ಬಿಜೆಪಿ ನಾಯಕರ ಪಾಕಿಸ್ತಾನದ ಜಪ

ಫೌಝಿಯಾ ತರನ್ನುಮ್ ಮತ್ತು ಸೋಫಿಯಾ ಖುರೇಷಿ
ಕಸವರಮೆಂಬುದು ನೆರೆ ಸೈರಿಸಲಾರ್ಪೆಡೆ
ಪರವಿಚಾರಮುಮಂ, ಧರ್ಮಮುಮಂ
-ಶ್ರೀವಿಜಯ (ಕವಿರಾಜಮಾರ್ಗ)
ಕವಿರಾಜಮಾರ್ಗ ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ. ಶ್ರೀವಿಜಯ ವಿರಚಿತ ಈ ಗ್ರಂಥದಲ್ಲಿ ಕನ್ನಡ ಪ್ರಜ್ಞೆಯ ಒಟ್ಟು ಸ್ವರೂಪವನ್ನು ಎರಡು ಸಾಲುಗಳಲ್ಲಿ ಕಟ್ಟಿ ಕೊಡಲಾಗಿದೆ. ಅಪ್ಪಟ ಬಂಗಾರದಂಥ ಮಾತನ್ನು ಬಂಗಾರದ ರೂಪಕ ಬಳಸಿ ಹೇಳಿದ್ದಾನೆ. ಕಸವರವೆಂದರೆ ‘ಬಂಗಾರ’. ನಿಜವಾದ ಬಂಗಾರ ಯಾವುದೆಂದರೆ: ಬೇರೆ ವಿಚಾರಗಳನ್ನು, ಬೇರೆ ಧರ್ಮಗಳನ್ನು ಗೌರವಿಸುವುದೇ ಆಗಿದೆ. ಪರ ಧರ್ಮ ಮತ್ತು ಪರ ವಿಚಾರ ಸಹಿಷ್ಣುತೆಯ ತತ್ವ ಪ್ರತಿಪಾದಿಸುವ ಶ್ರೀವಿಜಯನ ಮಾತುಗಳು ಎಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ ಎನಿಸುತ್ತವೆ.
ಭಾರತೀಯ ಜನತಾ ಪಕ್ಷ ಅಸ್ತಿತ್ವಕ್ಕೆ ಬರುವ ಮುಂಚೆ ಜನಸಂಘದ ಹೆಸರಿನಲ್ಲಿ ಚುನಾವಣಾ ರಾಜಕೀಯದಲ್ಲಿ ಸಕ್ರಿಯವಾಗಿತ್ತು. ಹಾಗೆ ನೋಡಿದರೆ, ಜನಸಂಘ ಮತ್ತು ಭಾರತೀಯ ಜನತಾ ಪಕ್ಷಗಳಿಗೆ ಮಾತೃ ಸಂಸ್ಥೆ ಆರೆಸ್ಸೆಸ್. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಬೆಳೆದ ಅಟಲ್ ಬಿಹಾರಿ ವಾಜಪೇಯಿ, ಮುರಳಿ ಮನೋಹರ್ ಜೋಶಿ, ಎಲ್.ಕೆ. ಅಡ್ವಾಣಿ ಬೇರೆ ವಿಚಾರಧಾರೆಗಳನ್ನು, ಬೇರೆ ಧರ್ಮಗಳನ್ನು ದ್ವೇಷ ಮಾಡುತ್ತಿರಲಿಲ್ಲ. ಹಿಂದೂ ಧರ್ಮದ ತತ್ವ ಸಾರವನ್ನು ಐತಿಹಾಸಿಕ ಚಿಕಾಗೋ ಧರ್ಮ ಸಮ್ಮೇಳನದಲ್ಲಿ ಜಗತ್ತಿಗೆ ಸಾರಿದ ಸ್ವಾಮಿ ವಿವೇಕಾನಂದರು ಪರ ಧರ್ಮ ಸಹಿಷ್ಣುತೆಯನ್ನು ಒತ್ತಿ ಹೇಳಿದ್ದರು. ಬಹುತ್ವ ಭಾರತದ ಅಂತರಂಗವನ್ನೇ ಚಿಕಾಗೋ ಭಾಷಣದಲ್ಲಿ ತೆರೆದಿಟ್ಟಿದ್ದರು. ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಶಕ್ತಿ ಮತ್ತು ದೌರ್ಬಲ್ಯಗಳನ್ನು ಆಧಾರ ಸಹಿತ ವಿವರಿಸಿದ್ದರು. ಆದರೆ, ಬೇರೆ ಧರ್ಮಗಳ ಬಗ್ಗೆ ಅವಹೇಳನ ಮಾಡುವ ಒಂದೇ ಒಂದು ನುಡಿ ಅವರ ಬಾಯಿಂದ ಬಂದಿರಲಿಲ್ಲ. ಸ್ವಾಮಿ ವಿವೇಕಾನಂದರ ಸಮಗ್ರ ಗ್ರಂಥ ಶ್ರೇಣಿಯನ್ನು ಬಿಜೆಪಿಯ ನಾಯಕರು ಮತ್ತೆ ಮತ್ತೆ ಓದಬೇಕಿದೆ.
