ಕಲಬುರಗಿ: ಯಳಸಂಗಿ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ಕುಡುಕರ ಹಾವಳಿ
ಎಲ್ಲೆಡೆ ಮದ್ಯದ ಬಾಟಲಿ, ಸಿಗರೇಟ್, ಗುಟ್ಕಾ, ಇಸ್ಪಿಟ್ ಕಾರ್ಡ್

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನಲ್ಲೇ ಅತಿ ದೊಡ್ಡ ಮತ್ತು ಸುಂದರ ಶಾಲಾ ಮೈದಾನ ಹೊಂದಿರುವ ಯಳಸಂಗಿ ಗ್ರಾಮದ ಸರಕಾರಿ ಪ್ರೌಢ ಶಾಲಾ ಆವರಣ ಈಗ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ.
ವಿದ್ಯಾರ್ಥಿಗಳು ಜ್ಞಾನಾರ್ಜನೆ ಪಡೆಯುವ ಸ್ಥಳದಲ್ಲಿ ಮದ್ಯಪಾನ, ಧೂಮಪಾನ, ಜೂಜಾಟ ಸೇರಿದಂತೆ ಇನ್ನಿತರ ಚಟುವಟಿಕೆಗಳು ದಿನನಿತ್ಯ ನಡೆಯುತ್ತಿರುವುದು ಬಯಲಾಗಿದೆ. ಹಲವು ದಿನಗಳಿಂದ ಜರುಗುತ್ತಿರುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ಶಿಕ್ಷಣ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
80ರ ದಶಕದಲ್ಲಿ ಆಳಂದ ತಾಲೂಕಿನ ಯಳಸಂಗಿಯ ಸರಕಾರಿ ಪ್ರೌಢ ಶಾಲೆ ಎಂದರೆ ಸುತ್ತಮುತ್ತಲಿನ ಆರೇಳು ಹಳ್ಳಿಗಳ ವಿದ್ಯಾರ್ಥಿಗಳಿಗೆ ಆಸರೆಯಾಗಿತ್ತು. ಈವರೆಗೆ ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿತು ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಆದರೆ ಅಂತಹ ಶಾಲೆಯ ಪರಿಸರ ಇಂದು ಕುಡುಕರ ಅಡ್ಡೆಯಾಗಿರುವುದು ಬೇಸರದ ಸಂಗತಿ.
ಸದ್ಯ ಪ್ರೌಢ ಶಾಲೆಯ ಆವರಣದಲ್ಲಿ ಪದವಿಪೂರ್ವ ಕಾಲೇಜು ಸಹ ಇರುವುದರಿಂದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬೆಳಗ್ಗೆ ಶಾಲಾ ಆವರಣಕ್ಕೆ ಕಾಲಿಟ್ಟರೆ ಸಾಕು ಮದ್ಯದ ಬಾಟಲಿಗಳು, ಕೊಲ್ಡ್ ಡ್ರಿಂಕ್ಸ್ನ ಬಾಟಲಿಗಳು, ಚಿಪ್ಸ್ ಪ್ಯಾಕೆಟ್, ಸಿಗರೇಟ್, ಗುಟ್ಕಾ ಸೇವನೆಯ ಚೀಟಿ, ಜೂಜಾಟದ ಕಾರ್ಡ್ಗಳು ಕಣ್ಣಿಗೆ ಕಾಣುವುದಂತೂ ರೂಢಿಯಾಗಿಬಿಟ್ಟಿದೆ. ಇವುಗಳಿಗೆ ಕಡಿವಾಣ ಬೀಳುವುದು ಯಾವಾಗ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ರಾತ್ರೋ ರಾತ್ರಿ ಶಾಲಾ ಆವರಣಕ್ಕೆ ಬರುವ ಕೆಲ ಕಿಡಿಗೇಡಿಗಳು ಮದ್ಯಪಾನ ಮಾಡಿ, ಅಲ್ಲಿರುವ ಉಪಕರಣಗಳನ್ನು ದ್ವಂಸ ಮಾಡುವುದನ್ನು ಬಿಡುತ್ತಿಲ್ಲ. ಕುಡಿಯುವ ಸಲುವಾಗಿ ಹಾಕಿರುವ ನಳದ ಪೈಪ್ ಒಡೆಯುವುದು, ಗಿಡ ಮರಗಳನ್ನು ಕತ್ತರಿಸುವುದು, ಮೈದಾನದಲ್ಲಿ ಹಾಕಿರುವ ವ್ಯಾಯಾಮದ ಉಪಕರಣಗಳನ್ನು ಜಖಂಗೊಳಿಸುವುದು ಮಾಡುತ್ತಾರೆ. ಇತ್ತೀಚೆಗೆ ಅಳವಡಿಸಿದ್ದ ಓಟದ ಟ್ರಾಕ್, ವಾಲಿಬಾಲ್, ಫುಟ್ಬಾಲ್ ಅಂಕಣದ ಕಂಬಗಳಿಗೂ ಹಾನಿ ಮಾಡುವುದು ನಡೆಯುತ್ತಿದೆ. ಆವರಣದಲ್ಲೇ ಕಾಲೇಜಿನ ವಿದ್ಯಾರ್ಥಿಗಳೂ ಧೂಮಪಾನ (ಸಿಗರೇಟ್) ಮಾಡುತ್ತಾರೆ, ಇದು ಇತರ ವಿದ್ಯಾರ್ಥಿಗಳ ಬೆಳವಣಿಗೆ ಮೇಲೆ ಭಾರೀ ಪ್ರಭಾವ ಬೀರುತ್ತಿದೆ ಎಂದು ಗ್ರಾಮಸ್ಥರೊಬ್ಬರು ಆರೋಪಿಸಿದ್ದಾರೆ.
