ಬುಡ್ಗಜಂಗಮ/ಬೇಡಜಂಗಮ ಎಂಬ ಗೊಂದಲದ ಗೂಡು!!

ಬೇಡಜಂಗಮ ಎನ್ನುವುದೇ ಸಮಸ್ಯೆಗೆ ಕಾರಣವಾಗಿರುವುದರಿಂದ ಪರಿಶಿಷ್ಟ ಜಾತಿಪಟ್ಟಿಯಿಂದ ಬೇಡಜಂಗಮ ತೆಗೆದು ಕೇವಲ ಬುಡ್ಗಜಂಗಮ ಹೆಸರನ್ನು ಮಾತ್ರ ಉಳಿಸಿಕೊಳ್ಳಬಹುದು. ಬೇಡಜಂಗಮ ಜಾತಿ ಪ್ರಮಾಣಪತ್ರ ನೀಡುವಾಗ ಸುಪ್ರೀಂಕೋರ್ಟ್ನ ಆದೇಶದಂತೆ ಆಯಾ ವ್ಯಕ್ತಿಯ ಸ್ಥಳಪರಿಶೀಲನೆ ಮಾಡಿ ಅರ್ಹರಿಗೆ ಮಾತ್ರ ಜಾತಿ ಪ್ರಮಾಣಪತ್ರ ನೀಡಲು ತಹಶೀಲ್ದಾರರಿಗೆ ಸರಕಾರ ಆದೇಶ ನೀಡಬಹುದಿತ್ತು, ಪರಿಹಾರಗಳೇನೋ ಇವೆ ಆದರೆ ಎಲ್ಲದಕ್ಕೂ ಸರಕಾರಕ್ಕೆ ಇಚ್ಛಾಶಕ್ತಿ ಇರಬೇಕಷ್ಟೆ.
ಕೋಲಾರದ ಮುಳಬಾಗಿಲಿನಲ್ಲಿ ಕೊತ್ತೂರು ಮಂಜುನಾಥ್ ಎಂಬ ವ್ಯಕ್ತಿ ಬುಡ್ಗಜಂಗಮ ಜಾತಿಪ್ರಮಾಣ ಪತ್ರ ಪಡೆದು ವಿಧಾನಸಭೆ ಚುನಾವಣೆಗೆ ನಿಂತು ಗೆದ್ದರು. ‘‘ಈತ ಬುಡ್ಗ ಜಂಗಮ ಅಲ್ಲ ‘ಬೈರಾಗಿ’, ನಕಲಿ ಜಾತಿ ಪ್ರಮಾಣಪತ್ರ ಪಡೆದು ಮೀಸಲು ಕ್ಷೇತ್ರದಲ್ಲಿ ಗೆದ್ದಿದ್ದಾರೆ’’ ಎಂದು ಸ್ಥಳೀಯ ದಲಿತ ಸಮುದಾಯದವರು ನ್ಯಾಯಾಲಯಕ್ಕೆ ಹೋದರು. ಬುಡ್ಗಜಂಗಮ/ಬೇಡಜಂಗಮ ಸಮುದಾಯ ಪರಿಶಿಷ್ಟ ಜಾತಿಪಟ್ಟಿಗೆ ಸೇರುತ್ತದೆ. ಬೈರಾಗಿ ಎಂಬ ಸಮುದಾಯ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದೆ, ಇದು ವಾಸ್ತವ. ಇಲ್ಲಿನ ಪ್ರತಿಷ್ಠಿತ ದಲಿತ ರಾಜಕಾರಣಿಯೊಬ್ಬರು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡರು. ಕೊತ್ತೂರು ಮಂಜುನಾಥ್ ಹೈಕೋರ್ಟ್ನಲ್ಲಿ ಕೇಸ್ ಸೋತರು. ಇವೆಲ್ಲದರ ಪರಿಣಾಮ ಕೋಲಾರ ಜಿಲ್ಲೆಯಲ್ಲಿ ಜಾತಿ ಪ್ರಮಾಣಪತ್ರವನ್ನು ಇಲ್ಲಿನ ನಿಜವಾದ ಬೇಡ/ಬುಡ್ಗಜಂಗಮರಿಗೆ ನೀಡುವುದನ್ನು ಅಧಿಕಾರಿಗಳು ನಿಲ್ಲಿಸಿದರು! ಇದರಿಂದಾಗಿ ನೂರಾರು ಜನ ಬುಡ್ಗ/ಬೇಡಜಂಗಮರ ಮಕ್ಕಳು ಜಾತಿ ಸರ್ಟಿಫಿಕೇಟ್ ಇಲ್ಲದೆ ಶಿಕ್ಷಣ, ಉದ್ಯೋಗದಿಂದ ವಂಚಿತರಾಗಿದ್ದಾರೆ. ಈ ಗೊಂದಲಕ್ಕೆ ಕಾರಣರಾದ ಕೊತ್ತೂರು ಮಂಜುನಾಥ್ ಈಗ ಕೋಲಾರದ ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಪ್ತರಾಗಿದ್ದಾರೆ, ಆದರೂ ತಮ್ಮಿಂದಾಗಿ ಅಪಾರ ಬಾಧೆೆಗೆ ಒಳಗಾದ ಬುಡ್ಗ/ಬೇಡ ಜಂಗಮರ ನೋವಿಗೆ ಸ್ಪಂದಿಸುವುದಿಲ್ಲ.
ಬುಡ್ಗ/ಬೇಡ ಜಂಗಮರೆಂಬ ನತದೃಷ್ಟರಿಗೆ ಇನ್ನೊಂದು ಸಮಸ್ಯೆ ಇದೆ. ಬುಡ್ಗ/ಬೇಡ ಜಂಗಮರ ಹೆಸರಲ್ಲಿ ಲಕ್ಷಾಂತರ ಜನ ವೀರಶೈವರು ‘‘ಬೇಡುವ ಜಂಗಮ, ಬೇಡ ಜಂಗಮ ಒಂದೇ ಜಾತಿ’’ ಎಂದು ನಕಲಿ ಜಾತಿ ಸರ್ಟಿಫಿಕೇಟ್ ಪಡೆದು ಈ ಮುಗ್ಧ ಅಲೆಮಾರಿಗಳನ್ನು ವಂಚಿಸುತ್ತಿದ್ದಾರೆ! ಪರಿಶಿಷ್ಟರಲ್ಲದ ವೀರಶೈವರು ಬೇಡ/ಬುಡ್ಗ ಜಂಗಮರ ಮೀಸಲಾತಿಯನ್ನು ಕಸಿಯುತ್ತಿದ್ದಾರೆಂಬ ಆರೋಪ ನಿನ್ನೆ ಮೊನ್ನೆಯದಲ್ಲ. ಸುಮಾರು ನಾಲ್ಕೈದು ದಶಕಗಳಿಂದಲೂ ಇದು ಮತ್ತೆ ಮತ್ತೆ ಚರ್ಚೆಗೆ ಬರುತ್ತಿದೆ. ಆ ಸಂದರ್ಭದ ಬಿಸಿ ಮುಗಿದ ನಂತರ ತಣ್ಣಗಾಗುತ್ತದೆ, ಇದಕ್ಕೆ ಶಾಶ್ವತ ಪರಿಹಾರ ಸಿಗಲು ಯಾವ ಸರಕಾರಗಳೂ ಪ್ರಯತ್ನಿಸಿಲ್ಲ ಎನ್ನುವುದು ದುರದೃಷ್ಟಕರ.
