ಕಲಬುರಗಿ| ಜನೌಷಧಿ ಕೇಂದ್ರ ಬಂದ್ ಮಾಡುತ್ತಿರುವುದನ್ನು ಖಂಡಿಸಿ ಬಿಜೆಪಿಯಿಂದ ಮೌನ ಪ್ರತಿಭಟನೆ

ಕಲಬುರಗಿ: ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ರಾಜ್ಯದಲ್ಲಿ ಬಂದ್ ಮಾಡುತ್ತಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಗರದ ಜಿಲ್ಲಾಸ್ಪತ್ರೆಯ ಎದುರು ಮೌನ ಪ್ರತಿಭಟನೆ ನಡೆಯಿತು.
ದೇಶದಲ್ಲಿ 15,000ಕ್ಕೂ ಅಧಿಕ ಮತ್ತು ರಾಜ್ಯದಲ್ಲಿ 1,541 ಜನೌಷಧಿ ಕೇಂದ್ರಗಳಿದೆ. ಈ ಕೇಂದ್ರಗಳಿಂದ 12 ಲಕ್ಷ ಜನರು ಲಾಭ ಪಡೆಯುತ್ತಿದ್ದಾರೆ. ಇದರಿಂದ ಕಳೆದ 10 ವರ್ಷಗಳಲ್ಲಿ 30 ಸಾವಿರ ಕೋಟಿ ರೂ.ಉಳಿತಾಯವಾಗಿದೆ. ಕರ್ನಾಟಕದಲ್ಲಿ ವಾರ್ಷಿಕವಾಗಿ 40 ಕೋಟಿ ರೂ. ಉಳಿತಾಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬಡವರಿಗೆ ವರದಾನವಾಗಿರುವ ಈ ಕೇಂದ್ರಗಳನ್ನು ರಾಜ್ಯ ಸರಕಾರ ಬಂದ್ ಮಾಡುತ್ತಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರ ಆರೋಗ್ಯ ಸೇವೆ ನೀಡುವಲ್ಲಿ ವಿಫಲವಾಗಿರುವುದನ್ನು ಮರೆಮಾಚಲು ಜನೌಷಧಿ ಕೇಂದ್ರಗಳನ್ನು ಮುಚ್ಚುಬೇಕೆಂದು ಆದೇಶ ಹೊರಡಿಸಿದೆ. ಸರಕಾರದ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ.
ಈ ವೇಳೆ ಮಾತನಾಡಿದ ಎಂಎಲ್ಸಿ ಶಶೀಲ್ ನಮೋಶಿ, ಕೇಂದ್ರ ಸರಕಾರ ಜಾರಿಗೆ ತಂದಿರುವ ಜನೌಷಧಿ ಕೇಂದ್ರಗಳನ್ನು ಯಾವ ಕಾರಣಕ್ಕೆ ಬಂದ್ ಮಾಡಲಾಗುತ್ತದೆ ಎಂಬುದನ್ನು ಸರಕಾರ ಬಹಿರಂಗ ಪಡಿಸಬೇಕು. ಮೋದಿ ಸರಕಾರ ತಂದಿರುವ ಒಂದೇ ಕಾರಣಕ್ಕೆ ಈ ಯೋಜನೆಯನ್ನು ವಿರೋಧಿಸುತ್ತಿದ್ದೀರಾ? ಸರಕಾರಿ ಆಸ್ಪತ್ರೆಯಲ್ಲಿ ಸಿಗದಿರುವ ಔಷಧಿಗಳನ್ನು ಬಡವರು ಈ ಕೇಂದ್ರಗಳಲ್ಲಿ ಪಡೆದುಕೊಳ್ಳುತ್ತಾರೆ. ಇದೀಗ ಇವುಗಳನ್ನೇ ಮುಚ್ಚಿದರೆ ಬಡ ರೋಗಿಗಳ ಪಾಡು ಏನಾಗಬಹುದು? ಸಿದ್ದರಾಮಯ್ಯನವರು ಉಚಿತ ಔಷಧಿಗಳನ್ನು ಕೊಡುವುದಾದರೆ ಜನೌಷಧಿ ಕೇಂದ್ರಗಳನ್ನು ಮುಚ್ಚಿ ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಶಾಸಕ ಅವಿನಾಶ್ ಜಾಧವ್, ಅಶೋಕ್ ಬಗಲಿ, ಚಂದು ಪಾಟೀಲ್, ಶರಣಪ್ಪ ತಳವಾರ, ಸುಧಾ ಹಾಲಕೈ, ಅವ್ವಣ್ಣಾ ಮ್ಯಾಕೆರಿ, ಶಶಿಕಲಾ ತೆಂಗಳಿ, ಆನಂದ್ ಪಾಟೀಲ್, ಮಹಾದೇವ ಬೆಳಮಗಿ, ಸಂತೋಷ್ ಹಾದಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.