ಖಾಸಗಿ ಕ್ಷೇತ್ರಗಳಲ್ಲಿ ಮೀಸಲಾತಿಗಾಗಿ ಹೋರಾಟ ನಡೆಯಲಿ : ದಿನೇಶ್ ಅಮಿನ್ ಮಟ್ಟು
ಮಡಿಕೇರಿಯಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ

ಮಡಿಕೇರಿ: ಮೀಸಲಾತಿಯ ಶೇ.50ರ ಮಿತಿಯನ್ನು ತೆಗೆಯುವ ಮತ್ತು ಖಾಸಗಿ ಕ್ಷೇತ್ರಗಳಲ್ಲೂ ಮೀಸಲಾತಿಯ ಜಾರಿಗಾಗಿ ಹೋರಾಟಗಳು ರೂಪುಗೊಳ್ಳುವ ಅಗತ್ಯವಿದೆ ಎಂದು ಪ್ರಗತಿಪರ ಚಿಂತಕ ಹಾಗೂ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ತಿಳಿಸಿದ್ದಾರೆ.
ಮಾನವ ಬಂಧುತ್ವ ವೇದಿಕೆ, ಮಹಿಳಾ ಬಂಧುತ್ವ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ನಗರದ ಬಾಲಭವನದ ಸಭಾಂಗಣದಲ್ಲಿ ಶನಿವಾರ ನಡೆದ ‘ಸಮಕಾಲೀನ ಬಿಕ್ಕಟ್ಟುಗಳು ಮತ್ತು ಸವಾಲುಗಳು’ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು, ‘ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ)’ ವಿಷಯದ ಕುರಿತು ಅವರು ಮಾತನಾಡಿದರು.
ಸರಕಾರದ ಯಾವುದೇ ಯೋಜನೆಗಳು ಒಂದಲ್ಲ ಒಂದು ಸಮುದಾಯದ ಕೆಲಸ ಕಾರ್ಯಗಳು ಮತ್ತು ಆ ಮುಖೇನ ಅವರ ಅಭಿವೃದ್ಧಿಯ ದೃಷ್ಟಿಯನ್ನು ಹೊಂದಿರುತ್ತವೆ. ಈ ಹಿನ್ನೆಲೆಯಲ್ಲಿ ಜಾತಿ ಗಣತಿ ಅತ್ಯಗತ್ಯ. ನಿಜವಾಗಿ ಜಾತಿ ಗಣತಿ ಎನ್ನುವುದು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯೇ ಆಗಿದೆ. ಈಗಾಗಲೆ ಶೇ.25ರಷ್ಟು ಮೀಸಲಾತಿಯನ್ನು ಹೊಂದಿರುವ ಎಸ್ಸಿ-ಎಸ್ಟಿ ಸಮುದಾಯ, ಶೇ.18ರಷ್ಟು ಮೀಸಲಾತಿಯನ್ನು ಹೊಂದಿಕೊಂಡಿರುವ ಮುಸ್ಲಿಮ್, ಕ್ರಿಶ್ಚಿಯನ್ ಸಮುದಾಯಗಳ ಅಂಕಿ-ಅಂಶಗಳು ಅದಾಗಲೇ ಲಭ್ಯವಿದೆೆ. ಆದರೆ, ಇವನ್ನು ಹೊರತು ಪಡಿಸಿದ ಇತರ ಹಿಂದುಳಿದ ಸಮುದಾಯಗಳ ಅಂಕಿ-ಅಂಶಗಳು ಲಭ್ಯವಿಲ್ಲವೆಂದು ಮಟ್ಟು ತಿಳಿಸಿದರು.
