ಕಲಬುರಗಿ | ಛಲವಾದಿ ನಾರಾಯಣಸ್ವಾಮಿ, ರವಿಕುಮಾರ್ ಹೇಳಿಕೆ ಖಂಡಿಸಿ ಬೃಹತ್ ಪ್ರತಿಭಟನೆ

ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಕಲಬುರಗಿ ಜಿಲ್ಲಾಧಿಕಾರಿಗಳ ವಿರುದ್ಧ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಅವರು ಕೀಳುಮಟ್ಟದ ಭಾಷೆ ಬಳಸಿರುವುದನ್ನು ಖಂಡಿಸಿ, ನಾಗರಿಕ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ತಮಟೆ ಬಾರಿಸುವ ಮೂಲಕ ಪ್ರಾರಂಭವಾದ ಧರಣಿ, ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಅವರ ಅಣುಕು ಶವ ಯಾತ್ರೆ ಮಾಡುವ ಮೂಲಕ ಗಮನ ಸೆಳೆಯಿತು.
ಪ್ರತಿಭಟನಾಕಾರರು ಪೋಸ್ಟರ್ ಗಳನ್ನು ಪ್ರದರ್ಶಿಸಿ ಬಿಜೆಪಿ ನಾಯಕರ ವಿರುದ್ಧದ ಘೋಷಣೆ ಕೂಗಿದರು. ಬಿಜೆಪಿ ಪಕ್ಷ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಸಿ ಕಚೇರಿ ಎದುರು ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಯೋಜನಾ ಆಯೋಗದ ಉಪಾಧ್ಯಕ್ಷ, ಆಳಂದ ಶಾಸಕರಾದ ಬಿ.ಆರ್ ಪಾಟೀಲ್, ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಬಳಸಿದ ಭಾಷೆ ಖಂಡನೀಯ, ಅವರಿಗೆ ಮದ ಏರಿದೆ. ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಸರಕಾರ ಪಣತೊಟ್ಟರೆ, ಈ ಬಿಜೆಪಿಗರಿಗೆ ಶಾಂತಿ, ಸಹಬಾಳ್ವೆಯಲ್ಲಿ ನಂಬಿಕೆ ಇಲ್ಲ, ಅನಾವಶ್ಯಕವಾಗಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿಯ ಭಾಷೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಜನರು ಕಲಬುರಗಿಗೆ ನಿಮ್ಮನ್ನು ಕಾಲಿಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಶಾಸಕ ಎಂ.ವೈ ಪಾಟೀಲ್ ಮಾತನಾಡಿ, ದಿನಾ ಒಂದು ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರಿಗೆ ಸಂಸ್ಕೃತಿ ಇಲ್ಲ, ಎಲ್ಲರೂ ಸಮಾಜದಲ್ಲಿ ಮನುಷ್ಯರಾಗಿ ಬಾಳಬೇಕಾದರೆ ಮೊದಲು ನಾಲಿಗೆ ಸ್ವಚ್ಚವಾಗಿಟ್ಟುಕೊಳ್ಳಬೇಕು, ಬಿಜೆಪಿಗರು ಸಂವಿಧಾನ ಬದಲಾವಣೆ ಮಾಡುವ ಹೇಳಿಕೆಗಳನ್ನು ನೀಡುತ್ತಾರೆ, ಎಲ್ಲಾ ಧರ್ಮ, ಜಾತಿಗಳನ್ನು ಕೂಡಿಸಿಕೊಂಡು ಹೋಗುವಂತಹ ಸಂವಿಧಾನ ಬೇರೆ ದೇಶಗಳಲ್ಲಿ ಇಲ್ಲ ಎಂದರು.
ಎನ್.ರವಿಕುಮಾರ್ ಜಾತಿ ಮುಂದಿಟ್ಟುಕೊಂಡು ಉದ್ದೇಶಪೂರ್ವಕವಾಗಿ ಜಿಲ್ಲಾಧಿಕಾರಿಗಳನ್ನು ನಿಂದಿಸಿದ್ದಾರೆ. ಈಗ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ಡಿಸಿ ಒಪ್ಪುವ ಹಾಗೆ ಕ್ಷಮೆ ಕೋರುವಂತೆ ಹೈಕೋರ್ಟ್ ಆತನಿಗೆ ತಾಕೀತು ಮಾಡಿದೆ. ಒಬ್ಬ ಜನಪ್ರತಿನಿಧಿಯಾಗಿ ಇನ್ನು ಮುಂದೆ ಮಾತನಾಡುವಾಗ ಎಚ್ಚರದಿಂದ ಮಾತನಾಡಬೇಕು ಎಂದು ಹೇಳಿದರು.
