ಕಾಸರಗೋಡು: ಭಾರೀ ಗಾಳಿ ಮಳೆ; ಜನಜೀವನ ಅಸ್ತವ್ಯಸ್ತ
ಬುಧವಾರ ತನಕ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್

ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ ಸಂಜೆಯಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿದ್ದು, ಜಿಲ್ಲೆಯ ಹಲವೆಡೆ ಕೃಷಿ ಹಾನಿ ಉಂಟಾದ ಬಗ್ಗೆ ವರದಿಯಾಗಿದೆ.
ಕರಂದಕ್ಕಾಡ್, ಚೆರ್ಕಳದಲ್ಲಿ ಸರ್ವಿಸ್ ರಸ್ತೆ ಮೇಲೆ ಮರಗಳು ಬಿದ್ದು ಹಲವು ಸಮಯ ಸಂಚಾರಕ್ಕೆ ಅಡಚಣೆಯಾಯಿತು. ಕರಂದಕ್ಕಾಡ್ ನಲ್ಲಿ ವಿದ್ಯುತ್ ತಂತಿಗಳ ಮೇಲೆ ಮರಬಿದ್ದ ಪರಿಣಾಮ ಈ ಭಾಗದಲ್ಲಿ ವಿದ್ಯುತ್ ಮೊಟಕು ಗೊಂಡಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮರಗಳನ್ನು ತೆರವು ಗೊಳಿಸಿ ಸಂಚಾರ ಸುಗಮಗೊಳಿಸಿದರು.
ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗಳಲ್ಲಿ ನೀರು ತುಂಬಿರುವ ಹಾಗೂ ಹಲವೆಡೆ ರಸ್ತೆ ಕುಸಿದ ಪರಿಣಾಮ ಸಂಚಾರಕ್ಕೂ ಅಡ್ಡಿಯಾಗಿದ್ದು, ಬಹುತೇಕ ಕಡೆಗಳಲ್ಲಿ ವಾಹನ ಸಂಚಾರ ಮೊಟಕು ಗೊಂಡಿದೆ.
ಲಘು ವಾಹನಗಳು ಮಾತ್ರ ಈ ರಸ್ತೆಯಲ್ಲಿ ಸಂಚಾರ ನಡೆಸುತ್ತಿದ್ದು, ರಸ್ತೆ ಕುಸಿಯುತ್ತಿರುವುದರಿಂದ ಘನ ವಾಹನಗಳು ಸರ್ವೀಸ್ ರಸ್ತೆಗಳಲ್ಲಿ ಸಂಚರಿಸದ ಪರಿಸ್ಥಿತಿ ಉಂಟಾಗಿದೆ.
ಪೆರಿಯ ಸಮೀಪ ಕಣ್ಣೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸು ರಸ್ತೆ ಬದಿಯ ಮಣ್ಣಿನಲ್ಲಿ ಸಿಲುಕಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಕಾಲಿಕ್ಕಡವಿನಲ್ಲಿ ಸರ್ವೀಸ್ ರಸ್ತೆಗಳಲ್ಲಿ ನೀರು ತುಂಬಿರುವುದರಿಂದ ಸಂಚಾರ ಮೊಟಕುಗೊಂಡಿದೆ. ಬುಧವಾರ ತನಕ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.