ವೃತ್ತಿಪರತೆ ಮರೆಯುತ್ತಿರುವ ‘ವೈದ್ಯ ಲೋಕ’

ಒಂದು ಮಾತು ಮೊದಲೇ ಸ್ಪಷ್ಟಪಡಿಸುತ್ತೇನೆ: ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ನಿಜವಾದ ವೃತ್ತಿಪರರು, ಒಳ್ಳೆಯವರು ಮತ್ತು ಜನಪರ ಕಾಳಜಿಯುಳ್ಳ ವೈದ್ಯರು ಕರ್ನಾಟಕದಲ್ಲೂ ಇದ್ದಾರೆ. ವೈದ್ಯೋ ನಾರಾಯಣ ಹರಿ ಎಂಬ ಮಾತಿಗೆ ಇಂಬು ಕೊಡುವ, ರೋಗ ಗುಣಪಡಿಸುವುದಷ್ಟೇ ನನ್ನ ಕರ್ತವ್ಯ ಎಂದು ಭಾವಿಸಿರುವ ಅನೇಕ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಣದ ಆಸೆ ಇಲ್ಲದ, ಅತ್ಯುತ್ತಮ ಚಿಕಿತ್ಸೆ ನೀಡುವುದಷ್ಟೇ ನನ್ನ ಧರ್ಮ ಎಂದು ನಂಬಿರುವ ವೈದ್ಯರು ಸಾಕಷ್ಟು ಜನರಿದ್ದಾರೆ. ಆದರೆ ಅಂತಹವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬೇಕು, ವೈದ್ಯಲೋಕ ವೃತ್ತಿಪರತೆ ಮೆರೆಯಬೇಕು ಎಂಬ ಕಾಳಜಿಯಿಂದ ಈ ಬರಹ ಮಾಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ, ಕೆಲ ವೈದ್ಯರು ನೈಜ ಕಾಳಜಿಯೊಂದಿಗೆ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು ನಾವು ಕಂಡಿದ್ದೇವೆ.
ಆದರೆ ಒಟ್ಟು ವೈದ್ಯಕೀಯ ವ್ಯವಸ್ಥೆಯೇ ಹಣದ ಹಿಂದೆ ಬೆನ್ನು ಹತ್ತಿದ್ದು, ಮಾನವೀಯತೆ ಮರೆತದ್ದು, ಸಾವಿನ ಮನೆಯಲ್ಲೂ ಲಾಭದ ಯೋಜನೆಗಳನ್ನು ರೂಪಿಸಿದ್ದು ಯಾರೂ ಮರೆತಿಲ್ಲ. ಮಾಸ್ಕ್ ಮಾರಾಟ ಸೇರಿದಂತೆ, ಕೋವಿಡ್ ಸಂದರ್ಭದಲ್ಲಿ ಅಗತ್ಯವಿರುವ ಔಷಧಿಗಳ ಕೃತಕ ಅಭಾವ ಸೃಷ್ಟಿಸಿ ನೂರು ಪಟ್ಟು ಹೆಚ್ಚು ಹಣಕ್ಕೆ ಮಾರಿಕೊಂಡಿದ್ದು ಜನರಿಗೆ ಇನ್ನೂ ನೆನಪಿದೆ.
ಕೋವಿಡ್ ಸಂದರ್ಭದಲ್ಲಿ, ಜನತೆಯ ಹಿತ ಬಯಸಬೇಕಾದ ಸರಕಾರ, ಆ ಸರಕಾರದ ಮುಖ್ಯಸ್ಥರು, ಆರೋಗ್ಯ ಮಂತ್ರಿಗಳು ಔಷಧಿ ಮತ್ತು ಕಿಟ್ ಖರೀದಿಯಲ್ಲಿ ದೊಡ್ಡ ಹಗರಣ ನಡೆಸಿದ್ದು ಕಡತಗಳಲ್ಲಿ ನೋಡಲು ಸಿಗುತ್ತದೆ.
ಕರ್ನಾಟಕ ಮಾತ್ರವಲ್ಲ, ಒಟ್ಟು ಭಾರತದ ವೈದ್ಯಕೀಯ ವ್ಯವಸ್ಥೆಯೇ ಔಷಧಿ ಮಾಫಿಯಾದ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದು, ವೈದ್ಯ ವೃತ್ತಿಯ ಮುಖ್ಯ ಆಶಯವನ್ನೇ ಮರೆತು ಧನದಾಹಿಯಾಗಿದೆ.
