ನಕ್ಸಲ್ ಉಗ್ರವಾದಿಗಳ ಜೊತೆ ಜೊತೆಗೇ ಬಡತನ, ಅಸಮಾನತೆಯೂ ಅಳಿಯಲಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪಹಲ್ಗಾಮ್ನಲ್ಲಿ 25ಕ್ಕೂ ಅಧಿಕ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ನಾಲ್ವರು ಉಗ್ರರಿಗಾಗಿ ಸೇನೆ ಇನ್ನೂ ಹುಡುಕಾಡುತ್ತಿದೆ. ಅವರ ಕುರಿತಂತೆ ಮಾಹಿತಿ ನೀಡುವವರಿಗೆ ಬಹುಮಾನಗಳನ್ನೂ ಘೋಷಿಸಿದೆ. ಅವರನ್ನು ಹುಡುಕಾಡುತ್ತಾ, ಪಾಕಿಸ್ತಾನದ ಉಗ್ರರ ನೆಲೆಗಳ ವಿರುದ್ಧವೂ ಕಾರ್ಯಾಚರಣೆಗಳನ್ನು ನಡೆಸಿದ್ದಾಯಿತು. ಇವುಗಳ ನಡುವೆಯೇ ಛತ್ತೀಸ್ಗಡದಲ್ಲಿ ನಮ್ಮ ಸೇನೆ 27 ನಕ್ಸಲೀಯ ಉಗ್ರವಾದಿಗಳನ್ನು ಎನ್ಕೌಂಟರ್ನಲ್ಲಿ ಕೊಂದು ಹಾಕಿದ್ದೇವೆೆ ಎಂದು ಹೇಳಿಕೊಂಡಿದೆ. ಈ ಕಾರ್ಯಾಚರಣೆಯಲ್ಲಿ ಮಾವೋವಾದಿ ಸಿಪಿಎಂ ಪಕ್ಷದ ಕಾರ್ಯದರ್ಶಿ ಬಸವರಾಜ್ ಅವರೂ ಹತ್ಯೆಗೀಡಾಗಿದ್ದು, ನಕ್ಸಲೀಯ ಚಳವಳಿಯ ಮೇಲೆ ಇದು ಭಾರೀ ಪರಿಣಾಮಗಳನ್ನು ಬೀರಲಿದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿಯೇ ಸೇನೆಯು ಇದೊಂದು ಮಹತ್ವದ ಕಾರ್ಯಾಚರಣೆ ಎಂದು ಹೇಳಿಕೊಳ್ಳುತ್ತಿದೆ. ಇದರ ಬೆನ್ನಿಗೇ ನಕ್ಸಲ್ ವಿರೋಧಿ ಕಾರ್ಯಾಚರಣೆಗಳು ಮುಂದುವರಿಯುತ್ತಿದ್ದು ಇನ್ನಷ್ಟು ಜೀವಗಳು ನೆಲಕಚ್ಚುತ್ತಲೇ ಇವೆ. ಸರಕಾರವಂತೂ ಇದನ್ನು ತನ್ನ ಸಾಧನೆಯ ಭಾಗವಾಗಿ ಕೊಚ್ಚಿಕೊಳ್ಳುತ್ತಿದೆ. 2026ರ ಮಾರ್ಚ್ ಒಳಗಾಗಿ ಭಾರತವನ್ನು ನಕ್ಸಲ್ ಮುಕ್ತಗೊಳಿಸುವ ಹೋರಾಟದಲ್ಲಿ ಇದೊಂದು ಮೈಲುಗಲ್ಲು ಎಂದು ಗೃಹ ಸಚಿವ ಅಮಿತ್ ಶಾ ಈಗಾಗಲೇ ಹೇಳಿಕೆ ನೀಡಿದ್ದಾರೆ. ಕೇವಲ ಕಳೆದ 45 ದಿನಗಳಲ್ಲಿ 325ಕ್ಕೂ ಹೆಚ್ಚು ನಕ್ಸಲರ ಹತ್ಯೆ ಮಾಡಲಾಗಿದ್ದು, 