1947ರಲ್ಲೇ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದೆ. ಮಹಾತ್ಮಾ ಗಾಂಧೀಜಿಯವರ ಕನಸಿನ ಭಾರತದಲ್ಲಿ ಪಾಕಿಸ್ತಾನವೂ ಸೇರಿತ್ತು. ದುರದೃಷ್ಟವಶಾತ್ ಭಾರತ -ಪಾಕಿಸ್ತಾನ ಎರಡು ದೇಶಗಳಾಗಿ ಅಸ್ತಿತ್ವಕ್ಕೆ ಬಂದವು. ಪಾಕಿಸ್ತಾನವನ್ನಾಳಿದ ರಾಜಕಾರಣಿಗಳ ಸಂಕುಚಿತ ಮನೋಭಾವದಿಂದ ಭಾರತ-ಪಾಕಿಸ್ತಾನ ನಡುವಿನ ದಾಯಾದಿ ಕಲಹ ಮುಂದುವರಿಯಿತು.
ಆರಂಭದಲ್ಲಿ ಧಾರ್ಮಿಕ ಕಾರಣಕ್ಕೆ ಪಾಕಿಸ್ತಾನದ ಭಾಗವಾಗಿದ್ದ ಬಾಂಗ್ಲಾದೇಶ 1972ರ ಹೊತ್ತಿಗೆ ಸ್ವತಂತ್ರ ದೇಶವೆಂದು ಘೋಷಿಸಿಕೊಂಡಿತು. ಈಗ ಪಾಕಿಸ್ತಾನದಿಂದ ಸಿಡಿದು ಹೊರಬರಲು ಬಲೂಚಿಸ್ತಾನ ಸಂದರ್ಭಕ್ಕಾಗಿ ಕಾಯುತ್ತಿದೆ. ಪಾಕಿಸ್ತಾನದ ಅಪ್ರಬುದ್ಧ ರಾಜಕೀಯ ನಿಲುವುಗಳಿಂದ ಅಲ್ಲಿ ಈ ಹೊತ್ತಿಗೂ ಸುಸ್ಥಿರವಾದ ಪ್ರಜಾಪ್ರಭುತ್ವ ವ್ಯವಸ್ಥೆ ನೆಲೆಗೊಳ್ಳಲೇ ಇಲ್ಲ. ರಾಜಕೀಯ ಅರಾಜಕತೆ, ಮಿಲಿಟರಿ ಸರ್ವಾಧಿಕಾರ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡಿ ಪಾಕಿಸ್ತಾನ ಜಗತ್ತಿನ ಎಲ್ಲ ರಾಷ್ಟ್ರಗಳ ಕಣ್ಣಲ್ಲಿ ಅಕ್ಷರಶಃ ವಿಲನ್ ಆಗಿದೆ. ಭಾರತದ ಪಾಲಿಗಂತೂ ಶತ್ರುರಾಷ್ಟ್ರವಾಗಿ ಪರಿಣಮಿಸಿದೆ. ಕಾಶ್ಮೀರ ಭೂಭಾಗವನ್ನು ಆಕ್ರಮಿಸಿಕೊಂಡು ಭಾರತದ ಜೊತೆಗಿನ ಶತ್ರುತ್ವವನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಈಗಾಗಲೇ ಭಾರತ ಪಾಕಿಸ್ತಾನದೊಂದಿಗೆ ಒಂದೆರಡು ಬಾರಿ ಯುದ್ಧ ಮಾಡಿ ತಕ್ಕ ಪಾಠ ಕಲಿಸಿದೆ. ಅಮೆರಿಕದ ಕುಮ್ಮಕ್ಕಿನಿಂದ ಪಾಕಿಸ್ತಾನ ಹಾರಾಡುತ್ತಿದೆ ಹೊರತು ಅದಕ್ಕೆ ಸ್ವಂತ ಬಲ ಇಲ್ಲ ಎಂಬುದು ಹಲವು ಬಾರಿ ರುಜುವಾತು ಆಗಿದೆ. ಅಮೆರಿಕ ಮತ್ತು ಚೀನಾ ದೇಶಗಳು ತಮ್ಮ ವ್ಯಾಪಾರಿ ನೆಲೆ ವಿಸ್ತರಿಸಿಕೊಳ್ಳಲು ಆಗಾಗ ಭಾರತ-ಪಾಕಿಸ್ತಾನ ದೇಶಗಳೊಂದಿಗೆ ಕಣ್ಣಾ ಮುಚ್ಚಾಲೆ ಆಟ ಆಡುತ್ತಿರುತ್ತವೆ.
