಿಗಳನ್ನು ಪರಿಶೀಲಿಸಲು ಅಧಿಕಾರ ನೀಡುತ್ತದೆ.
ಈ ಕಾರಣದಿಂದ ಇದು ಗೌಪ್ಯತೆ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕೆಲವು ಕಳವಳಗಳನ್ನು ಹುಟ್ಟುಹಾಕಿದೆ.
ಆರ್ಥಿಕ ವಂಚನೆ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಪತ್ತೆಮಾಡಲು ಡಿಜಿಟಲ್ ಪ್ಲಾಟ್ ಫಾರ್ಮ್ಗಳ ಪ್ರವೇಶ ಮತ್ತು ಪರಿಶೀಲನೆಗೆ ಇದು ಅಧಿಕಾರ ನೀಡಲಿದೆ.
ಎನ್ಕ್ರಿಪ್ಟ್ ಮಾಡಲಾದ ವಾಟ್ಸ್ಆ್ಯಪ್ ಚಾಟ್ಗಳು, ಮೊಬೈಲ್ ಡೇಟಾ, ಗೂಗಲ್ ನಕ್ಷೆಗಳು ಮತ್ತು ಇನ್ಸ್ಟಾಗ್ರಾಂ ಸಹ ಈಗ ತೆರಿಗೆ ವಂಚನೆಯ ವಿರುದ್ಧ ಅಸ್ತ್ರಗಳಾಗಲಿವೆ ಎಂಬುದರ ಸುಳಿವನ್ನು ನಿರ್ಮಲಾ ಸೀತಾರಾಮನ್ ನೀಡಿದ್ದಾರೆ.
ಈ ಮಸೂದೆ ಅಂಗೀಕಾರವಾದರೆ, ಇಮೇಲ್ಗಳು, ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಆನ್ಲೈನ್ ಹಣಕಾಸು ವೇದಿಕೆಗಳು ಸೇರಿದಂತೆ ಡಿಜಿಟಲ್ ಮಾಹಿತಿಯನ್ನು ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲಿಸಬಹುದಾಗಿದೆ.
ಹೊಸ ಅದಾಯ ತೆರಿಗೆ ಮಸೂದೆ ಜಾರಿಗೆ ಬಂದರೆ, ಯಾರಾದರೂ ತೆರಿಗೆ ಪಾವತಿಸಿಲ್ಲದಿದ್ದರೆ ಅಥವಾ ಯಾವುದೇ ಅಘೋಷಿತ ಆಸ್ತಿಗಳು, ನಗದು, ಚಿನ್ನ, ಆಭರಣಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿರಬಹುದು ಎಂದು ಅನುಮಾನ ಬಂದಲ್ಲಿ ಅಂತಹವರ ಖಾತೆಗಳನ್ನು ಅಧಿಕಾರಿಗಳು ತನಿಖೆ ಮಾಡಲು ಅವಕಾಶ ಪಡೆಯುತ್ತಾರೆ.
ಹೊಸ ಕಾಯ್ದೆ ಲ್ಯಾಪ್ಟಾಪ್ಗಳು, ಹಾರ್ಡ್ಡ್ರೈವ್ಗಳು ಮತ್ತು ಇಮೇಲ್ಗಳನ್ನು ಪರಿಶೀಲಿಸಲು ಅವಕಾಶ ನೀಡಲಿದೆ.
ಅಂದರೆ, ಇದು ಹಣಕಾಸಿನ ವಂಚನೆಯನ್ನು ನಿಭಾಯಿಸುವುದನ್ನೂ ಮೀರಿದ ಬೇರೆ ಉದ್ದೇಶವನ್ನು ಹೊಂದಿದೆಯೇ ಎಂಬುದು ಈಗ ಕಾಡುವ ದೊಡ್ಡ ಪ್ರಶ್ನೆಯಾಗಿದೆ.
ವಾರೆಂಟ್ ಅಥವಾ ಪೂರ್ವ ಸೂಚನೆ ಇಲ್ಲದೆ ಡಿಜಿಟಲ್ ಸಂರಕ್ಷಿತ ಇಮೇಲ್ಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಲು ಅನುಮತಿ ನೀಡುವ ಕಾನೂನನ್ನು ತರುವ ಉದ್ದೇಶವೇ ಹಲವಾರು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಆದಾಯ ತೆರಿಗೆ ಕಾನೂನಿನ ಸುಧಾರಣೆ ಹೆಸರಲ್ಲಿ ಸರಕಾರದ ಹಿಡಿತವನ್ನು ಹೆಚ್ಚು ವಿಸ್ತರಿಸುವ ಮತ್ತು ಅದಕ್ಕೆ ಕಾನೂನಿನ ಮಾನ್ಯತೆ ಕೊಡುವ ವ್ಯವಸ್ಥಿತ ನಡೆಯಂತೆ ಇದು ಕಾಣಿಸುತ್ತಿದೆ.