ವೈದ್ಯಲೋಕದಲ್ಲಿ ಸರಕಾರಿ ಮತ್ತು ಖಾಸಗಿ ವಲಯಗಳು ಸಮಾನವಾಗಿ ಭ್ರಷ್ಟಗೊಂಡಿವೆ. ಕಾರ್ಪೊರೇಟ್ ವೈದ್ಯಕೀಯ ವಲಯವಂತೂ ರೋಗಿಗಳು ಮತ್ತು ವೈದ್ಯರನ್ನು ಒಟ್ಟಿಗೆ ಶೋಷಣೆ ಮಾಡುವ ವ್ಯವಸ್ಥೆ ಹುಟ್ಟು ಹಾಕಿದೆ. ಇಂತಹ ಮನೋಭಾವನೆ ಎಲ್ಲೆಡೆ ವ್ಯಾಪಿಸಲು ನಮ್ಮ ಸರಕಾರಗಳು ಮುಖ್ಯ ಕಾರಣ. ಕಳೆದ ಹತ್ತು ವರ್ಷಗಳಿಂದ ಭಾರತ ಸರಕಾರ ಮಂಡಿಸುತ್ತಿರುವ ಆಯವ್ಯಯ ಪತ್ರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಜನಸಾಮಾನ್ಯರ ಹಿತ ಮತ್ತು ಭಾರತದ ಅಭಿವೃದ್ಧಿಗಿಂತ ಕಾರ್ಪೊರೇಟ್ ವಲಯಕ್ಕೆ ಲಾಭ ಮಾಡಿಕೊಡುವ ಕಾಳಜಿಯೇ ಮುಖ್ಯವಾಗಿರುತ್ತದೆ. ಈ ಪ್ರವೃತ್ತಿ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣವನ್ನು ಭಾರತ ಸರಕಾರ ಅಧಿಕೃತವಾಗಿ ಒಪ್ಪಿಕೊಂಡ ಮೇಲೆ ಮತ್ತಷ್ಟು ಹೆಚ್ಚಾಗಿದೆ. 1992ಕ್ಕೂ ಮುಂಚೆ ಭಾರತದ ಆಯವ್ಯಯ ಪತ್ರಗಳು ಭಾರತದ ಅಭಿವೃದ್ಧಿ ಮತ್ತು ಜನಸಾಮಾನ್ಯರ ಜೀವನಮಟ್ಟ ಹೆಚ್ಚಿಸುವ ಆಶಯದೊಂದಿಗೆ ಮಂಡಿಸಲ್ಪಡುತ್ತಿದ್ದವು. ಹಾಗಂತ ಆಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಇರಲಿಲ್ಲವೆಂದಲ್ಲ. ಆಗಲೂ ಭ್ರಷ್ಟಾಚಾರ ಇತ್ತು. ಒಂದು ಅಭಿವೃದ್ಧಿ ಯೋಜನೆ ರೂಪಿಸಿ ಅದನ್ನು ಜಾರಿಗೊಳಿಸುವಾಗ ಸಣ್ಣ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಲಾಗುತ್ತಿತ್ತು. ಈಗ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದೇ ಹಣ ಮಾಡುವುದಕ್ಕಾಗಿ.
ವೈದ್ಯಕೀಯ ಲೋಕದ ಬದಲಾದ ಮನಸ್ಥಿತಿಯನ್ನೇ ಗಮನಿಸೋಣ. ಈ ಮೊದಲು ಅತ್ಯುತ್ತಮ ವೈದ್ಯಕೀಯ ಸೇವೆ ನೀಡಲು, ರೋಗಿಗಳನ್ನು ಅಕ್ಷರಶ: ದೇವರಂತೆ ಕಾಪಾಡುವ ಕಾಳಜಿಯೊಂದಿಗೆ ವೈದ್ಯ ವೃತ್ತಿಗೆ ಬರುತ್ತಿದ್ದರು. ಪ್ರಾಮಾಣಿಕ ವೈದ್ಯ ವೃತ್ತಿ ನಡೆಸಿ ಹಣ ಗಳಿಸುತ್ತಿದ್ದರು. ಈಗ ವೈದ್ಯಕೀಯ ಶಿಕ್ಷಣ ಪಡೆಯುವ ಬಹುತೇಕರು ಹಣ ಮಾಡುವ ಉದ್ದೇಶ ಇಟ್ಟುಕೊಂಡೇ ಆ ಕ್ಷೇತ್ರಕ್ಕೆ ಬಂದಿರುತ್ತಾರೆ.
ಒಂದು ಸಣ್ಣ ಕ್ಲಿನಿಕ್ನಿಂದ ಶುರುವಾಗಿ ನರ್ಸಿಂಗ್ ಹೋಂಗಳು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ಕಾರ್ಪೊರೇಟ್ ವಲಯದ ಆಸ್ಪತ್ರೆಗಳ ಮುಖ್ಯ ಗುರಿ ಹಣ ಮಾಡುವುದಾಗಿರುತ್ತದೆ. ಮಹಾನಗರ, ನಗರ ಮತ್ತು ಪಟ್ಟಣಗಳಲ್ಲಿ ವೈದ್ಯರು ಇರುವುದೇ ಹಣ ಮಾಡಲು ಎಂಬಂತಾಗಿದೆ. ಉತ್ತಮ ವೈದ್ಯಕೀಯ ಚಿಕಿತ್ಸೆ ಕೊಡುವುದು ಬಹುತೇಕ ವೈದ್ಯರ ಮೊದಲ ಆದ್ಯತೆಯಾಗಿರುವುದಿಲ್ಲ. ಒಂದು ಕ್ಲಿನಿಕ್ಗೋ ಇಲ್ಲ ಆಸ್ಪತ್ರೆಗೋ ಒಬ್ಬ ರೋಗಿ ಚಿಕಿತ್ಸೆ ಪಡೆಯಲು ಹೋದರೆ, ಅದು ರೋಗ ದೊಡ್ಡದಿರಲಿ ಸಣ್ಣದಿರಲಿ ವೈದ್ಯರು ಮೊದಲು ಸೂಚಿಸುವುದು ಸಿಕ್ಕಾಪಟ್ಟೆ ಟೆಸ್ಟ್ಗಳನ್ನು. ನೆಗಡಿ, ಕೆಮ್ಮು, ಜ್ವರದಿಂದ ಹಿಡಿದು ಗಂಭೀರ ಕಾಯಿಲೆಗಳವರೆಗೆ ಏನೇ ಇದ್ದರೂ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ, ಎಂಆರ್ಐ, ಸಿಟಿ ಸ್ಕ್ಯಾನ್ ಸೇರಿದಂತೆ ನೂರಾರು ಟೆಸ್ಟ್ಗಳನ್ನು ವೈದ್ಯರು ಸೂಚಿಸಿದ ಲ್ಯಾಬ್ ಗಳಲ್ಲೇ ಮಾಡಿಸಬೇಕು. ಬಹುತೇಕ ವೈದ್ಯರು ವೈದ್ಯಕೀಯ ರಿಪೋರ್ಟ್ ಬರುವವರೆಗೆ ಕಾಯುವುದಿಲ್ಲ. ಸಿಕ್ಕಾಪಟ್ಟೆ ಟೆಸ್ಟ್ಗಳ ಜೊತೆಗೆ ಸಾಕಷ್ಟು ಔಷಧಿಗಳನ್ನು ಅದರಲ್ಲೂ ದುಬಾರಿ ಔಷಧಿಗಳನ್ನು ಬರೆದುಕೊಡುತ್ತಾರೆ. ಆ ಔಷಧಿಗಳನ್ನು ಬೇರೆಡೆ ಖರೀದಿ ಮಾಡುವ ಹಾಗಿಲ್ಲ. ಹಾಗೊಂದು ವೇಳೆ ಅವರು ಬರೆದುಕೊಟ್ಟ ಔಷಧಿ ಚೀಟಿ ತೆಗೆದುಕೊಂಡು ಬೇರೆ ಔಷಧಿ ಅಂಗಡಿಗೆ ಹೋದರೆ ಅವು ಲಭ್ಯ ಇರುವುದಿಲ್ಲ. ಬಹುತೇಕ ಸಣ್ಣ ಪುಟ್ಟ ವೈದ್ಯರ ಕ್ಲಿನಿಕ್ ಪಕ್ಕ ಒಂದು ಟೆಸ್ಟ್ ಲ್ಯಾಬ್ ಮತ್ತು ಔಷಧಿ ಅಂಗಡಿ ಕಡ್ಡಾಯವಾಗಿ ಇರುತ್ತದೆ. ಜ್ವರ ಅಥವಾ ನೆಗಡಿಗೂ ದುಬಾರಿ ಔಷಧಿಗಳನ್ನೇ ಬರೆದಿರುತ್ತಾರೆ. ವೈದ್ಯರು ಲ್ಯಾಬ್ ಟೆಸ್ಟ್ ಮತ್ತು ದುಬಾರಿ ಔಷಧಿ ಬರೆದುಕೊಡಲು ಮುಖ್ಯ ಕಾರಣ ಕಮಿಷನ್. ಪ್ರತೀ ಔಷಧಿ ಕಂಪೆನಿಗಳು ತಮ್ಮ ಬ್ರಾಂಡ್ ಬರೆಯಲು ವೈದ್ಯರಿಗೆ ಸಾಕಷ್ಟು ಆಮಿಷಗಳನ್ನು ಒಡ್ಡಿರುತ್ತಾರೆ. ನಿಮ್ಮ ರೋಗಕ್ಕೆ ಔಷಧಿ ಮತ್ತು ಟೆಸ್ಟ್ ಬೇಡ ಎಂದು ಹೇಳುವ ವೈದ್ಯರು ಇದ್ದಾರೆ. ಆದರೆ ಅಂಥವರ ಸಂಖ್ಯೆ ಬಹಳ ಕಡಿಮೆ ಇದೆ. ಇತ್ತೀಚೆಗೆ, ಕ್ಲಿನಿಕ್ ಇಟ್ಟುಕೊಂಡ ಕೆಲವು ವೈದ್ಯರು ಯೂಟ್ಯೂಬ್ ಚಾನೆಲ್ಗಳನ್ನು ಆರಂಭಿಸಿದ್ದಾರೆ. ರೋಗಿಗಳನ್ನು ಸೆಳೆಯಲು ದೊಡ್ಡ ದೊಡ್ಡ ಆದರ್ಶದ ಮಾತುಗಳನ್ನು ಆಡಿರುತ್ತಾರೆ. ಆದರೆ ಅಲ್ಲಿಗೆ ಹೋದರೆ ಹಣ ಮಾಡುವ ಹುನ್ನಾರ ಬಿಟ್ಟು ಮತ್ತೇನೂ ಕಾಣುವುದಿಲ್ಲ.
ಇನ್ನು ಹಲವು ವೈದ್ಯರು, ಸರಕಾರಿ ಅಥವಾ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಬೆಳಗ್ಗೆ ಒಂದೆರಡು ತಾಸು ಕಾಲೇಜಿಗೆ ಹೋಗಿ ರೌಂಡ್ ಮುಗಿಸಿ ತಮ್ಮ ಕ್ಲಿನಿಕ್ ಗೆ ಬರುತ್ತಾರೆ. ಅವರು ಮಧ್ಯಾಹ್ನ ಮತ್ತು ಸಾಯಂಕಾಲ ಮಾತ್ರ ಕ್ಲಿನಿಕ್ ನಲ್ಲಿ ಲಭ್ಯ ಇರುತ್ತಾರೆ. ವೇಳಾಪಟ್ಟಿ ಹಾಕಿರುತ್ತಾರೆಯಾದರೂ ನಿಗದಿತ ಸಮಯಕ್ಕೆ ಬರುವುದಿಲ್ಲ. ಎಷ್ಟು ಜನ ರೋಗಿಗಳು ಬಂದಿದ್ದಾರೆ ಎಂಬುದನ್ನು ನೋಡಿಕೊಂಡು ಬರುತ್ತಾರೆ. ಹೆಚ್ಚು ಜನ ರೋಗಿಗಳು ಇದ್ದಾರೆಂದರೆ, ಸರಿಯಾದ ಸಮಯಕ್ಕೆ ಬರುತ್ತಾರೆ. ಮೊದಲೇ ಟೋಕನ್ ಕೊಟ್ಟು ಸಾವಿರವೋ ಐದು ನೂರೋ ಹಣ ಪೀಕಿರುತ್ತಾರೆ. ಒಬ್ಬ ರೋಗಿಗೆ ಒಂದು ನಿಮಿಷವೂ ಸಮಯ ಕೊಡುವುದಿಲ್ಲ. ರೋಗಿ ಹೇಳುವುದನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವುದಿಲ್ಲ. ರೋಗಿ ತನಗಾಗುತ್ತಿರುವ ಬಾಧೆಯನ್ನು ಹೇಳಿ ಮುಗಿಸುವ ಮೊದಲೇ ಟೆಸ್ಟ್ ಮತ್ತು ಔಷಧಿಗಳ ಚೀಟಿ ಸಿದ್ಧವಾಗಿರುತ್ತದೆ. ಅವರು ಹಣ ಮಾಡುವ ಧಾವಂತದಲ್ಲಿ ಇರುತ್ತಾರೆ. ರೋಗಿಯ ಮಾನಸಿಕ ಸ್ಥಿತಿಯನ್ನು ಅರಿಯುವ ಪ್ರಯತ್ನವೂ ಮಾಡುವುದಿಲ್ಲ. ಸಿಕ್ಕಾಪಟ್ಟೆ ಸೈಡ್ ಎಫೆಕ್ಟ್ ಇರುವ ಔಷಧಿಗಳನ್ನು ಬರೆದುಕೊಟ್ಟಿರುತ್ತಾರೆ. ಔಷಧಿಗಳ ಅಡ್ಡ ಪರಿಣಾಮವನ್ನು ರೋಗಿಗಳೇ ಅನುಭವಿಸಬೇಕು.
ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುವ ವೈದ್ಯರು ತಮ್ಮ ಕ್ಲಿನಿಕ್ಗೆ ಬರುವ ರೋಗಿಗಳ ಆರೋಗ್ಯ ಸ್ಥಿತಿ ಉಲ್ಬಣಿಸಿದರೆ ತಕ್ಷಣ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಅಡ್ಮಿಟ್ ಮಾಡಿಸುತ್ತಾರೆ. ಅಲ್ಲೂ ಕಾಯಿಲೆ ಗುಣಮುಖವಾಗದಿದ್ದರೆ ಮುಗಿಲಿನತ್ತ ಮುಖ ಮಾಡಿ ಕೈ ಎತ್ತಿ ಬಿಡುತ್ತಾರೆ. ಇಲ್ಲ ದೊಡ್ಡ ಆಸ್ಪತ್ರೆಗಳಿಗೆ ಹೋಗಲು ಸೂಚಿಸುತ್ತಾರೆ. ಸರಕಾರಿ ಆಸ್ಪತ್ರೆಗಳು ಅಕ್ಷರಶಃ ನರಕದಂತಿರುತ್ತವೆ. ಅತ್ಯಾಧುನಿಕ ಲ್ಯಾಬ್ ಇದ್ದರೂ ಅಲ್ಲಿ ಟೆಸ್ಟ್ ಮಾಡುವುದಿಲ್ಲ. ಔಷಧಿ ಇದ್ದರೂ ಉಚಿತ ನೀಡುವುದಿಲ್ಲ. ಸರಕಾರಿ ಆಸ್ಪತ್ರೆಗಳ ಬಹುಪಾಲು ನರ್ಸಿಂಗ್ ಸಿಬ್ಬಂದಿ ರೋಗಿಗಳಿಗೆ ಯಮದೂತರಂತೆ ಭಾಸವಾಗುತ್ತಾರೆ. ನಿಶ್ಚಿತ ಸರಕಾರಿ ಸಂಬಳ ಇರುವುದರಿಂದ ಮನುಷ್ಯತ್ವ ಕಳೆದುಕೊಂಡವರಂತೆ ನಡೆದುಕೊಳ್ಳುತ್ತಾರೆ. ಇನ್ನುಳಿದ ಸಿಬ್ಬಂದಿ ಲಂಚಕ್ಕೆ ಪೀಡಿಸುತ್ತಿರುತ್ತಾರೆ.
ಸರಕಾರಿ ಆಸ್ಪತ್ರೆಯ ಸಹವಾಸವೇ ಬೇಡ ಎನಿಸಿ ಖಾಸಗಿ ಆಸ್ಪತ್ರೆಗೆ ಹೋದರೆ ಅಲ್ಲಿ ನರ್ಸಿಂಗ್ ಸಿಬ್ಬಂದಿ ನಯ ವಿನಯ ಪ್ರದರ್ಶಿಸುತ್ತಾರೆ. ವೈದ್ಯರು ನಿಗದಿತ ಸಮಯಕ್ಕೆ ಬರುತ್ತಾರೆ. ಆದರೆ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಯವರ ಕಣ್ಣು ರೋಗಿಗಳ ಜೇಬಿನ ಮೇಲಿರುತ್ತದೆ. ಅಲ್ಲಿಯೂ ಉತ್ತಮ ಚಿಕಿತ್ಸೆ ಸಿಗುತ್ತದೆ ಎಂದು ಹೇಳಲಾಗದು. ಯಾಕೆಂದರೆ, ವೈದ್ಯರು ಒತ್ತಡದಲ್ಲಿ ಇರುತ್ತಾರೆ. ದಿನಕ್ಕೆ ಮೂರ್ನಾಲ್ಕು ನರ್ಸಿಂಗ್ ಹೋಮ್ಗಳಿಗೆ ಭೇಟಿ ಕೊಟ್ಟು ರೋಗಿಗಳಿಗೆ ಚಿಕಿತ್ಸೆ ಕೊಡಬೇಕು. ಸಣ್ಣ ಪುಟ್ಟ ಕಾಯಿಲೆಗಳಾದರೆ ಚಿಕಿತ್ಸೆ ನೀಡುತ್ತಾರೆ. ಆದರೆ ತುಸು ಸಂಕೀರ್ಣ ಪ್ರಕರಣವಾದರೆ, ಹೆಚ್ಚಿನ ಅಧ್ಯಯನ ಬಯಸುವ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸುವುದಿಲ್ಲ. ಖಾಸಗಿ ನರ್ಸಿಂಗ್ ಆಸ್ಪತ್ರೆಗಳ ದುಬಾರಿ ಬಿಲ್ ನೋಡಿಯೇ ರೋಗಿ ಅರ್ಧ ಕುಸಿಯುತ್ತಾನೆ. ಅನಗತ್ಯ ಔಷಧಿಗಳು, ಅನಗತ್ಯ ಪರೀಕ್ಷೆಗಳು ಎಲ್ಲ ಸೇರಿ ರೋಗಿ ಆಸ್ಪತ್ರೆಗಳೆಂದರೆ ಭಯ ಪಡುವಂತೆ ಮಾಡುತ್ತಾರೆ. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ರೋಗಿಗಳು ಖಾಸಗಿ ಆಸ್ಪತ್ರೆಗಳ ದುಬಾರಿ ಬಿಲ್ ಭರಿಸಲು ಸಾಧ್ಯವಾಗುವುದಿಲ್ಲ. ಕೋವಿಡ್ ಸಂದರ್ಭದಲ್ಲಿಯಂತೂ ಈ ಸಣ್ಣ ಪುಟ್ಟ ನರ್ಸಿಂಗ್ ಹೋಮ್ಗಳೇ ಒಬ್ಬ ರೋಗಿಗೆ ಎಂಟತ್ತು ಲಕ್ಷ ರೂ. ಬಿಲ್ ಮಾಡಿ ಸುಲಿಗೆ ಮಾಡಿವೆ.