2,000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಛತ್ತೀಸ್ಗಡ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಅವರು ಕಳೆದ ತಿಂಗಳು ನಡೆದ ಹೂಡಿಕೆದಾರರ ಸಭೆಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ನಕ್ಸಲರ ಹತ್ಯೆಗೂ ಹೂಡಿಕೆದಾರರಿಗೂ ಪರಸ್ಪರ ಸಂಬಂಧವಿದೆ. ಈ ಕಾರ್ಯಾಚರಣೆಗಳ ಅಂತಿಮ ಉದ್ದೇಶವೇ ಈಶಾನ್ಯ ಭಾರತದ ಅರಣ್ಯಗಳನ್ನು ಬೃಹತ್ ಹೂಡಿಕೆದಾರರಿಗೆ ಮುಕ್ತವಾಗಿಸುವುದು. ಎಲ್ಲಿಯವರೆಗೆ ಈ ಭಾಗದಲ್ಲಿ ನಕ್ಸಲರು ಸಂಪೂರ್ಣವಾಗಿ ಇಲ್ಲವಾಗುವುದಿಲ್ಲವೋ, ಕಾಡಿನ ಮೇಲೆ ಹಕ್ಕು ಸಾಧಿಸುತ್ತಿರುವ ಆದಿವಾಸಿಗಳನ್ನು ಸಂಪೂರ್ಣ ಬಗ್ಗು ಬಡಿಯಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಅರಣ್ಯದಲ್ಲಿ ಹಸ್ತಕ್ಷೇಪ ನಡೆಸುವುದು ಕಷ್ಟ. ಒಂದೆಡೆ ನಕ್ಸಲೀಯರ ವಿರುದ್ಧ ಬಿರುಸಿನ ಕಾರ್ಯಾಚರಣೆ ನಡೆಯುತ್ತಿರುವಾಗಲೇ, ಮಗದೊಂದೆಡೆ ಈ ಭಾಗದಲ್ಲಿ ಗಣಿಗಾರಿಕೆಯ ಸದ್ದೂ ಬಿರುಸನ್ನು ಪಡೆಯುತ್ತಿದೆ. ಸರಕಾರಕ್ಕೆ ನಕ್ಸಲರ ಜೊತೆಗೆ ಮಾತುಕತೆ, ಸಂಧಾನಗಳು ಬೇಕಾಗಿಲ್ಲ. ಯಾಕೆಂದರೆ, ಆಗ ಸರಕಾರ ಅರಣ್ಯಗಳ ಮೇಲಿರುವ ಆದಿವಾಸಿಗಳ ಹಕ್ಕನ್ನು ಮಾನ್ಯ ಮಾಡಬೇಕಾಗುತ್ತದೆ. ಅರಣ್ಯ ಭೂಮಿಯನ್ನು ಬೃಹತ್ ಗಣಿಗಾರಿಕೆಗಳಿಗೆ ಒಪ್ಪಿಸುವುದಿಲ್ಲ ಎನ್ನುವ ಭರವಸೆ ನೀಡಬೇಕಾಗುತ್ತದೆ. ನಕ್ಸಲರು ಮಾತುಕತೆಗೆ ಸಿದ್ಧರಿದ್ದರೂ, ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರಲು ಮುಂದಾಗಿದ್ದರೂ ಸರಕಾರ ಏಕಮುಖ ದಾಳಿಯನ್ನು ನಡೆಸುತ್ತಿದೆ ಎಂದು ಈಗಾಗಲೇ ಎಡಪಂಥೀಯ ನಾಯಕರು ಆರೋಪಿಸಿದ್ದಾರೆ. ಆ ಆರೋಪದಲ್ಲಿ ಹುರುಳಿಲ್ಲದೇ ಇಲ್ಲ.
