ಚುನಾವಣಾ ರಾಜಕಾರಣಕ್ಕೆ ಸಚಿವ ಕೆ.ಎನ್.ರಾಜಣ್ಣ ನಿವೃತ್ತಿ ಘೋಷಣೆ

ಕೆ.ಎನ್.ರಾಜಣ್ಣ
ಮೈಸೂರು: ಚುನಾವಣಾ ರಾಜಕಾರಣಕ್ಕೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ನಿವೃತ್ತಿ ಘೋಷಿಸಿದ್ದಾರೆ.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಈಗಾಗಲೇ 75 ವರ್ಷ ಆಗಿದೆ. ಮುಂದಿನ ಚುನಾವಣೆ ಆಗುವಾಗ 78 ವರ್ಷ ತುಂಬಲಿದೆ. ಚುನಾವಣೆಗೆ ನಿಂತು ಗೆದ್ದರೂ ಆರೋಗ್ಯದ ದೃಷ್ಟಿಯಿಂದ ಜನರ ಸೇವೆ ಮಾಡುವುದಕ್ಕೆ ಆಗುವುದಿಲ್ಲ ಹಾಗಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಲಿದ್ದೇನೆ ಎಂದು ಹೇಳಿದರು.
ಯುವಕರಿಗೆ ಅವಕಾಶ ನೀಡಬೇಕು ಎನ್ನೋದು ನನ್ನ ಅಭಿಪ್ರಾಯ. ನನಗೆ ವಯಸ್ಸಾಗುವ ಕಾರಣ ಚುನಾವಣಾ ರಾಜಕೀಯ ಕಷ್ಟ. ಹಾಗಾಗಿ ಚುನಾವಣೆ ರಾಜಕಾರಣಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಆದರೆ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಸಾಧನ ಸಮಾವೇಶ ಹಿನ್ನೆಲೆ ಯಾವ ಸಾಧನೆ ಮಾಡಿ ಸಮಾವೇಶ ಮಾಡ್ತಿದ್ದಾರೆ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿ ಒಂದು ವಿರೋಧ ಪಕ್ಷವಾಗಿ ಟೀಕೆ ಮಾಡಬೇಕು. ಹಾಗಾಗಿ ಟೀಕೆ ಮಾಡ್ತಿದ್ದಾರೆ. ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯೆ ಕೊಡುವ ಅವಶ್ಯಕತೆ ಇಲ್ಲ ಎಂದರು.