ಕಲ್ಯಾಣ ಕರ್ನಾಟಕದ ಕಾಂಗ್ರೆಸ್ ಕಾರ್ಯಕರ್ತರ ಅಳಲು

ಸಿದ್ದರಾಮಯ್ಯ ಅವರು ಎರಡನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಇದೇ ಮೇ ತಿಂಗಳ ಇಪ್ಪತ್ತಕ್ಕೆ ಎರಡು ವರ್ಷ ತುಂಬುತ್ತದೆ. ಕಳೆದ ಎರಡು ವರ್ಷಗಳ ಹಿಂದೆ, ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆದಾಗ ರಾಜ್ಯದಲ್ಲಿ ಬಿಜೆಪಿ ಅಬ್ಬರದ ಪ್ರಚಾರ ಕೈಗೊಂಡಿತ್ತು. ಮಾಧ್ಯಮಗಳು ಕೂಡಾ ಇನ್ನೇನು ಬಿಜೆಪಿಯೇ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂಬಂತೆ ಹವಾ ಸೃಷ್ಟಿಸಿದ್ದವು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಎಂಬ ನಂಬಿಕೆ ಹಲವು ಜನ ಕಾಂಗ್ರೆಸ್ನ ಹಿರಿಯ ಮುಖಂಡರಿಗೆ ಇರಲಿಲ್ಲ.
ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ದುಡಿಮೆ ಪ್ರಮುಖ ಪಾತ್ರ ವಹಿಸಿತ್ತು.ಆಶ್ಚರ್ಯದ ಸಂಗತಿಯೆಂದರೆ, ಕಾಂಗ್ರೆಸ್ ಪಕ್ಷದ ನಾಯಕರು ನಿಷ್ಠಾವಂತ ಕಾರ್ಯಕರ್ತರ ಪರಿಶ್ರಮವನ್ನು ಮರೆತು ದರ್ಬಾರು ನಡೆಸುತ್ತಿದ್ದಾರೆ.ಸರಕಾರ ಎರಡು ವರ್ಷಗಳು ಪೂರೈಸುತ್ತಿದ್ದರೂ ಕಾಂಗ್ರೆಸ್ ಪಕ್ಷದ ಲಕ್ಷಾಂತರ ನಿಷ್ಠಾವಂತ ಕಾರ್ಯಕರ್ತರು ಕಡೆಗಣನೆಗೆ ಒಳಗಾಗಿದ್ದು ಆಫ್ ದಿ ರೆಕಾರ್ಡ್ನಲ್ಲಿ ಆಕ್ರೋಶದ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ.
ಇದೇ ತಿಂಗಳ ಮೇ ಹತ್ತರಂದು, ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ನಲ್ಲಿ ಬೀದರ್ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಸಭೆ ಸೇರಿ ನಿಷ್ಠಾವಂತ ಕಾರ್ಯಕರ್ತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಮಾಜಿ ಸಚಿವ ರಾಜಶೇಖರ ಪಾಟೀಲ್, ಮಾಜಿ ಶಾಸಕ ಅಶೋಕ್ ಖೇಣಿ, ವಿಧಾನಪರಿಷತ್ತಿನ ಮಾಜಿ ಸದಸ್ಯ ಅರವಿಂದಕುಮಾರ್ ಅರಳಿ, ಬೀದರ್ ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ಕೆ. ಪುಂಡಲೀಕರಾವ್, ಪ್ರದೀಪ್ ಕುಸನೂರ್, ರಘುನಾಥರಾವ್ ಜಾದವ್, ವಿದ್ಯಾಸಾಗರ್ ಶಿಂಧೆ, ಪಂಡಿತ್ ರಾವ್ ಚಿದ್ರಿ, ಧನರಾಜ್ ತಾಳಂಪಲ್ಲಿ ಮುಂತಾದವರು ಆ ಸಭೆಯಲ್ಲಿ ಭಾಗವಹಿಸಿ ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಮಾಜಿ ಮಂತ್ರಿ, ಮಾಜಿ ಶಾಸಕರಿಗೆ ಅನ್ಯಾಯವಾಗುತ್ತಿದೆಯೆಂದರೆ, ಇನ್ನು ಕಾಂಗ್ರೆಸ್ ಪಕ್ಷದ ಸಾಮಾನ್ಯ ನಿಷ್ಠಾವಂತ ಕಾರ್ಯಕರ್ತರ ಅಳಲು ಯಾವ ಮಟ್ಟದಲ್ಲಿ ಹೆಪ್ಪುಗಟ್ಟಿರಬೇಕು? ಇದು ಕೇವಲ ಬೀದರ್ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಗೋಳಿನ ಕಥೆಯಷ್ಟೇ ಅಲ್ಲ, ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಸ್ಫೋಟಕ್ಕಾಗಿ ಕಾಯುತ್ತಿದೆ. ಸಾಮಾನ್ಯ ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ಬಗ್ಗೆ, ನಾಯಕರ ಬಗ್ಗೆ ಅದೆಷ್ಟು ಆಕ್ರೋಶಭರಿತರಾಗಿದ್ದಾರೆಂದರೆ ಪಕ್ಷ ರಾಜಕಾರಣದ ಸಹವಾಸವೇ ಸಾಕು ಎನ್ನುವಷ್ಟು.