ಬೇಡ ಜಂಗಮ, ಬುಡ್ಗ ಜಂಗಮ ಮತ್ತು ಬೇಡುವ ಜಂಗಮ ಎಂಬ ಹೆಸರುಗಳಲ್ಲಿ ‘ಜಂಗಮ’ ಎಂಬ ಶಬ್ದವಿರುವುದರಿಂದಲೂ, ವೀರಶೈವರಲ್ಲಿ ‘ಜಂಗಮ’ ಪಂಗಡದವರು ಪ್ರಮುಖವಾಗಿ ಇರುವುದರಿಂದಲೂ, ಅದರಲ್ಲೂ ವೀರಶೈವರಲ್ಲಿ ಬೇಡುವ ಜಂಗಮ ಎಂಬ ಪಂಗಡದವರೇ ಇರುವುದರಿಂದಲೂ ಇದರ ಫಲವನ್ನು ವೀರಶೈವರು ಪಡೆಯುವುದು ಆರಂಭವಾಯಿತು. (ಮೂಲತಃ ಬೇಡುವ ಜಂಗಮರು ಹಿಂದುಳಿದ ವರ್ಗಗಳ ಪ್ರವರ್ಗ 3(ಬಿ) ಪಟ್ಟಿಯಲ್ಲಿ ಬರುತ್ತಾರೆ). ಇದರಿಂದಾಗಿ ಅಲೆಮಾರಿಗಳಾದ ಬುಡ್ಗ/ಬೇಡ ಜಂಗಮರಿಗೆ ಅಪಾರ ಅನ್ಯಾಯವಾಗತೊಡಗಿತು. ಹಾಗೆ ನೋಡಿದರೆ ಅಲೆಮಾರಿಗಳಾದ ಬುಡ್ಗ/ಬೇಡ ಜಂಗಮರಿಗೂ, ಜಾತಿ ಶ್ರೇಣೀಕರಣದ ಮೇಲಿರುವ ಬೇಡುವ ಜಂಗಮ ಎಂಬ ವೀರಶೈವರಿಗೂ ಯಾವುದೇ ಸಂಬಂಧವಿಲ್ಲ. ತಮ್ಮ ಪಾಲನ್ನು ಇತರರು ತಿನ್ನುತ್ತಿರುವುದರ ವಿರುದ್ಧ ಬುಡ್ಗ/ ಬೇಡ ಜಂಗಮರು ದಶಕಗಳಿಂದಲೂ ಹೋರಾಟ ಮಾಡುತ್ತಲೇ ಇದ್ದಾರೆ. ರಾಜಕೀಯ ಪ್ರಾತಿನಿಧ್ಯ, ಪ್ರಭಾವ ಇಲ್ಲದ ಈ ಬುಡ್ಗ/ಬೇಡಜಂಗಮ ಎಂಬ ಅಸಂಘಟಿತ ನತದೃಷ್ಟರ ಹೋರಾಟಕ್ಕೆ ನಮ್ಮ ಸರಕಾರಗಳು ಜಾಣ ಕಿವುಡಾಗುತ್ತಲೇ ಇವೆ! ‘‘ಬುಡ್ಗ/ಬೇಡಜಂಗಮರು ಮತ್ತು ಬೇಡುವ ಜಂಗಮರು ಒಂದೇ ಅಲ್ಲ, ಬೇರೆಬೇರೆ’’ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್ ಕೂಡ ಸ್ಪಷ್ಟವಾದ ತೀರ್ಪೊಂದನ್ನು ನೀಡಿದೆ. ಈ ತೀರ್ಪಿನ ಆಧಾರದ ಮೇಲೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ದತ್ತಾಂಶ ಕಲೆಹಾಕಿ ಸರಕಾರ ಬುಡ್ಗ/ಬೇಡ ಜಂಗಮರಿಂದ ಬೇಡುವ ಜಂಗಮರನ್ನು ಬೇರ್ಪಡಿಸಿ ಆದೇಶ ಹೊರಡಿಸಬಹುದಿತ್ತು. ಆದರೆ ಸರಕಾರಕ್ಕೆ ಇಚ್ಛಾಶಕ್ತಿ ಇರಬೇಕಲ್ಲ!?
