ಸರಕಾರಿ ಕನ್ನಡ ಶಾಲೆಗಳ ದುರವಸ್ಥೆ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈಸಲದ ಪರೀಕ್ಷೆಯ ಫಲಿತಾಂಶದಲ್ಲಿ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣರಾಗಿರುವುದು ದೊಡ್ಡ ಸುದ್ದಿಯಾಗಿದೆ. ಅದರಲ್ಲೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಉತ್ತೀರ್ಣರಾಗಿರುವುದು ಸಹಜವಾಗಿ ಕಳವಳವನ್ನು ಉಂಟು ಮಾಡಿದೆ. ಇದರ ಬಗ್ಗೆ ಭಾವನಾತ್ಮಕ ಮಾತುಗಳಿಂದ ಪ್ರಯೋಜನವಿಲ್ಲ. ಇದಕ್ಕೆ ಕಾರಣವಾಗಿರುವ ಅಂಶಗಳನ್ನು ಪರಿಶೀಲಿಸಿ ವೈಜ್ಞಾನಿಕ ಪರಿಹಾರವನ್ನು ಕಂಡು ಹಿಡಿಯಬೇಕಾಗಿದೆ
ಖಾಸಗೀಕರಣದ ಅಬ್ಬರದ ದಿನಗಳಲ್ಲಿ ಶಿಕ್ಷಣ ಕೂಡ ಮಾರುಕಟ್ಟೆಯ ಸರಕಾಗಿರುವುದು ಹಳೆಯ ಸಂಗತಿ. ಇದರ ನಡುವೆಯೂ ಪ್ರತಿಕೂಲ ಪರಿಸ್ಥಿತಿಯಲ್ಲೂ ಉತ್ತಮ ಸಾಧನೆ ಮಾಡಿರುವ ಮಕ್ಕಳ ಕುರಿತು ಕೂಡ ವರದಿಗಳು ಬಂದಿವೆ. ಜೊತೆಗೆ ಅನುತ್ತೀರ್ಣರಾಗಿ ಆತ್ಮಹತ್ಯೆ ಮಾಡಿಕೊಂಡ ಕೆಲವು ಮಕ್ಕಳೂ ಇದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಪರೀಕ್ಷೆ ಎಂಬುದು ಬಹುತೇಕ ವಿದ್ಯಾರ್ಥಿಗಳ ಪಾಲಿಗೆ ಒಂದು ಯುದ್ಧದಂತಾಗಿದೆ. ಈ ಒತ್ತಡದ ನಡುವೆ ಮಾನಸಿಕವಾಗಿ ದುರ್ಬಲರಾದ ಮಕ್ಕಳು ಸಾವಿನ ಮೊರೆ ಹೋಗುತ್ತಿದ್ದಾರೆ. ಇದಕ್ಕೆಲ್ಲ ಬಹುತೇಕ ಕಾರಣ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿರುವುದು ಕಟು ಸತ್ಯವಾಗಿದೆ.
ಅನುಕೂಲಗಳಿಲ್ಲದ ಬಡವರ ಹಾಗೂ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳಿಗೆ ಸರಕಾರಿ ಶಾಲೆಯೊಂದೇ ಶೈಕ್ಷಣಿಕ ಆಸರೆಯಾಗಿದೆ. ಯಾವುದೇ ವಿದ್ಯಾರ್ಥಿ ಬಂದರೂ ಪ್ರವೇಶವನ್ನು ನಿರಾಕರಿಸುವುದಿಲ್ಲ. ಶಿಕ್ಷಣ ಎಂಬುದು ಮಗುವಿನ ಹಕ್ಕಾಗಿದ್ದರೂ ಖಾಸಗಿ ಶಾಲೆಗಳು ಶೇ. 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳನ್ನಷ್ಟೇ ಶಾಲೆಗೆ ಸೇರಿಸಿಕೊಳ್ಳುತ್ತವೆ. ಶೇ. 85ಕ್ಕಿಂತ ಕಡಿಮೆ ಅಂಕವನ್ನು ಪಡೆದ ಮಕ್ಕಳಿಗೂ ಪ್ರವೇಶ ಸಿಗುವುದು ಕಷ್ಟ ಸಾಧ್ಯ. ಉಳಿದ 70ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳು ಅನುದಾನಿತ ಶಾಲೆಗಳ ಬಳಿ ಹೋಗುತ್ತಾರೆ. ಆದರೆ ಶೇ. 70ಕ್ಕಿಂತ ಕಡಿಮೆ ಅಂಕ ಗಳಿಸಿದ ಮಕ್ಕಳಿಗೆ ಸರಕಾರಿ ಶಾಲೆಗಳೇ ಏಕೈಕ ಆಸರೆಯ ತಾಣಗಳಾಗಿವೆ.