ಭಾರತೀಯರು ಎಂದು ಹೇಳಿಕೊಳ್ಳುವ ನಾವು ವೈವಿಧ್ಯತೆಯಲ್ಲಿ ಏಕತೆ ಸಾಧಿಸಿ ಒಂದು ಬಲಿಷ್ಠ ಪ್ರಜಾಪ್ರಭುತ್ವ ದೇಶವಾಗಿ ಮುನ್ನಡೆಯುತ್ತಿದ್ದೇವೆ. ಒಂದು ಬೃಹತ್ ದೇಶದಲ್ಲಿ ಒಳ್ಳೆಯವರು ಕೆಟ್ಟವರು ಇದ್ದೇ ಇರುತ್ತಾರೆ. ದೇಶಭಕ್ತರು ಇರುವಂತೆ ದೇಶದ್ರೋಹಿಗಳೂ ಇರುತ್ತಾರೆ. ದೇಶದ್ರೋಹಿ ಪದ ಗುಣ ವಾಚಕವೇ ಹೊರತು ಧರ್ಮ, ಮತ, ಜಾತಿ ಸೂಚಕವಲ್ಲ.ಛತ್ರಪತಿ ಶಿವಾಜಿ ಮಹಾರಾಜರ ಮಗ ಸಂಭಾಜಿ ರಾಜೇ ಭೋಂಸ್ಲೆ ಔರಂಗಜೇಬ್ನೊಂದಿಗೆ ಯುದ್ಧ ನಡೆಸುವ ಅನಿವಾರ್ಯತೆ ಎದುರಾಗುತ್ತದೆ. ಸಂಗಮೇಶ್ವರದಲ್ಲಿ ಎರಡು ಸೈನ್ಯಗಳು ಮುಖಮುಖಿಯಾಗುತ್ತವೆ. ಛತ್ರಪತಿ ಸಂಭಾಜಿ ಮಹಾರಾಜ ಅಣ್ಣಾಜಿ ದತ್ತೋ ಮತ್ತು ಅವರ ಆಸ್ಥಾನದ ಇತರ ಮಂತ್ರಿಗಳ ಒಳಸಂಚಿನಿಂದ ಆ ಯುದ್ಧದಲ್ಲಿ ಸೋಲುವುದಷ್ಟೇ ಅಲ್ಲ ಜೀವ ಕಳೆದುಕೊಳ್ಳುತ್ತಾರೆ. ದೇಶದ್ರೋಹಿಗಳು ಛತ್ರಪತಿ ಸಂಭಾಜಿಯ ಪಕ್ಕದಲ್ಲೇ ಇದ್ದು ಬೆನ್ನಿಗೆ ಚೂರಿ ಹಾಕಿದ್ದರು. ಕಿತ್ತೂರಿನ ರಾಣಿ ಚೆನ್ನಮ್ಮ ತನ್ನ ಜೊತೆಗೆ ಇರುವವರ ಒಳಸಂಚಿನಿಂದಾಗಿಯೇ ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ವೀರೋಚಿತ ಮರಣ ಅಪ್ಪಿಕೊಳ್ಳಬೇಕಾಯಿತು.
ಪಾಕಿಸ್ತಾನ ಭಾರತದ ಶತ್ರುರಾಷ್ಟ್ರ ಎಂಬುದು ಗೊತ್ತಿದ್ದೂ ಕೆಲವು ದೇಶದ್ರೋಹಿಗಳು ಹಣಕ್ಕಾಗಿ ದೇಶದ ಗೌಪ್ಯತೆ ಮಾರಾಟ ಮಾಡುತ್ತಿದ್ದಾರೆ. ದೇಶದ್ರೋಹಿಗಳು ಹಿಂದೂ, ಮುಸ್ಲಿಮ್, ಸಿಖ್, ಕ್ರಿಶ್ಚಿಯನ್, ಜೈನ್, ಪಾರ್ಸಿ-ಯಾವುದೇ ಧರ್ಮಕ್ಕೆ ಸೇರಿದವರಾಗಿರಲಿ ಅವರನ್ನು ಹಿಡಿದು ಹೆಡೆಮುರಿ ಕಟ್ಟುವುದನ್ನು ಭಾರತ ಸರಕಾರಗಳು ಮುಲಾಜಿಲ್ಲದೆ ಮಾಡುತ್ತಾ ಬಂದಿವೆ. ದೇಶಕ್ಕಾಗಿ ಪ್ರಾಣ ತೆತ್ತವರಲ್ಲಿ ಎಲ್ಲ ಜಾತಿ, ಧರ್ಮಕ್ಕೆ ಸೇರಿದವರಿದ್ದಾರೆ.
ಆದರೆ ಇತ್ತೀಚಿನ ದಿನಮಾನಗಳಲ್ಲಿ ಮತಾಂಧ ಶಕ್ತಿಗಳು, ದೇಶದ್ರೋಹಿಗಳನ್ನು ಧರ್ಮ, ಜಾತಿಯಿಂದ ಗುರುತಿಸಿ ವಿಕೃತ ಸಂತೋಷ ಮೆರೆಯುತ್ತಿವೆ.
ಕೆಲವು ವಾರಗಳ ಹಿಂದಷ್ಟೇ, ಭಾರತದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಎಂಬ ಮಹಿಳೆ ಪಾಕಿಸ್ತಾನದ ಗೂಢಚರ್ಯ ಸಂಸ್ಥೆ ಐಎಸ್ಐ (ಇಂಟರ್ ಸರ್ವಿಸಸ್ ಇಂಟಿಲಿಜೆನ್ಸ್)ನೊಂದಿಗೆ ನಂಟು ಹೊಂದಿರುವುದು ಪತ್ತೆಯಾಗಿದೆ. ಆಕೆಯಿಂದ ಮೂರು ಮೊಬೈಲ್ಗಳನ್ನು, ಹಣದ ವಹಿವಾಟು ನಡೆಸಿದ ಮಾಹಿತಿ, ಕರೆಗಳ ವಿವರ, ವೀಡಿಯೊ ಫುಟೇಜ್, ಚಾಟ್ ರೆಕಾರ್ಡ್ ಮತ್ತು ಆಕೆ ಪಾಕಿಸ್ತಾನಕ್ಕೆ ಹೋದಾಗ ದೊರೆತ ಐಷಾರಾಮಿ ವ್ಯವಸ್ಥೆಯ ಸಮಸ್ತ ವಿವರ ಕಲೆ ಹಾಕಿ ತನಿಖೆ ಮುಂದುವರಿಸಿದ್ದಾರೆ. ಜ್ಯೋತಿ ಮಲ್ಹೋತ್ರಾಳ ದೇಶದ್ರೋಹಿ ಕೆಲಸದಿಂದ ಆಕೆ ಪ್ರತಿನಿಧಿಸುವ ಧರ್ಮ ಮತ್ತು ಜಾತಿಯನ್ನು ಇಡಿಯಾಗಿ ಕಟಕಟೆಯಲ್ಲಿ ನಿಲ್ಲಿಸಲಾಗುತ್ತದೆಯೇ? ಜ್ಯೋತಿ ಮಲ್ಹೋತ್ರಾ ಯಾವ ಧರ್ಮಕ್ಕೆ ಸೇರಿದವಳು ಎಂಬುದು ಮುಖ್ಯವಲ್ಲ, ಆಕೆ ನಡೆಸಿದ ಹೀನ ದೇಶದ್ರೋಹದ ಕೃತ್ಯಕ್ಕೆ ಧರ್ಮ ಮತ್ತು ಜಾತಿಗಳನ್ನು ಹೊಣೆ ಮಾಡಲಾಗದು. ಜ್ಯೋತಿ ಮಲ್ಹೋತ್ರಾ ಮಾಡಿದ ದೇಶದ್ರೋಹದ ಕೃತ್ಯಕ್ಕೆ ಅತ್ಯಂತ ಕಠಿಣ ಶಿಕ್ಷೆ ನೀಡುವ ಮೂಲಕ ದೇಶದ್ರೋಹಿಗಳಿಗೆ ಉಳಿಗಾಲವಿಲ್ಲ ಎಂಬ ಸಂದೇಶ ರವಾನಿಸಬೇಕು.