ನೂರಾರು ವರ್ಷಗಳ ಹಿಂದೆ ಆಂಧ್ರ ಪ್ರದೇಶದಿಂದ ಅಲೆಮಾರಿ ಜೀವನ ಸಾಗಿಸುತ್ತಾ ಬಂದಿರಬಹುದಾದ ಬುಡ್ಗ/ಬೇಡ ಜಂಗಮರು ಇಂದಿಗೂ ಅಲೆಮಾರಿ ಜೀವನವನ್ನೇ ಅನುಭವಿಸುತ್ತಿದ್ದಾರೆ. ಇವರಿಗೆ 1990ರವರೆಗೂ ತಮ್ಮ ಜಾತಿ ಯಾವುದೆಂದೇ ಗೊತ್ತಿರಲಿಲ್ಲ. ಊರ ಹೊರಗೆ ಯಾವುದೋ ಬಯಲಿನಲ್ಲಿ, ರೈಲ್ವೆ ಹಳಿಗಳ ಆಸುಪಾಸಿನಲ್ಲಿ, ಹೆದ್ದಾರಿ ಪಕ್ಕ, ಸ್ಮಶಾನಗಳ ಸೆರಗಿನಲ್ಲಿ, ಪಾಳು ಮಂಟಪಗಳಲ್ಲಿ ಹಳೆಯ ಬಟ್ಟೆ, ಟರ್ಪಾಲು, ಪ್ಲಾಸ್ಟಿಕ್ ಚೀಲಗಳಿಂದ ಗುಡಾರ, ಟೆಂಟುಗಳನ್ನು ಹಾಕಿಕೊಂಡು ಜೀವನ ನಡೆಸುವ ಇವರ ಮಾತೃಭಾಷೆ ಬುಡ್ಗಭಾಷೆ ಮತ್ತು ತೆಲುಗು ಭಾಷೆ. ಕುಲಶಾಸ್ತ್ರೀಯ ಅಧ್ಯಯನಕಾರರು ಮತ್ತು ಮಾನವ ಶಾಸ್ತ್ರಜ್ಞರು ಇವರ ಬದುಕುವ ಪ್ರದೇಶ ಮತ್ತು ವೇಷ, ಭಾಷೆಗಳನ್ನು ಆಧರಿಸಿ ಬುರ್ರ ಕತೆಯವರು, ಬಹುರೂಪಿಗಳು, ಬೈರಾಗಿಗಳು, ಭಿಕ್ಷುಕರು ಎಂದು ಕರೆದರು. ‘ಬುಡ್ಗ’ ಎಂಬ ತಂಬೂರಿವಾದ್ಯ ನುಡಿಸುತ್ತಾ ಭಿಕ್ಷೆ ಬೇಡುತ್ತಾ ಊರೂರು ಅಲೆಯುವ ಕಾರಣಕ್ಕೆ ಬುಡ್ಗ ಜಂಗಮರು ಎಂದು ಕರೆದರು.
ಅಳಿಲು, ಆಮೆ, ಉಡ, ಕಾಡುಬೆಕ್ಕು, ಮುಂಗುಸಿ, ಬಯಲು ಇಲಿಗಳನ್ನು ಬೇಟೆಯಾಡಿ ತಿನ್ನುವುದರಿಂದ ಇವರನ್ನು ಬೇಡಜಂಗಮ ಎಂದು ಕರೆದರು. ಬೇಡರಂತೆ ಬೇಟೆಯಾಡುವುದೇ ಇವರಿಗೆ ಬೇಡಜಂಗಮ ಎಂತಲೂ ಹೆಸರು ಬರಲು ಕಾರಣವಾಯಿತು. ಪರಿಶಿಷ್ಟ ಪಟ್ಟಿ ತಯಾರು ಮಾಡಿದವರು ಈ ಬಡವರಿಗೆ ಅನ್ಯಾಯವಾಗದಿರಲೆಂದು ಬುಡ್ಗ ಜಂಗಮ ಮತ್ತು ಬೇಡಜಂಗಮ ಎರಡೂ ಹೆಸರುಗಳನ್ನು ಸೇರಿಸಿರುವ ಸದುದ್ದೇಶವಿದ್ದಂತಿದೆ.ಆದರೆ ಇದನ್ನು ಬೇಡುವ ಜಂಗಮರು ದುರ್ಬಳಕೆ ಮಾಡಿಕೊಳ್ಳಬಹುದೆಂದು ಆಗಿನ ಕಾಲಕ್ಕೆ ಎಣಿಸಿರಲಾರರು.
