ಸಂವಿಧಾನದ ಬಗ್ಗೆ ತಿಳಿಯಲು ಕಾರ್ಯಾಗಾರ ಅಗತ್ಯ : ಸಂವಿಧಾನ ಓದು ಅಧ್ಯಯನ ಶಿಬಿರದಲ್ಲಿ ನ್ಯಾ.ನಾಗಮೋಹನ್ ದಾಸ್

ಕೋಲಾರ: ಭಾರತ ಸ್ವಾತಂತ್ರ್ಯವಾಗಿ 77 ವರ್ಷಗಳಾಗಿದೆ. ಗಣರಾಜ್ಯವಾಗಿ 75 ವರ್ಷಗಳು ಕಳೆದರೂ, ದೇಶದ ಬಹುಪಾಲು ಜನರಿಗೆ ಸಂವಿಧಾನದ ಬಗ್ಗೆ ಪೂರ್ಣ ಮಾಹಿತಿ ಇಲ್ಲ, ಆ ತಿಳುವಳಿಕೆ ನೀಡುವ ಕೆಲಸ ಸರಕಾರವೂ ಮಾಡಿಲ್ಲ. ಪ್ರಜೆಗಳಾದ ನಾವು ಕೂಡ ಸಂವಿಧಾನ ಓದಿ ಅರ್ಥ ಮಾಡಿಕೊಳ್ಳಲಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ವಿಷಾದ ವ್ಯಕ್ತಪಡಿಸಿದರು.
ನಗರದ ಸುವರ್ಣ ಕನ್ನಡ ಭವನದಲ್ಲಿ ಸಂವಿಧಾನ ಓದು ಅಭಿಯಾನ -ಕರ್ನಾಟಕ ಹಮ್ಮಿಕೊಂಡಿದ್ದ ಸಂವಿಧಾನ ಓದು ಎರಡು ದಿನಗಳ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಸಂವಿಧಾನ ಕಳೆದುಕೊಂಡರೆ, ಆ ಜಾಗಕ್ಕೆ ಪಂಚಾಂಗ ಬರುತ್ತೆ. ಆ ಪಂಚಾಂಗದಿಂದ ಈ ಜಾತಿ ವ್ಯವಸ್ಥೆ, ಈ ಅಸಮಾನತೆ, ದೌರ್ಜನ್ಯ, ಶೋಷಣೆ, ದಬ್ಬಾಳಿಕೆ, ಹಿಂಸೆ ನಮ್ಮನ್ನು ಮುಂದುವರೆಸುತ್ತೆ ಎನ್ನುವ ಎಚ್ಚರ ನಮಗಿರಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ನಮ್ಮ ಸಂವಿಧಾನ ಸಾಮಾನ್ಯ ಜನರ ಮಾನಸಿಕ , ಸಾಮಾಜಿಕ, ಸಾಂಸ್ಕೃತಿಕ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದಕ್ಕೆ ಈ ಸಂವಿಧಾನ ಓದು ಪುಸ್ತಕವೇ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ದೇಶದ ಬಹಳಷ್ಟು ಜನರಿಗೆ ಸಂವಿಧಾನ ಎಂದರೇನು, ಅದರಲ್ಲೇನಿದೆ, ಅದಕ್ಕೂ ನಮಗಿರುವ ಬಾಂಧವ್ಯ ಏನು, ಸಂಬಂಧವೇನು ಎಂದು ತಿಳಿಯದಿರುವುದೇ ವಿಪರ್ಯಾಸ. ಆ ಕೊರತೆಯನ್ನು ನೀಗಿಸಲು ಸಂವಿಧಾನ ಓದು ಪುಸ್ತಕ ಕೊಂಡು ಓದುವುದೇ ಹೆಮ್ಮೆಯ ವಿಚಾರ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್. ಬಿ, ಸಂವಿಧಾನ ಓದು ಕರ್ನಾಟಕದ ಬಿ.ರಾಜಶೇಖರ ಮೂರ್ತಿ, ಡಾ.ಶಿವಪ್ಪ ಅರಿವು, ಕಸಾಪ ಅಧ್ಯಕ್ಷ ಗೋಪಾಲಗೌಡ, ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಗಮನ ಶಾಂತಮ್ಮ, ಡಿ.ಆರ್. ರಾಜಪ್ಪ, ಮಂಜುಳ ಕೊಂಡ ರಾಜನಹಳ್ಳಿ ಇದ್ದರು.