ಜ್ಯೋತಿ ಮಲ್ಹೋತ್ರಾರಂತಹ ದೇಶದ್ರೋಹಿಗಳು ಒಂದು ಜಾತಿ ಮತ್ತು ಒಂದು ಧರ್ಮಕ್ಕೆ ಸೀಮಿತರಾಗಿಲ್ಲ. ಆ ದೇಶದ್ರೋಹಿಗಳು ಭಾರತದ ಮೊದಲ ಶತ್ರು.
ಆದರೆ, ಭಾರತೀಯ ಜನತಾ ಪಕ್ಷದ ಕೆಲವು ಅರೆಬೆಂದ ನಾಯಕರು ಕೀಳು ಮಟ್ಟದ ಹೇಳಿಕೆ ನೀಡುವ ಮೂಲಕ ಭಾರತದ ಸಮಗ್ರತೆ, ಏಕತೆ ಮತ್ತು ಸೌಹಾರ್ದ ಪರಂಪರೆಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ.
ಬಿಜೆಪಿಯಿಂದ ಹೊರ ದಬ್ಬಿಸಿಕೊಂಡ ಕೆ.ಎಸ್. ಈಶ್ವರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ಮುಸ್ಲಿಮ್ ವಿರೋಧಿ ಹೇಳಿಕೆ ನೀಡುವುದು ಹಿಂದೂವಿನ ಆದ್ಯ ಕರ್ತವ್ಯ ಎಂಬ ಭ್ರಮೆಯಲ್ಲಿ ಇದ್ದರು. ಬಸನಗೌಡ ಪಾಟೀಲ್ ಯತ್ನಾಳ್, ಸಿದ್ದರಾಮಯ್ಯ ಸಚಿವ ಸಂಪುಟದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿ ದಿನೇಶ್ ಗುಂಡೂರಾವ್ ಅವರ ಪತ್ನಿ ಬಗ್ಗೆ ಅತ್ಯಂತ ಕೆಟ್ಟದ್ದಾಗಿ ಹೇಳಿಕೆ ನೀಡಿದ್ದರು. ದಿನೇಶ್ ಗುಂಡೂರಾವ್ ಮತ್ತು ಶ್ರೀಮತಿ ಟಬು (ತಬಸ್ಸುಮ್)ಅವರು ಪ್ರೀತಿಸಿ ಮದುವೆಯಾದವರು ಮತ್ತು ಪ್ರೀತಿಯಿಂದ ಬದುಕುತ್ತಿರುವವರು. ಅವರ ಮನೆಯಲ್ಲಿ ಸ್ವರ್ಗವೇ ನೆಲೆಸಿದೆ ಎಂದು ಅಭಿಮಾನಪೂರ್ವಕ ಮಾತುಗಳನ್ನು ಆಡಬೇಕು. ಅಂತರ್ಧರ್ಮೀಯ ಮದುವೆಗಳು ಸೌಹಾರ್ದದ ನೇಯ್ಗೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಸೌಹಾರ್ದ ನೆಲೆಯ ಆದರ್ಶ ಪ್ರೇಮ ವಿವಾಹಗಳನ್ನು ನಿಂದಿಸುವ ಬಗೆಯಲ್ಲಿ ಬಸನಗೌಡ ಹೇಳಿಕೆ ನೀಡಿದ್ದರು. ‘‘ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ’’ ಎಂದು ಹೇಳುವ ಮೂಲಕ ವಿಕೃತಿಯನ್ನು ಹೊರ ಹಾಕಿದ್ದರು. ತಬಸ್ಸುಮ್ ಮೇಡಂ ಅವರು ಮುಸ್ಲಿಮ್ ಸಮುದಾಯಕ್ಕೆ ಸೇರಿದ್ದರಿಂದ ಬಸನಗೌಡ ಪಾಕಿಸ್ತಾನ ಪದದ ಜಪ ಮಾಡಿದ್ದರು. ಭಾರತದಲ್ಲೇ ಹುಟ್ಟಿ, ಉನ್ನತ ಶಿಕ್ಷಣ ಪಡೆದುಕೊಂಡು ದಿನೇಶ್ ಗುಂಡೂರಾವ್ ಅವರನ್ನು ಪ್ರೀತಿಸಿ ಮದುವೆಯಾದ ತಬಸ್ಸುಮ್ ಮೇಡಂ ಅದು ಹೇಗೆ ಪಾಕಿಸ್ತಾನವನ್ನು ಪ್ರತಿನಿಧಿಸುತ್ತಾರೆ? ಅವರೇನಾದರೂ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲಿಸಿದ್ದಾರೆಯೇ? ದೇಶ ದ್ರೋಹದ ಕೃತ್ಯಗಳಲ್ಲಿ ಭಾಗವಹಿಸಿದ್ದಾರೆಯೇ? ಜ್ಯೋತಿ ಮಲ್ಹೋತ್ರಾ ದೇಶದ್ರೋಹದ ಕೃತ್ಯ ಎಸಗಿ ರೆಡ್ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾಳೆ. ಪಾಕಿಸ್ತಾನದ ಕುಕೃತ್ಯಗಳಿಗೆ ಸಹಕರಿಸಿದ್ದಾಳೆ. ಆಕೆಯನ್ನು ಪಾಕಿಸ್ತಾನದ ಏಜೆಂಟ್ ಎಂದು ಒಮ್ಮೆಯೂ ಟೀಕಿಸದ ಬಸನಗೌಡ, ಈಶ್ವರಪ್ಪ, ರವಿಕುಮಾರ್ ಅಪ್ಪಟ ದೇಶಭಕ್ತರನ್ನು ಹೀಯಾಳಿಸಿ ಖುಷಿ ಪಡುತ್ತಿದ್ದಾರೆ. ದಿನೇಶ್ ಗುಂಡೂರಾವ್ ಪತ್ನಿ ತಬಸ್ಸುಮ್ ಅವರಿಂದ ಜ್ಯೋತಿ ಮಲ್ಹೋತ್ರಾ ಅವರಂಥ ದೇಶದ್ರೋಹಿಗಳು ಪಾಠ ಕಲಿಯಬೇಕಿದೆ.
