ಕಲಬುರಗಿ | ಕೋಮು ಸೌಹಾರ್ದತೆ ಕೆಡಿಸುವ ಹೇಳಿಕೆ ನೀಡಿದ ಬಿಜೆಪಿ ಮುಖಂಡ: ಪ್ರಕರಣ ದಾಖಲು
15 ನಿಮಿಷಗಳಲ್ಲಿ ಮುಸ್ಲಿಮರ ಸಾಮೂಹಿಕ ನರಮೇಧ ನಡೆಸುವ ಬೆದರಿಕೆ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿಡಿಯೋ ವೈರಲ್

ಮಣಿಕಂಠ ರಾಠೋಡ್
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮುಸ್ಲಿಂ ಸಮುದಾಯವನ್ನು ಬೇರು ಸಮೇತ ಕಿತ್ತೊಗೆಯಬೇಕು. 8 ದಿವಸಗಳಲ್ಲಿ ʼಲವ್ ಜಿಹಾದ್ʼ ಆರೋಪಿಗಳನ್ನು ಸಾಯಿಸಬೇಕು ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಮಣಿಕಂಠ ರಾಠೋಡ್ ತನ್ನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು, ಕಲಬುರಗಿಯಲ್ಲಿ ಪೊಲೀಸರನ್ನು 15 ನಿಮಿಷಕ್ಕಾಗಿ ತಡೆ ಹಿಡಿಯಲಿ, ಮುಸ್ಲಿಮರನ್ನು ಸಾಮೂಹಿಕವಾಗಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕೋಮು ಪ್ರಚೋದನೆ ಹೇಳಿಕೆ ನೀಡಿರುವ ಬೆನ್ನಲ್ಲೇ ಮಣಿಕಂಠ ವಿರುದ್ಧ ಸಯ್ಯದ್ ಅಲಿಮ್ ಇಲಾಹಿ ಎಂಬಾತರು ದೂರು ನೀಡಿದ ಬಳಿಕ ಈಗ ಸೆನ್ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮುಸ್ಲಿಂ ಸಮುದಾಯವನ್ನು ಬೇರು ಸಮೇತ ಕಿತ್ತು ಹಾಕಬೇಕು, 8 ದಿವಸಗಳಲ್ಲಿ ಜಿಹಾದಿಗಳನ್ನು ಸಾಯಿಸಬೇಕು ಎಂದು ಬೆದರಿಕೆಯೊಡ್ಡಿ ಧರ್ಮ ಧರ್ಮಗಳ ನಡುವೆ ಜಗಳ ಹಚ್ಚುವ ರೀತಿಯಲ್ಲಿ ಲಂಬಾಣಿ ಭಾಷೆಯಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.
ಮಣಿಕಂಠ ರಾಠೋಡ್, ಕೆಲ ದಿನಗಳ ಹಿಂದಷ್ಟೇ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾತನಾಡಿರುವ ಆರೋಪದ ಮೇರೆಗೆ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಇದರ ಬೆನ್ನಲ್ಲೇ ವಿಡಿಯೋ ಮಾಡಿ, ಮುಸ್ಲಿಮರ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ತರಹ ಕೋಮು ಪ್ರಚೋದನೆಗೆ ಯತ್ನಿಸಿರುವ ಮಣಿಕಂಠ ರಾಠೋಡ್ ನನ್ನು ಕೂಡಲೇ ಬಂಧಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.
ಮಣಿಕಂಠ ರಾಠೋಡ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಚಿತ್ತಾಪುರ ಮತ ಕ್ಷೇತ್ರದ ಸ್ಪರ್ಧಿಸಿ, ಕಾಂಗ್ರೆಸ್ ನ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಸೋತಿದ್ದರು.