ಬಸವ ಜಯಂತಿಯಂದು ‘ದ್ವೇಷ’ ಭಾಷಣಗಳು

ಬಸವ ಜಯಂತಿ ಆಚರಣೆಯ ಮೂಲ ಉದ್ದೇಶವೆ: ಬಸವಾದಿ ಶರಣರ ವಿಚಾರಧಾರೆಗಳನ್ನು ಜನಮಾನಸದಲ್ಲಿ ಪ್ರಚಾರ ಮಾಡುವುದು. ಆ ಮೂಲಕ ಸಮಾಜದಲ್ಲಿ ನೆಲೆ ನಿಂತ ಜಾತೀಯತೆ, ಮೌಢ್ಯ, ಕಂದಾಚಾರ, ಅಸಮಾನತೆಗಳನ್ನು ನಿವಾರಿಸುವುದು. ಅಷ್ಟು ಮಾತ್ರವಲ್ಲ, ಸಮಾಜದಲ್ಲಿ ಸೌಹಾರ್ದಯುತ ಸಂಬಂಧಗಳನ್ನು ಸ್ಥಾಪಿಸುವುದು. ‘ಇವನಾರವ ಇವನಾರವ ಎಂದೆಣಿಸದೆ, ಇವ ನಮ್ಮವ ಇವ ನಮ್ಮವ’ ಎಂದೆನಿಸುವಂತೆ ಪ್ರೆರೇಪಿಸುವುದು.
ಅಖಿಲ ಭಾರತ ವೀರಶೈವ ಮಹಾಸಭಾದ ಸ್ಥಾಪಕ ಅಧ್ಯಕ್ಷ ಹಾನಗಲ್ ಕುಮಾರಸ್ವಾಮಿಗಳು, ವಚನ ಪಿತಾಮಹ ಫ.ಗು. ಹಳಕಟ್ಟಿಯವರು, ಗಾಂಧಿವಾದಿ ಹಾಗೂ ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದ ಮತ್ತು ವಚನಗಳ ಸಾಮಾಜಿಕ ಕಾಳಜಿಯನ್ನು ಮಹಾತ್ಮಾ ಗಾಂಧೀಜಿಯವರಿಗೆ ಮನವರಿಕೆ ಮಾಡಿಸಿದ್ದ ಹರ್ಡೇಕರ್ ಮಂಜಪ್ಪನವರು ವಚನಗಳ ಒಟ್ಟಾಶಯವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂದು ಬಸವ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ. ಆದರೆ ನೂರು ವರ್ಷಗಳ ಹಿಂದೆ, ಬಸವಾದಿ ಶರಣರ ತತ್ವ ಆದರ್ಶಗಳ ಪ್ರಚಾರಕ್ಕಾಗಿ ಖಾಸಗಿಯಾಗಿ ಬಸವ ಜಯಂತಿಯನ್ನು ಆಚರಿಸುವ ಪರಿಪಾಠ ಬೆಳೆಸಿದರು. ವಿಶೇಷವಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಮಠ ಮಾನ್ಯಗಳು, ಸಂಘ ಸಂಸ್ಥೆಗಳು ಬಸವ ಜಯಂತಿಯನ್ನು ಆಚರಿಸುತ್ತಿದ್ದವು. ಬಸವ ಜಯಂತಿಯ ಆಚರಣೆಯ ಫಲವಾಗಿ ಸಮಾಜದಲ್ಲಿ ಬಸವಾದಿ ಶರಣರ ವಿಚಾರಗಳು ಪ್ರಚಾರವಾದವು. ಕಾಯಕ ಮತ್ತು ದಾಸೋಹ ಪ್ರಜ್ಞೆ ಜಾಗೃತವಾಯಿತು. ಪರಿಣಾಮವಾಗಿ ಮಠ ಮಾನ್ಯಗಳು ಮತ್ತು ಅಸಂಖ್ಯಾತ ಸಂಘ ಸಂಸ್ಥೆಗಳು ಜಾತಿ ಧರ್ಮದ ಎಲ್ಲೆ ಕಟ್ಟುಗಳನ್ನು ಮೀರಿ ಅನ್ನ ಮತ್ತು ಅಕ್ಷರ ದಾಸೋಹ ನೀಡತೊಡಗಿದವು. ಸಮಾನತೆಯ ವಿಚಾರಧಾರೆಗಳು ಚರ್ಚೆಯ ವಿಷಯಗಳಾದವು. ಆದರೆ, ಬಸವಾದಿ ಶರಣರ ಕೇಂದ್ರ ಕಾಳಜಿಯಾಗಿದ್ದ ವರ್ಣ ಸಂಕರ ಮತ್ತು ಜಾತ್ಯತೀತ ಸಮಾಜ ನಿರ್ಮಾಣದ ಕನಸು ನನಸಾಗಲಿಲ್ಲ. ಬಸವ ಚಳವಳಿಯ ಪ್ರಭಾವ, ಪ್ರೇರಣೆಯಿಂದ ಅಲ್ಲಲ್ಲಿ ಅಂತರ್ಜಾತಿಯ ವಿವಾಹಗಳು ನೆರವೇರತೊಡಗಿದವು. ಅದೊಂದು ಬಹು ದೊಡ್ಡ ಜನಾಂದೋಲನವಾಗಿ ವ್ಯಾಪಿಸಲಿಲ್ಲ.
