ಎದೆ ಸೀಳಿದಾಗ ಕಂಡ ‘ಎದೆಯ ಹಣತೆ’ಯ ಬೆಳಕು

PC: x.com/INCIndia
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕನ್ನಡದ ಕೃತಿಯೊಂದಕ್ಕೆ ಇದೇ ಮೊದಲ ಬಾರಿಗೆ ಅಂತರ್ರಾಷ್ಟ್ರೀಯ ಬೂಕರ್ ಗೌರವ ಸಂದಿದೆ. ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕೃತಿಯ ಇಂಗ್ಲಿಷ್ ಅನುವಾದ ‘ಹಾರ್ಟ್ಲ್ಯಾಂಪ್’ ಜಾಗತಿಕ ಮಟ್ಟದಲ್ಲಿ ಬೆಳಗಿದೆ. ಬೂಕರ್ ಗೌರವವನ್ನು ತನ್ನದಾಗಿಸಿಕೊಂಡ ಕರ್ನಾಟಕದ ಎರಡನೆಯ ಸಾಹಿತಿಯಾಗಿ ಬಾನುಮುಷ್ತಾಕ್ ಗುರುತಿಸಿಕೊಂಡಿದ್ದಾರೆ. ಈ ಹಿಂದೆ, ‘ವೈಟ್ ಟೈಗರ್’ ಇಂಗ್ಲಿಷ್ ಕೃತಿಗಾಗಿ ಅರವಿಂದ ಅಡಿಗ ಬೂಕರ್ ಗೌರವವನ್ನು ತನ್ನದಾಗಿಸಿಕೊಂಡಿದ್ದರು. ಕನ್ನಡದ ಪಾಲಿಗೆ ಈ ಬಾರಿಯ ಗೌರವ ಯಾಕೆ ವಿಶೇಷವೆಂದರೆ, ಜಾಗತಿಕವಾಗಿ ಕನ್ನಡದ ಕೃತಿಯೊಂದು ಗುರುತಿಸಿಕೊಳ್ಳುವುದು ಇದೇ ಮೊದಲು. ಈ ಗೌರವವನ್ನು ಕನ್ನಡಕ್ಕೆ ತಂದುಕೊಟ್ಟಿರುವುದು ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಮಹಿಳೆ ಎನ್ನುವುದು ಕನ್ನಡಿಗರ ಪಾಲಿನ ಇನ್ನೊಂದು ಹೆಮ್ಮೆ. ಭಾರತಕ್ಕೆ ಇದು ಏಳನೆಯ ಪ್ರಶಸ್ತಿ. ಭಾರತದ ಪ್ರಾದೇಶಿಕ ಭಾಷೆಯೊಂದನ್ನು ಜಾಗತಿಕ ಮಟ್ಟಕ್ಕೆ ತಲುಪಿಸಿದ ಕಾರ್ಯಕ್ಕಾಗಿ ಬಾನುಮುಷ್ತಾಕ್ ಅವರಿಗೆ ಅಭಿನಂದನೆಗಳ ಸುರಿಮಳೆಯಾಗುತ್ತಿದೆಯಾದರೂ, ನಮ್ಮ ದೇಶದ ಪ್ರಧಾನಿಗೆ ಈ ಬಗ್ಗೆ ಮಾಹಿತಿ ಇನ್ನೂ ಲಭ್ಯವಾದಂತಿಲ್ಲ. ಶೋಷಿತ ಸಮುದಾಯದ ಒಬ್ಬ ಮಹಿಳೆ ಪ್ರಾದೇಶಿಕ ಭಾಷೆಯ ಮೂಲಕ ಭಾರತದ ಗೌರವವನ್ನು ಅಂತರ್ರಾಷ್ಟ್ರೀಯ ಮಟ್ಟಕ್ಕೆ ಒಯ್ದಿರುವುದು ಪ್ರಧಾನಿಯ ‘ಹಿಂದಿ ಮೇಲರಿಮೆಗೆ’ ಇರಿಸು ಮುರಿಸು ಉಂಟು ಮಾಡಿರಬೇಕು. ಹಿಂದಿಯನ್ನು ಹೇರುವ ಮೂಲಕ ಪ್ರಾದೇಶಿಕ ಭಾಷೆ, ಸಂಸ್ಕೃತಿಯ ಮೇಲೆ ಸವಾರಿ ಮಾಡಲು ಹೊರಟ ಉತ್ತರ ಭಾರತದ ರಾಜಕೀಯ ನಾಯಕರಿಗೆ ಈ ಪ್ರಶಸ್ತಿ ಸವಾಲನ್ನು ಹಾಕಿದೆ. ಆದುದರಿಂದಲೇ, ಕರ್ನಾಟಕಕ್ಕೆ ಸಂದ ಈ ಗೌರವ, ಭಾರತಕ್ಕೆ ಸಂದ ಗೌರವದಂತೆ ಪ್ರಧಾನಿ ಮೋದಿಗೆ ಅನ್ನಿಸಿಲ್ಲ. ಆದುದರಿಂದಲೇ, ಅವರು ಬೂಕರ್ ಗೌರವವನ್ನು ತನ್ನದಾಗಿಸಿಕೊಂಡಿರುವ ಕರ್ನಾಟಕದ ಸಾಧನೆಯನ್ನು ಅಭಿನಂದಿಸುವುದಕ್ಕೆ ಮುಂದಾಗಿಲ್ಲ.