ಬೂಕರ್ ಪ್ರಶಸ್ತಿ ಗೆದ್ದ ಭಾನು ಮುಷ್ತಾಕ್ ಗೆ ಅಭಿನಂದಿಸದ ಪ್ರಧಾನಿ: ಮಾವಳ್ಳಿ ಶಂಕರ್
ಹಾಸನದ ಲೇಖಕಿ ಭಾನು ಮುಷ್ತಾಕ್ ಅವರಿಗೆ ವಿಶ್ವವಿಖ್ಯಾತ ಬೂಕರ್ ಪ್ರಶಸ್ತಿ ಸಿಕ್ಕಿದೆ. ಕನ್ನಡಿಗರಾದ ನಮಗೆ ಅವರ ಬಗ್ಗೆ ಬಹಳಷ್ಟು ಗೌರವವಿದೆ. ಆದರೆ ದೇಶದ ಪ್ರಧಾನಿಯಾಗಿ ಮಹತ್ವದ ಪ್ರಶಸ್ತಿ ಬಾಚಿಕೊಂಡ ಲೇಖಕಿಯನ್ನು ಅಭಿನಂದಿಸಿಲ್ಲ ಎಂದು ದಲಿತ ಮುಖಂಡ ಮಾವಳ್ಳಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹ ಮೂರ್ತಿ ಮಾತನಾಡಿ, ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು ಜಿಲ್ಲಾಧಿಕಾರಿಯಾಗಿ ಜನರ ಸೇವೆ ಮಾಡಬೇಕೆಂದು ಐಎಎಸ್ ಪಾಸ್ ಮಾಡಿದ್ದಾರೆ. ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದಿರುವ ಅವರನ್ನು ಪಾಕಿಸ್ತಾನದಿಂದ ಬಂದಿದ್ದಾರೆ ಎಂದು ರವಿಕುಮಾರ್ ಹೇಳುತ್ತಾರೆ, ಇನ್ನೊಬ್ಬ ಮಧ್ಯಪ್ರದೇಶದ ಬಿಜೆಪಿ ಸಚಿವ ಆಪರೇಶನ್ ಸಿಂಧೂರ ಕಾರ್ಯಾಚರಣೆಯ ನೇತೃತ್ವ ವಹಿಸಿದ ಕರ್ನಲ್ ಸೋಫಿಯಾ ಖುರೇಶಿ ಅವರನ್ನು ಭಯೋತ್ಪಾದಕರ ಸಹೋದರಿ ಎನ್ನುತ್ತಾರೆ. ಕೀಳು ಮನಸ್ಸಿನ ಬಿಜೆಪಿಗರು ಹೆಣ್ಣು ಮಕ್ಕಳು ಮುಂದೆ ಬಂದ್ರೆ ಸಹಿಸಲ್ಲ, ಹಾಗಾಗಿ ಅವರನ್ನೇ ಟಾರ್ಗೆಟ್ ಮಾರುತ್ತಿದ್ದಾರೆ ಎಂದರು.
ದಲಿತ ಮುಖಂಡ ಡಿ.ಜಿ.ಸಾಗರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಎಂಎಲ್ಸಿ ಜಗದೇವ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರು, ಶಾಸಕ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.
ಈ ಸಂದರ್ಭದಲ್ಲಿ ಕೆಬಿ ಶಾಣಪ್ಪ, ಲಚ್ಚಪ್ಪಾ ಜಮಾದಾರ್, ಸಂತೋಷ್ ರಾಥೋಡ್, ಮಜಹರ್ ಖಾನ್ ಆಲಂ, ಭೀಮಣ್ಣ ಸಾಲಿ, ಪವನಕುಮಾರ್ ವಳಕೇರಿ, ಅಶ್ವಿನ್ ಸಂಕಾ, ದಿಗಂಬರ ಬೆಳಮಗಿ, ವಿಠ್ಠಲ್ ದೊಡ್ಡಮನಿ, ಜಯಪ್ರಕಾಶ್ ಕಮಕನೂರ್, ದಿನೇಶ್ ದೊಡ್ಡಮನಿ, ಗುಂಡಪ್ಪ ಲಂಡನಕರ್, ಹಣಮಂತ ಬೋಧನಕರ್, ಅಲ್ಲಮಪ್ರಭು ದೇವರು ನಾಗೂರು, ಸುರೇಶ್ ಹಾದಿಮನಿ, ಕಿರಣ್ ದೇಶಮುಖ್, ರಾಜೀವ್ ಜಾನೆ, ರಾಜು ಕಪನೂರ್, ಮಹಾಂತೇಶ್ ಕೌಲಗಿ, ರೇವುನಾಯಕ್ ಬೆಳಮಗಿ, ಶಿವಾನಂದ್ ಹೊನಗುಂಟಿ, ವರಜ್ಯೋತಿ ಭoತೇಜಿ, ವಹಾಜ್ ಬಾಬಾ, ಚಂದ್ರಿಕಾ ಪರಮೇಶ್ವರ, ರೇಣುಕಾ ಸಿಂಗೆ, ಸಾರಂಗಧರ ದೇಶಿಕೇಂದ್ರದ ಸುಲಫಲ, ಮಹಾoತಪ್ಪ ಸಂಗಾವಿ, ದತ್ತಾತ್ರೇಯ ಇಕ್ಕಳಕಿ, ಮಲ್ಲಪ್ಪ ಹೊಸಮನಿ, ಪ್ರಕಾಶ್ ಮೂಲಭಾರತಿ, ದೇವೇಂದ್ರ ಸಿನ್ನೂರ್, ಸಂತೋಷ್ ಮೇಲ್ಮನಿ ಸೇರಿದಂತೆ ವಿವಿಧ ದಲಿತ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.