ಬುಡ್ಗ/ಬೇಡ ಜಂಗಮರಿಗೆ ತಮ್ಮದೇ ಆದ ಬೆಡಗುಗಳಿವೆ, ಆಲಂ, ಅವದೂತ, ಇನಕೊಂಡ, ಈರಪಲ್ಲಿ ಮುಂತಾಗಿ 150 ಬೆಡಗುಗಳಿವೆ. ಆದರೆ ವೀರಶೈವ ಬೇಡುವ ಜಂಗಮರನ್ನು ತಗ್ಗಿನಮಠ, ಗಚ್ಚಿನಮಠ, ಹಿರೇಮಠ, ಚಿಕ್ಕಮಠ ಮುಂತಾಗಿ ಗುರುತಿಸುತ್ತಾರೆ. ಬುಡ್ಗ/ಬೇಡ ಜಂಗಮರಿಗೆ ಆರಾಧ್ಯ ದೈವಗಳೆಂದರೆ ಸುಂಕಲಮ್ಮ, ಜಂಬಾಲಮ್ಮ, ಮಾರಮ್ಮ, ಪೋಷಮ್ಮಗಳಾಗಿದ್ದು ಇವರಿಗೆ ಯಾವುದೇ ಗುರುಪೀಠಗಳಿಲ್ಲ. ಆದರೆ ಬೇಡುವ ಜಂಗಮರಿಗೆ ತಮ್ಮದೇ ಆದ ವೀರಶೈವ ಪುರಾಣಗಳಿವೆ. ಹೀಗೆ ಬುಡ್ಗ/ಬೇಡಜಂಗಮ ಮತ್ತು ಬೇಡುವ ಜಂಗಮರ ನಡುವೆ ಆಕಾಶ ಭೂಮಿಗಳ ಅಂತರವಿದೆ.
ಈ ವಿವಾದ ಆರಂಭವಾದುದು ಬುಡ್ಗ/ಬೇಡ ಜಂಗಮರ ಜನಸಂಖ್ಯೆ ಏಕಾಏಕಿ ಅತಿಯಾಗಿ ಬೆಳೆದ ಕಾರಣಕ್ಕೆ! ಕಳೆದ ಆರು ದಶಕಗಳಲ್ಲಿ ಜನಗಣತಿ ಆಯುಕ್ತರು ದಾಖಲಿಸಿದಂತೆ ಕರ್ನಾಟಕದಲ್ಲಿ ಬೇಡ/ಬುಡ್ಗ ಜಂಗಮರ ಸಂಖ್ಯೆ 1961ರಲ್ಲಿ 5,141 ಇದ್ದದ್ದು 1971ರಲ್ಲಿ 13,676ಕ್ಕೆ ಬೆಳೆಯಿತು. ನ್ಯಾ.ಸದಾಶಿವ ಆಯೋಗ ಗುರುತಿಸಿದಂತೆ ಕ್ರಮವಾಗಿ 1981ರಲ್ಲಿ 3,035, 1991ರಲ್ಲಿ 1,21,056, 2001ರಲ್ಲಿ 54,873, 2010ರಲ್ಲಿ 20,289ರಂತೆ ಹೆಚ್ಚುಕಡಿಮೆ ಆಗತೊಡಗಿತು. ಈಚೆಗೆ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯಂತೆ 2011ರಲ್ಲಿ 1,17,164 ಇದ್ದದ್ದು 2014ಕ್ಕೆ ಒಮ್ಮೆಲೇ 4,10,804 ಕ್ಕೆ ಏರಿತು! ಈ ರೀತಿಯಲ್ಲಿ ಇದೊಂದೇ ಸಮುದಾಯ ಏರುಪೇರಾಗಲು ಆಗ ಇದ್ದ ಸರಕಾರಗಳು ಮತ್ತು ಮುಖ್ಯಮಂತ್ರಿಗಳು ಕಾರಣವಾಗಿರಬಹುದು? ಏಕೆಂದರೆ ವೀರಶೈವ ಮುಖ್ಯಮಂತ್ರಿಗಳಿದ್ದಾಗ ಮಾತ್ರ ಅತ್ಯಂತ ಧೈರ್ಯವಾಗಿ ಬುಡ್ಗಜಂಗಮ ಮತ್ತು ಬೇಡಜಂಗಮ ಹೆಸರಲ್ಲಿ ಹೆಚ್ಚು ಜಾತಿ ಪ್ರಮಾಣಪತ್ರಗಳನ್ನು ಪಡೆಯಲು ಕಾರಣವಾಗಿರುವ ಸಾಧ್ಯತೆಯಿದೆ.