ವಚನ ಸಾಹಿತ್ಯದ ಪ್ರಸಾರಕ್ಕೆ ಹಾನಗಲ್ ಕುಮಾರಸ್ವಾಮಿ, ಹಳಕಟ್ಟಿ ಮತ್ತು ಹರ್ಡೇಕರ್ ಮಂಜಪ್ಪ ಅವರಂಥ ಹಿರಿಯರು ವಚನಗಳ ಗಾಯನ, ಅಧ್ಯಯನ ಹಾಗೂ ಭಾಷಣದ ಮೂಲಕ ಜನಮಾನಸ ತಲುಪುವ ಯೋಜನೆ ಹಾಕಿಕೊಂಡಿದ್ದರು. ವಚನಗಳ ಅಧ್ಯಯನದ ವ್ಯಾಪ್ತಿ ಚಿಕ್ಕದು. ಭಾಷಣಗಳ ಮೂಲಕ ವಚನ ಸಾಹಿತ್ಯದ ಮಹತ್ವ ಮನವರಿಕೆ ಮಾಡಿಕೊಡುವುದು ಹೆಚ್ಚು ಫಲಪ್ರದವೆನಿಸಿತು. ಆದರೆ ಅದು ವಿದ್ಯಾವಂತರ ವಲಯ ದಾಟಿ ಆಸಕ್ತ ಜನರಿಗೆ ತಲುಪಲು ಸಾಧ್ಯವಾಯಿತು. ಪ್ರವಚನಗಳು ಮಧ್ಯಮ ವರ್ಗದ ಸುಶಿಕ್ಷಿತ ವಲಯದ ಆಚೆ ಜನಸಾಮಾನ್ಯರಿಗೂ ವಚನಗಳ ಸಾರವನ್ನು ಮನನ ಮಾಡಿಸಿದವು. ವಚನಗಳ ಹಾಡುಗಾರಿಕೆ, ಜನಸಾಮಾನ್ಯರ ವ್ಯಾಪ್ತಿಯನ್ನೇ ಹಿಗ್ಗಿಸಿತು. ವಚನಗಳ ಅಧ್ಯಯವನ್ನು ಬಹುತೇಕ ವಿಶ್ವವಿದ್ಯಾನಿಲಯಗಳ ಅಧ್ಯಾಪಕ ವರ್ಗ ಮತ್ತು ಆಸಕ್ತ ವಿದ್ವಾಂಸರು ಕೈಕೊಂಡರು. ಮಾತೆ ಮಹಾದೇವಿ ಮತ್ತು ಲಿಂಗಾನಂದರಂಥ ಬಸವ ಅನುಯಾಯಿಗಳು ಪ್ರವಚನಗಳ ಮೂಲಕ ಬಸವಾದಿ ಶರಣರ ವಿಚಾರ ಧಾರೆಗಳನ್ನು ಸಾಮಾನ್ಯ ಜನತೆಗೂ ತಲುಪಿಸಿದರು.
ವಚನಗಳನ್ನು ಹಾಡುಗಾರಿಕೆಯ ಮೂಲಕ ಪರಿಣಾಮಕಾರಿಯಾಗಿ ಜನತೆಗೆ ತಲುಪಿಸುವ ಹೊಣೆಯನ್ನು ಹಾನಗಲ್ ಕುಮಾರಸ್ವಾಮಿಗಳ ಶಿಷ್ಯ ಪಂ. ಪಂಚಾಕ್ಷರಿ ಗವಾಯಿಗಳು ಹೊತ್ತುಕೊಂಡಿದ್ದರು. ಗದುಗಿನ ವೀರೇಶ್ವರ ಪುಣ್ಯಾಶ್ರಮ ಈಗಲೂ ಈ ಕೈಂಕರ್ಯವನ್ನು ಒಂದು ವೃತದಂತೆ ಮುಂದುವರಿಸಿದೆ. ಪಂ. ಪಂಚಾಕ್ಷರಿ ಗವಾಯಿಗಳ ಶಿಷ್ಯ ಪಂ. ಪುಟ್ಟರಾಜ ಗವಾಯಿಗಳು ತಮ್ಮ ಜೀವನದುದ್ದಕ್ಕೂ ವಚನಗಳನ್ನು ಹಾಡುಗಳ ಮೂಲಕ ಪ್ರಚಾರ ಮಾಡಿದರು. ಪಂ. ಪಂಚಾಕ್ಷರಿ ಗವಾಯಿಗಳು ಮತ್ತು ಪಂ. ಪುಟ್ಟರಾಜ ಗವಾಯಿಗಳು ಹುಟ್ಟು ಕುರುಡರು. ಆದರೆ ಬಸವ ಬೆಳಕನ್ನು ಪ್ರಚಾರ ಮಾಡಿದ್ದಷ್ಟೇ ಅಲ್ಲ ಬಸವ ಮಾರ್ಗದಲ್ಲಿ ಸಾಗಿ ಜಾತಿ ಧರ್ಮ ಮೀರಿ ಅಸಂಖ್ಯಾತ ಅಂಧ ಮತ್ತು ಬಡ ಮಕ್ಕಳಿಗೆ ಸಂಗೀತದ ಬದುಕು ಕೊಟ್ಟವರು. ವಚನಗಳ ಹಾಡುಗಾರಿಕೆ ಒಂದು ಶತಮಾನ ದಾಟಿ ಜನಸಾಮಾನ್ಯರ ಬದುಕಲ್ಲಿ ಅನುರಣಿಸುತ್ತಲೇ ಇದೆ.