ಇದೊಂದು ಸದ್ದಿಲ್ಲದ ಕಣ್ಗಾವಲು ವ್ಯವಸ್ಥೆಯಾಗಿ, ರಾಜಕೀಯ ದುರುಪಯೋಗಕ್ಕೆ ನೆಲೆಯಾಗಲಿದೆಯೇ ಎಂಬ ಪ್ರಶ್ನೆ ಈಗ ಎದ್ದಿದೆ.
ಈಗಾಗಲೇ ಸರಕಾರದ ಏಜೆನ್ಸಿಗಳು ಹೇಗೆ ಸೂತ್ರದ ಗೊಂಬೆಗಳಾಗಿವೆ ಎಂಬುದು ಗೊತ್ತಿರುವಾಗ, ಅವುಗಳನ್ನು ಬಳಸಿಕೊಂಡು, ಎಲ್ಲರ ಮೇಲೂ ಕಣ್ಣಿಡಲು ಹೊರಟಂತಿರುವ ಈ ನಡೆ ಇನ್ನಷ್ಟು ಕಳವಳಕಾರಿಯಾಗಿದೆ.
ಐಟಿ ಇಲಾಖೆ ಮತ್ತು ಈ.ಡಿ. ಮೋದಿ ಸರಕಾರದ ಕೈಯಲ್ಲಿ ರಾಜಕೀಯ ದ್ವೇಷ ಸಾಧಿಸುವುದಕ್ಕೆ ಇರುವ ಅಸ್ತ್ರಗಳಾಗಿರುವುದು ಗೊತ್ತೇ ಇದೆ. ಸರಕಾರವನ್ನು ವಿರೋಧಿಸುವವರ ವಿರುದ್ಧ ಅವು ತಮ್ಮ ಅಧಿಕಾರವನ್ನು ಬಳಸುತ್ತಿವೆ ಎಂಬ ಆರೋಪವಿದೆ.
ಹೀಗೆ ಇದೊಂದು ಅಪಾಯಕಾರಿ ಬೆಳವಣಿಗೆಯಂತೆ ಕಾಣುತ್ತಿರುವಾಗಲೂ, ಈ ಮಸೂದೆಯ ವಿಚಾರವಾಗಿ ಜನರೇಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಯೂ ಇದೆ.
ಇದು ವೈಯಕ್ತಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ನಿರಂತರವಾಗಿ ಕಸಿದುಕೊಳ್ಳುವಂಥ ನೀತಿಗಳನ್ನು ಸುಮ್ಮನೆ ಒಪ್ಪಿಕೊಳ್ಳುವ ರೀತಿಯೆ?
ಸರಕಾರದ ಹಕ್ಕುಗಳನ್ನು ಒತ್ತಿಹೇಳುವ ಮಸೂದೆ, ವೈಯಕ್ತಿಕ ಗೌಪ್ಯತೆಯ ಬಗ್ಗೆ ಕಾಳಜಿ ಹೊಂದಿಲ್ಲ.
ಬದಲಾಗಿ, ಸಾಮಾನ್ಯ ಹಿತ ಎಂಬುದಕ್ಕೆ ಒತ್ತು ನೀಡುವ ನೆಪದಲ್ಲಿ ಗೌಪ್ಯತೆಯ ವಿಚಾರವನ್ನು ತಗ್ಗಿಸಲಾಗಿದೆ.
ರಾಷ್ಟ್ರೀಯ ಹಿತಾಸಕ್ತಿ, ರಾಷ್ಟ್ರೀಯ ಅಭಿವೃದ್ಧಿ ಮತ್ತಿತರ ಪದಗಳ ಮೂಲಕ ವಿವಿಧ ರೀತಿಯಲ್ಲಿ ವ್ಯಕ್ತಪಡಿಸಲಾದ ಸಾಮಾನ್ಯ ಹಿತದ ಕಲ್ಪನೆ ಈ ಸರಕಾರದ ಈ ಹಿಂದಿನ ಉದ್ದೇಶಗಳನ್ನೇ ಹೋಲುತ್ತದೆ.
2014ರಿಂದ ಜಾರಿಗೆ ತರಲಾದ ಹಲವಾರು ಪ್ರಮುಖ ಬದಲಾವಣೆಗಳನ್ನೇ ಈ ಮೂಲಕ ಮತ್ತೊಮ್ಮೆ ಸಮರ್ಥಿಸಿಕೊಳ್ಳಲು ಸರಕಾರ ಈ ಮಸೂದೆ ಮೂಲಕ ದಾರಿ ಮಾಡಿಕೊಂಡಂತಿದೆ.