ವಾಸ್ತವಾಂಶ ಹೀಗಿರುವಾಗ ಸರಕಾರಿ ಶಾಲೆಗಳ ಕನ್ನಡ ಬೋಧನೆಯ ಗುಣಮಟ್ಟವನ್ನು ಸುಧಾರಿಸಲು ಸರಕಾರ ಮೊದಲ ಆದ್ಯತೆಯನ್ನು ನೀಡಬೇಕಾಗಿದೆ. ಬೋಧನೆಯ ಗುಣಮಟ್ಟ ಮಾತ್ರವಲ್ಲ, ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಕಡಿಮೆಯಿಲ್ಲದಂತೆ ಮೂಲಭೂತ ಸೌಕರ್ಯಗಳನ್ನು ಸುಧಾರಿಸಬೇಕಾಗಿದೆ.
ಖಾಸಗಿ ಶಿಕ್ಷಣ ಲಾಬಿಗೆ ಸರಿಸಾಟಿಯಾಗಲು, ವಿದ್ಯಾರ್ಥಿಗಳನ್ನು ಆಕರ್ಷಿಸಲು ಸರಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲೇ ಇಂಗ್ಲಿಷ್ ಬೋಧನೆಯನ್ನು ಕಡ್ಡಾಯ ಮಾಡಿದರೂ ಅದರಿಂದ ಹೆಚ್ಚಿನ ಪ್ರಯೋಜನವಾಗಲಿಲ್ಲ. ಇದರಿಂದಾಗಿ ಶೈಕ್ಷಣಿಕ ಗುಣಮಟ್ಟ ಮತ್ತಷ್ಟು ಕುಸಿಯಿತು. ಇತ್ತ ಇಂಗ್ಲಿಷನ್ನೂ ಕಲಿಯದೆ, ಅತ್ತ ಕನ್ನಡವನ್ನೂ ಕಲಿಯಲಾಗದೆ ಶಾಲೆಗೆ ವಿದಾಯ ಹೇಳುವ ಮಕ್ಕಳ ಸಂಖ್ಯೆ ಹೆಚ್ಚಾಯಿತು. ಹೀಗಾಗಿ ಸರಕಾರಿ ಶಾಲೆಗಳ ಮುಚ್ಚುವಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಸಾಗಿದೆ. ಇದರಿಂದಾಗಿ ಬಡವರ, ಅವಕಾಶ ವಂಚಿತರ ಮಕ್ಕಳು ಅಕ್ಷರದಿಂದ ವಂಚಿತರಾಗುತ್ತಿದ್ದಾರೆ.
ಅನ್ನ, ಶಿಕ್ಷಣ ಮತ್ತು ಆರೋಗ್ಯ ಇವುಗಳು ಯಾವುದೇ ಜವಾಬ್ದಾರಿಯುತ ಸರಕಾರದ ಸಾಮಾಜಿಕ ಹೊಣೆಗಾರಿಕೆಗಳಾಗಿವೆ. ಇದರಲ್ಲಿ ಅನ್ನಭಾಗ್ಯದಂಥ ಯೋಜನೆಯ ಮೂಲಕ ಹಸಿದವರ ಬವಣೆಯನ್ನು ನಿವಾರಿಸಲು ಸರಕಾರ ಮುಂದಾಗಿದೆ. ಆದರೆ ಇದರಷ್ಟೇ ಮುಖ್ಯವಾಗಿರುವ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಅಷ್ಟೇ ಆಸಕ್ತಿಯನ್ನು ಸರಕಾರ ತೋರಿಸಬೇಕಾಗಿದೆ. ಖಾಸಗೀಕರಣದ ಹೊಡೆತದಿಂದ ಇವೆರಡು ಕ್ಷೇತ್ರಗಳು ತತ್ತರಿಸಿ ಹೋಗಿವೆ. ಈ ನೆಲದ ಭಾಷೆಯಾದ ಕನ್ನಡವೂ ಈಗ ಅಳಿವು ಉಳಿವಿನ ಸಮಸ್ಯೆಯನ್ನು ಎದುರಿಸುತ್ತಿದೆ. ಶಿಕ್ಷಣದಲ್ಲಿ ಕನ್ನಡವನ್ನು ಉಳಿಸಲಾಗದಿದ್ದರೆ, ಅದನ್ನು ಆಡಳಿತ ಭಾಷೆಯನ್ನಾಗಿ ಮಾಡಿಯೂ ಉಪಯೋಗವಾಗುವುದಿಲ್ಲ.