ವಚನಗಳ ಹಾಡುಗಾರಿಕೆಗೆ ಮಠ ಮಾನ್ಯಗಳು, ಸಂಘ ಸಂಸ್ಥೆಗಳು ಮಾತ್ರವಲ್ಲ, ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದರಾದ ಪಂ. ಮಲ್ಲಿಕಾರ್ಜುನ ಮನ್ಸೂರ್, ಪಂ. ಬಸವರಾಜ ರಾಜಗುರು, ಪಂ. ಸಿದ್ದರಾಮ ಜಂಬಲದಿನ್ನಿ, ಕರ್ನಾಟಕಿ ಸಂಗೀತಗಾರರಾದ ಪಂ. ದೇವೇಂದ್ರಪ್ಪ, ಪಂ. ಚಕ್ರಕೋಡಿ ನಾರಾಯಣ ಶಾಸ್ತ್ರಿಗಳು ಜೀವ ತುಂಬಿದರು. ಈಗ ಪಂ. ವೆಂಕಟೇಶ್ ಕುಮಾರ್, ಪಂ. ಕುಮಾರ್ ದಾಸ್, ಪಂ. ಫಯಾಝ್ ಖಾನ್ ಸೇರಿ ಅಸಂಖ್ಯಾತ ಕಲಾವಿದರು ಹನ್ನೆರಡನೆಯ ಶತಮಾನದ ವಚನಗಳಿಗೆ ಧ್ವನಿಯಾಗುತ್ತಲೇ ಇದ್ದಾರೆ.
ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಸಿದ್ದರಾಮ, ಮುಕ್ತಾಯಕ್ಕ, ಸೂಳೆ ಸಂಕವ್ವೆ, ಆಯ್ದಕ್ಕಿ ಲಕ್ಕಮ್ಮ ಸೇರಿದಂತೆ ನೂರಾರು ಶರಣ ಶರಣೆಯರು ಅನುಭವ ಮಂಟಪದ ಮೂಸೆಯಲ್ಲಿ ಅಭೂತಪೂರ್ವ ವಚನಗಳ ಅಭಿವ್ಯಕ್ತಿಗೆ ಭಾವ ಬಿತ್ತಿಯಾದರು. ಈ ಹೊತ್ತಿಗೂ ಬಸವಣ್ಣ, ಅಲ್ಲಮರ ಸಾರಥ್ಯದ ಆ ವಚನ ಚಳವಳಿ ಸಾಮಾಜಿಕ, ಧಾರ್ಮಿಕ ಹಾಗೂ ಅನುಭಾವಿಕ ವಲಯದಲ್ಲಿ ಬಹು ದೊಡ್ಡ ಸೋಜಿಗದ ವಿದ್ಯಮಾನ.
ಮಹಾ ಮಾನವತಾವಾದಿ ಬಸವಣ್ಣನವರ ಜಯಂತಿಯಂದು ವೇದಿಕೆಗಳನ್ನು ರಾಜಕಾರಣಿಗಳು ದ್ವೇಷ ಭಾಷಣಗಳ ಅಖಾಡವನ್ನಾಗಿಸಿದ್ದು, ಸ್ವಾರ್ಥ ಸಾಧನೆಗೆ ಬಳಸಿದ್ದು ಅತ್ಯಂತ ನಾಚಿಕೆಗೇಡಿನ ಸಂಗತಿ. ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದು ಪ್ರತಿಪಾದಿಸಿದ ಬಸವಣ್ಣ ಸಕಲ ಜೀವಾತ್ಮರಿಗೆ ಲೇಸು ಬಯಸಿದವರು.
