ಮೈಸೂರು | ಎಸ್ಸಿ ಸರಕಾರಿ ನೌಕರರ ಬಡ್ತಿ ನಿಲ್ಲಿಸಿ ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯ; ಪ್ರತಿಭಟನೆಗೆ ಮುಂದಾಗಿದ್ದ ಭಾಸ್ಕರ್ ಪ್ರಸಾದ್ ಪೊಲೀಸ್ ವಶಕ್ಕೆ

ಮೈಸೂರು: ಪರಿಶಿಷ್ಟ ಜಾತಿ ಸರಕಾರಿ ನೌಕರರ ಬಡ್ತಿ ನಿಲ್ಲಿಸಿ ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಮೈಸೂರಿನ ಚಾಮುಂಡಿ ಬೆಟ್ಟದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ವರೆಗೆ ಅರಬೆತ್ತಲೆ ಪಾದಯಾತ್ರೆ ಹಮ್ಮಿಕೊಂಡಿದ್ದ ಮಾದಿಗ ಹೋರಾಟ ಸಮಿತಿ ಮುಖ್ಯಸ್ಥ ಬಿ.ಆರ್. ಭಾಸ್ಕರ್ ಪ್ರಸಾದ್ ಅವರನ್ನು ಮೈಸೂರು ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಒಳಮೀಸಲಾತಿ ಜಾರಿಯಾಗುವವರೆಗೂ ಪರಿಶಿಷ್ಟ ಜಾತಿ ಸರಕಾರಿ ನೌಕರರಿಗೆ ಬಡ್ತಿ ನೀಡುವುದಿಲ್ಲ ಎಂದು ರಾಜ್ಯ ಸರಕಾರ ಭರವಸೆ ನೀಡಿತ್ತಾದರೂ. ಈಗ ಪರಿಶಿಷ್ಟ ಜಾತಿ ನೌಕರರಿಗೆ ಬಡ್ತಿ ನೀಡುತ್ತಿದೆ ಎಂಬುದನ್ನು ಖಂಡಿಸಿ ಅರಬೆತ್ತಲೆ ಪಾದಯಾತ್ರೆ ಹಮ್ಮಿಕೊಂಡಿದ್ದ ಬಿ.ಆರ್.ಭಾಸ್ಕರ್ ಪ್ರಸಾದ್ ನೇತೃತ್ವದ ಮಾದಿಗ ಹೋರಾಟ ಸಮಿತಿ ಸೋಮವಾರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ವಿರುದ್ಧ ಅವಹೇಳನಾಕಾರಿಯಾಗಿ ಬಿ.ಆರ್.ಭಾಸ್ಕರ್ ಪ್ರಸಾದ್ ಮಾತನಾಡಿದ್ದಾರೆ. ಆದ್ದರಿಂದ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪರಿಶಿಷ್ಟ ಜಾತಿ ಹೊಲೆಯ ಸಮುದಾಯದ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಮತ್ತು ಕೆಲ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲೂ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ನಡುವೆ ಎರಡೂ ಗುಂಪುಗಳ ಮಧ್ಯೆ ಸಂಘರ್ಷ ಏರ್ಪಡುವ ಮುನ್ಸೂಚನೆ ಹಿನ್ನಲೆಯಲ್ಲಿ ಬಿ.ಆರ್.ಭಾಸ್ಕರ್ ಪ್ರಸಾದ್ ಸೇರಿದಂತೆ ಪ್ರತಿಭಟನೆಗೆ ಆಗಮಿಸುತ್ತಿದ್ದ ಮಾದಿಗ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿ.ಆರ್.ಭಾಸ್ಕರ್ ಪ್ರಸಾದ್ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದ್ದ ಪರಿಶಿಷ್ಟ ಜಾತಿ ಬಲಗೈ ಸಮುದಾಯದವರಿಗೂ ಪ್ರತಿಭಟನೆ ಮಾಡಲು ಪೊಲೀಸರು ಅವಕಾಶ ಕೊಡಲಿಲ್ಲ.