ಜಾತಿ ಗಣತಿಗೆ ಸಂಬಂಧಿಸಿದ ಕಾಂತರಾಜು ಆಯೋಗದ ವರದಿಯನ್ನು ’ಅವೈಜ್ಞಾನಿಕ’ವೆನ್ನುವ ಆರೋಪಗಳನ್ನು ಮಾಡಲಾಗುತ್ತಿದೆ. ಆದರೆ, ಜಾತಿ ಗಣತಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ನಡೆದಿರುವ ಯಾವುದೇ ಗಣತಿಗಳು ’ಸ್ಯಾಂಪಲ್ ಸಮೀಕ್ಷೆ’ಗಳೇ ಆಗಿವೆ. ಅದೂ ಈ ಹಿಂದೆ ಶೇ.5 ಇಲ್ಲವೆ ಶೇ.10ರಷ್ಟು ಜನರನ್ನು ಮಾತ್ರ ಸಂಪರ್ಕಿಸಿ ವರದಿಗಳನ್ನು ಮಾಡಲಾಗಿತ್ತು. ಆದರೆ, ಕಾಂತರಾಜು ವರದಿಯನ್ನು 5.98 ಸ್ಯಾಂಪಲ್ಗಳನ್ನು ಪಡೆದು ನಡೆಸಲಾಗಿದೆ. ಎಂದರೆ ಶೇ.95ರಷ್ಟು ಜನ ಸಂಪರ್ಕವನ್ನು ಮಾಡುವ ಮೂಲಕ ಮಾಡಲಾಗಿದೆ ಎಂದು ವಿವರಿಸಿದರು.
ಕೆಲವು ಸಮುದಾಯಗಳು ವರದಿಯಲ್ಲಿ ತಮ್ಮ ಸಮೂಹದ ಸಂಖ್ಯೆ ಕಡಿಮೆಯಾಗಿದೆ ಎನ್ನುವ ಆರೋಪಗಳನ್ನು ಮಾಡಿರುವುದನ್ನು ಪ್ರಸ್ತಾವಿಸಿದ ಅಮಿನ್ ಮಟ್ಟು, ಲಿಂಗಾಯತ ಸಮುದಾಯದೊಳಗಿನ ಉಪ ಪಂಗಡಗಳಲ್ಲಿ ಲಿಂಗಾಯತ ಎಂದು ನಮೂದಾದಲ್ಲಿ ಮೀಸಲಾತಿಯ ಪ್ರಮಾಣ ಕಡಿಮೆಯಾಗುವುದರಿಂದ ಅವರು ಹಿಂದೂ ಹೂಗಾರ ಮೊದಲಾದ ಹೆಸರುಗಳನ್ನು ನೀಡಿ ಹೆಚ್ಚಿನ ಮೀಸಲಾತಿ ಸೌಲಭ್ಯದತ್ತ ಮುಖ ಮಾಡಿರುವುದರಿಂದ ಲಿಂಗಾಯತ ಸಮುದಾಯದ ಸಂಖ್ಯೆಯ ಕಡಿಮೆಯಾಗಿ ಕಂಡು ಬರುತ್ತಿದೆಯಷ್ಟೇ ಎಂದು ತಿಳಿಸಿದರು.
ಜಾತಿಗಣತಿಯ ವಿರೋಧ ರಾಜಕೀಯ ಮುಖವನ್ನು ವಿಶ್ಲೇಷಿಸಿದ ದಿನೇಶ್ ಅಮಿನ್ ಮಟ್ಟು, ಪ್ರಬಲ ಸಮುದಾಯವೆಂದು ಗುರುತಿಸಿಕೊಂಡು ರಾಜಕೀಯ ಶಕ್ತಿಯನ್ನು ಹೊಂದುತ್ತಿದ್ದ ಸಮೂಹ, ಸಂಖ್ಯೆ ಕಡಿಮೆಯಾದಲ್ಲಿ ಆ ಅಧಿಕಾರದಿಂದ ಹೊರಗುಳಿಯುವ ಆತಂಕಗಳಿಂದಲೂ ವಿರೋಧಕ್ಕೆ ಮುಂದಾಗಿದೆ ಎಂದರು.