ದುರಂತವೆಂದರೆ, ‘ಕಳಬೇಡ ಕೊಲಬೇಡ, ಹುಸಿಯ ನುಡಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ’ ಎಂದು ಅತ್ಯಂತ ವಿನಮ್ರವಾಗಿ ಸಜ್ಜನಿಕೆಯ ಸಾಧ್ಯತೆ ಅರ್ಥೈಸಿದ ಬಸವಣ್ಣನವರ ಜಯಂತಿ ವೇದಿಕೆಯಲ್ಲಿ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಡಿ, ಬಡಿ, ಕಡಿ ಮಾತುಗಳನ್ನೇ ಆಡಿದ್ದಾರೆ. ಬಸನಗೌಡರ ಲಜ್ಜೆ ಅರಿಯದ ಮಾತುಗಳಿಗೆ ಸಾಕ್ಷಾತ್ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಾಕ್ಷಿಯಾಗಿದ್ದರು. ಬಸವ ಜಯಂತಿಯ ವೇದಿಕೆಯ ಮೇಲೆ ಭಾಷಣದುದ್ದಕ್ಕೂ ದ್ವೇಷ ಕಾರುವ, ವಾಚಾಮಗೋಚರ ನಿಂದಿಸುವ ಮಾತುಗಳೇ ಮೇಲುಗೈ ಸಾಧಿಸಿದ್ದವು. ಬಸವಾದಿ ಶರಣರ ವಿಚಾರಧಾರೆಯ ಒಂದು ಮಾತು ಬಸನಗೌಡ ಯತ್ನಾಳ್ರ ಬಾಯಲ್ಲಿ ಬರಲಿಲ್ಲ. ಬಸವ ತತ್ವ ತಲೆಯಲ್ಲಿ ಇದ್ದರೆ ಬಾಯಲ್ಲಿ ಬರಲು ಸಾಧ್ಯ. ಬಸನಗೌಡ ಯತ್ನಾಳ್ ಆಯೋಜಿಸಿದ ಬಸವ ಜಯಂತಿ ಕಾರ್ಯಕ್ರಮ ಕೇವಲ ಲಿಂಗಾಯತ ಮತಗಳನ್ನು ಗುರಿಯಾಗಿಸಿಕೊಂಡಿತ್ತು. ಬಸವ ತತ್ವ ಅವರ ಬುದ್ಧಿಯಾಚೆಗಿನ ಮಾತಾಗಿತ್ತು. ಬಸವ ಜಯಂತಿ ಕಾರ್ಯಕ್ರಮಕ್ಕೂ ಮೊದಲು ವಿಜಯಪುರದಲ್ಲಿ ಮುಸ್ಲಿಮ್ ಸಮುದಾಯದವರು ಪಹಲ್ಗಾಮ್ ಹತ್ಯಾಕಾಂಡ ಖಂಡಿಸಿ ಮತ್ತು ಮುಹಮ್ಮದ್ ಪೈಗಂಬರ್ ಅವರನ್ನು ಹುಬ್ಬಳ್ಳಿ ಸಭೆಯಲ್ಲಿ ಬಸನಗೌಡ ಅಪಮಾನಿಸಿದ್ದನ್ನು ವಿರೋಧಿಸಿ ಬೃಹತ್ ಸಭೆ ಆಯೋಜಿಸಿದ್ದರು. ಆ ಸಭೆಯಲ್ಲಿ ಕಾಂಗ್ರೆಸ್ ಶಾಸಕರಾದ ಯಶವಂತ ರಾಯಗೌಡ ಪಾಟೀಲ್, ವಿಜಯಾನಂದ ಪಾಟೀಲ್, ಸಚಿವರಾದ ಶಿವಾನಂದ ಪಾಟೀಲ್ ಮತ್ತು ಮುಸ್ಲಿಮ್ ಸಮುದಾಯದ ಮುಖಂಡರು ಭಾಷಣ ಮಾಡಿದ್ದರು. ಹಾಗೆ ನೋಡಿದರೆ, ಮುಸ್ಲಿಮ್ ಸಮುದಾಯದ ಮುಖಂಡರು, ಪಹಲ್ಗಾಮ್ ಹತ್ಯಾಕಾಂಡವನ್ನು ಉಗ್ರವಾಗಿ ಖಂಡಿಸಿ ಮಾತನಾಡಿದ್ದರು. ಭಯೋತ್ಪಾದಕರನ್ನು ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದ್ದರು. ಮಹಮ್ಮದ್ ಪೈಗಂಬರ್ ಮತ್ತು ಬಸವಣ್ಣ ಅವರ ಬಗ್ಗೆ ಬಸನಗೌಡ ಪಾಟೀಲ್ ಹಗುರವಾಗಿ ಮಾತನಾಡಿದ್ದು ತಪ್ಪುಎಂದಷ್ಟೇ ಹೇಳಿದ್ದರು.