ತಾವು ಹುಟ್ಟಿದ ಧರ್ಮ ಮತ್ತು ಜಾತಿಗಳ ಬಗ್ಗೆ ಪ್ರೀತಿ-ಅಭಿಮಾನ ಇಟ್ಟುಕೊಳ್ಳುವುದು ಮತಾಂಧತೆಯಲ್ಲ. ತನ್ನ ಧರ್ಮದೊಳಗಿನ ದುಷ್ಟರು ಮತ್ತು ದೇಶದ್ರೋಹಿಗಳನ್ನು ಹಾಡಿ ಹೊಗಳಿ, ಅನ್ಯ ಧರ್ಮದ ಅಪ್ಪಟ ದೇಶಭಕ್ತರು, ಒಳ್ಳೆಯವರು, ಸಂವೇದನಾಶೀಲರನ್ನು ದೇಶದ್ರೋಹಿಗಳೆಂದು ಬಿಂಬಿಸುವುದು ಮತಾಂಧತೆ. ಇಂಥ ಮತಾಂಧರೇ ಭಾರತದ ಬಹುತ್ವದ ಪರಮ ಶತ್ರುಗಳಾಗಿದ್ದಾರೆ.
ಭಾರತೀಯ ಸೇನೆಯಲ್ಲಿ ಸೇರುವುದು ಅಪ್ಪಟ ದೇಶಭಕ್ತಿಯ ಪ್ರತೀಕ. ಸೈನ್ಯದ ಭಾಗವಾಗುವುದೆಂದರೆ ಜೀವವನ್ನು ದೇಶಕ್ಕಾಗಿ ಪಣಕ್ಕಿಟ್ಟು ಕಾರ್ಯ ನಿರ್ವಹಿಸಿದಂತೆ. ಧೈರ್ಯ, ಸಾಹಸ ಮತ್ತು ಅಪ್ಪಟ ದೇಶಭಕ್ತಿ ಇರುವವರು ಮಾತ್ರ ಸೈನ್ಯಕ್ಕೆ ಸೇರುತ್ತಾರೆ. ಹೇಡಿಗಳು ಬೀದಿಯಲ್ಲಿ ನಿಂತು ಉತ್ತರಕುಮಾರ ಪೌರುಷ ಮೆರೆಯುತ್ತಾ ದೇಶಭಕ್ತಿಯ ಭಾಷಣ ಬಿಗಿಯುತ್ತಾರೆ. ನಿಜವಾದ ದೇಶಭಕ್ತರನ್ನು ನಿಂದಿಸುತ್ತಾರೆ. ಅಂಥವರನ್ನೇ ಮತಾಂಧ ಶಕ್ತಿಗಳು ಎಂದು ಗುರುತಿಸುತ್ತೇವೆ.
ಗುಜರಾತ್ ರಾಜ್ಯದ ವಡೋದರದ ಕರ್ನಲ್ ಸೋಫಿಯಾ ಖುರೇಷಿ ಭಾರತ ಸೈನ್ಯದ ಹೆಮ್ಮೆಯ ದೇಶಭಕ್ತೆ. ಸೋಫಿಯಾ ಖುರೇಷಿಯವರ ಪತಿ ಕರ್ನಾಟಕದ ಬೆಳಗಾವಿಯವರು. ಅವರು ಭಾರತದ ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಕರ್ನಲ್ ತಾಜುದ್ದೀನ್ ಬಾಗೇವಾಡಿ ಮತ್ತು ಕರ್ನಲ್ ಸೋಫಿಯಾ ಖುರೇಷಿ ಭಾರತದ ಸೈನ್ಯದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿ ಹಲವಾರು ಮೆಡಲ್ಗಳನ್ನು ಗೆದ್ದವರು. ಅಂಥ ಅಪ್ಪಟ ದೇಶಭಕ್ತ ದಂಪತಿಯನ್ನು ಮುಸ್ಲಿಮ್ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಅತ್ಯಂತ ಕೀಳು ಮಟ್ಟದಲ್ಲಿ ನಿಂದಿಸುತ್ತಾರೆ.