ಕಲ್ಯಾಣ ಕರ್ನಾಟಕ ಹೇಳಿಕೇಳಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ನ ಭಾಗವಾಗಿರುವ, ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರ ಪ್ರದೇಶ. ಖರ್ಗೆಯವರ ತವರು ಭಾಗದಲ್ಲೇ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಗೋಳಾಡುತ್ತಿದ್ದಾರೆಂದರೆ, ರಾಜ್ಯದ ಇನ್ನುಳಿದ ಭಾಗದವರ ಸ್ಥಿತಿ ಅದೆಷ್ಟು ಗಂಭೀರವಾಗಿರಬಹುದು. ಅಷ್ಟಕ್ಕೂ ಕಲ್ಯಾಣ ಕರ್ನಾಟಕದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಧಾನಸಭಾ ಚುನಾವಣೆಯಲ್ಲಿ ಮನೆ ಮಠ ಮರೆತು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಉಳಿದ ಭಾಗಕ್ಕೆ ಹೋಲಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಭಾರೀ ಯಶಸ್ಸು ದೊರೆತಿದೆ. ಲೋಕಸಭಾ ಚುನಾವಣೆಯಲ್ಲಿ, ಐದಕ್ಕೆ ಐದೂ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ. ಈ ಪ್ರಮಾಣದ ಗೆಲುವಿನಲ್ಲಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ದುಡಿಮೆ ಸಾಕಷ್ಟಿದೆ. ಆದರೆ ಅವರ ಶ್ರಮವನ್ನು ಗುರುತಿಸುವ, ಗೌರವಿಸುವ ಒಂದು ನಿಷ್ಪಕ್ಷ ವ್ಯವಸ್ಥೆಯೇ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಭಾರತೀಯ ಜನತಾ ಪಕ್ಷದಲ್ಲಿ, ಸಂಘ ಪರಿವಾರದ ಹಿನ್ನೆಲೆಯಿಂದ ಬಂದ ನಿಷ್ಠಾವಂತ ಕಾರ್ಯಕರ್ತರನ್ನು ನಿರಂತರ ಪೋಷಿಸಲು ಆರೆಸ್ಸೆಸ್ ಹಿರಿಯ ಮುಖಂಡರೇ ಕಟಿಬದ್ಧರಾಗಿರುತ್ತಾರೆ.
ಬೀದರ್ ಜಿಲ್ಲೆಗೆ ಇಬ್ಬರು ಸಚಿವರಿದ್ದಾರೆ. ಎರಡು ಖಾತೆಗಳ ಅಧಿಕಾರ ಒಬ್ಬ ಮಂತ್ರಿ ಕೈಯಲ್ಲೇ ಕೇಂದ್ರೀಕೃತವಾಗಿದೆಯಂತೆ. ಆ ಮಹಾ ಮಂತ್ರಿಯ ಹೆಸರೇ ಈಶ್ವರ್ ತಂದೆ ಭೀಮಣ್ಣ ಖಂಡ್ರೆ. ಸ್ವಯಂ ಘೋಷಿತ ಲೋಕನಾಯಕ ಅಭಿದಾನ ಪಡೆದುಕೊಂಡ ಭೀಮಣ್ಣ ಖಂಡ್ರೆಯವರು ಒಂದು ಕಾಲದಲ್ಲಿ ವಿಧಾನಸಭೆಯಲ್ಲೇ ಹಿಂದುಳಿದ ವರ್ಗಗಳ ಪಾಲಿಗೆ ದೈವಿಶಕ್ತಿಯಂತಿದ್ದ ಹಾವನೂರು ಆಯೋಗದ ವರದಿಯನ್ನು ಸುಟ್ಟು ಹಾಕಿದವರು. ಅಂತಹ ಮಹಾನ್ ನಾಯಕರ ಸುಪುತ್ರ ಈಶ್ವರ ಖಂಡ್ರೆಯವರು ಅರಣ್ಯ ಖಾತೆಯ ಮಂತ್ರಿಯಾಗಿ ಅದೇನು ಕಡಿದು ಹಾಕಿದ್ದಾರೋ ಗೊತ್ತಿಲ್ಲ. ಆದರೆ ಬೀದರ್ ಜಿಲ್ಲೆಯ ಅಸಂಖ್ಯಾತ ಕಾರ್ಯಕರ್ತರ ಕನಸುಗಳನ್ನು ನಿರ್ದಯವಾಗಿ ಚಿವುಟಿ ಹಾಕಿದ್ದಾರೆ. ಬೀದರ್ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಇಡೀ ವಾತಾವರಣವನ್ನೇ ಕಲುಷಿತಗೊಳಿಸಿದ್ದಾರೆ.
ಸಚಿವ ಈಶ್ವರ್ ಖಂಡ್ರೆಯವರಿಗೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ನಿಷ್ಠಾವಂತ ಕಾರ್ಯಕರ್ತರಿಗಿಂತಲೂ ಬಿಜೆಪಿಯವರೇ ಹೆಚ್ಚು ಆಪ್ತರು. ಜಿಲ್ಲೆಯ ಕಾಂಗ್ರೆಸ್ ನಾಯಕರನ್ನು ಹಣಿಯಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲ ಈಶ್ವರ್ ಖಂಡ್ರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಾಲ ಕಸಕ್ಕಿಂತ ಕಡೆಯಾಗಿ ಕಾಣುತ್ತಿದ್ದಾರೆ.