ಮುಸ್ಲಿಮ್ ಸಮುದಾಯದವರು, ಪಾಕ್ ಪ್ರೇರಿತ ಭಯೋತ್ಪಾದಕ ದಾಳಿಯನ್ನು ವಿರೋಧಿಸಿದ್ದು, ಇಪ್ಪತ್ತಾರು ಜನ ಭಾರತೀಯರ ಜೀವಕ್ಕೆ ಕಂಬನಿ ಮಿಡಿದದ್ದು ಬಸನಗೌಡ ಪಾಟೀಲ್ಗೆ ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಿಂದೂ ಮುಸ್ಲಿಮರು ಅಣ್ಣ ತಮ್ಮಂದಿರಂತೆ ಕೂಡಿ ಬದುಕುವುದೇ ಯತ್ನಾಳ್ಗೆ ಸಹಿಸಲು ಆಗುವುದಿಲ್ಲ. ಯಾಕೆಂದರೆ ಅವರ ರಾಜಕೀಯ ನಿಂತಿರುವುದೇ ಹಿಂದೂ-ಮುಸ್ಲಿಮ್ ವಿಭಜನೆಯಲ್ಲಿ. ಅದರಲ್ಲೂ ಮುಸ್ಲಿಮ್ ಸಮುದಾಯದವರು ಪಾಕಿಸ್ತಾನ ಮತ್ತು ಭಯೋತ್ಪಾದಕರನ್ನು ಟೀಕಿಸಿದರೆ ಆತನ ಅಸ್ತ್ರ ಠುಸ್ ಆಗುತ್ತದೆ. ಬಸವ ಜಯಂತಿಯ ವೇದಿಕೆಯಲ್ಲಿ ತನ್ನ ಹತಾಶೆಯನ್ನು ಹೊರ ಹಾಕಿದರು. ವಿಜಯಾನಂದ ಕಾಶಪ್ಪನವರ ಅಪ್ಪನಿಗೆ ಹುಟ್ಟಿದರೆ.. ಶಿವಾನಂದ ಪಾಟೀಲ್ ಸರ್ನೇಮ್ ಬದಲಾಯಿಸಿದ್ದು, ಯಶವಂತರಾಯಗೌಡ ಪಾಕಿಸ್ತಾನದ ಏಜೆಂಟ್.. ಇತ್ಯಾದಿ ದ್ವೇಷದ ಕಿಡಿ ಕಾರಿದರು. ಆತ ಬಳಸಿದ ಪದ, ವಾಕ್ಯ ಇಲ್ಲಿ ಬಳಸಲಾಗದು. ಆಚಾರವಿಲ್ಲದ ನಾಲಿಗೆ ತನ್ನ ನೀಚ ಬುದ್ಧಿ ತೋರುತ್ತಲೇ ಹೋಯಿತು. ಬಸವ ಜಯಂತಿಯ ಆ ವೇದಿಕೆಯಲ್ಲಿ ಯತ್ನಾಳ್ ಮನುವಾದಿ ಸಿದ್ಧಾಂತ ಬಿಟ್ಟು ಬೇರೇನೂ ಹೇಳಲಿಲ್ಲ. ತಾನೊಬ್ಬ ಹಿಂದೂ ರಕ್ಷಕ ಎಂದು ಬಡಾಯಿ ಕೊಚ್ಚಿಕೊಂಡ ಬಸನಗೌಡ ನಿಜವಾದ ಹಿಂದೂ ಧರ್ಮದ ತಿರುಳನ್ನೇ ಅಪಮಾನಿಸಿದರು. ವಸುಧೈವ ಕುಟುಂಬಕಂ ಮತ್ತು ಸರ್ವೇಜನ ಸುಖಿನೋಭವತು ಮಾತುಗಳು ಯತ್ನಾಳ್ಗೆ ಅರ್ಥವಾಗಿಲ್ಲ ಎಂಬುದು ದ್ವೇಷ ಭಾಷಣದಲ್ಲಿ ಎದ್ದು ಕಾಣುತ್ತಿತ್ತು. ಶಿವಾಜಿ ಮತ್ತು ಸಂಭಾಜಿ ಮಹಾರಾಜರನ್ನು ಕೂಡಾ ಆತ ತನ್ನ ದ್ವೇಷದ ಬುದ್ಧಿ ಮಟ್ಟಕ್ಕೆ ಇಳಿಸಿದ್ದರು. ಭಾರತ ಕಾಪಾಡಬೇಕು ಮತ್ತು ಹಿಂದೂಗಳನ್ನು ರಕ್ಷಿಸಬೇಕು ಎಂಬ ಹಳಸಲು ಹಿಂದುತ್ವದ ಮಾತು ಬಿಟ್ಟರೆ ‘ಮಾತೆಂಬುದು ಜ್ಯೋತಿರ್ಲಿಂಗ’ ಎಂಬ ಭಾವವೇ ಅವರ ಅಂತರಂಗದಲ್ಲಿ ಇರಲಿಲ್ಲ.