ಹಲವು ಕಾರಣಗಳಿಗಾಗಿ ‘ಹಾರ್ಟ್ಲ್ಯಾಂಪ್’ ಅಥವಾ ‘ಎದೆಯ ಹಣತೆ’ ಕೃತಿ ಮತ್ತು ಅದಕ್ಕೆ ದೊರಕಿದ ಬೂಕರ್ ಗೌರವ ಮುಖ್ಯವಾಗಿದೆ. ಶೋಷಿತ ಸಮುದಾಯದ ಮಹಿಳೆಯರ ಬದುಕಿನ ಮೇಲೆ ಈ ಕೃತಿ ಬೆಳಕು ಚೆಲ್ಲುತ್ತದೆ. ನೋವು, ದುಮ್ಮಾನಗಳ ಒಂದು ಅಪರಿಚಿತ ಲೋಕವನ್ನು ಕೃತಿ ಪರಿಚಯಿಸುತ್ತದೆ. ಅಂತರ್ರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಉದ್ದೇಶವೇ ಪ್ರಾದೇಶಿಕ ಭಾಷೆಗಳಲ್ಲಿ ಮೂಡಿ ಬಂದಿರುವ ಅತ್ಯುತ್ತಮ ಕೃತಿಗಳನ್ನು ಜಗತ್ತಿಗೆ ಪರಿಚಯಿಸುವುದು. ಆ ಮೂಲಕ ಜಗತ್ತಿನ ಬಹುತ್ವವನ್ನು ಎತ್ತಿ ಹಿಡಿಯುವುದು. ಒಂದು ರೀತಿಯಲ್ಲಿ ಇದು ಸೇತುವೆ ಕಟ್ಟುವ ಕೆಲಸ. ಕನ್ನಡದ ಕೃತಿಯನ್ನು ಇಂಗ್ಲಿಷ್ಗೆ ಸಮರ್ಥವಾಗಿ ಅನುವಾದಿಸುವ ಮೂಲಕ, ಈ ಸೇತುವೆಯ ಕೆಲಸವನ್ನು ದೀಪಾ ಭಾಸ್ತಿ ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ. ಕನ್ನಡದ ಹಲವು ಮಹತ್ವದ ಕೃತಿಗಳು ಇಂಗ್ಲಿಷ್ಗೆ ತಲುಪುವಲ್ಲಿ ಈ ಹಿಂದೆ ಎ.ಕೆ. ರಾಮಾನುಜನ್ರಂತಹ ಹಿರಿಯುವ ಲೇಖಕರು ಪ್ರಧಾನ ಪಾತ್ರವಹಿಸಿದ್ದರು. ಕನ್ನಡದ ಹಲವು ಹಿರಿಯ ಲೇಖಕರು, ಹಲವು ಮಹತ್ವದ ಕೃತಿಗಳು ವಿದೇಶಿ ವಿಶ್ವವಿದ್ಯಾನಿಲಯಗಳಿಗೆ ಪರಿಚಯವಾದುದು ರಾಮಾನುಜನ್ರಂತಹ ಅನುವಾದಕರ ಮೂಲಕ. ಇಂತಹ ಅನುವಾದಕರ ಸಂಖ್ಯೆಯೂ ಕನ್ನಡದಲ್ಲಿ ಹೆಚ್ಚಬೇಕಾಗಿದೆ. ಕನ್ನಡದ ಮಹತ್ವದ ಕೃತಿಗಳು
ಇಂಗ್ಲಿಷ್ಗೆ ಭಾಷಾಂತರ ಮಾಡುವ ಮೂಲಕ, ಕನ್ನಡ ಭಾಷೆ, ಸಂಸ್ಕೃತಿಯನ್ನು ಜಗತ್ತಿಗೆ ತಲುಪಿಸುವ ಕೆಲಸವಾಗಬೇಕಾಗಿದೆ. ಆದುದರಿಂದ, ಮೂಲ ಲೇಖಕಿ ಬಾನುಮುಷ್ತಾಕ್ ಅವರಷ್ಟೇ ಆ ಕೃತಿಯನ್ನು ಅನುವಾದಿಸಿದ ದೀಪಾ ಭಾಸ್ತಿಯೂ ಮುಖ್ಯರಾಗುತ್ತಾರೆ. ಶಾಸ್ತ್ರೀಯ ಭಾಷೆಯಾಗಿ ಮಾನ್ಯತೆ ಪಡೆದಿರುವ ಕನ್ನಡ ಒಟ್ಟು ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕನ್ನಡದ ಹಲವು ಕೃತಿಗಳು ದೇಶದ ಹಲವು ಭಾಷೆಗಳಿಗೆ ಅನುವಾದವಾಗಿವೆ. ವಿದೇಶಗಳ ಹಲವು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡದ ಕೃತಿಗಳು ಪಠ್ಯವಾಗಿ ಬೋಧಿಸಲ್ಪಡುತ್ತಿವೆ. ಇಂದು ಭಾರತ ಜಗತ್ತಿನ ಮುಂದೆ ಗುರುತಿಸಿಕೊಂಡಿರುವುದು ಪ್ರಾದೇಶಿಕ ಭಾಷೆಗಳ ಮೂಲಕ. ಇಲ್ಲಿರುವ ಪ್ರಾದೇಶಿಕ ವೈವಿಧ್ಯತೆಗಳ ಮೂಲಕ. ಇಂತಹ ವಿವಿಧತೆಗಳನ್ನು ನಾಶ ಮಾಡಿ, ಅವುಗಳ ಮೇಲೆ ಹಿಂದಿಯ ಏಕಸ್ವಾಮ್ಯತೆಯನ್ನು ಪ್ರತಿಷ್ಠಾಪಿಸಲು ಹೊರಡುವವರಿಗೆ ಈ ಬೂಕರ್ ಪ್ರಶಸ್ತಿ ಗೌರವವು ತಮ್ಮ ಮುಖ ನೋಡಿಕೊಳ್ಳುವುದಕ್ಕಿರುವ ಕನ್ನಡಿಯಾಗ ಬೇಕಾಗಿದೆ.
ಪ್ರಧಾನಿ ಮೋದಿಯವರು ಸಣ್ಣದೊಂದು ಅಭಿನಂದನೆಯನ್ನು ಹೇಳುವುದಕ್ಕೂ ಯಾಕೆ ಜಿಪುಣತನ ತೋರಿಸಿದ್ದಾರೆ? ಎನ್ನುವ ಪ್ರಶ್ನೆಯನ್ನು ಹಲವರು ಕೇಳುತ್ತಿದ್ದಾರೆ. ಕನ್ನಡ ಭಾಷೆಗೆ ದಕ್ಕಿರುವ ಗೌರವವೆಂದು ಅವರು ಇದನ್ನು ನಿರ್ಲಕ್ಷಿಸಿದ್ದಾರೆ ಎಂದು ಕನ್ನಡಿಗರು ಅನುಮಾನಿಸುವಂತಾಗಿದೆ. ಇದೇ ಸಂದರ್ಭದಲ್ಲಿ ಲೇಖಕಿಯೊಬ್ಬರು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಪ್ರಧಾನಿಗೆ ಯಾಕೆ ಮುಖ್ಯವಾಗಿಲ್ಲ? ಅವರು ಮುಸ್ಲಿಮ್ ಸಮುದಾಯಕ್ಕೆ ಸೇರಿದ್ದಾರೆ ಎನ್ನುವುದು ಪ್ರಧಾನಿ ನಿರ್ಲಕ್ಷ್ಯಕ್ಕೆ ಕಾರಣವೆ? ಅಥವಾ ಗೌರಿ ಲಂಕೇಶ್ ಹತ್ಯೆಯೂ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಕೋಮುದ್ವೇಷ, ಅಮಾಯಕರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಸದಾ ಧ್ವನಿಯೆತ್ತುತ್ತಾ ಬಂದಿದ್ದಾರೆ ಎನ್ನುವುದು ಪ್ರಧಾನಿಯ ಅಸಮಾಧಾನಕ್ಕೆ ಕಾರಣವೇ? ‘ಎದೆ ಸೀಳಿದರೆ ನಾಲ್ಕಕ್ಷರ ಇಲ್ಲ’ ಎನ್ನುವ ದುಷ್ಟ ರಾಜಕಾರಣಿಗಳಿಗೆ ಈ ‘ಎದೆಯ ಹಣತೆ’ಯ ಬೆಳಕು ಕಣ್ಣು ಕುಕ್ಕಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದುದರಿಂದಲೇ, ಈ ಬೆಳಕಿಗೆ ಅಂಜಿ ಅವರು ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ.
