ಕೊಪ್ಪಳ | ಕಾರ್ಖಾನೆ ವಿಸ್ತರಣೆಗೆ ಸಾರ್ವಜನಿಕರ ವಿರೋಧ
ಬೇರೆಡೆ ಸ್ಥಳಾಂತರಿಸಲು ಒತ್ತಾಯ

ಸಾಂದರ್ಭಿಕ ಚಿತ್ರ PC | Grok
ಕೊಪ್ಪಳ : ಬರದ ನಾಡು, ಹಿಂದುಳಿದ ಜಿಲ್ಲೆ ಎಂದೇ ಹಣೆ ಪಟ್ಟಿ ಕಟ್ಟಿಕೊಂಡಿರುವ ಕೊಪ್ಪಳ ಜಿಲ್ಲೆಯ ಜನರ ಆರೋಗ್ಯಕ್ಕೆ ಸವಾಲೊಡ್ಡುವ ವಿನಾಶಕಾರಿ ಕಾರ್ಖಾನೆಯ ವಿಸ್ತರಣೆಗೆ ಸರಕಾರ ಒಪ್ಪಿಗೆ ಸೂಚಿಸಿದೆ. ಆದರೆ ಇದಕ್ಕೆ ಇಲ್ಲಿನ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ ನಗರಕ್ಕೆ ತಾಗಿಕೊಂಡೇ ಇರುವ ಎಂಎಸ್ಪಿಎಲ್ ಕಾರ್ಖಾನೆಯಿಂದ ಬರುವ ಕಪ್ಪು ಧೂಳು ಮತ್ತು ಹೊಗೆ ನಗರವನ್ನು ಆವರಿಸಿಕೊಳ್ಳುತ್ತದೆ. ಇದನ್ನು ಹೊರತುಪಡಿಸಿ ಜಿಲ್ಲಾ ಕೇಂದ್ರದಿಂದ ಕೇವಲ 10ರಿಂದ 15 ಕಿ.ಮೀ. ದೂರದಲ್ಲಿ 40ಕ್ಕೂ ಹೆಚ್ಚು ಕಾರ್ಖಾನೆಗಳಿವೆ. ಇದರಿಂದ ಸುತ್ತಮುತ್ತಲಿನ ಗ್ರಾಮದ ಜನರು ಕೆಮ್ಮು, ಅಸ್ತಮಾ, ಟಿ.ಬಿ. ಮತ್ತು ಕ್ಯಾನ್ಸರ್ಗಳಂತಹ ರೋಗಗಳಿಂದ ಬಳಲುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಕಾರ್ಖಾನೆಯಿಂದ ಹೊರ ಬರುವ ತ್ಯಾಜ್ಯಗಳಿಂದ ಸುತ್ತಮುತ್ತಲಿನ ಗ್ರಾಮದಲ್ಲಿರುವ ಜನರ ಆರೋಗ್ಯಕ್ಕೆ ತೊಂದರೆ ಉಂಟಾಗಿದೆ. ಇದಲ್ಲದೇ ಇಲ್ಲಿನ ಜಾನುವಾರು ಮತ್ತಿತರ ಪ್ರಾಣಿ ಪಕ್ಷಿಗಳಿಗೂ ಮಾರಕವಾಗಿ ಪರಿಣಮಿಸಿದೆ.
ಕಾರ್ಖಾನೆ ವಿಸ್ತರಣೆಗೆ ಜಿಲ್ಲೆಯ ಜನರಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಕಾರ್ಖಾನೆಯನ್ನು ಜಿಲ್ಲೆಯಿಂದ ಬೇರೆಡೆ ಸ್ಥಳಾಂತರಿಸಲು ಒತ್ತಾಯಗಳು ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸುವುದಾಗಿ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
‘ಪರಿಸರಕ್ಕೆ ಹಾನಿ ಇಲ್ಲ’ :
ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಬಲ್ಡೋಟಾ ಕಂಪೆನಿ ಸ್ಪಷ್ಟೀಕರಣ ನೀಡಿದ್ದು, ಉಕ್ಕು ಕಾರ್ಖಾನೆ ಸ್ಥಾಪಿಸುವ ಮೊದಲು ಪರಿಸರ ಸಂಬಂಧಿ ಎಲ್ಲ ನಿಯಮಗಳನ್ನು ಪಾಲಿಸಿ ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಲಾಗಿದೆ. ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದೆ.