ಇನ್ನು ಕಾರ್ಪೊರೇಟ್ ವಲಯದ ಆಸ್ಪತ್ರೆಗಳು ವ್ಯವಸ್ಥಿತವಾಗಿರುತ್ತವೆ. ಸಿಬ್ಬಂದಿಯ ನಡೆ-ನುಡಿ ಹಿತಕರವಾಗಿರುತ್ತದೆ. ಆದರೆ ಅಲ್ಲಿಯೂ ಅತ್ಯುತ್ತಮ ಚಿಕಿತ್ಸೆ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಜಯದೇವ ಹೃದ್ರೋಗ ಸಂಸ್ಥೆಯಂತಹ ಅತ್ಯುನ್ನತ ವೈದ್ಯಕೀಯ ಆಸ್ಪತ್ರೆಗಳು, ಪಕ್ಕಾ ವೃತ್ತಿಪರತೆಗೆ ಹೆಸರಾಗಿರುವ ಕಾರ್ಪೊರೇಟ್ ವಲಯದ ಆಸ್ಪತ್ರೆಗಳು ಬೆಂಗಳೂರು, ಮುಂಬೈಯಂಥ ದೊಡ್ಡ ದೊಡ್ಡ ಶಹರುಗಳಲ್ಲಿ ಇವೆ. ಆದರೆ ಆ ಆಸ್ಪತ್ರೆಗಳು ಬಡವರಿಗೆ ಮಾತ್ರವಲ್ಲ, ಮಧ್ಯಮ ವರ್ಗದವರಿಗೂ ನಿಲುಕುವುದಿಲ್ಲ. ಸಾಕಷ್ಟು ಹಣ ಇರುವ ಶ್ರೀಮಂತರಿಗೆ, ಅಧಿಕಾರದಲ್ಲಿ ಇರುವ ರಾಜಕಾರಣಿಗಳಿಗೆ ಆ ವೆಚ್ಚ ಭರಿಸಲು ಸಾಧ್ಯವಾಗುತ್ತದೆ. ಹಣ ಹೆಚ್ಚು ನೀಡಿದಷ್ಟು, ಹೆಚ್ಚು ತಜ್ಞ ವೈದ್ಯರ ಸೇವೆ ಲಭ್ಯವಾಗುತ್ತದೆ.
ಐಟಿ, ಬಿಟಿ ವಲಯದ ಬಹುತೇಕ ಮಧ್ಯಮ ವರ್ಗದ ನೌಕರರು ಆರೋಗ್ಯ ವಿಮೆಯನ್ನು ನಂಬಿಕೊಂಡಿರುತ್ತಾರೆ. ದುಬಾರಿ ವಿಮೆಗಳ ಸದಸ್ಯರಾಗಿ ಪ್ರತೀ ತಿಂಗಳು ಕಟ್ಟುತ್ತಿರುತ್ತಾರೆ. ಆದರೆ ಆಸ್ಪತ್ರೆಗೆ ರೋಗಿಯಾಗಿ ಚಿಕಿತ್ಸೆ ಪಡೆಯಲು ಹೋದಾಗ ಆರೋಗ್ಯ ವಿಮೆಗಳ ಬಣ್ಣ ಬಯಲಾಗುತ್ತದೆ. ನೂರಾ ಎಂಟು ನಿಯಮ ಹೇಳುತ್ತಾರೆ. ನಿಮ್ಮ ಕಾಯಿಲೆ ವಿಮೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ನಿರಾಕರಿಸುತ್ತಾರೆ. ಇದ್ದುದರಲ್ಲಿ ಕರ್ನಾಟಕ ಸರಕಾರದ ಯಶಸ್ವಿನಿ ವಿಮಾ ಯೋಜನೆ ಹೆಚ್ಚು ಉಪಯುಕ್ತಕರವಾಗಿದೆ. ಯಶಸ್ವಿನಿಯ ಸಮಸ್ಯೆಯೆಂದರೆ, ಕಡಿಮೆ ಮೌಲ್ಯ ಇರುವುದು ಮತ್ತು ಯಶಸ್ವಿನಿಯ ಸೌಲಭ್ಯ ಪಡೆಯಲು ಸರಕಾರಿ ಭ್ರಷ್ಟ ವ್ಯವಸ್ಥೆ ಹೆಜ್ಜೆ ಹೆಜ್ಜೆಗೂ ತೊಂದರೆ ಕೊಡುವುದು. ಖಾಸಗಿ ವಿಮಾ ಕಂಪೆನಿಗಳಂತೆ ಯಶಸ್ವಿನಿ ನಿರ್ದಯವಾಗಿ ನಿರಾಕರಿಸುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿದರೆ ಯಶಸ್ವಿನಿಯಂತಹ ವಿಮಾ ಯೋಜನೆ ಇನ್ನೊಂದಿಲ್ಲ.