ಈ ಹಿಂದೆಯೇ 2011ರಲ್ಲಿ ಬುಡ್ಗ/ಬೇಡಜಂಗಮರ ಹೆಸರಲ್ಲಿ ವೀರಶೈವರು ಜಾತಿಪ್ರಮಾಣ ಪತ್ರ ಪಡೆದವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ನಾಡಿನ ಖ್ಯಾತ ಸಂಶೋಧಕ ಎಂ.ಎಂ. ಕಲಬುರ್ಗಿಯವರು ಬುಡ್ಗಜಂಗಮ ನೌಕರರ ಸಮಾವೇಶವೊಂದರಲ್ಲಿ ಮಾತಾಡುತ್ತಾ ‘‘ಬುಡ್ಗಜಂಗಮರಿಗೆ ಅರ್ಹವಾಗಿ ದೊರೆಯಬೇಕಿದ್ದ ಸೌಲಭ್ಯಗಳನ್ನು ವೀರಶೈವ ಜಂಗಮರು ಬೇಡ ಜಂಗಮರ ಹೆಸರಿನಲ್ಲಿ ಪಡೆಯುತ್ತಿದ್ದಾರೆ. ಇದಕ್ಕೆ ಕೆಲವು ಲಿಂಗಾಯತ ಮಠಾಧೀಶರು ಪ್ರೋತ್ಸಾಹ ನೀಡುತ್ತಿರುವುದು ದುರ್ದೈವ. ಮೇಲ್ವರ್ಗದವರು ಎನ್ನಿಸಿಕೊಂಡವರಿಂದಲೇ ಬುಡ್ಗಜಂಗಮರಿಗೆ ಅನ್ಯಾಯವಾಗುತ್ತಿದೆ. ಇದಕ್ಕೆ ಸಮಾಜದ ಪರವಾಗಿ ನಾನು ಕ್ಷಮೆ ಕೇಳುತ್ತೇನೆ..’’ ಎಂದಿದ್ದರು. ಈ ಹಿಂದೆ ಬುಡ್ಗಜಂಗಮ ಹೆಸರಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದ ರವೀಂದ್ರಸ್ವಾಮಿ ಎನ್ನುವವರಿಗೆ ಕರ್ನಾಟಕ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ಹಾಕಿತ್ತು. ಇಂದಿಗೂ ಇದಕ್ಕೆ ಸಂಬಂಧಿಸಿದ ನೂರಾರು ಪ್ರಕರಣಗಳು ಸಿ.ಆರ್.ಇ. ಸೆಲ್ನಲ್ಲಿ ಬಾಕಿ ಇವೆ. ಇಷ್ಟಾದರೂ ಈ ಅನ್ಯಾಯ ಇಂದಿಗೂ ಮುಂದುವರಿಯುತ್ತಲೇ ಇದೆ!