70 ವರ್ಷಗಳಿಂದ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಕೇಂದ್ರ ಸರಕಾರದಿಂದ ಸತತವಾಗಿ 6 ವರ್ಷಗಳಿಂದ ಪಂಚತಾರಾ ರೇಟಿಂಗ್ ಪ್ರಶಸ್ತಿ ಪಡೆದುಕೊಂಡಿದೆ ಎಂದು ಕಂಪೆನಿ ತಿಳಿಸಿದೆ.
ಸುಮಾರು 20 ಲಕ್ಷ ಸಸಿಗಳನ್ನು ನೆಟ್ಟಿರುವುದಲ್ಲದೇ, 20 ಹಳ್ಳಿಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಿದೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣ, ಆರೋಗ್ಯ ಶಿಬಿರಗಳು, ನೈರ್ಮಲ್ಯ ಮತ್ತು ಸ್ತ್ರೀ ಸಬಲೀಕರಣ ಕುರಿತಂತೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಹೀಗಾಗಿ ಸ್ಥಳೀಯರಿಗೆ ಯಾವುದೇ ಆತಂಕ ಬೇಡ ಎಂದು ಕಂಪೆನಿಯು ಪ್ರಕಟನೆಯಲ್ಲಿ ತಿಳಿಸಿದೆ.
ಸೋಮವಾರ ಕೊಪ್ಪಳ ಬಂದ್ಗೆ ಕರೆ :
ಕಾರ್ಖಾನೆ ವಿಸ್ತರಣೆ ವಿರೋಧಿಸಿ ಫೆ.24ರಂದು ಕೊಪ್ಪಳ ಬಂದ್ಗೆ ಜಿಲ್ಲಾ ಪರಿಸರ ಹಿತರಕ್ಷಣಾ ವೇದಿಕೆ ಕರೆ ನೀಡಿದೆ.
ಬಂದ್ ಸಂಬಂಧ ಧಾರ್ಮಿಕ ಮುಖಂಡರನ್ನು ಭೇಟಿಯಾಗಿ ಹೋರಾಟಕ್ಕೆ ಬೆಂಬಲ ನೀಡುವಂತೆ ಕೇಳಿಕೊಳ್ಳಲಾಗಿದೆ. ಆಟೋ ಚಾಲಕರ ಸಹಿತ ವಿವಿಧ ಸಂಘಟನೆಗಳು ಬಂದ್ಗೆ ಬೆಂಬಲಿಸುವುದಾಗಿ ತಿಳಿಸಿದೆ. ಫೆ. 24ರಂದು ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆವರೆಗೆ ಬಂದ್ ಇರಲಿದೆ. ಆಸ್ಪತ್ರೆ ಒಳ ರೋಗಿಗಳ ವಿಭಾಗ, ತುರ್ತು ಸೇವಾ ಸೇವೆಗಳು ಬಿಟ್ಟು ಉಳಿದಂತೆ ಎಲ್ಲವೂ ಬಂದ್ ಆಗಲಿದೆ. ಬೆಳಗ್ಗೆ 9 ಗಂಟೆಗೆ ಗವಿಮಠದಿಂದ ಪ್ರತಿಭಟನೆ ಆರಂಭವಾಗಿ ಗಡಿಯಾರ ಕಂಬ ಸರ್ಕಲ್, ಜವಾಹರ್ ರೋಡ್, ಅಶೋಕ ಸರ್ಕಲ್ ನಿಂದ ತಾಲೂಕು ಕ್ರಿಡಾಂಗಣಕ್ಕೆ ಬರಲಿದೆ.
ಕಾರ್ಖಾನೆ ವಿಸ್ತರಣೆಯಾದರೆ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಕೊಪ್ಪಳ ನಗರದ ಜನರ ಆರೋಗ್ಯದ ದೃಷ್ಟಿಯಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
- ಗವಿಶ್ರೀ, ಗವಿಮಠ- ಕೊಪ್ಪಳ