ಮೈಸೂರು | ಅಯೋಧ್ಯೆಯ ರಾಮಲಲ್ಲಾ ಮೂರ್ತಿಗೆ ಕಲ್ಲು ಸಿಕ್ಕಿದ ಜಮೀನಿನಲ್ಲಿ ರಾಮಮಂದಿರ ನಿರ್ಮಾಣಕ್ಕೆ ದಸಂಸ ಆಕ್ಷೇಪ
ಅಂಬೇಡ್ಕರ್, ಬೌದ್ಧ ನಳಂದ ವಿವಿ ಸ್ಥಾಪನೆಗೆ ಸಿದ್ಧತೆ

ಮೈಸೂರು : ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಿರುವ ರಾಮಲಲ್ಲಾ ವಿಗ್ರಹದ ಶಿಲೆ ಮೈಸೂರಿನ ಹಾರೋಹಳ್ಳಿ ಗ್ರಾಮದ ದಲಿತ ಸಮುದಾಯದ ರಾಮದಾಸ್ ಎಂಬವರ ಜಮೀನಿನಲ್ಲಿ ಸಿಕ್ಕಿರುವ ಹಿನ್ನೆಲೆಯಲ್ಲಿ ಈ ಸ್ಥಳದಲ್ಲಿ ದಕ್ಷಿಣ ಅಯೋಧ್ಯೆ ರಾಮಮಂದಿರ ಕಟ್ಟಬೇಕು ಎಂದು ಮುಂದಾಗಿದ್ದವರಿಗೆ ಸ್ಥಳೀಯ ಗ್ರಾಮಸ್ಥರು ಮತ್ತು ದಲಿತ ಸಂಘರ್ಷ ಸಮಿತಿ ಮುಖಂಡರು ತಡೆಯೊಡ್ಡಿದ್ದು, ಪಕ್ಕದಲ್ಲೇ ಅಂಬೇಡ್ಕರ್, ಬೌದ್ಧ ನಳಂದ ವಿವಿ ಸ್ಥಾಪನೆ ಮಾಡಲು ಶಪಥ ಮಾಡಿದ್ದಾರೆ.
ಮೈಸೂರು ಜಿಲ್ಲೆ ಜಯಪುರ ಹೋಬಳಿ ಹಾರೋಹಳ್ಳಿ ಗ್ರಾಮದ ರಾಮದಾಸ್ ಎಂಬವರ ಜಮೀನಿನಲ್ಲಿ ಅಯೋಧ್ಯೆ ರಾಮದಿರದಲ್ಲಿ ಪ್ರತಿಷ್ಠಾಪನೆ ಮಾಡಿರುವ ರಾಮಲಲ್ಲಾ ವಿಗ್ರಹದ ಕಲ್ಲು ಸಿಕ್ಕಿತ್ತು. ಈ ವೇಳೆ ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ ಅಂದಿನ ಸಂಸದ ಪ್ರತಾಪ್ ಸಿಂಹ ಈ ಜಾಗದಲ್ಲಿ ರಾಮಮಂದಿರ ಕಟ್ಟುವುದಾಗಿ ಘೋಷಣೆ ಮಾಡಿದ್ದರು. ಈ ವೇಳೆ ಜಮೀನು ಮಾಲೀಕ ರಾಮದಾಸ್ ಅವರ ಮನವೊಲಿಸಿ ರಾಮಮಂದಿರ ಕಟ್ಟಲು ಜಮೀನು ನೀಡುವಂತೆ ಮನವಿ ಮಾಡಿದ್ದರು.
ಇದೀಗ ಶಾಸಕ ಜಿ.ಟಿ.ದೇವೇಗೌಡ ಮತ್ತು ಉಡುಪಿ ಪೇಜಾವರ ಮಠದ ಪ್ರಸನ್ನಾನಂದಾತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಕೆಲವು ಹಿಂದೂ ಸಂಘಟನೆಗಳವರು ಶುಕ್ರವಾರ ರಾಮಮಂದಿರ ಕಟ್ಟಲು ಭೂಮಿ ಪೂಜೆ ಆಯೋಜನೆ ಮಾಡಿದ್ದರು. ವಿಷಯ ತಿಳಿದ ದಸಂಸ ಮುಖಂಡರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ರಾಮಮಂದಿರ ಕಟ್ಟುವುದು ಬೇಡ ಎಂದು ಹೇಳಿಕೆ ನೀಡಿದ್ದರು.
ಇದರಿಂದ ಗೊಂದಲಕ್ಕೊಳಗಾದ ರಾಮ ಮಂದಿರ ಆಚರಣಾ ಸಮಿತಿಯವರು ತಮ್ಮ ನಿಗದಿತ ಕಾರ್ಯಕ್ರಮವನ್ನು ಮುಂದೂಡಿದ್ದಾರೆ.
ಅಂಬೇಡ್ಕರ್, ಬೌದ್ಧ ನಳಂದ ವಿವಿ ಸ್ಥಾಪನೆಗೆ ಸಿದ್ಧತೆ: ಹಾರೋಹಳ್ಳಿ ಗ್ರಾಮದ ದಲಿತ ಸಮುದಾಯದ ರಾಮದಾಸ್ ಅವರ ಜಮೀನು ಸೇರಿದಂತೆ ಪಕ್ಕದ ಜಮೀನಿನಲ್ಲಿ ಅಂಬೇಡ್ಕರ್, ಬೌದ್ಧ ನಳಂದ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಲು ದಲಿತ ಸಂಘಟನೆಗಳ ಮುಖಂಡರು ಸಿದ್ಧತೆ ನಡೆಸಿದ್ದು, ಅಂಬೇಡ್ಕರ್ ಮತ್ತು ಬೌದ್ಧ ವಿಗ್ರಹ ತಂದು ಪೂಜೆ ಸಲ್ಲಿಸಿದರು.
ದಲಿತ ಮುಖಂಡ ಹಾಗೂ ಮಾಜಿ ಮೇಯರ್ ಪುರುಷೋತ್ತಮ್ ನೇತೃತ್ವದಲ್ಲಿ ಹಾರೋಹಳ್ಳಿ ಗ್ರಾಮದ ರಾಮಲಲ್ಲಾ ವಿಗ್ರಹ ಸಿಕ್ಕಿರುವ ಜಮೀನಿನ ಪಕ್ಕದ ರಾಮದಾಸ್ ಅವರ ಸಹೋದರರ ಜಮೀನಿನಲ್ಲಿ ಜಮಾಯಿಸಿದ ಗ್ರಾಮಸ್ಥರು ಮತ್ತು ಅಕ್ಕಪಕ್ಕದ ಗ್ರಾಮದವರು ಸೇರಿದಂತೆ 500 ಕ್ಕೂ ಹೆಚ್ಚು ದಲಿತರು ರಾಮಮಂದಿರ ಕಟ್ಟುವುದಕ್ಕೆ ವಿರೋಧ ವ್ಯಕ್ತಪಡಿಸಿ, ರಾಮಮಂದಿರ ನಿರ್ಮಾಣ ಮಾಡಲು ಮುಂದಾದವರಿಗೆ ಧಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿತಾಪಂ ಮಾಜಿ ಸದಸ್ಯ ಹಾರೋಹಳ್ಳಿ ಸುರೇಶ್, ಗ್ರಾಪಂ ಸದಸ್ಯ ಹಾರೋಹಳ್ಳಿ ನಟರಾಜ್, ದಸಂಸ ಮುಖಂಡರಾದ ಶಂಭುಲಿಂಗಸ್ವಾಮಿ, ಚೋರನಹಳ್ಳಿ ಶಿವಣ್ಣ, ಎಡದೊರೆ ಮಹದೇವಯ್ಯ, ಕಲ್ಲಹಳ್ಳಿ ಕುಮಾರ್, ಚಲುವರಾಜು, ದೇವರಾಜು, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್, ವಕೀಲರಾದ ತಿಮ್ಮಯ್ಯ, ಪುಟ್ಟರಸ, ದೂರ ಪುಟ್ಟಸ್ವಾಮಿ, ಅರಸಿನಕೆರೆ ಶಿವರಾಜು, ಮಾವಿನಹಳ್ಳಿ ನಾಗೇಶ್, ಪ್ರಸನ್ನ ತಳೂರು ಮತ್ತಿತರರು ಇದ್ದರು.