ಪ್ರಸಕ್ತ ಒಕ್ಕಲಿಗರ ಮೀಸಲಾತಿಯನ್ನು ಶೇ.4 ರಿಂದ 7ಕ್ಕೆ ಮತ್ತು ಲಿಂಗಾಯತರ ಮೀಸಲಾತಿಯನ್ನು ಶೇ.5ರಿಂದ 8ಕ್ಕೆ ಹೆಚ್ಚಿಸಲಾಗಿದೆ. ಮೀಸಲಾತಿಯ ಹೆಚ್ಚಳಕ್ಕೆ ಸಂತೋಷ ಪಡಬೇಕೇ ಹೊರತು, ಸಂಖ್ಯೆ ಕಡಿಮೆಯಾಯಿತೆಂದು ಹೊಡೆದಾಟ ಏಕೆ ಎಂದು ಪ್ರಶ್ನಿಸಿದರು.
ಜಾತಿ ಎನ್ನುವುದೇ ಒಂದು ರೋಗ. ಇಂತಹ ರೋಗವನ್ನು ಗುಣಪಡಿಸಬೇಕಾದರೆ ನಮಗೊಂದು ಜಾತಿ ಇದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದ ಅಮಿನ್ ಮಟ್ಟು, ಇಂತಹ ಜಾತಿ ವ್ಯವಸ್ಥೆಗಳು ನಾಶವಾಗಬೇಕಾದರೆ ಜಾತಿಯೊಳಗಿನ ವಿವಾಹಗಳು ನಿಲ್ಲಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ಚಿಂತಕ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ.ಕಾಳೆೇಗೌಡ ನಾಗವಾರ, ಪ್ರಸಕ್ತ ಸಮಾಜ ವ್ಯವಸ್ಥೆಯಲ್ಲಿ ಅವಿವೇಕ ತುಂಬಿ ತುಳುಕುತ್ತಿದೆ. ಇವುಗಳನ್ನು ಮೀರಿ, ಕವಿ ವಾಣಿಯಂತೆ ಸರ್ವ ಜನಾಂಗದ ಶಾಂತಿಯ ತೋಟದಂತೆ ಎಲ್ಲರೂ ಒಂದಾಗಿ ಬಾಳುವ ವಾತಾವರಣ ಸೃಷ್ಟಿಯಾಗಬೇಕಾಗಿದೆ ಎಂದು ಕರೆ ನೀಡಿದರು.
‘ಮೀಸಲಾತಿ ಎಂದರೇನು ಮತ್ತು ಅದರ ಚರಿತ್ರೆ’ ವಿಷಯದ ಕುರಿತು ಲೇಖಕ ಮತ್ತು ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಮಾತನಾಡಿದರು. ಮಾನವೀಯ ಬಂಧುತ್ವ ವೇದಿಕೆಯ ಮಂಗಳೂರು ವಿಭಾಗೀಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನವೀಯ ಬಂಧುತ್ವ ವೇದಿಕೆಯ ರಾಜ್ಯ ಮಹಿಳಾ ಸಂಚಾಲಕಿ ಡಾ.ಲೀಲಾ ಸಂಪಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಡಾ.ಮಂತರ್ ಗೌಡ, ಸಂಘಟನೆಯ ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ದನ್, ಮಹಿಳಾ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕಿ ಡಾ.ಕಾವೇರಿ ಉಪಸ್ಥಿತರಿದ್ದರು.
ವಿಚಾರ ಸಂಕಿರಣದ ಸ್ವಾಗತ ಸಮಿತಿ ಸಂಚಾಲಕ ನೆರವಂಡ ಉಮೇಶ್ ಸ್ವಾಗತಿಸಿದರು. ಗೌರವ ಸಂಚಾಲಕ ರಮಾನಾಥ ಬೇಕಲ್ ಆರಂಭದಲ್ಲಿ ಸಂವಿಧಾನ ಪೀಠಿಕೆ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು.