ಕಲಬುರಗಿ | ಎನ್.ರವಿಕುಮಾರ್ ಅವರ ವಿಧಾನ ಪರಿಷತ್ ಸದಸ್ಯತ್ವ ರದ್ದುಪಡಿಸುವಂತೆ ನಿವೃತ್ತ ನೌಕರರ ಸಂಘ ಆಗ್ರಹ

ಕಲಬುರಗಿ: ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರ ವಿರುದ್ಧ ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್ ನೀಡಿದ ಹೇಳಿಕೆಯನ್ನು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ಅಲ್ಪಸಂಖ್ಯಾತ ನೌಕರರ ಸಂಘ ಖಂಡಿಸಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದೆ.
ಐಎಎಸ್ ಅಧಿಕಾರಿ ಫೌಝಿಯಾ ತರನ್ನುಮ್ ಪಾಕಿಸ್ತಾನದಿಂದ ಬಂದಿರುವಂತೆ ಕಂಡು ಬರುತ್ತಿದೆ ಎನ್ನುವ ಹೇಳಿಕೆ ನೀಡಿರುವ ಎನ್.ರವಿಕುಮಾರ್ ವಿರುದ್ಧ ಪೊಲೀಸರು ಸೊಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕು. ಅವರ ವಿಧಾನಪರಿಷತ್ ಸದಸತ್ವವನ್ನು ರದ್ದುಪಡಿಸಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಕಲಬುರಗಿ ಜಿಲ್ಲೆಗೆ ಸಂಬಂಧಿಸಿದಂತೆ ಬಹಳಷ್ಟು ಕೆಲಸ ಕಾರ್ಯಗಳು ಮಾಡಿರುತ್ತಾರೆ. ಅವರು ನಿಷ್ಪಕ್ಷಪಾತ ಅಧಿಕಾರಿಯಾಗಿರುತ್ತಾರೆ. ರವಿಕುಮಾರ್ ಹೇಳಿಕೆಯಿಂದ ಜಿಲ್ಲಾಧಿಕಾರಿಯವರ ಘನತೆಗೆ ಕಳಂಕ ಉಂಟಾಗಿದೆ. ಈ ಹೇಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅಪಮಾನ ಹಾಗೂ ಕೋಮುರಾಜಕೀಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಓರ್ವ ಐ.ಎ.ಎಸ್. ಅಧಿಕಾರಿಯನ್ನು ಪಾಕಿಸ್ತಾನಿ ಎಂದು ಕರೆದಿರುವುದು ಆಘಾತಕಾರಿ ಹಾಗೂ ದ್ವೇಷ ಹುಟ್ಟಿಸುವ ನಡೆಯಾಗಿದೆ ಎಂದು ಸಂಘದ ಸದಸ್ಯರು ದೂರಿನಲ್ಲಿ ತಿಳಿಸಿದ್ದಾರೆ.
ಈ ವೇಳೆ ಸಂಘದ ಮುಖಂಡರಾದ ಸೈಯ್ಯದ ನಜೀರುದ್ದಿನ ಮುತವಲ್ಲಿ, ಅಸದ ಅಲಿ ಅನ್ಸಾರಿ, ಡಾ.ಎಮ್.ಎಮ್.ಬೇಗ್, ನವಾಬ ಖಾನ್ ಅಬ್ದುಲ್ ಖದೀರ್, ಎಸ್.ಎಂ. ಖಾದ್ರಿ ಉಪಸ್ಥಿತರಿದ್ದರು.