ಎಚ್.ಡಿ.ಕೋಟೆ | ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆ

ಮೈಸೂರು : ಮಗಳು ಯುವಕನೋರ್ವನೊಂದಿಗೆ ಮನೆ ಬಿಟ್ಟು ಓಡಿ ಹೋಗಿರುವುದರಿಂದ ಮನನೊಂದು ಗಂಡ, ಹೆಂಡತಿ ಮತ್ತು ಮಗಳು ಸೇರಿದಂತೆ ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಬೂದನೂರು ಗ್ರಾಮದ ಮಹದೇವಸ್ವಾಮಿ (50), ಪತ್ನಿ ಮಂಜುಳಾ (40), ಮತ್ತು ಮಗಳು ಹರ್ಷಿತ (20) ಮೃತರು.
ಹಲವಾರು ವರ್ಷಗಳಿಂದ ಎಚ್.ಡಿ.ಕೋಟೆ ಪಟ್ಟಣದ ಡ್ರೈವರ್ ಕಾಲೋನಿಯಲ್ಲಿ ಮಹದೇವಸ್ವಾಮಿ ಕುಟುಂಬ ನೆಲೆಸಿತ್ತು. ಮಹದೇವಸ್ವಾಮಿ ಅವರ ಹಿರಿಯ ಪುತ್ರಿ ಯುವಕನೋರ್ವನೊಂದಿಗೆ ಮನೆ ಬಿಟ್ಟು ಹೋಗಿದ್ದಳು ಎನ್ನಲಾಗಿದೆ. ಇದರಿಂದ ಮಹದೇವಸ್ವಾಮಿ, ಪತ್ನಿ ಮಂಜುಳ ಮತ್ತು ಮಗಳು ಹರ್ಷಿತ ಮನನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೂವರು ಮನೆಯಿಂದ ಕಾಣೆಯಾಗಿದ್ದರು. ಪಟ್ಟಣದ ವಡ್ಡರಗುಡಿ ಹೆಬ್ಬಾಳ ಕೆರೆ ಏರಿ ಮೇಲೆ ಇವರ ಚಪ್ಪಲಿ, ಬೈಕ್ ಪತ್ತೆಯಾಗಿದೆ. ಮೂವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸಿದಾಗ ಮೂವರ ಮೃತ ದೇಹ ಪತ್ತೆಯಾಗಿದೆ.
ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಆರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.