ಬಸನಗೌಡ ಯತ್ನಾಳ್ ದೇಶಭಕ್ತನ ಮುಖವಾಡದಲ್ಲಿ ದ್ವೇಷ ಕಾರುತ್ತಿದ್ದರೇ ಹೊರತು, ಸೌಹಾರ್ದ ಬದುಕು ಆತನ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ಎಂಬ ಧೋರಣೆ ಎದ್ದು ಕಾಣುತ್ತಿತ್ತು. ಬಸವ ಜಯಂತಿಯ ವೇದಿಕೆಯಲ್ಲಿ ಬಸವಾದಿ ಶರಣರ ವಿಚಾರಗಳು, ವಚನಗಳ ಹಾಡುಗಾರಿಕೆ ಯಾವುದೂ ಕಾಣಲಿಲ್ಲ. ಭಗವಾಧ್ವಜ, ಆಕ್ರೋಶ ಮತ್ತು ದ್ವೇಷಪೂರಿತ ಭಾಷಣ, ಮೋದಿ ಜೈಕಾರ ಮುಖ್ಯ ಹೈಲೈಟ್ ಆಗಿತ್ತು. ಬಸವ ಜಯಂತಿ ಆಚರಿಸುತ್ತಿದ್ದೇನೆ. ಲಿಂಗಾಯತರ ವೋಟು ಪಕ್ಕಾ. ಈಗ ಬಿಜೆಪಿಯಲ್ಲಿ ಇರುವ ಎಲ್ಲ ನಾಯಕರನ್ನು ಮೀರಿಸುವ ಉಗ್ರ ಹಿಂದೂ ನಾನು. ಬಿಜೆಪಿಗೆ ಸೇರಿಸಿಕೊಳ್ಳಿ ಎಂಬ ಗೋಗರೆಯುವ ಅಳಲಿನ ಮಾತುಗಳು ಬಸವ ಪ್ರಭೆಯನ್ನು ಕುಂದಿಸಿದ್ದವು. ವೇದಿಕೆಯಲ್ಲಿ ಇದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಂಘ ಪರಿವಾರದ ಭಾಗವಾದಂತೆ ಕಂಡರು.
ಬಸನಗೌಡ ಪಾಟೀಲ್ ಯತ್ನಾಳ್ ಬಸವಣ್ಣನವರನ್ನು ಮರೆತು ಎಷ್ಟೋ ವರ್ಷಗಳಾಗಿವೆ. ಆದರೆ ಆತನನ್ನು ವಿರೋಧಿಸುವ ಭರದಲ್ಲಿ ವಿಜಯಾನಂದ ಕಾಶಪ್ಪನವರ ಕೂಡ ಶಬ್ದದ ಲಜ್ಜೆ ಮೀರಿ ದ್ವೇಷದ ಮಾತುಗಳನ್ನೇ ಆಶ್ರಯಿಸಿದ್ದರು. ಬಸವ ಜಯಂತಿಯ ದಿನವಾದರೂ ಬಸವಾದಿ ಶರಣರ ವಿಚಾರಗಳನ್ನು ಮೆಲಕು ಹಾಕಬೇಕೆಂಬ ಕನಿಷ್ಠ ಸಂವೇದನಾಶೀಲತೆ ಕಾಶಪ್ಪನವರ, ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಮುಂತಾದವರಿಗೂ ಇರಲಿಲ್ಲ.
ಕಲಬುರಗಿಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶಾಸಕರಾದ ಎಂ. ವೈ. ಪಾಟೀಲ್, ಅಲ್ಲಮಪ್ರಭು ಪಾಟೀಲ್ ಹಾಗೂ ಇನ್ನಿತರ ಕಾಂಗ್ರೆಸ್, ಬಿಜೆಪಿ ಮುಖಂಡರಾದ ಶರಣು ಮೋದಿ, ಬಿ.ಜಿ. ಪಾಟೀಲ್ ಅವರ ಬಾಯಲ್ಲಿ ಒಂದೇ ಒಂದು ವಚನದ ಸಾಲು ಕೇಳಿಸಲಿಲ್ಲ. ವೀರಶೈವ ಲಿಂಗಾಯತ ಸಮುದಾಯದ ವೋಟಿಗಾಗಿ ಬಸವಣ್ಣನವರ ಹೆಸರು ಬೇಕು. ಆದರೆ ತತ್ವ ಆದರ್ಶ ಯಾರಿಗೂ ಬೇಕಾಗಿಲ್ಲ. ವಚನಗಳ ಹಾಡುಗಾರಿಕೆ ಆಲಿಸುವುದು, ವಚನಗಳ ಕುರಿತ ಮೌಲಿಕ ಮಾತುಗಳು ಗಮನಿಸುವುದು ಈ ಎಲ್ಲ ರಾಜಕಾರಣಿಗಳಿಗೆ ಅಲರ್ಜಿ. ಹೀಗಾದರೆ ಜಾತ್ಯತೀತ ಸಮಾಜ ನಿರ್ಮಾಣ ಆಗುವುದಾದರೂ ಹೇಗೆ?. ಬೀದರ್ ಉಸ್ತುವಾರಿ ಮಂತ್ರಿ ಈಶ್ವರ್ ಖಂಡ್ರೆಯವರಿಗೆ ಬಸವ ಕಿತ್ತು ಬಿಸಾಕಿದ ಜನಿವಾರದ ಮೇಲೆ ಮೋಹ ಹೆಚ್ಚಾಗಿದೆ. ಜನಿವಾರ ಅಸಮಾನತೆಯ ಸಂಕೇತ ಎಂಬ ಕಾರಣಕ್ಕೆ ಬಸವಣ್ಣ ಅದನ್ನು ಕಿತ್ತೊಗೆದು ಲಿಂಗಾಯತ ಧರ್ಮದ ಹೊಸ ಹಾದಿ ಹುಡುಕಿದರು. ತನ್ನ ಅಕ್ಕ ನಾಗಮ್ಮನಿಗೆ ಇಲ್ಲದ ಜನಿವಾರ ತನಗೂ ಬೇಡ ಎಂದಿದ್ದು ಈಶ್ವರ್ ಖಂಡ್ರೆಯವರಿಗೆ ಯಾರು ಅರ್ಥೈಸಬೇಕು? ಕೂಡಲಸಂಗಮದ ಬಸವ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಎಂದೋ ಸ್ಥಗಿತಗೊಂಡಿದೆ. ಬಸವಕಲ್ಯಾಣದ ಅನುಭವ ಮಂಟಪ ಈಶ್ವರ್ ಖಂಡ್ರೆಯವರ ಉಸ್ತುವಾರಿಯಲ್ಲಿ ಕುಂಟುತ್ತಾ ಸಾಗಿದೆ. ಜನಿವಾರದ ಬಗೆಗೆ ಇರುವ ಪ್ರೀತಿ ಅನುಭವ ಮಂಟಪದ ಬಗ್ಗೆ ಇದ್ದಿದ್ದರೆ ಜಗತ್ತಿನ ಮೊದಲ ಸಂಸತ್ತು ಎಂದೋ ಪೂರ್ತಿಯಾಗಿರುತ್ತಿತ್ತು. ಈಶ್ವರ್ ಖಂಡ್ರೆಯವರಿಗೆ ಬಸವಣ್ಣ ಬೇಡ. ಆದರೆ ವೀರಶೈವ ಮಹಾಸಭಾದ ಹುದ್ದೆ ಬೇಕು. ಬಸವಾದಿ ಶರಣರ ವಿಚಾರ ಬೇಡ. ಆದರೆ ಲಿಂಗಾಯತರ ಮತಗಳು ಬೇಕು. ಹಿಜಾಬ್, ತಾಳಿ ತೆಗೆಸಿದಾಗ ಬಾಯಿ ಮುಚ್ಚಿಕೊಳ್ಳುವ ಈಶ್ವರ್ ಖಂಡ್ರೆ ಜನಿವಾರಕ್ಕೆ ತಕ್ಷಣ ಸ್ಪಂದಿಸುತ್ತಾರೆ. ಸಂತ್ರಸ್ತ ಯುವಕನಿಗೆ ಉಚಿತ ಸೀಟು ದಯಪಾಲಿಸುತ್ತಾರೆ. ಭಾಲ್ಕಿಯಲ್ಲಿ ಚುನಾವಣೆ ಗೆಲ್ಲಲು ಮುಸ್ಲಿಮ್ ಮತಗಳು ಬೇಕು. ಹಿಜಾಬ್ ಗಲಾಟೆಯಲ್ಲಿ ಶಿಕ್ಷಣ ವಂಚಿತರಿಗೆ ಸೀಟು ಕೊಡಬೇಕೆಂದು ಈಶ್ವರ್ ಖಂಡ್ರೆಯವರಿಗೆ ಅನಿಸಲೇ ಇಲ್ಲ. ಖಂಡ್ರೆ ಮನೆತನದ ಬಸವ ತತ್ವದ ಪರಿ ಇದು. ದೇವರಾಜ ಅರಸು ಅವರಿಗೆ ಹಿಂದುಳಿದ ವರ್ಗಗಳ ಹರಿಕಾರ ಎಂಬ ಹೆಸರು ಬಂದದ್ದೇ ಹಾವನೂರು