ಸಾಹಿತಿ ಬಾನು ಮುಷ್ತಾಕ್ಗೆ ಬೂಕರ್ ಪ್ರಶಸ್ತಿ: ಹಾಸನದಲ್ಲಿ ಜನಪರ ಚಳವಳಿಗಳ ಒಕ್ಕೂಟದಿಂದ ಸಂಭ್ರಮ

ಹಾಸನ : ಸಾಹಿತಿ ಬಾನು ಮುಷ್ತಾಕ್ಗೆ ಬೂಕರ್ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದಿಂದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಗುರುವಾರ ಸಾರ್ವಜನಿಕ ಸಂಭ್ರಮ ನಡೆಯಿತು.
ಮೊದಲು ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಲೇಖಕಿ ಬಾನು ಮುಷ್ತಾಕ್ ಅವರ 2025ನೇ ಸಾಲಿನ ಅನುವಾದಿತ ಕೃತಿ ‘ಹಾರ್ಟ್ ಲ್ಯಾಂಪ್’ ಗೆ ಬೂಕರ್ ಪ್ರಶಸ್ತಿ ಪಡೆದುಕೊಂಡಿದನ್ನು ಘೋಷಣೆ ಕೂಗುವುದರ ಮೂಲಕ ಸಂಭ್ರಮಿಸಿ ಸಿಹಿ ಹಂಚಿದರು.
ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದ ಮುಖಂಡ ಧರ್ಮೇಶ್ ಮಾತನಾಡಿ, ಬಾನು ಮುಷ್ತಾಕ್ ಅವರ ಸಾಮಾಜಿಕ ಒಡನಾಟವೇ ಅವರ ಸಾಹಿತ್ಯದಲ್ಲಿ ಸಾಮಾಜಿಕ ವಿಚಾರಗಳನ್ನು ಒಳಗೊಳ್ಳಿಸಲು ನೆರವಾಗಿದೆ. ಅವರಿಗೆ ಅಂತರ್ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಬಂದಿರುವುದು ನಮಗೆಲ್ಲ ಸಂತಸ ತಂದಿದೆ ಎಂದರು.
ಹಿರಿಯ ಸಾಹಿತಿ ರೂಪಾ ಹಾಸನ್ ಮಾತನಾಡಿ, ಬಾನು ಮುಷ್ತಾಕ್ ಅವರ ಸಾಧನೆ ನಮಗೆಲ್ಲ ಖುಷಿ ತಂದಿದೆ. ಅವರ ಸಾಧನೆ ಮಹಿಳೆಯರಾದ ನಮಗೆಲ್ಲ ಸ್ಫೂರ್ತಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದ ಅಂತರ್ರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್, ಪತ್ರಕರ್ತರಾದ ನಾಗರಾಜು ಹೆತ್ತೂರ್, ಮಂಜು ಬನವಾಸೆ, ಚಲಂ, ಎಂ.ಜಿ.ಪೃಥ್ವಿ, ವೈದ್ಯೆ ರಂಗಲಕ್ಷ್ಮಿ, ಸಿ.ಸುವರ್ಣ, ಶಾಡ್ರಕ್, ಕೆ.ಟಿ.ಜಯಶ್ರೀ, ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ, ಆರ್ಪಿಐ ಸತೀಶ್, ಕೃಷ್ಣದಾಸ್, ಚಿನ್ನಸ್ವಾಮಿ ಮಹೇಶ್ ಮತ್ತಿತರರಿದ್ದರು.