ವಿಶೇಷವಾಗಿ ಮಾಜಿ ಮಂತ್ರಿ ರಾಜಶೇಖರ ಪಾಟೀಲ್ ಆಪ್ತ ವಲಯದಲ್ಲಿರುವ ಪಕ್ಷದ ಮುಖಂಡರಾದ ಹಲವರು ಈಶ್ವರ್ ಖಂಡ್ರೆಯವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಂತ್ರಿ ಈಶ್ವರ್ ಖಂಡ್ರೆ, ಅವರ ಎಳೆಯ ಪುತ್ರ ಮತ್ತು ಬೀದರ್ ಲೋಕಸಭಾ ಸದಸ್ಯ ಸಾಗರ್ ಖಂಡ್ರೆ ಜಿಲ್ಲೆಯ ಕೆಲವರನ್ನು ಟಾರ್ಗೆಟ್ ಮಾಡಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ನಲ್ಲಿ ಸಭೆ ಸೇರಿ ಚರ್ಚೆ ನಡೆಸಿದವರು ಮಾತ್ರ ಈಶ್ವರ್ ಖಂಡ್ರೆಯವರ ಶಿಕಾರಿಗಳಲ್ಲ. ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಪುತ್ರ ವಿಜಯಸಿಂಗ್, ಔರಾದ ವಿಧಾನಸಭಾ ಕ್ಷೇತ್ರದ ಸೋತ ಕಾಂಗ್ರೆಸ್ ಅಭ್ಯರ್ಥಿ ಭೀಮಸೇನರಾವ್, ಮಾಜಿ ಶಾಸಕ ಅಶೋಕ್ ಖೇಣಿ ಮುಂತಾದವರು ಈಶ್ವರ್ ಖಂಡ್ರೆಯವರ ಮುಖ್ಯ ಟಾರ್ಗೆಟ್. ಇವರೆಲ್ಲ ಬೀದರ್ ಜಿಲ್ಲೆಯಲ್ಲಿ ರಾಜಕಾರಣ ಮಾಡಬಾರದು ಎಂಬುದು ಈಶ್ವರ್ ಖಂಡ್ರೆಯವರ ಇರಾದೆ. ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ವಿಜಯಸಿಂಗ್ ಗೆಲ್ಲದಂತೆ ವ್ಯವಸ್ಥಿತ ಸಂಚು ರೂಪಿಸಿದವರೇ ಇವರು. ಬಸವ ಕಲ್ಯಾಣ ಮಾತ್ರವಲ್ಲ, ವಿಜಯಸಿಂಗ್ ಬೀದರ್ ಲೋಕಸಭಾ ಕ್ಷೇತ್ರದಲ್ಲಿಯೂ ಅವಕಾಶ ಪಡೆಯದಂತೆ ನೋಡಿಕೊಂಡರು. ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ರಾಜಶೇಖರ ಪಾಟೀಲ್ ಸೋತಿದ್ದು ಈಶ್ವರ್ ಖಂಡ್ರೆಯವರಿಗೆ ಅಕ್ಷರಶಃ ವರವಾಗಿ ಪರಿಣಮಿಸಿತು. ಅಪ್ಪ ಈಶ್ವರ್ ಖಂಡ್ರೆ, ಮಗ ಸಾಗರ ಖಂಡ್ರೆ ಬೀದರ್ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರನ್ನು ಬಳಸಿ ಬಿಸಾಡಿದ್ದಾರೆ. ಈಶ್ವರ್ ಖಂಡ್ರೆ, ಬೀದರ್ ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರ ಕೆಲಸ ಕಾರ್ಯಗಳನ್ನು ಮಾಡಿಕೊಡುವುದು ದೂರದ ಮಾತು. ಸಾಮಾನ್ಯ ಕಾರ್ಯಕರ್ತರಿಗೆ ಭೇಟಿಯ ಭಾಗ್ಯವೂ ನೀಡುವುದಿಲ್ಲ. ಹೆಚ್ಚೆಂದರೆ ಭಾಲ್ಕಿ ವಿಧಾನಸಭಾ ಕ್ಷೇತ್ರದ ಆಯ್ದ ಕೆಲವರ ಕೆಲಸಗಳನ್ನು ಮಾಡಿಕೊಡುತ್ತಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಅಭ್ಯರ್ಥಿಗಳನ್ನು ಅತ್ಯಂತ ನಿಕೃಷ್ಟವಾಗಿ ಕಾಣುವ ಮೂಲಕ ಈಶ್ವರ್ ಖಂಡ್ರೆಯವರು ಅವರ ಆತ್ಮಬಲವನ್ನೇ ಕೊಂದಿದ್ದಾರೆ.
