ಮಹೇಶ್ ಜೋಶಿ ವಜಾಗೊಳಿಸಿ ಆಡಳಿತಾಧಿಕಾರಿ ನೇಮಕಕ್ಕೆ ಆಗ್ರಹ; ವಿಭಾಗಮಟ್ಟದ ಸಮಾವೇಶದಲ್ಲಿ ಜೋಶಿ ವಿರುದ್ಧ ಆಕ್ರೋಶ

ಮಂಡ್ಯ : ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅವರನ್ನು ತತ್ ಕ್ಷಣ ಅಧ್ಯಕ್ಷಗಾದಿಯಿಂದ ವಜಾಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಿ, ಆಗಿರುವ ಅಕ್ರಮಗಳನ್ನು ಸಮಗ್ರವಾಗಿ ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸುವಂತೆ ಶನಿವಾರ ನಗರದಲ್ಲಿ ನಡೆದ ವಿಭಾಗಮಟ್ಟದ ಜಾಗೃತಿ ಸಮಾವೇಶ ಸರಕಾರವನ್ನು ಆಗ್ರಹಿಸಿದೆ.
ಕನ್ನಡ ನಾಡುನುಡಿ ಜಾಗೃತಿ ಸಮಿತಿ ವತಿಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ತುಮಕೂರು, ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡಂತೆ ಜರುಗಿದ ವಿಭಾಗಮಟ್ಟದ ಜಾಗೃತಿ ಸಮಾವೇಶದಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಮಹೇಶ್ ಜೋಶಿ ಅವರ ಅಧಿಕಾರಾವಧಿಯಲ್ಲಿ ಆಗಿರುವ ಬೈಲಾ ತಿದ್ದುಪಡಿಗಳನ್ನು ತಕ್ಷಣ ರದ್ದುಗೊಳಿಸುವುದು. ಮಂಡ್ಯ ಜಿಲ್ಲೆಯಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕರಾಗಿ ನೇಮಕಗೊಂಡಿದ್ದ ಡಾ.ಮೀರಾಶಿವಲಿಂಗಯ್ಯ ಅವರಿಗೆ ವೇದಿಕೆಯಲ್ಲಿ ಮಾಡಿದ್ದ ಅವಮಾನಕ್ಕಾಗಿ ಮಹೇಶ್ ಜೋಶಿ ಅವರು ರಾಜ್ಯದ ಹೆಣ್ಣು ಮಕ್ಕಳ ಕ್ಷಮೆಯನ್ನು ಕೋರಲು ಸಭೆಯು ಒತ್ತಾಯಿಸಿತು.
ಈ ಸಂದರ್ಭದಲ್ಲಿ ಸಾಹಿತಿ, ಚಿಂತಕರಾದ ಪ್ರೊ. ಎಸ್.ಜಿ.ಸಿದ್ದರಾಮಯ್ಯ, ಡಾ.ಕಾಳೇಗೌಡ ನಾಗವಾರ, ಡಾ.ರಾಗೌ, ಡಾ.ಹಿ.ಶಿ.ರಾಮಚಂದ್ರೇಗೌಡ, ಪ್ರೊ.ಪಿ.ವಿ.ನಂಜೇರಾಜೇ ಅರಸ್, ಡಾ.ಎಚ್.ಎಲ್ ಪುಷ್ಪಾ ಡಾ.ಪದ್ಮಾಶೇಖರ್, ಡಾ.ಸೋಮಶೇಖರ್ ಗೌಡ, ನಿರ್ಮಲಾ, ರುದ್ರಪ್ಪ ಹನಗವಾಡಿ, ವಸುಂಧರಾ ಭೂಪತಿ, ಕೆ.ಎಸ್.ವಿಮಲಾ, ಪ್ರೊ.ಬಿ.ಜಯಪ್ರಕಾಶಗೌಡ, ಪ್ರೊ.ಜಿ.ಟಿ.ವೀರಪ್ಪ, ತೈಲೂರು ವೆಂಕಟಕೃಷ್ಣ ಪ್ರೊ.ಚಂದ್ರಶೇಖರನ್, ಮಾಜಿ ಶಾಸಕರಾದ ಕೆ.ಟಿ.ಶ್ರೀಕಂಠೇಗೌಡ, ಜಿ.ಬಿ.ಶಿವಕುಮಾರ್, ಕನ್ನಡಪರ ಸಂಘಟನೆಗಳ ಹಲವಾರು ಮುಖಂಡರು ಹಾಗೂ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರು, ಇತರ ಮುಖಂಡರು ಉಪಸ್ಥಿತರಿದ್ದರು.
ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ತನಕ ಈ ಚಳವಳಿಯ ಕಾವು ಕಡಿಮೆಯಾಗಬಾರದು. ಮಂಡ್ಯದಲ್ಲಿ ಮಾತ್ರವಲ್ಲ, ಅವರು ರಾಜ್ಯದ ಯಾವ ಕಡೆ ಹೋದರೂ ಕಪ್ಪು ಬಾವುಟ ತೋರಿಸಿ ಫೇರಾವ್ ಹಾಕಬೇಕು.
-ಜಾಣಗೆರೆ ವೆಂಕಟರಾಮಯ್ಯ, ಕನ್ನಡಪರ ಹೋರಾಟಗಾರ
6 ಮಹೇಶ್ ಜೋಶಿಯವರು ಗುರುಗೋವಿಂದ ಭಟ್ಟರ ಮರಿ ಮೊಮ್ಮಗ ಎಂದು ಹೇಳಿಕೊಳ್ಳುತ್ತಾರೆ. ಆ ಭಟ್ಟರಿಗೂ ಈ ಜೋಶಿಗೂ ಎಲ್ಲಿಯ ಸಂಬಂಧ?. ಇಂತಹ ಸುಳ್ಳನ್ನು ನಾವು ನಂಬಬೇಕೇ?
-ಆರ್.ಜಿ.ಹಳ್ಳಿ ನಾಗರಾಜ್, ಸಾಹಿತಿ
ಇದು ವ್ಯಕ್ತಿಯ ವಿರುದ್ಧದ ಹೋರಾಟವಲ್ಲ, ಕಸಾಪ ಘನತೆ ಕಾಪಾಡಲು ಕೈಗೊಂಡಿರುವ ಜಾಗೃತಿ ಸಮಾವೇಶ, ಪರಮಾಧಿಕಾರಕ್ಕಾಗಿ ಬೈಲಾ ತಿದ್ದುಪಡಿ, 2.50 ಕೋಟಿ ರೂ. ಲೆಕ್ಕ ಕೊಡದಿರುವುದು, ಅನ್ನ, ನೀರು, ಆತಿಥ್ಯ ನೀಡಿದ ಮಂಡ್ಯ ಜನರಿಗೆ ಕೃತಜ್ಞತೆ ಸಲ್ಲಿಸದಿರುವುದು ಮುಂತಾದ ಕಾರಣಗಳಿಂದ ಜೋಶಿಯವರನ್ನು ಪ್ರಶ್ನಿಸುತ್ತಿದ್ದೇವೆ.
-ಸುನಂದಾ ಜಯರಾಂ, ರೈತ ಹೋರಾಟಗಾರ್ತಿ