ನಿಂಬರ್ಗಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ಈ ಶಾಲೆ ಈ ಭಾಗದಲ್ಲಿ ದೊಡ್ಡ ಇತಿಹಾಸ ಹೊಂದಿದೆ. ದಶಕದ ಹಿಂದೆ ಕಾರ್ಯ ನಿರ್ವಹಿಸಿದ ಶಿಕ್ಷಕರಿಂದಲೇ ವಿದ್ಯಾರ್ಥಿಗಳ ಶಿಸ್ತು, ಸಂಯಮ, ಆವರಣ ಸೇರಿದಂತೆ ಎಸೆಸೆಲ್ಸಿ, ದ್ವಿತೀಯ ಪಿಯುಸಿಯ ಫಲಿತಾಂಶದಲ್ಲಿ ಶಾಲೆ ಉತ್ತಮ ಸಾಧನೆ ಮಾಡಿದೆ. ಆ ಶಿಕ್ಷಕರ ಕೊಡುಗೆಯಿಂದ ಮಿಂಚುತ್ತಿದ್ದ ಸರಕಾರಿ ಶಾಲೆ ಇಂದು ಅವ್ಯವಸ್ಥೆಯ ಆಗರವಾಗಿದೆ. ಸರಕಾರಿ ಶಾಲೆಯನ್ನು ಕೆಟ್ಟ ಚಟುವಟಿಕೆಗಳಿಂದ ಉಳಿಸುವ ಕೆಲಸ ಆಗಬೇಕಿದೆ. ಶಾಲೆಯ ರಕ್ಷಣೆಗೆ ಇಂದಿನ ಶಿಕ್ಷಕರು, ಅಧಿಕಾರಿಗಳು ಮುಂದಾಗಬೇಕಿದೆ. ಭದ್ರತೆಗೆ ಬೇಕಾಗುವ ಎಲ್ಲ ನಿರ್ಧಾರಗಳನ್ನು ಸರಕಾರ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಡಿಡಿಪಿಐ ಸೂರ್ಯಕಾಂತ್ ಮದಾನೆ ಅವರು, ಇಂತಹ ಘಟನೆಗಳು ಶಾಲೆಗಳಲ್ಲಿ ಆಗಬಾರದು, ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ.
ಯಳಸಂಗಿ ಸರಕಾರಿ ಪ್ರೌಢ ಶಾಲೆಯಲ್ಲಿ ಆಗುತ್ತಿರುವ ಘಟನೆಗಳ ಕುರಿತು ಕ್ರಮ ಕೈಗೊಳ್ಳಲು ಮುಖ್ಯ ಶಿಕ್ಷಕರಿಂದ ಸಮೀಪದ ಪೊಲೀಸ್ ಠಾಣೆಗೆ ದೂರು ಕೊಡಲು ಸೂಚಿಸಲಾಗುವುದು. ಬಳಿಕ ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆ.
-ರಂಗಸ್ವಾಮಿ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ, ಆಳಂದ
ಶಾಲಾ ಗೇಟ್ಗೆ ದೊಡ್ಡ ಗಾತ್ರದ ಕೀಲಿಗಳನ್ನು ಹಾಕಿದ್ದೇವೆ. ಅವುಗಳನ್ನೇ ಹತ್ತಾರು ಬಾರಿ ಒಡೆಯಲಾಗಿದೆ. ಗುಟ್ಕಾ ತಿಂದು ಗೋಡೆಗಳ ಮೇಲೆ ಉಗುಳುತ್ತಾರೆ, ಆವರಣದಲ್ಲಿ ಕುಡಿದು ಎಸೆದಿದ್ದ ಮದ್ಯದ ಬಾಟಲಿ, ಮತ್ತಿತರ ವಸ್ತುಗಳನ್ನು ಬೆಳಗ್ಗೆ ನಮ್ಮ ವಿದ್ಯಾರ್ಥಿಗಳೇ ತೆಗೆದು ಹಾಕುವ ಸ್ಥಿತಿ ನಿತ್ಯ ನಡೆಯುತ್ತಿದೆ. ಭದ್ರತೆಗಾಗಿ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದೇವೆ.
-ಶೈಲಾ ಮಠ, ಮುಖ್ಯೋಪಾಧ್ಯಾಯರು