ಹಾಗೆ ನೋಡಿದರೆ, ಕರ್ನಲ್ ಸೋಫಿಯಾ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಮಗ್ರ ಮಾಹಿತಿಯನ್ನು, ವ್ಯೋಮಿಕಾ ಸಿಂಗ್ ಮತ್ತು ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಜೊತೆಗೆ ಪತ್ರಿಕಾ ಗೋಷ್ಠಿಯಲ್ಲಿ ಹಂಚಿಕೊಂಡಿದ್ದರು. ಭಾರತವೇ ಹೆಮ್ಮೆ ಪಡುವಂಥ ಕರ್ನಲ್ ಸೋಫಿಯಾ ಖುರೇಷಿಯವರ ಬಗ್ಗೆ ಮಧ್ಯಪ್ರದೇಶ ಸರಕಾರದ ರಾಜ್ಯ ಮಂತ್ರಿ ಕುನ್ವರ್ ವಿಜಯ್ ಶಾ ‘ಭಯೋತ್ಪಾದಕರ ಸಹೋದರಿ’ ಎಂದು ಹೀಯಾಳಿಸಿ ಮಾತನಾಡಿದರು. ಬಿಜೆಪಿ ಮಂತ್ರಿಯ ದುಷ್ಟ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಶಾ, ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಗಂಭೀರವಾಗಿ ಪರಿಗಣಿಸಲೇ ಇಲ್ಲ.
ಕುನ್ವರ್ ವಿಜಯ್ ಶಾ ಜ್ಯೋತಿ ಮಲ್ಹೋತ್ರಾ ಅವರನ್ನು ಭಯೋತ್ಪಾದಕರ ಸಹೋದರಿ ಎಂದು ಕರೆದಿದ್ದರೆ ಜನ ಮೆಚ್ಚಿಕೊಳ್ಳುತ್ತಿದ್ದರು. ದುರಂತವೆಂದರೆ, ದೇಶಕ್ಕಾಗಿ ಪ್ರಾಣ ಕೊಡಲು ಸಿದ್ಧರಿರುವ, ಭಾರತೀಯ ಸೈನ್ಯದಲ್ಲಿ ಧೈರ್ಯ, ಸಾಹಸಕ್ಕೆ ಹೆಸರು ಮಾಡಿರುವ ಕರ್ನಲ್ ಸೋಫಿಯಾ ಖುರೇಷಿಯವರನ್ನು ಭಯೋತ್ಪಾದಕರ ಸಹೋದರಿ ಎಂದು ಕರೆದಿದ್ದು ಮತಾಂಧತೆಯ ಪರಮಾವಧಿಯಾಗಿದೆ.
ಕುನ್ವರ್ ವಿಜಯ್ ಶಾ ವಿರುದ್ಧ ಮಧ್ಯಪ್ರದೇಶ ಹೈಕೋರ್ಟ್ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿಸಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮಂತ್ರಿ ಕುನ್ವರ್ ವಿಜಯ್ ಶಾ ಅವರ ಕ್ಷಮೆ ಯಾಚನೆಯನ್ನು ತಿರಸ್ಕರಿಸಿದ್ದಾರೆ. ಅಷ್ಟು ಮಾತ್ರವಲ್ಲ, ವಿಶೇಷ ತನಿಖಾ ದಳದಿಂದ ಸಮರ್ಪಕ ತನಿಖೆ ನಡೆಸುವಂತೆ ಆದೇಶ ಮಾಡಿದ್ದಾರೆ. ಈ ದೇಶದ ಸಾಮಾನ್ಯ ಪ್ರಜೆಗೂ ವಿಜಯ್ ಶಾಹ ನಾಲಿಗೆ ನೀಚ ಬುದ್ಧಿ ತೋರಿಸಿದೆ ಎಂದು ಮನವರಿಕೆಯಾಗಿದೆ. ಆದರೆ ಬಿಜೆಪಿಯ ಹುಸಿ ದೇಶಭಕ್ತರಿಗೆ ಮಾತ್ರ ಮತಾಂಧತೆಯ ಪೊರೆಯಿಂದಾಗಿ ಕರ್ನಲ್ ಸೋಫಿಯಾ ಖುರೇಷಿಯವರ ಅಪ್ಪಟ ದೇಶಭಕ್ತಿಯನ್ನು ನೋಡಲು ಸಾಧ್ಯವಾಗುತ್ತಿಲ್ಲ. ‘ಎಲ್ಲ ಮಸೀದಿಗಳಲ್ಲಿ ಶಿವಲಿಂಗ ಹುಡುಕಬೇಡಿ’ ಎಂದು ಸಂವೇದನಾ ಶೀಲ ಹೇಳಿಕೆ ನೀಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗಾದರೂ ಕರ್ನಲ್ ಸೋಫಿಯಾ ಖುರೇಷಿಯ ನೈಜ ದೇಶಭಕ್ತಿ ಮತ್ತು ಜ್ಯೋತಿ ಮಲ್ಹೋತ್ರಾ ಅವರ ನೀಚ ದೇಶದ್ರೋಹಿ ಕೃತ್ಯದ ಚಿತ್ರಗಳು ಕಣ್ಣೊಳಗೆ ಇಳಿಯಬೇಕಿತ್ತು.