ಒಂದೆಡೆ ಮುಸ್ಲಿಮ್ ತರುಣಿಯರನ್ನು ತಲೆವಸ್ತ್ರದ ನೆಪವೊಡ್ಡಿ ಶಾಲೆಗಳಿಂದ ಹೊರ ಹಾಕಲು ರಾಜಕೀಯ ಶಕ್ತಿಗಳು ಯತ್ನಿಸುತ್ತಿರುವ ಸಂದರ್ಭದಲ್ಲೇ, ಮಗದೊಂದೆಡೆ ಮುಸ್ಲಿಮ್ ವಿದ್ಯಾರ್ಥಿನಿಯರ ಬಹುದೊಡ್ಡ ದಂಡು ಅಕ್ಷರಗಳ ಆಯುಧಗಳ ಜೊತೆಗೆ ಮುಂದುವರಿಯುತ್ತಿದೆ. ಇತ್ತೀಚಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿರುವ ವಿದ್ಯಾರ್ಥಿನಿಯರು ‘ನಾವು ಯಾರಿಗೂ ಕಡಿಮೆಯಿಲ್ಲ’ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಅವರು ಸಾಧನೆಗಳನ್ನು ಮೆರೆಯುತ್ತಿದ್ದಾರೆ. ಕರಾವಳಿಯಂತಹ ಪ್ರದೇಶಗಳಲ್ಲಿ ಶಿಕ್ಷಣ ಕಲಿಕೆಯಲ್ಲಿ ಈ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗಿಂತ ಒಂದು ಹೆಜ್ಜೆ ಮುಂದೆಯೇ ಇದ್ದಾರೆ. ಈ ಸಂದರ್ಭದಲ್ಲೇ, ಮುಸ್ಲಿಮ್ ಮಹಿಳೆಯರ ನೋವು, ದುಮ್ಮಾನಗಳನ್ನು ವಸ್ತುವಾಗಿಟ್ಟುಕೊಂಡಿರುವ ಕೃತಿಯೊಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಅರ್ಥಪೂರ್ಣವಾಗಿದೆ. ಧರ್ಮ, ಜಾತಿಯ ಆಧಾರದಲ್ಲಿ ಸಮುದಾಯವನ್ನು ತುಳಿಯಲು ಹೊರಟ ರಾಜಕೀಯ ಶಕ್ತಿಗಳಿಗೆ ಈ ಎಲ್ಲ ಸಾಧನೆಗಳು ಉತ್ತರವಾಗಿವೆ. ಇದೇ ರೀತಿಯಲ್ಲಿ, ಈ ನಾಡಿನ ದಲಿತ, ಶೋಷಿತ ಸಮುದಾಯದ ಜನರ ದುಃಖ, ದುಮ್ಮಾನಗಳೂ ಜಗತ್ತನ್ನು ತಲುಪಬೇಕಾಗಿದೆ. ಒಡೆದು ಆಳಲು ಯತ್ನಿಸುತ್ತಿರುವವರಿಗೆ ಭಾಷೆ, ಸಾಹಿತ್ಯದ ಮೂಲಕ ಉತ್ತರಿಸಿ, ಜನಮನವನ್ನು ಬೆಸೆಯುವ ಕೆಲಸ ಮಾಡಬೇಕಾಗಿದೆ.