ಇದಕ್ಕೆ ಪರಿಹಾರ ಕಷ್ಟಸಾಧ್ಯವಲ್ಲ, ಸಿ.ಆರ್.ಇ. ಸೆಲ್ ಅನ್ನು ಚುರುಕುಗೊಳಿಸಿ ಈವರೆಗೂ ಬುಡ್ಗ/ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದವರನ್ನು ತನಿಖೆಗೆ ಒಳಪಡಿಸಬಹುದು, ಅವರ ಹಿನ್ನೆಲೆ ಮತ್ತು ಕುಲಶಾಸ್ತ್ರೀಯ ಅಧ್ಯಯನದಿಂದ ನಕಲಿಗಳನ್ನು ಬೇರ್ಪಡಿಸಿ ಪರಿಹರಿಸುವುದು ಸುಲಭ. ಬೇಡಜಂಗಮ ಎನ್ನುವುದೇ ಈ ಸಮಸ್ಯೆಗೆ ಕಾರಣವಾಗಿರುವುದರಿಂದ ಪರಿಶಿಷ್ಟ ಜಾತಿಪಟ್ಟಿಯಿಂದ ಬೇಡಜಂಗಮ ತೆಗೆದು ಕೇವಲ ಬುಡ್ಗಜಂಗಮ ಹೆಸರನ್ನು ಮಾತ್ರ ಉಳಿಸಿಕೊಳ್ಳಬಹುದು. ಬೇಡಜಂಗಮ ಜಾತಿಪ್ರಮಾಣಪತ್ರ ನೀಡುವಾಗ ಸುಪ್ರೀಂ ಕೋರ್ಟ್ನ ಆದೇಶದಂತೆ ಆಯಾ ವ್ಯಕ್ತಿಯ ಸ್ಥಳಪರಿಶೀಲನೆ ಮಾಡಿ ಅರ್ಹರಿಗೆ ಮಾತ್ರ ಜಾತಿ ಪ್ರಮಾಣಪತ್ರ ನೀಡಲು ತಹಶೀಲ್ದಾರರಿಗೆ ಸರಕಾರ ಆದೇಶ ನೀಡಬಹುದಿತ್ತು, ಪರಿಹಾರಗಳೇನೋ ಇವೆ ಆದರೆ ಎಲ್ಲದಕ್ಕೂ ಸರಕಾರಕ್ಕೆ ಇಚ್ಛಾಶಕ್ತಿ ಇರಬೇಕಷ್ಟೆ.
ಇದೀಗ ನ್ಯಾ.ನಾಗಮೋಹನದಾಸ್ ಆಯೋಗದ ವರದಿ ನಂತರ ಇವರಿಗೆ ಹೊಸ ಸಮಸ್ಯೆ ಎದುರಾಗಿದೆ. ದಾಸ್ ವರದಿಯಲ್ಲಿ ಇವರನ್ನು ಪ್ರವರ್ಗ-‘ಎ’ಗೆ ಸೇರಿಸಿ ಮೂರು ಲಕ್ಷ ಹತ್ತು ಸಾವಿರ ಸರ್ಟಿಫಿಕೇಟ್ ಪಡೆದ ಇವರನ್ನು 1,40,000ಕ್ಕೆ ಇಳಿಸಿ ಬುಡ್ಗಜಂಗಮರನ್ನು ಬೇಡುವ ಜಂಗಮರಿಂದ ಬೇರ್ಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಸ್ತಾಪಿಸಲಾಗಿತ್ತು, ಇದಕ್ಕೆ ಯಾವ ಮಾನದಂಡಗಳನ್ನು ಬಳಸಿದ್ದಾರೋ ಗೊತ್ತಿಲ್ಲ! ಈ ಗೊಂದಲ ಜೀವಂತ ಇರುವಾಗಲೇ ಸಿದ್ದರಾಮಯ್ಯನವರ ಸರಕಾರ ಈ ಸಮುದಾಯವನ್ನು ಇತರ ಅಲೆಮಾರಿಗಳೊಂದಿಗೆ ಕಿತ್ತು ಕೊಲಂಬೋ ಎಂಬ ಸಂಘಟಿತ ಮತ್ತು ಬಲಿಷ್ಠ, ಸ್ಪಶ್ಯ ಸಮುದಾಯದೊಂದಿಗೆ ಸೇರಿಸಿ ಶಾಶ್ವತವಾಗಿ ಅಂತ್ಯಕ್ರಿಯೆ ಮಾಡಿದೆ!!;;