ಮನುಸ್ಮತಿಯನ್ನು ಪ್ರೋತ್ಸಾಹಿಸುವ ಉಡುಪಿ ಮಠದ ಸ್ವಾಮೀಜಿ, ದಲಿತರ ಜಮೀನನಲ್ಲಿ ರಾಮಲಲ್ಲ ಮೂರ್ತಿ ಕಲ್ಲು ಸಿಕ್ಕಿತು ಎಂದು ರಾಮಮಂದಿರ ಕಟ್ಟುತ್ತೇವೆ ಎನ್ನುತ್ತಿದ್ದಾರೆ. ದಲಿತರ ಮೇಲೆ ನಿಜವಾದ ಕಾಳಜಿ ಇದ್ದರೆ ಅಯೋಧ್ಯೆ ರಾಮಮಂದಿರಕ್ಕೆ ರಾಮದಾಸ್ ಅವರನ್ನು ಟ್ರಸ್ಟಿ ಮಾಡಲಿ. ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ಮೂರ್ತಿಗೆ ಪೂಜೆ ಮಾಡಿಸಲಿ ಅಥವಾ ಉಡುಪಿ ಮಠದ ಪೀಠಾಪತಿ ಮಾಡಲಿ.
- ಕಲ್ಲಹಳ್ಳಿ ಕುಮಾರ್, ದಸಂಸ ಮುಖಂಡ
ನಾವು ಭೀಮ ವಂಶಸ್ಥರು. ನಮಗೆ ರಾಮ ಏಕೆ ಬೇಕು? ವೈಜ್ಞಾನಿಕವಾಗಿ ಇಲ್ಲಿ ಶಿಕ್ಷಣ ನೀಡಬೇಕು. ಸಂವಿಧಾನ ಬದಲಾಯಿಸುತ್ತೇವೆ ಎಂದು ಹೊರಟಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದಲಿತರನ್ನು ಮುಂದೆ ಬಿಟ್ಟುಕೊಂಡು ದಕ್ಷಿಣದಲ್ಲಿ ರಾಮಮಂದಿರ ಕಟ್ಟಬೇಕು ಎಂಬ ಸಂಚನ್ನು ರೂಪಿಸಿದ್ದಾರೆ. ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ.
-ಪುರುಷೋತ್ತಮ್, ಮಾಜಿ ಮೇಯರ್
ದಕ್ಷಿಣ ಭಾಗದಲ್ಲಿ ಅದರಲ್ಲೂ ಮೈಸೂರು ಭಾಗದಲ್ಲಿ ಹೆಚ್ಚು ವೈಚಾರಿಕತೆ ಇದ್ದು, ಇಲ್ಲಿನ ಜನ ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು, ಕನಕದಾಸ, ಪೆರಿಯಾರ್ ಸೇರಿದಂತೆ ಅನೇಕ ಮಹನೀಯರ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದಾರೆ. ಇಂತಹ ವೈಚಾರಿಕತೆಯನ್ನು ನಾಶಗೊಳಿಸುವ ಉದ್ದೇಶದಿಂದ ಬಿಜೆಪಿ ಮತ್ತು ಆರೆಸ್ಸೆಸ್ ಸಂಚು ರೂಪಿಸಿ ದಕ್ಷಿಣದಲ್ಲಿ ಅಯೋಧ್ಯೆ ರಾಮಮಂದಿರ ಕಟ್ಟುತ್ತೇವೆ ಎಂದು ಇಲ್ಲಿನ ಸಾಮರಸ್ಯವನ್ನು ಹಾಳು ಮಾಡಲು ಹೊರಟಿದ್ದಾರೆ.
- ಚೋರನಹಳ್ಳಿ ಶಿವಣ್ಣ, ದಸಂಸ ಜಿಲ್ಲಾ ಸಂಚಾಲಕ