2014ರ ಚುನಾವಣಾ ಗೆಲುವು, ನೋಟು ರದ್ದತಿ, 370ನೇ ವಿಧಿಯ ರದ್ದತಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗಾಗಿ ಆಧಾರ್ ವ್ಯಾಪಕ ಅಳವಡಿಕೆ ಈ ಎಲ್ಲ ಬೆಳವಣಿಗೆಗಳ ಸಾಲಿಗೆ ಇದು ಹೊಸ ಸೇರ್ಪಡೆಯಂತೆ ಇದೆ.
ವಂಚನೆ ಮಾಡದಿದ್ದರೆ, ಕಾನೂನಿಗೆ ಏಕೆ ಭಯಪಡಬೇಕು?
ಆದರೆ ಅವರೂ ಕಣ್ಗಾವಲಿಗೆ ಒಳಗಾಗುವ ಸ್ಥಿತಿ ಏಕೆ?
ಯಾರದೇ ತಪ್ಪನ್ನು ಸಾಬೀತುಪಡಿಸಬೇಕಾದ ಸರಕಾರ ತಮ್ಮ ಮೇಲೆ ಕಣ್ಗಾವಲು ಇಟ್ಟಿದೆ ಎನ್ನಿಸಿದಾಗ, ತಾವು ಯಾವುದೇ ತಪ್ಪು ಮಾಡುತ್ತಿಲ್ಲ ಎಂಬುದನ್ನು ತೋರಿಸುವ ಹೊರೆಯೂ ಜನರದೇ ಆಗುವ ಸ್ಥಿತಿಯಿದೆ.
ಅಂದರೆ, ಇದು ಹಕ್ಕುಗಳು ಕೂಡ ಷರತ್ತುಬದ್ಧ ಎನ್ನುವಂಥ ಸ್ಥಿತಿಯನ್ನು ತರುತ್ತದೆ.
ಹಕ್ಕುಗಳನ್ನು ಅನುಭವಿಸುವ ಬದಲು, ಜನರು ತಾವು ಬೆದರಿಕೆಯಲ್ಲ ಎಂದು ತೋರಿಸಿಕೊಳ್ಳಬೇಕಾದ ಅನಿವಾರ್ಯತೆ ತಲೆದೋರುತ್ತದೆ.
ಇದು, ಪ್ರಜಾಸತ್ತಾತ್ಮಕ ಸ್ವಾತಂತ್ರ್ಯದ ಮೂಲಭೂತ ತತ್ವವನ್ನೇ ಬುಡಮೇಲು ಮಾಡುತ್ತದೆ.
ಈ ಪ್ರಸ್ತಾವ ಡಿಜಿಟಲ್ ಸಾರ್ವಭೌಮತ್ವ ಮತ್ತು ವಿದೇಶಿ ಪ್ರಾಬಲ್ಯವನ್ನು ವಿರೋಧಿಸುವ ಸಾಧನವಾಗಿ, ದತ್ತಾಂಶ ಮತ್ತು ಡಿಜಿಟಲ್ ಮೂಲಸೌಕರ್ಯದ ಮೇಲೆ ನಿಯಂತ್ರಣ ಹೊಂದುವ ನಿಟ್ಟಿನಲ್ಲಿದೆ.
ಆದರೂ, ನಿಜವಾದ ಸಾರ್ವಭೌಮತ್ವ ಕಣ್ಗಾವಲಿನ ಮೇಲೆ ನಿರ್ಮಿತವಾದದ್ದಲ್ಲ. ಅದು ಆಡಳಿತ ನಡೆಸುವವರ ಒಪ್ಪಿಗೆ ಮತ್ತು ಸ್ವಾಯತ್ತತೆಯ ಮೇಲೆ ನಿಂತಿರಬೇಕು.
ದೇಶ ಎಂಬುದು ಯಾವಾಗಲೂ ಅದರ ಜನರಾಗಿರುತ್ತಾರೆ.ಜನರ ಡಿಜಿಟಲ್ ಗೌಪ್ಯತೆಯೇ ಇಲ್ಲವಾದಾಗ ಅದು ಇನ್ನಷ್ಟು ಅಪಾಯಕ್ಕೆ ಅವರನ್ನು ಬೀಳಿಸುತ್ತದೆ. ಅವರ ಸ್ವಾಯತ್ತತೆ ಇಲ್ಲವಾಗುತ್ತದೆ.
ಈ ಬಗ್ಗೆ ಕಾನೂನು ತಜ್ಞರು ಈಗಾಗಲೇ ಕಳವಳ ವ್ಯಕ್ತಪಡಿಸಿದ್ದಾರೆ. ಗೌಪ್ಯತೆಯನ್ನೇ ಅತಿಕ್ರಮಿಸುವ ಇಂಥ ಅಧಿಕಾರಗಳು ಕಿರುಕುಳ ಮತ್ತು ವೈಯಕ್ತಿಕ ಡೇಟಾದ ಅನಗತ್ಯ ಪರಿಶೀಲನೆಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.