ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಕೇರಳದ ಅಬ್ದುಲ್ ರಹೀಂ ಬಿಡುಗಡೆ ಮತ್ತೆ ವಿಳಂಬ: 20 ವರ್ಷ ಜೈಲು ಶಿಕ್ಷೆ ವಿಧಿಸಿದ ಸೌದಿ ನ್ಯಾಯಾಲಯ
34 ಕೋಟಿಗೂ ಅಧಿಕ ʼದಿಯಾʼ ಪಾವತಿ ಬಳಿಕ ಮರಣದಂಡನೆಯಿಂದ ಪಾರಾಗಿದ್ದ ರಹೀಂ

ಅಬ್ದುಲ್ ರಹೀಮ್
ರಿಯಾದ್: ಸೌದಿ ಅರೇಬಿಯಾದಲ್ಲಿ ಮಗುವೊಂದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕೇರಳ ಮೂಲದ ಅಬ್ದುಲ್ ರಹೀಂಗೆ ಸೌದಿ ಅರೇಬಿಯಾ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅದರಂತೆ ಅವರು 2026ರ ಡಿಸೆಂಬರ್ ನಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ವರದಿಯಾಗಿದೆ.
ಈಗಾಗಲೇ 18.5 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಅಬ್ದುಲ್ ರಹೀಂ ಆರು ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿತ್ತು. ಆದರೆ, ಇತ್ತೀಚಿನ ತೀರ್ಪಿನಿಂದ ಅಬ್ದುಲ್ ರಹೀಂ 20 ವರ್ಷಗಳ ಪೂರ್ಣ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಬೇಕಾಗಿದೆ.
ಮಗುವೊಂದು ಮೃತಪಟ್ಟ ಪ್ರಕರಣದಲ್ಲಿ ಅಬ್ದುಲ್ ರಹೀಂ 2006ರ ನವೆಂಬರ್ನಿಂದ ಸೌದಿ ಅರೇಬಿಯಾದ ಜೈಲಿನಲ್ಲಿದ್ದಾರೆ. ಆರಂಭದಲ್ಲಿ ರಿಯಾದ್ ನ್ಯಾಯಾಲಯ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆದರೆ ನಂತರ ಸಂತ್ರಸ್ತ ಕುಟುಂಬ 1.5 ಕೋಟಿ ಸೌದಿ ರಿಯಾಲ್ (34 ಕೋಟಿಗೂ ಅಧಿಕ) ಮೊತ್ತದ ದಿಯಾ (ಹಣಕಾಸು ನೆರವು) ಪಡೆದು ಕ್ಷಮಿಸಲು ಒಪ್ಪಿಗೆ ನೀಡಿದ ಬಳಿಕ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಿತ್ತು.
►ಪ್ರಕರಣದ ಹಿನ್ನೆಲೆ :
2006 ನವೆಂಬರ್ನಲ್ಲಿ ತನ್ನ 26ನೇ ವಯಸ್ಸಿನಲ್ಲಿ ಅಬ್ದುಲ್ ರಹೀಂ ಹೌಸ್ ಡ್ರೈವರ್ ವೀಸಾದಲ್ಲಿ ರಿಯಾದ್ ಗೆ ಹೋಗಿದ್ದರು. ತನ್ನ ವೀಸಾ ಪ್ರಾಯೋಜಕ ಫೈಝ್ ಅಬ್ದುಲ್ಲಾ ಅಬ್ದುಲ್ ರಹ್ಮಾನ್ ಅಲ್ ಶಹರಿ ಅವರ ಪುತ್ರ ಅನಸ್ ಅವರನ್ನು ನೋಡಿಕೊಳ್ಳುವುದು ಅವರ ಕೆಲಸವಾಗಿತ್ತು. ಅಂಗವೈಕಲ್ಯತೆಯಿಂದ ಕತ್ತಿನ ಕೆಳಗೆ ನಿಶ್ಚಲನಾಗಿದ್ದ ಅನಸ್ ಗೆ ಕುತ್ತಿಗೆಗೆ ಅಳವಡಿಸಲಾಗಿದ್ದ ಉಪಕರಣದ ಮೂಲಕ ಆಹಾರ ನೀಡಲಾಗುತ್ತಿತ್ತು. 2006 ಡಿಸೆಂಬರ್ 24ರಂದು ಶಾಪಿಂಗ್ ಗೆಂದು ಹೊರಗೆ ಹೋಗುತ್ತಿದ್ದಾಗ ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದ ಕಾರನ್ನು ಸಿಗ್ನಲ್ ಕಟ್ ಮಾಡಿ ಚಲಿಸುವಂತೆ ಒತ್ತಾಯ ಮಾಡಿದ್ದ ಅನಸ್, ಚಾಲಕ ರಹೀಂ ಜೊತೆ ಜಗಳವಾಡಿದ್ದನು. ಇದನ್ನು ತಡೆಯಲು ಮುಂದಾದಾಗ ಆಕಸ್ಮಿಕವಾಗಿ ಕೈ ಕುತ್ತಿಗೆಯಲ್ಲಿದ್ದ ಉಪಕರಣಕ್ಕೆ ತಾಗಿ ಅನಸ್ ಪ್ರಜ್ಞೆ ತಪ್ಪಿ ಬಿದ್ದು ಬಳಿಕ ಮೃತಪಟ್ಟಿದ್ದ.
ಘಟನೆಯ ನಂತರ, ಸೌದಿ ಪೊಲೀಸರು ರಹೀಂನನ್ನು ಕೊಲೆ ಆರೋಪದಲ್ಲಿ ಬಂಧಿಸಿದ್ದರು. ರಿಯಾದ್ ನ್ಯಾಯಾಲಯ ಅವರಿಗೆ ಮರಣದಂಡನೆ ವಿಧಿಸಿತ್ತು. ಇದರ ನಂತರ, ರಹೀಂ ಬಿಡುಗಡೆಗಾಗಿ ಉನ್ನತ ಮಟ್ಟದಲ್ಲಿ ಹಲವಾರು ಮಧ್ಯಸ್ಥಿಕೆಗಳು ನಡೆದವು. ಆದರೆ ಬಾಲಕನ ಕುಟುಂಬ ಕ್ಷಮಾದಾನ ನೀಡಲು ಒಪ್ಪಿರಲಿಲ್ಲ. ಸತತ ಪ್ರಯತ್ನದ ನಂತರ ಫೈಝ್ ಕುಟುಂಬ 34 ಕೋಟಿ ರೂ. ನೀಡಿದರೆ ಕ್ಷಮಾದಾನ ಕುಟುಂಬ ಒಪ್ಪಿಗೆ ನೀಡಿತ್ತು. ಸಾಮಾಜಿಕ ಕಾರ್ಯಕರ್ತರು ಸಮಿತಿ ರಚಿಸಿ ರಹೀಂಗಾಗಿ ಕ್ರೌಡ್ ಫಂಡಿಂಗ್ ಆರಂಭಿಸಿದ್ದರು. ಪ್ರಮುಖ ಉದ್ಯಮಿ ಬೋಬಿ ಚೆಮ್ಮನ್ನೂರ್ ಒಂದು ಕೋಟಿ ರೂ ನೀಡಿ ಧನ ಸಂಗ್ರಹ ಅಭಿಯಾನ ಘೋಷಿಸಿ ನಿಧಿಸಂಗ್ರಹ ಮಾಡಿದ್ದರು. ಕೊನೆಗೆ 34 ಕೋಟಿ ರೂ. ಸಂಗ್ರಹಿಸಿ ನೀಡಲಾಗಿತ್ತು.