ಕರ್ನಾಟಕದಲ್ಲಿ 60ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. ವರ್ಷಕ್ಕೆ ಏನಿಲ್ಲವೆಂದರೂ ಆರೇಳು ಸಾವಿರ ವಿದ್ಯಾರ್ಥಿಗಳು ವೈದ್ಯಕೀಯ ಓದಿಗೆ ಪ್ರವೇಶ ಪಡೆಯುತ್ತಾರೆ. ಆಯುಷ್ ವ್ಯಾಪ್ತಿಯ ಮೆಡಿಕಲ್ ಕಾಲೇಜುಗಳು, ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಗಳ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಚರ್ಚೆ ಮಾಡಬಹುದು. ಈಗ ಮಾತನಾಡುತ್ತಿರುವುದು ಅಲೋಪತಿ ವೈದ್ಯ ಪದ್ಧತಿ ಮತ್ತು ಅದು ಸೃಷ್ಟಿಸಿದ ಅವಾಂತರಗಳ ಕುರಿತು. ಕರ್ನಾಟದಲ್ಲಿರುವ ಖಾಸಗಿ ಮತ್ತು ಸರಕಾರಿ ಮೆಡಿಕಲ್ ಕಾಲೇಜುಗಳು ಪ್ರತೀ ವರ್ಷ ನಾಲ್ಕೈದು ಸಾವಿರ ವೈದ್ಯರನ್ನು ತಯಾರಿಸುತ್ತವೆ. ತಜ್ಞ ವೈದ್ಯರು ಮತ್ತು ಪ್ರತಿಭಾವಂತ ವೈದ್ಯರಿಗೆ ಕರ್ನಾಟಕದಲ್ಲಿ ಕೊರತೆಯಿಲ್ಲ. ಕೊರತೆ ಇರುವುದು ಸೇವಾ ಮನೋಭಾವ ಮತ್ತು ವೃತ್ತಿ ಪರತೆಯದು. ನಮ್ಮ ತಜ್ಞ ವೈದ್ಯರು ವೃತ್ತಿ ಪರತೆ ಮತ್ತು ಸೇವಾ ಮನೋಭಾವವನ್ನು ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ತೋರುತ್ತಾರೆ. ಅದು ಹೆಚ್ಚು ದುಡ್ಡಿಗಾಗಿ. ಪ್ರತಿಭಾವಂತ ಮತ್ತು ತಜ್ಞ ವೈದ್ಯರು ಕಾರ್ಪೊರೇಟ್ ವಲಯದ ಆಸ್ಪತ್ರೆಗಳ ಭಾಗವಾಗಿರುವುದರಿಂದ ಅವರ ಸೇವೆ ಜನಸಾಮಾನ್ಯರಿಗೆ ಸಿಗುವುದು ದುರ್ಲಭವಾಗಿದೆ.
ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹೊಂದಿಕೊಂಡಿರುವ ಆಸ್ಪತ್ರೆಗಳು ಸಾಮಾನ್ಯ ರೋಗಿಗಳನ್ನು ಪ್ರಯೋಗದ ವಸ್ತುಗಳಂತೆ ಬಳಸಿಕೊಳ್ಳುತ್ತವೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಮಾನವ ದೇಹವೇ ಬೇಕಾಗುತ್ತದೆ. ಆ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳು ಉತ್ತಮ ಚಿಕಿತ್ಸೆ ಸಿಗಬಹುದೆಂದು ಭಾವಿಸಿರುತ್ತಾರೆ. ಅವರ ದೇಹಗಳನ್ನು ವೈದ್ಯಕೀಯ ಅಧ್ಯಯನಕ್ಕೆ ಬಳಸಿಕೊಂಡು ಬಿಸಾಡಬಾರದು. ಅವರಿಗೆ ಅತ್ಯುತ್ತಮ ಚಿಕಿತ್ಸೆ ಕೊಡುವ ವ್ಯವಸ್ಥೆ ನಿರ್ಮಿಸಬೇಕು. ವೈದ್ಯ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬಿತ್ತಬೇಕಾದ ಪ್ರಾಧ್ಯಾಪಕರುಗಳೇ ಹಣ ಮಾಡುವ ಧಾವಂತದಲ್ಲಿ ವೈದ್ಯಕೀಯ ಕ್ಷೇತ್ರದ ಪಾವಿತ್ರ್ಯ ಹಾಳು ಮಾಡುತ್ತಿದ್ದಾರೆ.
ಬಹುತೇಕ ಸರಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳ ಪ್ರಾಧ್ಯಾಪಕರು ಸ್ವಂತ ಕ್ಲಿನಿಕ್ ಹೊಂದಿರುತ್ತಾರೆ. ಖಾಸಗಿ ಪ್ರಾಕ್ಟೀಸ್ ನಿಷಿದ್ಧ ಎಂಬುದು ಗೊತ್ತಿದ್ದೂ. ಕಾರ್ಪೊರೇಟ್ ವಲಯದ ತಜ್ಞ ವೈದ್ಯರು ಹಣಕ್ಕಾಗಿ ಮತ್ತು ಶ್ರೀಮಂತ ರೋಗಿಗಳಿಗಾಗಿ ಮೀಸಲಾಗಿರುತ್ತಾರೆ. ಅವರಲ್ಲಿ ಹಣದ ಕಾರಣಕ್ಕೆ ವೃತ್ತಿ ಪರತೆ ಬೆಳೆದಿರುತ್ತದೆ. ಆದರೆ ಸರಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳ ಪ್ರಾಧ್ಯಾಪಕರು ನಿಯಮ ಬಾಹಿರವಾಗಿ ಸ್ವಂತ ಕ್ಲಿನಿಕ್ ಅಥವಾ ನರ್ಸಿಂಗ್ ಹೋಮ್ ಹೊಂದಿ ಇಡೀ ವೈದ್ಯಕೀಯ ಲೋಕಕ್ಕೆ ಕಳಂಕರಾಗಿದ್ದಾರೆ. ಮೆಡಿಕಲ್ ಕಾಲೇಜುಗಳಲ್ಲಿ ಪಡೆಯುವ ಸಂಬಳಕ್ಕೂ ನ್ಯಾಯ ಒದಗಿಸುವುದಿಲ್ಲ. ಸ್ವಂತ ಕ್ಲಿನಿಕ್ ಅಥವಾ ನರ್ಸಿಂಗ್ ಹೋಮ್ಗಳ ಬಡ ಮಧ್ಯಮ ವರ್ಗದ ರೋಗಿಗಳಿಗೂ ನ್ಯಾಯ ಕೊಡುವುದಿಲ್ಲ. ಆದರೆ ವೈದ್ಯಕೀಯ ಚಿಕಿತ್ಸೆಯ ಹೆಸರಲ್ಲಿ ಹಣ ಮಾಡುತ್ತಿರುತ್ತಾರೆ. ಹಣಬಲ, ಅಧಿಕಾರ ಬಲ ಇಲ್ಲದ ಕೇವಲ ಒಬ್ಬ ಸಾಮಾನ್ಯ ನಾಗರಿಕನಾಗಿರುವ ವ್ಯಕ್ತಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಎಂಬುದು ಗಗನ ಕುಸುಮವಾಗಿದೆ.
ಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್ಗಳ ವೈದ್ಯರು ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವುದಕ್ಕಿಂತಲೂ ದುಬಾರಿ ವೆಚ್ಚದ ಲ್ಯಾಬ್ಗಳು ಮತ್ತು ಔಷಧಿ ಕಂಪೆನಿಗಳಿಗೆ ಗಿರಾಕಿ ಒದಗಿಸುವ ಮಧ್ಯವರ್ತಿಗಳಾಗಿದ್ದಾರೆ. ಮೊದಲು ಸಣ್ಣ ಕ್ಲಿನಿಕ್ ಶುರು ಮಾಡುವ ಆಸೆ ಇಟ್ಟುಕೊಂಡ ವೈದ್ಯ ಕ್ರಮೇಣ ಸ್ವಂತ ನರ್ಸಿಂಗ್ ಹೋಮ್ ಹೊಂದುವ ಕನಸು ಕಾಣುತ್ತಾನೆ. ಸಾಲಸೋಲ ಮಾಡಿ ನರ್ಸಿಂಗ್ ಹೋಮ್ ನಿರ್ಮಾಣ ಮಾಡಿದ ಮೇಲೂ ಅತ್ಯುತ್ತಮ ವೈದ್ಯನಾಗುವ ಗುರಿ ಹೊಂದಿರುವುದಿಲ್ಲ. ಅತ್ಯುತ್ತಮ ವೈದ್ಯನಾಗಲು ದುಬಾರಿ ವೆಚ್ಚದ ಲ್ಯಾಬ್ಗಳು ಮತ್ತು ಔಷಧಿ ಕಂಪೆನಿಗಳ ಮಾರಾಟ ಪ್ರತಿನಿಧಿಗಳು ಬಿಡುವುದೇ ಇಲ್ಲ. ಒಂದು ಬಾರಿ ಈ ವಿಷ ವರ್ತುಲದ ಭಾಗವಾಗುವ ಪ್ರತಿಭಾವಂತ ವೈದ್ಯ ಕೂಡಾ ವೃತ್ತಿಪರತೆ ಮತ್ತು ತಜ್ಞತೆಯನ್ನು ರೂಢಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ರೋಗಿಗಳು ಉತ್ತಮ ಆರೋಗ್ಯದ ಕನಸು ಕಾಣುತ್ತಾ ದಿನೇ ದಿನೇ ಔಷಧಿಗಳೆಂಬ ವಿಷ ಸೇವಿಸಿ ಆ ವಿಷವರ್ತಲದ ತಿರುಗಣಿಯಲ್ಲಿ ಸಿಲುಕಿ ಮರಣಕ್ಕೆ ಹತ್ತಿರವಾಗುತ್ತಾರೆ.
ಸರಕಾರಿ ಮೆಡಿಕಲ್ ಕಾಲೇಜುಗಳು, ನೀಟ್ ಪ್ರವೇಶ ಪರೀಕ್ಷೆ ಇರುವುದರಿಂದ ಪ್ರತಿಭಾವಂತರು ವೈದ್ಯಕೀಯ ಶಿಕ್ಷಣವೇನೋ ಪಡೆಯುತ್ತಾರೆ. ತಜ್ಞ ಮತ್ತು ವೃತ್ತಿಪರ ವೈದ್ಯರಾಗಿ ಹೊರಬರುತ್ತಾರೆ. ಆದರೆ ಇವರ ವೃತ್ತಿಪರತೆ, ತಜ್ಞತೆ ಕಾರ್ಪೊರೇಟ್ ವಲಯದ ದುಬಾರಿ ಆಸ್ಪತ್ರೆಗಳ ಸೇವೆಗೆ ಬಿಕರಿಯಾಗುತ್ತದೆ. ಸರಕಾರ ಕೋಟಿ ಕೋಟಿ ಹಣ ಖರ್ಚು ಮಾಡಿ ರೂಪಿಸಿದ ಮೆರಿಟ್ ವೈದ್ಯರ ಸೇವೆ ಈ ನಾಡಿನ ಬಡ ರೋಗಿಗೆ ಸಿಗುವುದಿಲ್ಲ. ಡೊನೇಷನ್ ಕೊಟ್ಟೋ, ವಶೀಲಿ ಭಾಜಿ ಮಾಡಿಯೋ ವೈದ್ಯರಾಗುವವರ ಹಣದ ದುರಾಸೆಗೆ ಜನಸಾಮಾನ್ಯರಾದ ಬಡ ರೋಗಿಗಳು ಸಿಲುಕುತ್ತಾರೆ. ದುಬಾರಿ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದ ವ್ಯಕ್ತಿಗಳು ‘ಸೇವೆ’ ಮಾಡುತ್ತಾರೆಂದು ನಿರೀಕ್ಷಿಸುವುದೇ ತಪ್ಪು. ಎಂಬಿಬಿಎಸ್ಗೆ ಒಂದೂವರೆ ಕೋಟಿ ರೂ., ಸ್ನಾತಕೋತರ ಪದವಿಗೆ ಎಂಟತ್ತು ಕೋಟಿ ರೂ. ಖರ್ಚು ಮಾಡಿದ ವ್ಯಕ್ತಿ ಪುಟ್ಟ ಕ್ಲಿನಿಕ್ ಹಾಕಿ ಜನಸೇವೆ ಮಾಡಲಿ ಎಂದು ಭಾವಿಸುವುದು ತಪ್ಪು. ಅನಿವಾರ್ಯ ಕಾರಣಕ್ಕೆ ಆ ವೈದ್ಯ ಪುಟ್ಟ ಕ್ಲಿನಿಕ್ ಹಾಕಿದರೂ ಆತ ರೋಗಿಗಳಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುವುದರತ್ತ ಹೆಚ್ಚು ಗಮನ ಹರಿಸುವುದಿಲ್ಲ. ದುಬಾರಿ ಟೆಸ್ಟಿಂಗ್ ಲ್ಯಾಬ್ಗಳು ಮತ್ತು ಔಷಧಿ ಕಂಪೆನಿಗಳ ನಿರ್ದೇಶನದ ಮೇರೆಗೆ ವೈದ್ಯಕೀಯ ವೃತ್ತಿ ಮಾಡಬೇಕಾಗುತ್ತದೆ. ಹಣೆಬರಹ ಮತ್ತು ವಿಧಿಯನ್ನು ಅತಿಯಾಗಿ ಅವಲಂಬಿಸಿರುವ ಜನಸಾಮಾನ್ಯರು, ವೈದ್ಯರು ಹಣಕ್ಕಾಗಿಯೇ ಚಿಕಿತ್ಸೆ ನೀಡಿ ಆರೋಗ್ಯ ಕೆಡಿಸಿದರೂ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದಿಲ್ಲ. ತಮ್ಮ ಹಣೆಬರಹ ಸರಿ ಇಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವುದು ವೈದ್ಯಕೀಯ ಲೋಕಕ್ಕೆ ಮತ್ತು ಔಷಧಿ ಮಾಫಿಯಾಕ್ಕೆ ವರವಾಗಿ ಪರಿಣಮಿಸಿದೆ.
ಒಬ್ಬ ವೈದ್ಯ ದುಬಾರಿ ಟೆಸ್ಟ್, ಸಿಕ್ಕಾಪಟ್ಟೆ ಔಷಧಿ ಕೊಟ್ಟ ಮೇಲೂ ಗುಣವಾಗದಿದ್ದಾಗ ಬೇಜಾರು ಮಾಡಿಕೊಳ್ಳದೆ ಬೇರೊಬ್ಬ ವೈದ್ಯರ ಹತ್ತಿರ ಹೋಗುತ್ತೇವೆ. ಡ್ರಗ್ ಮಾಫಿಯಾ ಇಡೀ ವೈದ್ಯಕೀಯ ವ್ಯವಸ್ಥೆಯನ್ನೇ ನಿಯಂತ್ರಿಸುತ್ತಿರುವಾಗ ಯಾರನ್ನು ಟೀಕಿಸುವುದು? ಈ ಡ್ರಗ್ ಮಾಫಿಯಾ ಕೇವಲ ಅಲೋಪತಿ ವೈದ್ಯ ಪದ್ಧತಿಗೆ ಮಾತ್ರ ಸೀಮಿತವಾಗಿದೆ ಎಂದು ಭಾವಿಸುವಂತಿಲ್ಲ. ಅಲೋಪತಿಗೆ ಪ್ರತಿಯಾಗಿ ಆಯುರ್ವೇದ ವೈದ್ಯ ಪದ್ಧತಿ ತರಲಾಗಿದೆ. ಅಲೋಪತಿ ವೈದ್ಯ ಪದ್ಧತಿ ಜನರಿಗೆ ವಿಲನ್ ಎನಿಸಿದಾಗ ಆಯುರ್ವೇದ ವೈದ್ಯ ಪದ್ಧತಿಯ ಮೊರೆ ಹೋಗುತ್ತೇವೆ. ಅಲ್ಲಿಯೂ ವೈದ್ಯರು ಮತ್ತು ಇಡೀ ವೈದ್ಯ ಪದ್ಧತಿ ಡ್ರಗ್ ಮಾಫಿಯಾದ ನಿಯಂತ್ರಣಕ್ಕೆ ಒಳಪಟ್ಟಿದೆ. ಅಲೋಪತಿ ವೈದ್ಯ ಪದ್ಧತಿಯಲ್ಲಿ ಇರುವ ಸುಲಿಗೆ ವ್ಯವಸ್ಥೆ ಆಯುರ್ವೇದ ವೈದ್ಯ ಪದ್ಧತಿಯಲ್ಲೂ ಇದೆ. ನೀವು ಆಯುರ್ವೇದ ವೈದ್ಯರಲ್ಲಿ ನಂಬಿಕೆ ಇಟ್ಟು ಹೋದರೆ ಅವರೂ ಬೇಕೋ ಬೇಡವೋ ದುಬಾರಿ ವೆಚ್ಚದ ಔಷಧಿಗಳನ್ನು ನೀಡುತ್ತಾರೆ. ಹಣ ಮಾಡುವುದು ಎಲ್ಲ ಬಗೆಯ ಆರೋಗ್ಯ ಸೇವೆಗಳ ಮೂಲ ಮಂತ್ರವಾಗಿದೆ. ಅಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ, ಸಿದ್ಧ ಯಾವುದೇ ವೈದ್ಯ ಪದ್ಧತಿ ಇರಲಿ ಸೇವಾ ಮನೋಭಾವನೆ ಮತ್ತು ವೃತ್ತಿಪರತೆ ಇಲ್ಲದ ವೈದ್ಯರ ಕೈಯಲ್ಲಿ ಹಣ ಮಾಡುವ ಸಾಧನವಾಗುತ್ತದೆ. ವೃತ್ತಿಪರತೆ ಮತ್ತು ನೈಜ ಕಾಳಜಿ ಹೊಂದಿರುವ ಎಲ್ಲ ವೈದ್ಯ ಪದ್ಧತಿಯ ವೈದ್ಯರು ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಲೇ ಇದ್ದಾರೆ. ಅಂಥವರ ಸಂಖ್ಯೆ ಹೆಚ್ಚಾಗಬೇಕು ಎಂಬುದೇ ಜನಸಾಮಾನ್ಯರ ನಿರೀಕ್ಷೆ.