ಮಧ್ಯಪ್ರದೇಶದ ಮಂತ್ರಿ ಕುನ್ವರ್ ವಿಜಯ್ ಶಾ ಮಾತು ಕಟು ಟೀಕೆಗೆ ಗುರಿಯಾಗಿ ಕೋರ್ಟ್ ಗಂಭೀರವಾಗಿ ಪರಿಗಣಿಸಿದ ನಿದರ್ಶನ ಇದ್ದಾಗಲೂ ಬಿಜೆಪಿಯ ಇನ್ನೊಬ್ಬ ಶಾಸಕ ನಾಲಿಗೆ ಹರಿಬಿಟ್ಟಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನ ಮುಖ್ಯ ಸಚೇತಕ, ಎರಡನೇ ಬಾರಿಗೆ ವಿಧಾನಪರಿಷತ್ತಿಗೆ ಆಯ್ಕೆಯಾಗಿ ಬಂದ ಎನ್. ರವಿಕುಮಾರ್ ಪಾಕಿಸ್ತಾನ ಜಪ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ, ವಿಜಯ್ ಶಾ ಮಾದರಿಯಲ್ಲಿ ಕ್ಷಮೆ ಯಾಚಿಸಿದ್ದಾರೆ. ಕರ್ನಾಟಕ ಘಟಕದ ಬಿಜೆಪಿ ಮುಖಂಡರು ಪ್ರಿಯಾಂಕ್ ಖರ್ಗೆಯವರ ವಿರುದ್ಧ ಕಲಬುರಗಿಯಲ್ಲಿ ಬೃಹತ್ ಸಭೆ ನಡೆಸಿದ್ದಾರೆ. ಕರ್ನಾಟಕ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿಯವರನ್ನು ಚಿತ್ತಾಪುರ ಅತಿಥಿ ಗೃಹದಲ್ಲಿ ಕೂಡಿ ಹಾಕಿದ ಕ್ರಮವನ್ನು ಪ್ರತಿಭಟಿಸಿ ಬಿಜೆಪಿ ಮುಖಂಡರು ಜಮಾಯಿಸಿದ್ದರು. ಪ್ರಿಯಾಂಕ್ ಖರ್ಗೆ ರಿಪಬ್ಲಿಕ್ ಕಲಬುರಗಿ ಮಾಡಿದ್ದರೆಂದು ಎಲ್ಲ ನಾಯಕರು ತುಸು ಕಟುವಾಗಿಯೇ ಟೀಕಿಸಿದ್ದರು. ಜಿಲ್ಲಾ ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಯನ್ನು ಟೀಕಿಸುವ ಭರದಲ್ಲಿ ಶಾಸಕ ರವಿಕುಮಾರ್ ‘‘ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಪಾಕಿಸ್ತಾನದಿಂದ ಬಂದಿದ್ದಾರೋ ಅಥವಾ ಭಾರತದ ಐಎಎಸ್ ಪಾಸು ಮಾಡಿದ್ದಾರೋ ಎಂಬ ಅನುಮಾನ ಮೂಡಿಸುತ್ತದೆ’’ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಪಾಕಿಸ್ತಾನಕ್ಕೂ ಕಲಬುರಗಿ ಜಿಲ್ಲಾಧಿಕಾರಿಗೂ ಏನು ಸಂಬಂಧ? ಮುಸ್ಲಿಮರು ಪಾಕಿಸ್ತಾನ ದೇಶದಲ್ಲಿ ಮಾತ್ರ ಇದ್ದಾರೆ ಎಂಬ ಅಲ್ಪ ತಿಳುವಳಿಕೆ ರವಿಕುಮಾರ್ಗೆ
ಇದ್ದಂತಿದೆ. ಪಾಕಿಸ್ತಾನ ಭಾರತದ ಶತ್ರು ರಾಷ್ಟ್ರ, ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುತ್ತಿರುವ ದೇಶ. ಅಂಥ ದೇಶದೊಂದಿಗೆ ಫೌಝಿಯಾ ತರನ್ನುಮ್ ಹೆಸರನ್ನು ಯಾಕೆ ಜೋಡಿಸಬೇಕು? ನರೇಂದ್ರ ಮೋದಿಯವರು ಹಲವು ಬಾರಿ ಅರಬ್ ದೇಶಗಳಿಗೆ ಹೋಗಿ ಬರುತ್ತಾರೆ. ಅರಬ್ ದೇಶಗಳಲ್ಲಿ ಇರುವವರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರು. ಭಾರತದ ವಿದ್ಯಾವಂತ ಮತ್ತು ಜವಾಬ್ದಾರಿ ಸ್ಥಾನದಲ್ಲಿ ಇರುವವರನ್ನು ಮುಸ್ಲಿಮರು ಎನ್ನುವ ಕಾರಣಕ್ಕೆ ಪಾಕಿಸ್ತಾನದೊಂದಿಗೆ ತಳಕು ಹಾಕುವುದು ಮತಾಂಧತೆಯಲ್ಲದೆ ಮತ್ತೇನು?