ಕಾಶ್ಮೀರದಲ್ಲಿ ಹಿಂಸಾಚಾರಕ್ಕಿಳಿದಿರುವ ಉಗ್ರರ ಹಿಂದೆ ಪಾಕಿಸ್ತಾನವಿದೆ. ಅವರಿಗೆ ತರಬೇತಿ ಕೊಡುವವರು ಮತ್ತು ಅವರ ಉದ್ದೇಶಗಳ ಬಗ್ಗೆ ನಮಗೆ ಸ್ಪಷ್ಟವಿದೆ. ಆದರೆ ನಕ್ಸಲ್ ಉಗ್ರವಾದಿಗಳ ಸಮಸ್ಯೆ ಬರೇ ರಾಜಕೀಯವಾದುದು ಮಾತ್ರವಲ್ಲ, ಅದು ಸಾಮಾಜಿಕವಾದುದು ಕೂಡ. ಈ ದೇಶದಲ್ಲಿ ನಕ್ಸಲ್ ಉಗ್ರವಾದವನ್ನು ಹುಟ್ಟಿಸಿ ಹಾಕಿದ್ದು ಬಡತನ, ಹಸಿವು, ಅಸಮಾನತೆ. ಇಲ್ಲಿರುವ ಉಗ್ರವಾದಿಗಳು ಯಾವುದೋ ಪಾಕಿಸ್ತಾನ ಅಥವಾ ಚೀನಾದಿಂದ ಬಂದವರಲ್ಲ. ಇವರೆಲ್ಲರೂ ನಮ್ಮದೇ ನೆಲದ ಮಕ್ಕಳು. ಆದಿವಾಸಿಗಳು, ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಯಾರದೋ ಹಿತಾಸಕ್ತಿಗಾಗಿ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ಈಶಾನ್ಯ ಭಾರತದಲ್ಲಿ ಸರಕಾರದ ವಿರುದ್ಧದ ಸಂಘರ್ಷವಾಗಿ ಬದಲಾಯಿತು. ಇಲ್ಲಿರುವ ಅಸಹಾಯಕ ಆದಿವಾಸಿಗಳು ನಕ್ಸಲ್ ಪ್ರಭಾವಕ್ಕೆ ಸಿಲುಕಿಕೊಂಡರು. ಇವರು ಅನುಸರಿಸಿರುವ ದಾರಿ ತಪ್ಪು ಎನ್ನುವುದರಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಹಿಂಸೆಯಿಂದ ನ್ಯಾಯವನ್ನು ಪಡೆಯುವುದು ಅಸಾಧ್ಯ. ಅದು ಇನ್ನಷ್ಟು ಹಿಂಸೆಯನ್ನೇ ಸೃಜಿಸುತ್ತದೆ. ಆದರೆ, ಅವರನ್ನು ಹಿಂಸೆಗಿಳಿಯುವ ಅನಿವಾರ್ಯ ಸ್ಥಿತಿ ನಿರ್ಮಾಣ ಮಾಡಿರುವುದು ನಮ್ಮದೇ ವ್ಯವಸ್ಥೆ ಎನ್ನುವುದನ್ನು ನಾವು ಮರೆಯಬಾರದು. ಹಿಂಸೆಗಿಳಿದವರು ನಮ್ಮವರೇ ಆಗಿರುವುದರಿಂದ ಗರಿಷ್ಠಮಟ್ಟದಲ್ಲಿ ಮಾತುಕತೆಯ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಬಗ್ಗೆ ಸರಕಾರ ಯೋಚಿಸಬೇಕು. ಆದರೆ, ಆದಿವಾಸಿಗಳು ಅರಣ್ಯ ಭೂಮಿಯನ್ನು ಉದ್ಯಮಪತಿಗಳಿಗೆ ಬಿಟ್ಟುಕೊಡಲು ಸಿದ್ಧರಿಲ್ಲ. ಕಾಡುಗಳನ್ನು ಗಣಿಗಾರಿಕಾ ಪ್ರದೇಶಗಳನ್ನಾಗಿಸಿ ಸರ್ವನಾಶ ಮಾಡಲು ಅನುಮತಿ ನೀಡುತ್ತಿಲ್ಲ. 2026ರ ಒಳಗೆ ಈ ದೇಶದಲ್ಲಿ ನಕ್ಸಲ್ ಉಗ್ರವಾದಿಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಾಗುತ್ತದೆ ಎಂದು ಈಗಾಗಲೇ ಸರಕಾರ ಘೋಷಿಸಿದೆ. ಈ ಗುರಿಯನ್ನು ಸಾಧಿಸುವುದಕ್ಕಾಗಿ ‘ನಿರಂತರ ಮತ್ತು ನಿರ್ದಯ’ ಕಾರ್ಯಾಚರಣೆಗಳನ್ನು ಮಾಡಲಾಗುತ್ತಿದೆ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆಯ ಮಹಾ ನಿರ್ದೇಶಕ ಜಿ. ಪಿ. ಸಿಂಗ್ ಕಳೆದ ತಿಂಗಳಾಂತ್ಯದಲ್ಲಿ ಹೇಳಿದ್ದರು. ಪಾಕಿಸ್ತಾನಿ ಉಗ್ರರ ವಿರುದ್ಧದ ಸಂಘರ್ಷ ವಿಕೋಪಕ್ಕೆ ತಲುಪುವಷ್ಟರಲ್ಲಿ ಟ್ರಂಪ್ ಮಧ್ಯಪ್ರವೇಶ ಕದನ ವಿರಾಮಕ್ಕೆ ಕಾರಣವಾಯಿತು. ಆದರೆ ದೇಶದೊಳಗಿರುವ, ನಮ್ಮದೇ ನೆಲದ ಆದಿವಾಸಿಗಳು, ಬುಡಕಟ್ಟು ಸಮುದಾಯದ ವಿರುದ್ಧದ ಈ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿ ಕದನ ವಿರಾಮ ಘೋಷಣೆಗೆ ಅನುವು ಮಾಡಿಕೊಡುವ ಪ್ರಯತ್ನಗಳು ಯಾಕೆ ನಡೆಯುತ್ತಿಲ್ಲ? ಪಾಕಿಸ್ತಾನದ ಜೊತೆಗೆ ಕದನ ವಿರಾಮ ಒಪ್ಪಿಕೊಂಡ ಸರಕಾರಕ್ಕೆ, ನಮ್ಮದೇ ಜನರ ಜೊತೆಗೆ ನಡೆಯುತ್ತಿರುವ ಸಂಘರ್ಷದಲ್ಲಿ ಯಾಕೆ ಕದನವಿರಾಮದ ಅಗತ್ಯ ಕಾಣುತ್ತಿಲ್ಲ?
2026ರ ಒಳಗೆ ನಕ್ಸಲ್ ಉಗ್ರವಾದ ಅಳಿಯುತ್ತದೆ ಎಂದಾದರೆ ನಿಜಕ್ಕೂ ಅದು ಭಾರತದ ಪಾಲಿಗೆ ನೆಮ್ಮದಿಯ ವಿಷಯ. ಆದರೆ ಅದರ ಜೊತೆ ಜೊತೆಗೇ ಅಲ್ಲಿರುವ ಆದಿವಾಸಿಗಳ ಸಮಸ್ಯೆಗಳು, ಅವರ ಆತಂಕ, ಭಯಗಳೂ ಇಲ್ಲವಾಗುತ್ತವೆಯೆ? ಎನ್ನುವ ಪ್ರಶ್ನೆಗೆ ಸರಕಾರ ಉತ್ತರ ನೀಡಿಲ್ಲ. ಕೋವಿಯಿಂದ ವ್ಯಕ್ತಿಗಳನ್ನು ಸುಟ್ಟು ಹಾಕುವುದರಿಂದಷ್ಟೇ ಪರಿಹಾರ ಸಾಧ್ಯವಿಲ್ಲ. ಹಸಿವು, ಬಡತನ, ಅಸಮಾನತೆಯನ್ನು ಇಲ್ಲವಾಗಿಸುವಲ್ಲಿ ಪರಿಣಾಮಕಾರಿಯಾಗಿ ಯೋಜನೆಗಳನ್ನು ರೂಪಿಸದೇ, ಈ ವಿಷಯಗಳನ್ನು ಎತ್ತಿದವರಿಗೆ ಕೋವಿಯನ್ನು ತೋರಿಸಿ ಬಾಯಿ ಮುಚ್ಚಿಸುವುದರಿಂದ ನಕ್ಸಲ್ ಉಗ್ರವಾದವನ್ನ್ನು ತಡೆಯುವುದು