ಎನ್.ರವಿಕುಮಾರ್ ವಿರುದ್ಧ ಸುಳ್ಳು ಅಟ್ರಾಸಿಟಿ ಕೇಸ್: ಮಾಜಿ ಶಾಸಕ ರಾಜಕುಮಾರ್ ಪಾಟೀಲ್

ಕಲಬುರಗಿ: ಎಂಎಲ್ಸಿ ಎನ್.ರವಿಕುಮಾರ್ ಅವರು ಪೊಲೀಸ್ ಅಧಿಕಾರಿಗಳಿಗೆ ಜಾತಿ ನಿಂದನೆ ಮಾಡೇ ಇಲ್ಲ, ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಜಾತಿ ನಿಂದನಾ ಕೇಸ್ ದಾಖಲಿಸಲಾಗಿದೆ ಎಂದು ಸೇಡಂ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿಂದ ಸುಳ್ಳು ಪ್ರಕರಣಗಳನ್ನು ದಾಖಲಿಸಿ ನಮ್ಮ ಕಾರ್ಯಕರ್ತರನ್ನು ಮೂಲೆಗುಂಪಾಗಿ ಮಾಡಲಾಗುತ್ತಿದೆ, ಕಲಬುರಗಿ ಜಿಲ್ಲೆಯಲ್ಲೂ ಸುಖಾ ಸುಮ್ಮನೇ ಬಿಜೆಪಿ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿ, ಅವರ ವಿರುದ್ಧ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯವಾದಾಗ ಇಲ್ಲಿನ ಪೊಲೀಸರು ಯಾವುದೇ ರೀತಿಯ ದೂರುಗಳನ್ನು ಸ್ವೀಕರಿಸುವುದಿಲ್ಲ, ಆದರೆ ಕಾಂಗ್ರೆಸ್ ಕಾರ್ಯಕರ್ತರು ದೂರು ಕೊಟ್ಟರೆ ಕ್ಷಿಪ್ರಗತಿಯಲ್ಲಿ ಎಫ್ಐಆರ್ ದಾಖಲಿಸಿ, ಕೋರ್ಟ್ ಗೆ ರವಾನಿಸುತ್ತಾರೆ. ಪೊಲೀಸರ ಇಂತಹ ನಡುವಳಿಕೆ ಸಲ್ಲದು ಎಂದು ಹೇಳಿದರು.
ದಲಿತರ ರಕ್ಷಣೆಗಾಗಿ ಇರಬೇಕಾದ ಕಾನೂನನ್ನು, ಕಾಂಗ್ರೆಸ್ ನಾಯಕ, ಪುಂಡರ ಮಾತಿಗೆ ಬಗ್ಗಿ ಸುಳ್ಳು ಅಟ್ರಾಸಿಟಿ ಕೇಸು ಹಾಕುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ, ಜಿಲ್ಲೆಯಲ್ಲಿ ನಡೆಯುತ್ತಿರುವ ಅದೆಷ್ಟು ಕಳ್ಳತನ, ಅತ್ಯಾಚಾರ, ದರೋಡೆ,ಸುಲಿಗೆ ಪ್ರಕರಣಗಳು ನಡೆದರೂ, ದೂರುಗಳನ್ನು ದಾಖಲಿಸುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿ ನಾಯಕರಾಗಲಿ, ಕಾರ್ಯಕರ್ತರಾಗಲಿ ಪ್ರಶ್ನೆ ಮಾಡಿದರೆ ಅವರ ಮೇಲೆ ಅಟ್ರಾಸಿಟಿ ಕೇಸು ಹಾಕುವಂತಹ ಕೆಲಸ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುಮ್ಮಕ್ಕಿನಿಂದ ನಡೆಯುತ್ತಿವೆ. ಎನ್.ರವಿಕುಮಾರ್ ಯಾವುದೇ ಜಾತಿ ನಿಂದನೆ ಮಾಡೇ ಇಲ್ಲ, ಜಿಲ್ಲಾಧಿಕಾರಿಗಳ ಕುರಿತು ಮಾತನಾಡಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ, ಆದರೂ ಇಂತಹ ಸುಳ್ಳು ಆರೋಪ ಮಾಡಿ, ಅಟ್ರಾಸಿಟಿ ದಾಖಲಿಸಿರುವ ಪೊಲೀಸರ ನಡೆ ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಬಿಜಿ ಪಾಟೀಲ್, ನಗರಾಧ್ಯಕ್ಷ ಚಂದು ಪಾಟೀಲ್, ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಅವ್ವಣ್ಣಾ ಮ್ಯಾಕೇರಿ, ಅಂಬಾರಾಯ ಅಷ್ಟಗಿ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಶರಣಪ್ಪ ತಳವಾರ್, ಧರ್ಮಣ್ಣ ಇಟಗಾ, ದಿಲೀಪ್ ಪಾಟೀಲ್ ಸೇರಿದಂತೆ ಇತರರು ಇದ್ದರು.