ʼಆಪರೇಷನ್ ಸಿಂಧೂರʼ ಕುರಿತು ವಿವಾದಾತ್ಮಕ ಹೇಳಿಕೆ | ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಬಿಜೆಪಿ ದೂರು

ಕೋಲಾರ : ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ವಿರುದ್ಧ ಕೇಂದ್ರ ಸರಕಾರ ಕೈಗೊಂಡ ಕ್ರಮ ಬೂಟಾಟಿಕೆ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿ, ಘಟನೆಯ ಬಗ್ಗೆ ಕೊಲಾರ ಶಾಸಕ ಕೊತ್ತೂರು ಮಂಜುನಾಥ್ ಅನುಮಾನ ವ್ಯಕ್ತಪಡಿಸಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಶುಕ್ರವಾರ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಆಪರೇಷನ್ ಸಿಂಧೂರʼ ಕೇಂದ್ರ ಸರಕಾರದ ಬೂಟಾಟಿಕೆ, ಮಹಿಳೆಯರ ಅರಿಶಿನ ಕುಂಕುಮಕ್ಕೆ ಬೆಲೆ ಇಷ್ಟೇನಾ, ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಕೊಂದ ಉಗ್ರರು ಎಲ್ಲಿ ಹೋದರು? ಹೀಗೆ ಪಹಲ್ಗಾಮ್ ಉಗ್ರರ ದಾಳಿಗೆ ಕೇಂದ್ರ ಸರಕಾರ ಕೊಟ್ಟ ಪ್ರತ್ಯುತ್ತರ ಕುರಿತು ಅಸಮಾಧಾನ ಹೊರ ಹಾಕಿದ್ದ ಶಾಸಕ ಕೊತ್ತೂರು ಹೇಳಿಕೆಗೆ ಕಾಂಗ್ರೆಸ್ ವಲಯದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ.
ಉಗ್ರರ ವಿರುದ್ಧ ಮತ್ತಷ್ಟು ದಾಳಿಯ ನಿರೀಕ್ಷೆ ಇತ್ತು :
ಸಾರ್ವಜನಿಕರ ಮುಂದೆ ಉಗ್ರರನ್ನು ನೆಲ ಸಮ ಮಾಡಬೇಕು ಅನ್ನೋದು ನಮ್ಮ ಉದ್ದೇಶ. ಪಹಲ್ಗಾಮ್ನಲ್ಲಿ ಬಂದು ನಮ್ಮ ಹೆಣ್ಣು ಮಕ್ಕಳ ಮುಂದೆ ದಾಳಿ ಮಾಡುತ್ತಾರೆ ಎಂದರೆ ಹೇಗೆ. ನಮ್ಮ ಸೇನೆ ಬಲಿಷ್ಠವಾಗಿದೆ, ಅದು ಅಪರೇಷನ್ ಸಿಂಧೂರದಿಂದ ತಿಳಿದಿದೆ. ಪಹಲ್ಗಾಮ್ ದಾಳಿಗೆ ಕಾರಣರಾದ ಉಗ್ರಗಾಮಿಗಳನ್ನು ಹೊಡೆಯಬೇಕು. ಉಗ್ರರ ವಿರುದ್ಧ ಮತ್ತಷ್ಟು ದಾಳಿಯ ನಿರೀಕ್ಷೆ ಇತ್ತು ಎಂದು ಶಾಸಕ ಕೊತ್ತೂರು ಮಂಜುನಾಥ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಕೊತ್ತೂರು ಮಂಜುನಾಥ್ ವಿರುದ್ಧ ಬಿಜೆಪಿ ದೂರು :
ಆಪರೇಷನ್ ಸಿಂಧೂರ ಹಾಗೂ ಸೇನೆ ಕುರಿತು ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹಗುರವಾಗಿ ಮಾತನಾಡಿರುವುದಕ್ಕೆ ಕೋಲಾರ ಜಿಲ್ಲಾ ಬಿಜೆಪಿ ಖಂಡಿಸಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೋಲಾರ ಎಸ್ಪಿ ನಿಖಿಲ್ ಅವರಿಗೆ ಮನವಿ ಸಲ್ಲಿಸಲಾಯಿತು.