ಕರ್ನಾಟಕ ಪರಿಸರ ಮಾಲಿನ್ಯ ಮಂಡಳಿ ಅರಣ್ಯ ಸಚಿವಾಲಯದ ವ್ಯಾಪ್ತಿಯ ಪ್ರಮುಖ ಸಂಸ್ಥೆ. ಸಾಮಾನ್ಯವಾಗಿ ಸಚಿವರ ಜಿಲ್ಲೆಯವರಿಗೆ ಆ ಮಂಡಳಿಯಲ್ಲಿ ಒಂದು ಅವಕಾಶವನ್ನು ಸಹಜವಾಗಿಯೇ ಕಲ್ಪಿಸುತ್ತಾರೆ. ಆದರೆ ಈಶ್ವರ್ ಖಂಡ್ರೆಯವರು ಬೀದರ್ ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಕಲಬುರಗಿಯ ಬೆಟ್ಟಿಂಗ್ ಮಾಫಿಯಾದ ಶರಣು ಮೋದಿಗೆ ಕರ್ನಾಟಕ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರನ್ನಾಗಿ ನೇಮಿಸಿದ್ದಾರೆ. ಈಶ್ವರ್ ಖಂಡ್ರೆಯವರು ಬೀದರ್ ಜಿಲ್ಲೆಯಲ್ಲಿ ಅತ್ಯಂತ ಆತ್ಮೀಯ ಒಡನಾಟ ಹೊಂದಿರುವುದು, ಬಿಜೆಪಿ ಶಾಸಕರಾದ ಶರಣು ಸಲಗರ, ಸಿದ್ದು ಪಾಟೀಲ್, ಪ್ರಭು ಚವಾಣ್ ಮತ್ತು ಶೈಲೇಂದ್ರ ಬೆಲ್ದಾಳೆ ಅವರ ಜೊತೆಗೆ. ಆಳಂದ ಶಾಸಕ ಬಿ.ಆರ್. ಪಾಟೀಲ್ರ ಹಿರಿತನಕ್ಕೂ ಗೌರವ ಕೊಡಲಾರದ ಈಶ್ವರ್ ಖಂಡ್ರೆ ದುರಹಂಕಾರದ ಶಿಖರ ತಲುಪಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾಗರ ಖಂಡ್ರೆಯವರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ, ಚಿಂಚೋಳಿಯ ಕಾಂಗ್ರೆಸ್ ಮುಖಂಡ ಸುಭಾಶ್ ರಾಠೋಡ್ ಅವರಿಗೂ ಒಳಿತು ಮಾಡುವ ಮನಸ್ಸು ಹೊಂದಿಲ್ಲ. ಬಿಜೆಪಿ ಶಾಸಕರ ಬೆಂಬಲ ಪಡೆದರೆ ಸಾಕು ತನ್ನ ಮಗ ಸಾಗರ್ ಖಂಡ್ರೆ ಬೀದರ್ ಲೋಕಸಭಾ ಕ್ಷೇತ್ರದ ಖಾಯಂ ಸದಸ್ಯರಾಗಿ ಮುಂದುವರಿಯುತ್ತಾರೆ ಎಂಬುದು ಈಶ್ವರ್ ಖಂಡ್ರೆಯವರ ದೂರದ ಲೆಕ್ಕ. ಬಿಜೆಪಿಯವರ ಕಣ್ಣಲ್ಲಿ ಅಜಾತ ಶತ್ರುವಿನಂತೆ ಬಿಂಬಿಸಿಕೊಳ್ಳುತ್ತಿರುವ ಈಶ್ವರ್ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರ ಪಾಲಿಗೆ ಅಕ್ಷರಶಃ ವಿಲನ್ ಆಗಿದ್ದಾರೆ.
ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿ. ಕಲಬುರಗಿ ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರು ತಮ್ಮ ಅಳಲನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದಷ್ಟು ಅಸಹಾಯಕರಾಗಿದ್ದಾರೆ. ಕಲಬುರಗಿ ಜಿಲ್ಲೆಯ ಸಮಸ್ತ ಅಧಿಕಾರ ಮಲ್ಲಿಕಾರ್ಜುನ ಖರ್ಗೆಯವರ ಮನೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಜಿಲ್ಲೆಯ ಸಮಸ್ತ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಸಮಾನವಾಗಿ ಕಾಣುವ ಬಹು ದೊಡ್ಡ ಗುಣವಿತ್ತು. ಆದರೆ, ಕಲಬುರಗಿ ಉಸ್ತುವಾರಿ ಮಂತ್ರಿ ಪ್ರಿಯಾಂಕ್ ಖರ್ಗೆಯವರಿಗೆ ಜಿಲ್ಲೆಯ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತರ ಅಳಲನ್ನು ಕೇಳುವ ವ್ಯವಧಾನ ಮತ್ತು ತಾಳ್ಮೆ ಇಲ್ಲ. ಪ್ರಿಯಾಂಕ್ ಖರ್ಗೆಯವರ ಆಪ್ತವಲಯದ ಒಂದಷ್ಟು ಮಂದಿ, ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಆಯ್ದ ಕಾಂಗ್ರೆಸ್ ನಾಯಕರು ಮಾತ್ರ ಈ ಸರಕಾರದ ಫಲಾನುಭವಿಗಳು. ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್, ಮಲ್ಲಿಕಾರ್ಜುನ ಖರ್ಗೆಯವರ ಆಜ್ಞಾ ಪಾಲಕರು. ಅವರ ಸಹಾಯವೂ ಅದೇ ವಲಯದ ಕೆಲ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಸಿಗುತ್ತದೆ. ಚಿತ್ತಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋಳಿ ಸಮುದಾಯದ ಮತಗಳು ನಿರ್ಣಾಯಕವಾಗಿರುವುದರಿಂದ ಅ ಸಮುದಾಯದ ಕೆಲವರು ಫಲ ಅನುಭವಿಸುತ್ತಿದ್ದಾರೆ. ಡಾ. ಶರಣ ಪ್ರಕಾಶ ಪಾಟೀಲ್ ತನ್ನ ಖಾತೆಯ ಎಲ್ಲ ಅನುಕೂಲಗಳನ್ನು ಒಂದೋ ಖರ್ಗೆ ಆಪ್ತ ವಲಯದ ಮಂದಿಗೆ ಇಲ್ಲ ಸೇಡಂ ಮತ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಮಾಡುತ್ತಾರೆ. ಕಲಬುರಗಿಯ ಆಸ್ಪತ್ರೆಗಳಲ್ಲಿನ ಸಣ್ಣ ಪುಟ್ಟ ನೌಕರಿಗಳು ಸೇಡಂ, ಚಿತ್ತಾಪುರ ಮತ ಕ್ಷೇತ್ರಗಳ ಮಂದಿಗೆ ಮಾತ್ರ ಮೀಸಲು. ಪ್ರಿಯಾಂಕ್ ಖರ್ಗೆ ಮತ್ತು ಡಾ. ಶರಣಪ್ರಕಾಶ ಪಾಟೀಲ್ ಕಾರ್ಯ ವೈಖರಿಗೆ ಕಲಬುರಗಿ ಜಿಲ್ಲೆಯ ಕಾಂಗ್ರೆಸ್ ಶಾಸಕರೇ ಅತೃಪ್ತಿ, ಬೇಸರ ಹೊಂದಿದ್ದಾರೆ. ಆದರೆ ಬಿ.ಆರ್. ಪಾಟೀಲ್ ಹೊರತು ಪಡಿಸಿ ಬೇರೆ ಯಾರೂ ಬಹಿರಂಗವಾಗಿ ಅಸಮಾಧಾನ ಹೊರ ಹಾಕುವ ಸ್ಥಿತಿಯಲ್ಲಿ ಇಲ್ಲ. ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಝ್ ಫಾತಿಮಾ, ಡಾ. ಅಜಯಸಿಂಗ್ ಮುಂತಾದವರು ಪ್ರಿಯಾಂಕ್ ಖರ್ಗೆಯವರ ಬಗ್ಗೆ ಗುಸು ಗುಸು ಮಾತನಾಡುತ್ತಾರೆಯೇ ಹೊರತು ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ.
ಜಿಲ್ಲೆಯ ಅಭಿವೃದ್ಧಿ ಬಗ್ಗೆ ಪ್ರಿಯಾಂಕ್ ಖರ್ಗೆಯವರ ಜೊತೆಗೆ ಮನ ಬಿಚ್ಚಿ ಮಾತನಾಡುವ ಅವಕಾಶ ಯಾರಿಗೂ ಇಲ್ಲ. ಆಳಂದ ಶಾಸಕ ಬಿ.ಆರ್. ಪಾಟೀಲ್ ಒಂದೋ ಎರಡು ಬಾರಿ ಪ್ರಿಯಾಂಕ್ ಖರ್ಗೆಯವರ ಕಾರ್ಯ ವೈಖರಿ ಬಗ್ಗೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಸುಮ್ಮನಾದರು. ಆಫ್ಝಲಪುರ ಶಾಸಕ ಎಂ.ವೈ. ಪಾಟೀಲರು ಮೊದಲಿಂದಲೂ ಎಲ್ಲರ ಬಳಿ ಕೆಲಸ ಮಾಡಿಕೊಳ್ಳುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಹಾಗಾಗಿ ಅವರು ಯಾರನ್ನೂ ಆಕ್ಷೇಪಿಸುವುದಿಲ್ಲ. ಕಲಬುರಗಿ ಜಿಲ್ಲೆಯ ಅಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರಿಯಾಂಕ್ ಖರ್ಗೆಯವರ ಬಗ್ಗೆ ಅಸಮಾಧಾನದ ಮಾತುಗಳನ್ನು ಆಡುತ್ತಲೇ ಇದ್ದಾರೆ. ಕೇಳಿಸಿಕೊಳ್ಳುವ ಕಿವಿಗಳಿಗೆ ಬರ ಇದೆ. ಚಿತ್ತಾಪುರ ಮತ್ತು ಸೇಡಂ ಮತ ಕ್ಷೇತ್ರದ ವ್ಯಾಪ್ತಿಯ ಆಯ್ದ ಕೆಲವು ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಅನುಕೂಲ ಪಡೆಯುತ್ತಿದ್ದಾರೆ. ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗಿಂತಲೂ ಕಲಬುರಗಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ ಈ ಸರಕಾರದ ಫಲಾನುಭವಿ.