ಆಯೋಗದ ವರದಿಯನ್ನು ಜಾರಿಗೊಳಿಸಿದ್ದರಿಂದ. ಕರ್ನಾಟಕದ ಹಿಂದುಳಿದ ವರ್ಗಗಳ ಪಾಲಿಗೆ ಬೈಬಲ್ನಂತಿರುವ ಹಾವನೂರು ಆಯೋಗದ ವರದಿಯ ಪ್ರತಿಯನ್ನು ವಿಧಾನ ಮಂಡಲದಲ್ಲಿ ಆಕ್ರೋಶಭರಿತರಾಗಿ ಹರಿದು ಹಾಕಿದ ಅಪಕೀರ್ತಿ ಲೋಕನಾಯಕ ಭೀಮಣ್ಣ ಖಂಡ್ರೆಯವರದು. ಭೀಮಣ್ಣ ಖಂಡ್ರೆಯವರೂ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದರು. ಬಸವಾದಿ ಶರಣರ ತತ್ವ ಪಾಲನೆ ಅವರ ಮೊದಲ ಆದ್ಯತೆಯಾಗಬೇಕಿತ್ತು. ಸಾಮಾಜಿಕ ನ್ಯಾಯದ ಮೊದಲ ಪ್ರತಿಪಾದಕ ಅಣ್ಣ ಬಸವಣ್ಣ. ಅಂದ ಹಾಗೆ ಭೀಮಣ್ಣ ಖಂಡ್ರೆಯವರು ಬೀದರ್ ಉಸ್ತುವಾರಿ ಮಂತ್ರಿ ಈಶ್ವರ್ ಖಂಡ್ರೆಯವರ ಪೂಜ್ಯ ತಂದೆಯವರು. ನುಡಿಯೊಂದು ಪರಿ ನಡೆಯೊಂದು ಪರಿ ಈಶ್ವರ್ ಖಂಡ್ರೆ ತರಹದ ರಾಜಕಾರಣಿಗಳ ಬದುಕಿನ ಜಾಯಮಾನವೇ ಆಗಿದೆ.
ಒಂದು ಕಾಲದಲ್ಲಿ ಬಸವ ಸೇನೆಯ ನೇತಾರ ಆಗಿದ್ದ ಶಾಸಕ ವಿನಯ ಕುಲಕರ್ಣಿ ಇಮೇಜ್ ಬಸವ ತತ್ವಕ್ಕೆ ಹೊಂದುವುದೇ ಇಲ್ಲ. ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪಅವರಿಗೆ ಹಣ ಮತ್ತು ವ್ಯವಹಾರ ಬಿಟ್ಟರೆ ಬಸವಾದಿ ಶರಣರು ತಲೆಯಲ್ಲಿ ಹೋಗುವುದಿಲ್ಲ. ವಚನಗಳನ್ನು ಪಚನ ಮಾಡಿಕೊಂಡು ರೂಢಿಯಿಲ್ಲ. ಬಸವಾದಿ ಶರಣರ ವಚನ ಚಳವಳಿಯ ಒಟ್ಟು ಆಶಯವೇ ಗೊತ್ತಿಲ್ಲದ ಈ ಮಹಾನುಭಾವರು ಬಸವ ಜಯಂತಿಯಂದು ಯಾವ ಬಗೆಯ ಸಾಮಾಜಿಕ ನ್ಯಾಯದ ಸಂಕಲ್ಪ ಮಾಡಬಲ್ಲರು?. ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳದ ಇವರಿಂದಾಗಿ ಒಂದೇ ಒಂದು ಬಸವ, ಅಲ್ಲಮರ ಹೆಸರಿನ ವಿಶ್ವವಿದ್ಯಾನಿಲಯ ಈ ನಾಡಿನಲ್ಲಿ ಇಲ್ಲ. ಮೀಸಲಾತಿ ವಿರೋಧಿ ವಿಶ್ವೇಶ್ವರಯ್ಯ ಎಲ್ಲೆಡೆ ರಾರಾಜಿಸು ತ್ತಾರೆ. ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್, ದೇವರಾಜ ಅರಸು ಸಾಮಾಜಿಕ ನ್ಯಾಯದ ಬೇರು, ಕಾಂಡ, ಚಿಗುರಿನಂತಿದ್ದಾರೆ. ನೈಜ ಕಾಳಜಿಯ ನಾಯಕರನ್ನು ಮರೆತರೆ, ಬಸನಗೌಡ ಪಾಟೀಲ್ ಯತ್ನಾಳ್ ರಂತಹವರು ಬಸವ ಜಯಂತಿ ವೇದಿಕೆಯನ್ನು ದ್ವೇಷ ಭಾಷಣದ ಯಜ್ಞ ಕುಂಡವನ್ನಾಗಿ ಪರಿವರ್ತಿಸುತ್ತಾರೆ. ಪ್ರಗತಿಪರ ಬ್ರಾಂಡಿನ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿಯೇ ಅರ್ಘ್ಯ ಸುರಿಯುತ್ತಿರುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾರೆ.