ಮಂಡ್ಯ | ಜಯಕುಮಾರ್ ನಿಗೂಢ ಸಾವು ಪ್ರಕರಣ : ಎಸ್ಐಟಿ ತನಿಖೆಗೆ ಆಗ್ರಹಿಸಿ ಮೆರವಣಿಗೆ

ಮಂಡ್ಯ : ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ದಲಿತ ಯುವಕ ಜಯಕುಮಾರ್ ನಿಗೂಢ ಸಾವಿನ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸುವಂತೆ ಒತ್ತಾಯಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಕೆ.ಆರ್.ಪೇಟೆಯಲ್ಲಿ ಮೆರವಣಿಗೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಹುಲ್ಲಿನ ಬಣವೆಯಲ್ಲಿ ಜಯಕುಮಾರ್ ಮೃತದೇಹ ಸಿಕ್ಕಿದೆ. ಆದರೆ, ಆತ ಆತ್ಮಹತ್ಯೆ ಮಾಡಿಕೊಳ್ಳವ ಮನಸ್ಥಿತಿಯವನಲ್ಲ. ಆತನನ್ನು ಬೇರೆಡೆ ಕೊಲೆಮಾಡಿ ಹುಲ್ಲಿನ ಮೆದೆಗೆ ತಂದು ಹಾಕಲಾಗಿದೆ ಎಂದು ಆರೋಪಿಸಿದರು.
ಪ್ರಕರಣದ ಅನಿಲ್ಕುಮಾರ್ ರೌಡಿ ಶೀಟರ್ ಆಗಿದ್ದು, ಪೊಕ್ಸೊ ಪ್ರಕರಣದಲ್ಲಿ ಆರೋಪಿಯಾಗಿ ಕೆಲಕಾಲ ಜೈಲಿನಲ್ಲಿದ್ದು ಬಂದಿದ್ದಾನೆ. ಜಯಕುಮಾರ್ ಸಾವಿನಲ್ಲಿ ಅನಿಲ್ಕುಮಾರ್ ಕೈವಾಡವಿದ್ದು, ಸರಕಾರ ಈ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಧರಣಿಯಲ್ಲಿ ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ದಸಂಸ ಮುಖಂಡ ಮಾವಳ್ಳಿ ಶಂಕರ್, ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ರೈತಸಂಘದ ರಾಜೇಗೌಡ, ಜಯರಾಂ, ಪ್ರಗತಿಪರ ಚಿಂತಕರಾದ ಶಿವಸುಂದರ್, ದು.ಸರಸ್ವತಿತಿ, ಗೌರಿ, ಸಿಐಟಿಯು ಸಿ.ಕುಮಾರಿ, ವಕೀಲರಾದ ಮೈತ್ರೇಯಿ, ಕ್ಲಿನ್ ರೂಸಾರಿಯೋ, ವಿಕಾಸ್ರಾಜ್ ವೌರ್ಯ, ದಸಂಸ ಮುಖಂಡರಾದ ಅಲಗೂಡು ಶಿವಕುಮಾರ್, ರಮಾನಂದ್, ಎಂ.ವಿ.ಕೃಷ್ಣ, ಇತರರು ಭಾಗವಹಿಸಿದ್ದರು.