ಇನ್ನು ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಕಾಂಗ್ರೆಸ್ ಕಾರ್ಯಕರ್ತರ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಯಾದಗಿರಿ ಜಿಲ್ಲೆಯ ಉಸ್ತುವಾರಿ ಮಂತ್ರಿ ಶರಣಬಸಪ್ಪ ದರ್ಶನಾಪುರ್ಗೆ ಮಹತ್ವದ ಖಾತೆಯೇನೂ ಇಲ್ಲ. ಆದರೆ ಪುಟ್ಟ ಜಿಲ್ಲೆಯ ಕಾರುಬಾರು ಮತ್ತು ಆ ಮೂಲಕ ದೊರೆಯುವ ಸವಲತ್ತ್ತುಗಳು ಶರಣಬಸಪ್ಪ ದರ್ಶನಾಪುರ್ ಪ್ರತಿನಿಧಿಸುವ ಶಹಾಪುರ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತಗೊಂಡಿವೆ. ಆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಗೆ ಅನುಕೂಲವಾಗುತ್ತಿವೆ. ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮಲ್ಲಿಕಾರ್ಜುನ ಖರ್ಗೆಯವರ ಬಲಗೈ ಬಂಟ. ಅವರ ಕೆಲಸಗಳು ಸಾಂಗವಾಗಿ ನಡೆಯುತ್ತವೆ. ಅಷ್ಟಕ್ಕೂ ಚೆನ್ನಾರೆಡ್ಡಿ ಪಾಟೀಲ್ ಕೂಡಾ ರೆಡ್ಡಿ ಲಿಂಗಾಯತ ಸಮುದಾಯಕ್ಕೆ ಸೇರಿದವರು. ದರ್ಶನಾಪುರ್ ಮತ್ತು ಚೆನ್ನಾರೆಡ್ಡಿ ಅನ್ಯೋನ್ಯವಾಗಿದ್ದಾರೆ. ಸಂಕಷ್ಟ ಅನುಭವಿಸುತ್ತಿರುವವರು ಮಾತ್ರ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಡಾ. ಶರಣ ಪ್ರಕಾಶ್ ಪಾಟೀಲ್ ರಾಯಚೂರು ಜಿಲ್ಲಾ ಉಸ್ತುವಾರಿ ಮಂತ್ರಿ. ಆ ಜಿಲ್ಲೆಯ ಸ್ಥಳೀಯ ನಾಯಕ ಭೋಸರಾಜು ತನ್ನ ಹಿಂಬಾಲಕರ ಪರ ವಕಾಲತ್ತು ವಹಿಸುತ್ತಲೇ ಇದ್ದಾರೆ. ಭೋಸರಾಜು ಮತ್ತು ಶರಣ ಪ್ರಕಾಶ್ ಪಾಟೀಲರ ಹಿತಾಸಕ್ತಿಗಳ ತಿಕ್ಕಾಟದ ನಡುವೆ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಬಡವಾಗಿದ್ದಾರೆ. ಡಾ. ಶರಣ ಪ್ರಕಾಶ್ ಪಾಟೀಲ್ ರಾಯಚೂರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದರೂ ಅವರ ಗಮನವೆಲ್ಲ ಸೇಡಂ ಮತಕ್ಷೇತ್ರದ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ. ಒಂದು ದೊಡ್ಡ ಅವಕಾಶ ಇದ್ದರೆ, ಸೇಡಂ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲು ಹವಣಿಸುತ್ತಾರೆಯೇ ಹೊರತು ರಾಯಚೂರು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡುವುದಿಲ್ಲ. ಒಂದು ವೇಳೆ ಅಲ್ಲಿಯ ಕಾರ್ಯಕರ್ತರಿಗೆ ಅನುಕೂಲ ಮಾಡಿಕೊಡುವ ಇರಾದೆ ಇದ್ದರೂ ಭೋಸರಾಜು ಮತ್ತವರ ಮಗ ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಅಡ್ಡಿಯಾಗುತ್ತಾರೆ.
ಕೊಪ್ಪಳ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಇದೆ. ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಜ್ ತಂಗಡಗಿ ತಾಂತ್ರಿಕವಾಗಿ ಕನಕಗಿರಿ ಶಾಸಕ. ಆದರೆ ಅವರ ಭಾವನಾತ್ಮಕ ಸಂಬಂಧ ಬಾಗಲಕೋಟ ಜಿಲ್ಲೆಯ ಇಲಕಲ್ಲದೊಂದಿಗೆ ಇದೆ. ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಈ ಹೊತ್ತಿಗೂ ಅನಾಥರೇ. ಗಂಗಾವತಿಯ ಇಕ್ಬಾಲ್ ಅನ್ಸಾರಿ ಸೋತರೂ, ಸಿದ್ದರಾಮಯ್ಯ ಅವರೊಂದಿಗಿನ ಸಲುಗೆ ಬಳಸಿ ತನ್ನ ಜನತಾದಳ ಕಾರ್ಯಕರ್ತರಿಗೆ ಅನುಕೂಲ ಮಾಡಿಕೊಡುತ್ತಾರೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ತನ್ನ ಯಲಬುರ್ಗಾ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಹಿತವನ್ನು ಮಾತ್ರ ಕಾಪಾಡುತ್ತಾರೆ. ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಹಣ ಮತ್ತು ಕಾಮಗಾರಿ ಗುತ್ತಿಗೆಯ ಹಿಂದೆ ಬಿದ್ದವರು. ತಮ್ಮ ಗೆಲುವಿಗೆ ಅನುಕೂಲವಾಗುವಷ್ಟು ಮಾತ್ರ ನಿಗಾ ವಹಿಸುತ್ತಾರೆ. ಕೊಪ್ಪಳ ವಿಧಾನಸಭಾ ಕ್ಷೇತ್ರದ ಆಯ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ನೆರವು ನೀಡುತ್ತಾರೆ. ಉಳಿದವರನ್ನು ಲೆಕ್ಕಕ್ಕೆ ಹಿಡಿಯುವುದಿಲ್ಲ. ಜಾತಿ ಮತ ಮೀರಿ ಇವರು ತನ್ನ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಅವರ ಹಿತ ಕಾಪಾಡಿದರೆ ಮಾತ್ರ ಪಕ್ಷದ ಸಂಘಟನೆ ಬಲಿಷ್ಠವಾಗುತ್ತದೆ ಎಂಬ ಮನೋಭಾವವೇ ಯಾರಲ್ಲೂ ಇಲ್ಲ. ಹೊಸದಾಗಿ ಹುಟ್ಟಿಕೊಂಡ ವಿಜಯನಗರ ಜಿಲ್ಲೆಗೆ ಝಮೀರ್ ಅಹ್ಮದ್ ಜಿಲ್ಲಾ ಉಸ್ತುವಾರಿ ಮಂತ್ರಿ. ಅವರು ಬೆಂಗಳೂರಿನಿಂದ ಬಂದು ಸರಕಾರಿ ಸಭೆ ಸಮಾರಂಭಗಳಲ್ಲೇ ಬ್ಯುಸಿ ಆಗಿರುತ್ತಾರೆ. ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರ ಅಳಲು ಕೇಳುವ ವ್ಯವಧಾನ ಅವರಿಗೆಲ್ಲಿ ಇರುತ್ತದೆ? ವಿಜಯನಗರ ಜಿಲ್ಲೆಯಲ್ಲಿ ಯಾರು ನಿಷ್ಠಾವಂತರು ಯಾರು ನಕಲಿಗಳು ಎಂಬುದು ಗುರುತಿಸುವುದೇ ಕಷ್ಟದ ಕೆಲಸ. ವಿಜಯನಗರ ಜಿಲ್ಲೆಯಲ್ಲಿ ಪ್ರತಿಯೊಂದಕ್ಕೂ ಭೀಮಾನಾಯಕ ಮತ್ತು ಪರಮೇಶ್ವರ್ ನಾಯಕ್ ನಡುವೆ ತೀವ್ರ ಪೈಪೋಟಿ. ಪಕ್ಷದ ನಿಷ್ಠಾವಂತರ ದುಡಿಮೆ ಗುರುತಿಸಿ ಅವಕಾಶ ನೀಡುವ ಮನೋಭಾವ ಯಾರಲ್ಲೂ ಇಲ್ಲ. ತಮ್ಮ ಹಿಂಬಾಲಕರ ಹಿತ ಕಾಪಾಡುವುದರಲ್ಲಿ ನಾಯಕರು ಆಸಕ್ತಿ ಹೊಂದಿರುತ್ತಾರೆ. ಬಳ್ಳಾರಿ ಜಿಲ್ಲೆಯಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರ ಗುಂಪಿನಲ್ಲಿ ಹಂಚಿ ಹೋಗಿದ್ದಾರೆ. ಯಾವ ಗುಂಪಿಗೂ ಸೇರದ, ಕಾಂಗ್ರೆಸ್ ಪಕ್ಷದ ನಿಷ್ಠರು ಅನಾಥರು. ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಸಿಗಬೇಕೆಂದು ಹೇಳುತ್ತಲೇ ಇರುತ್ತಾರೆ. ಆದರೆ ಅವಕಾಶ ನೀಡುವಾಗ ಪಕ್ಷ ನಿಷ್ಠೆ ಲೆಕ್ಕಕ್ಕೆ ಬರುವುದಿಲ್ಲ. ಏನಿದ್ದರೂ ವ್ಯಕ್ತಿ ನಿಷ್ಠೆ, ನಾಯಕ ನಿಷ್ಠೆ. ಹಣದ ಮೂಲಗಳು ವಿಪುಲವಾಗಿರುವ ಜಿಲ್ಲೆಗಳಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಮುಂದುವರಿಯುವುದು ಸರಳ. ಪಕ್ಷ ಅವಕಾಶ ಕಲ್ಪಿಸದಿದ್ದರೂ ತಮ್ಮದೇ ಹಣಕಾಸಿನ ಮೂಲಗಳಿಂದ ಬದುಕು ಸಾಗಿಸಬಹುದು. ಆದರೆ ಕಲ್ಯಾಣ ಕರ್ನಾಟಕದಂತಹ ಹಿಂದುಳಿದ ಜಿಲ್ಲೆಗಳಲ್ಲಿ ಹಣಬಲ, ಜಾತಿ ಬಲ ಇಲ್ಲದವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಮುಂದುವರಿಯುವುದು ಅತ್ಯಂತ ಸವಾಲಿನ ಸಂಗತಿ. ಹಣ ಬಲ, ಜಾತಿ ಬಲ ಇದ್ದವರು ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರ ಇದ್ದಾಗಲೂ ಸಾಕಷ್ಟು ಲಾಭ ಮಾಡಿಕೊಳ್ಳುತ್ತಾರೆ. ಆದರೆ ಒಂದೇ ಪಕ್ಷ, ಒಂದೇ ಸಿದ್ಧಾಂತಕ್ಕೆ ಬದ್ಧರಾಗಿ ರಾಜಕೀಯ ಮಾಡುತ್ತಿರುವ ನಿಜವಾದ ಅರ್ಥದಲ್ಲಿ ಪಕ್ಷ ನಿಷ್ಠೆ ಹೊಂದಿರುವ ಸಾಮಾನ್ಯ ಕಾರ್ಯಕರ್ತರು ತೊಂದರೆ ಅನುಭವಿಸುತ್ತಾರೆ.