ಅಷ್ಟಕ್ಕೂ ಕಲಬುರಗಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಫೌಝಿಯಾ ತರನ್ನುಮ್ ಅತ್ಯುತ್ತಮ ಹೆಸರು ಸಂಪಾದಿಸಿದ್ದಾರೆ. ದಕ್ಷತೆ, ಪ್ರಾಮಾಣಿಕತೆಗೆ ಹೆಸರು ಮಾಡಿದ್ದಾರೆ. ಸಾಧ್ಯವಾದಷ್ಟೂ ನಿಷ್ಪಕ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಲಬುರಗಿ ಜಿಲ್ಲಾಧಿಕಾರಿ ತಪ್ಪು ಮಾಡಿದ್ದರೆ ಟೀಕಿಸಲು ಹತ್ತು ಹಲವು ಪದಗಳಿದ್ದವು. ಪಾಕಿಸ್ತಾನದಿಂದ ಬಂದಿದ್ದಾರೆ ಎಂದು ಹೇಳಲು ರವಿಕುಮಾರ್ ಯಾರು? ಭಾರತದ ಜವಾಬ್ದಾರಿಯುತ ನಾಗರಿಕರಾಗಿರುವ ಫೌಝಿಯಾ ತರನ್ನುಮ್ ಪಾಕಿಸ್ತಾನದ ಸಮಸ್ತ ಕಳಂಕವನ್ನು ಯಾಕೆ ಹೊರಬೇಕು? ಹಣದಾಸೆಗೆ ಪಾಕಿಸ್ತಾನ ದೇಶಕ್ಕೆ ಭಾರತದ ರಹಸ್ಯ ಮಾಹಿತಿ ಮಾರಿಕೊಂಡ ಜ್ಯೋತಿ ಮಲ್ಹೋತ್ರಾ ಅವರಿಗೆ ಅನ್ವಯಿಸಿ ಹೇಳುವ ಮಾತನ್ನು ಕಲಬುರಗಿ ಡಿ.ಸಿ.ಗೆ ಹೇಳಿದ್ದಾರೆ. ಕಲಬುರಗಿ ಡಿ.ಸಿ. ತಪ್ಪು ಮಾಡಿದ್ದರೆ ಟೀಕಿಸುವ ಅಧಿಕಾರ ಶಾಸಕ ರವಿಕುಮಾರ್ಗೆ ಮಾತ್ರವಲ್ಲ ಈ ದೇಶದ ಸಾಮಾನ್ಯ ಪ್ರಜೆಗೂ ಇದೆ. ಭಾರತದ ಮುಸ್ಲಿಮ್ ಸಮುದಾಯದ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿರುವ ರವಿಕುಮಾರ್ ತರಹದವರು ಆ ಸಮುದಾಯದ ಒಳ್ಳೆಯವರನ್ನು ವಿಲನ್ ತರಹ ನೋಡುತ್ತಾರೆ. ರವಿಕುಮಾರ್ ಆಪ್ತ, ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ. ರಮೇಶ್ ಮೂರುವರೆ ವರ್ಷಗಳ ಕಾಲ ಲೂಟಿ ಮಾಡಿದರು. ಕಡು ಭ್ರಷ್ಟ ಡಾ. ರಮೇಶ್ ಅವರಿಗೆ ಬುದ್ಧಿ ಹೇಳಲು ಧೈರ್ಯ ಮಾಡದ ರವಿಕುಮಾರ್ ಪ್ರಾಮಾಣಿಕ ಅಧಿಕಾರಿ ವಿರುದ್ಧ ನಾಲಿಗೆ ಹರಿ ಬಿಟ್ಟು ಆಮೇಲೆ ಕ್ಷಮೆ ಕೇಳುತ್ತಾರೆ. ಒಬ್ಬ ವ್ಯಕ್ತಿ; ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್, ಜೈನ, ಪಾರ್ಶಿ ಯಾರೇ ಇರಲಿ. ಭಾರತ ದೇಶದ ಬಗೆಗಿನ ಬದ್ಧತೆ, ಗೌರವ, ಪ್ರೀತಿ ಮುಖ್ಯವಾಗಬೇಕೇ ಹೊರತು ಆತನ/ಆಕೆಯ ಸಮುದಾಯ ನೋಡಿ ಪಾಕಿಸ್ತಾನದೊಂದಿಗೆ ನಂಟು ಕಲ್ಪಿಸಬಾರದು. ಅದು ಪರಮ ವಿಕೃತಿಯೇ ಸರಿ. ಬಿಜೆಪಿ ನಾಯಕರು ಪಾಕಿಸ್ತಾನ ಜಪ ಮಾಡುತ್ತಿರುವುದು ಭಾರತದ ಸೌಹಾರ್ದ ಪರಂಪರೆಗೆ ಮಾರಕವಾಗಿದೆ. ಜ್ಯೋತಿ ಮಲ್ಹೋತ್ರಾರಂತಹ ಧನ ಪಿಶಾಚಿಗಳು ಪಾಕಿಸ್ತಾನ ಜೊತೆಗೆ ನಂಟು ಬೆಳೆಸಿ ದೇಶ ದ್ರೋಹದ ಕೃತ್ಯ ಎಸಗಬಹುದು. ಕರ್ನಲ್ ಸೋಫಿಯಾ ಖುರೇಷಿ, ತಬಸ್ಸುಮ್ ದಿನೇಶ್ ಗುಂಡೂರಾವ್, ಫೌಝಿಯಾ ತರನ್ನುಮ್ ಮುಂತಾದವರು ಭಾರತದ ಘನತೆ ಗೌರವ ಹೆಚ್ಚಿಸುವ ಹಾದಿ ಆಯ್ಕೆ ಮಾಡಿಕೊಂಡಿರುವವರು. ಬಲೂಚಿಸ್ತಾನದವರಿಗೆ ಬೇಡವಾದ ಪಾಕಿಸ್ತಾನವನ್ನು ಭಾರತದ ಮುಸ್ಲಿಮ್ ಸಮುದಾಯ ಇಷ್ಟ ಪಡಲು ಸಾಧ್ಯವೇ ಇಲ್ಲ. ಆಪರೇಷನ್
ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತದ ಮುಸ್ಲಿಮ್ ಸಮುದಾಯ ತೋರಿದ ಒಗ್ಗಟ್ಟು, ದೇಶಭಕ್ತಿ ಸೌಹಾರ್ದ ಪರಂಪರೆಗೆ ಬಲ ನೀಡುವಂತಿತ್ತು.