ಅಸಾಧ್ಯ. ಅದು ಇನ್ನೊಂದು ರೂಪದಲ್ಲಿ ಮತ್ತೆ ಮೈದಳೆದು ನಿಲ್ಲುವ ಸಾಧ್ಯತೆಗಳಿರುತ್ತವೆ. ಕೇಂದ್ರ ಸರಕಾರದ ಆರ್ಥಿಕ ನೀತಿಯ ಸಕಲ ಲಾಭಗಳನ್ನು ಬೃಹತ್ ಉದ್ಯಮಿಗಳು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇದೀಗ ಆದಿವಾಸಿಗಳ ವಿರುದ್ಧ ಸರಕಾರ ನಡೆಸುತ್ತಿರುವ ಕಾರ್ಯಾಚರಣೆಯೂ ಪರೋಕ್ಷವಾಗಿ ಉದ್ಯಮಿಗಳಿಗೆ ಪೂರಕವಾಗಿಯೇ ಇದೆ. ಇದಕ್ಕೆ ಒಂದು ಉದಾಹರಣೆ ಮಹಾರಾಷ್ಟ್ರದ ಗಡ್ಚಿರೋಳಿ. ಈ ಪ್ರದೇಶ ಒಮ್ಮೆ ಮಾವೋವಾದಿಗಳ ಹಿಡಿತದಲ್ಲಿತ್ತು. ಹಂತ ಹಂತವಾಗಿ ಮಾವೋವಾದಿಗಳ ನಿಯಂತ್ರಣದಿಂದ ಈ ಪ್ರದೇಶ ಕಳಚಿಕೊಳ್ಳುತ್ತಿದ್ದಂತೆಯೇ ಇದೀಗ ಈ ಪ್ರದೇಶದಲ್ಲಿ ಅದಿರು ಸಂಸ್ಕರಣಾ ಘಟಕಕ್ಕೆ ಸರಕಾರ ಅನುಮತಿ ನೀಡಿದೆ. ಇದರ ಜೊತೆ ಜೊತೆಗೇ ಒಂದು ಲಕ್ಷಕ್ಕೂ ಅಧಿಕ ಮರಗಳ ಮಾರಣ ಹೋಮಕ್ಕೂ ಅನುಮತಿ ದೊರಕಿದೆ. ಈಶಾನ್ಯ ಭಾರತದಲ್ಲಿ ಆದಿವಾಸಿಗಳು, ನಕ್ಸಲೀಯರ ಕೈಯಿಂದ ಅರಣ್ಯ ಪ್ರದೇಶಗಳು ಮುಕ್ತವಾದಂತೆಯೇ ಅದರ ಗತಿ ಏನಾಗುತ್ತದೆ ಎನ್ನುವುನ್ನು ಊಹಿಸುವುದು ಕಷ್ಟವೇನಿಲ್ಲ. ಉಗ್ರವಾದ ನಿರ್ನಾಮವಾಗಲಿ. ಅದರ ಜೊತೆ ಜೊತೆಗೇ ಉಗ್ರರನ್ನು ಸೃಷ್ಟಿಸುವ ಬಡತನ, ಹಸಿವು, ಅಸಮಾನತೆ ಕೂಡ ನಿರ್ನಾಮವಾಗಲಿ. ಬಡವರನ್ನು ಸಾಯಿಸುವ ಮೂಲಕ ಬಡತನವನ್ನು ಇಲ್ಲವಾಗಿಸುವ ಪ್ರಯತ್ನ ಛತ್ತೀಸ್ಗಡದ ಸ್ಥಿತಿಯನ್ನು ಇನ್ನಷ್ಟು ಭೀಕರವಾಗಿಸಬಹುದು. ಈಶಾನ್ಯ ಅರಣ್ಯ ಪ್ರದೇಶಗಳಿಂದ ನಕ್ಸಲರನ್ನು ನಿರ್ನಾಮ ಮಾಡುವುದೇನೋ ಸರಿ, ಆದರೆ ಆ ಬಳಿಕ ಆ ಅರಣ್ಯ ಪ್ರದೇಶಗಳು, ಅಲ್ಲಿರುವ ಲಕ್ಷಾಂತರ ಮರಗಳು, ಜೀವವೈವಿಧ್ಯಕ್ಕೆ ಸರಕಾರ ಭದ್ರತೆಯನ್ನು ನೀಡಬೇಕು. ಇಲ್ಲವಾದರೆ, ನಕ್ಸಲ್ ವಿರೋಧಿ ಕಾರ್ಯಾಚರಣೆಯು ಈ ಪ್ರದೇಶವನ್ನು ಬಾಣಲೆಯಿಂದ ಬೆಂಕಿಗೆ ತಳ್ಳಿದಂತಾಗಬಹುದು. ಅಷ್ಟೇ.