ದೇವರಾಜ ಅರಸು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಕ್ರಿಯಾಶೀಲ ಮತ್ತು ನಿಷ್ಠಾವಂತ ಕಾರ್ಯಕರ್ತರನ್ನು ಕರೆದು ಅವಕಾಶ ಕಲ್ಪಿಸುವ ವ್ಯವಸ್ಥೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಪಕ್ಷ ನಿಷ್ಠೆ ಮತ್ತು ಸೈದ್ಧಾಂತಿಕ ಬದ್ಧತೆಯ ಕಾರಣಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಅವಕಾಶ ದೊರೆತ ನಿದರ್ಶನ ಇಲ್ಲ. ಭೀಮಣ್ಣ ಖಂಡ್ರೆ ಹಾವನೂರು ಆಯೋಗದ ವರದಿಯನ್ನು ಸದನದಲ್ಲಿ ಹರಿದು ಹಾಕಿದ್ದು ಕಟ್ಟು ಕತೆಯಲ್ಲ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಕ್ಕೆ ವಿರೋಧವಾಗಿರುವ ಭೀಮಣ್ಣ ಖಂಡ್ರೆ ಮತ್ತವರ ಮಗ ಈಶ್ವರ್ ಖಂಡ್ರೆ ಆಧಿಪತ್ಯ ಸ್ಥಾಪಿಸಿದ್ದೇ ಬಹು ದೊಡ್ಡ ದುರಂತ. ಈಗ ಅವರ ಮೊಮ್ಮಗ ಸಾಗರ್ ಖಂಡ್ರೆ ಕಾಂತರಾಜು ವರದಿಯನ್ನು ಸಮಾಧಿ ಮಾಡಲು ತಾಲೀಮು ನಡೆಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುವ ಪರಿಪಾಠ ಬೆಳೆಸಿಕೊಂಡಿದೆ. ತಮ್ಮ ತಮ್ಮ ಮತ ಕ್ಷೇತ್ರಗಳಲ್ಲಿ ಗೆಲುವಿಗೆ ಪೂರಕವಾಗಿ ನಿಲ್ಲುವ ಸಮುದಾಯದ ವ್ಯಕ್ತಿಗಳನ್ನು ಮಾತ್ರ ಉನ್ನತ ಹುದ್ದೆಗೆ ಪರಿಗಣಿಸುತ್ತಾರೆ. ಪಕ್ಷ ನಿಷ್ಠೆ, ಬದ್ಧತೆ ಮತ್ತು ಕ್ರಿಯಾಶೀಲತೆಯನ್ನು ಪರಿಗಣಿಸುವುದಿಲ್ಲ. ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ, ಡಾ. ಶರಣ ಪ್ರಕಾಶ್ ಪಾಟೀಲ್, ದರ್ಶನಾಪುರ್, ಭೋಸರಾಜು, ಶಿವರಾಜ್ ತಂಗಡಗಿ, ರಹೀಮ್ ಖಾನ್ ಮುಂತಾದ ಮಂತ್ರಿಗಳು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಭಟ್ಟಂಗಿ ಹಿಂಬಾಲಕರನ್ನು ತಲೆ ಮೇಲೆ ಹೊತ್ತು ತಿರುಗುತ್ತಿದ್ದಾರೆ. ಮುಂದೊಂದು ದಿನ ಭಟ್ಟಂಗಿಗಳು ಕೈಕೊಡಬಹುದು. ಪಕ್ಷ ಸಂಕಷ್ಟದಲ್ಲಿ ಇದ್ದಾಗ ನಿಷ್ಠಾವಂತ ಕಾರ್ಯಕರ್ತರೇ ನಾಯಕರ ನೆರವಿಗೆ ನಿಲ್ಲುವುದು. ಈ ಕಟು ಸತ್ಯ ಅರಿತರೆ, ಪಕ್ಷಕ್ಕೂ ಒಳ್ಳೆಯದು, ಅಧಿಕಾರದ ಮತ್ತಿನಲ್ಲಿ ತೇಲಾಡುತ್ತಿರುವ ಮಂತ್ರಿ ಮಹಾನುಭಾವರಿಗೂ ಒಳ್ಳೆಯದು. ಆತ್ಮಾವಲೋಕನ ಮಾಡಿಕೊಳ್ಳದ ನಾಯಕರು ಮತ್ತು ಪಕ್ಷಗಳು ಸ್ವಯಂಕೃತ ಅಪರಾಧದಿಂದಲೇ ಮಣ್ಣು ಮುಕ್ಕಿವೆ. ಕಾಂಗ್ರೆಸ್ ಮುಖಂಡರು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುವುದನ್ನು ಈಗಲಾದರೂ ನಿಲ್ಲಿಸಲಿ. ಇಲ್ಲದಿದ್ದರೆ ಪಕ್ಷ ಮತ್ತು ನಾಯಕರೇ ತಕ್ಕ ಬೆಲೆ ತೆರಬೇಕಾಗುತ್ತದೆ.