ಸರಕಾರಿ ಕನ್ನಡ ಶಾಲೆಗಳ ದುರವಸ್ಥೆಗೆ ಹಲವಾರು ಕಾರಣಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಸರಕಾರಿ ಕನ್ನಡ ಶಾಲೆಗಳ ಶಿಕ್ಷಕರನ್ನು ಪಾಠ ಮಾಡುವ ಜೊತೆಗೆ ಇನ್ನೂ ಹಲವಾರು ಕೆಲಸಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಆಧಾರ್ ಕಾರ್ಡ್ ನೋಂದಣಿ, ಜನಗಣತಿ, ಬಿಸಿಯೂಟ ಇವೇ ಮುಂತಾದ ಕೆಲಸಗಳ ಹೊಣೆಯನ್ನು ಸರಕಾರಿ ಶಾಲೆಗಳ ಶಿಕ್ಷಕರು ನಿಭಾಯಿಸಬೇಕಾಗಿದೆ. ಶಿಕ್ಷಕರನ್ನು ಮಕ್ಕಳಿಗೆ ಪಾಠ ಮಾಡಲು ಬಿಡಬೇಕು. ಶಿಕ್ಷಣೇತರ ಕಾರ್ಯಗಳಿಗೆ ಅವರನ್ನು ಬಳಸಿ ಕೊಳ್ಳುವುದು ಸರಿಯಲ್ಲ. ಶಿಕ್ಷಕರು ಶಿಕ್ಷಕರಾಗಿ ಕೆಲಸ ಮಾಡಲು ಬಿಡಬೇಕು. ಸರಕಾರಿ ಶಾಲೆಗಳ ಗುಣಮಟ್ಟ ಕುಸಿಯಲು ಇದೂ ಕಾರಣವಾಗಿದೆ ಎಂಬುದನ್ನು ಸರಕಾರ ಮರೆಯಬಾರದು.
ಸರಕಾರಿ ಶಾಲೆಗಳ ವಿದ್ಯಾಭ್ಯಾಸದ ಗುಣಮಟ್ಟ ಕುಸಿಯಲು ಇನ್ನೊಂದು ಕಾರಣವೆಂದರೆ ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆ. ಬಹುತೇಕ ಸರಕಾರಿ ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯವಿಲ್ಲ. ಈ ದುರವಸ್ಥೆಗಾಗಿ ರಾಜ್ಯ ಹೈಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಆದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಸೂಕ್ತ ಕ್ರಮವನ್ನು ಕೈಗೊಳ್ಳದೆ ತಮ್ಮ ಪಾಡಿಗೆ ತಾವಿದ್ದಾರೆ. ಸರಕಾರಿ ಕನ್ನಡ ಶಾಲೆಗಳನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಬೇಕೆಂದರೆ ಎಲ್ಲಕ್ಕಿಂತ ಮೊದಲು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಸರಕಾರ ಕ್ರಮ ಕೈಗೊಳ್ಳದಿರುವುದರಿಂದ ಕೆಲವು ಶಾಲೆಗಳಲ್ಲಿ ಶಿಕ್ಷಕರು, ಶಿಕ್ಷಕಿಯರು ತಮ್ಮ ಹಣದಿಂದಲೇ ಅಗತ್ಯ ಸೌಕರ್ಯಗಳನ್ನು ಒದಗಿಸಿದ ಉದಾಹರಣೆಗಳಿವೆ.
ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ತನ್ನ ಮೂಲಭೂತ ಕರ್ತವ್ಯವನ್ನು ಮಾಡದೇ ಸರಕಾರಿ ಶಾಲೆಗಳ ದತ್ತು ಯೋಜನೆಯನ್ನು ರೂಪಿಸಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೆ ಸರಕಾರಿ ಶಾಲೆಗಳನ್ನು ಕೊಟ್ಟು ಶಾಲೆಗಳ ಮುಖ್ಯ ಆಶಯಕ್ಕೆ ಅಪಚಾರ ಮಾಡಿದಂತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನ ಶಿಕ್ಷಣವನ್ನು ಮಕ್ಕಳಿಗೆ ನೀಡುವುದು ಸರಕಾರದ ಹೊಣೆಗಾರಿಕೆಯಾಗಿದೆ.ಇದನ್ನು ನಿಭಾಯಿಸಲಾಗದೆ ಖಾಸಗಿಯವರ ಮಡಿಲಿಗೆ ಸರಕಾರಿ ಶಾಲೆಗಳನ್ನು ಹಾಕುವುದು ಸರಿಯಲ್ಲ.
ರಾಜ್ಯದಲ್ಲಿ ಕನ್ನಡವನ್ನು ಉಳಿಸಿಕೊಳ್ಳಬೇಕೆಂದರೆ ಎಲ್ಲಕ್ಕಿಂತ ಮೊದಲು ಸರಕಾರಿ ಕನ್ನಡ ಶಾಲೆಗಳಿಗೆ ಆದ್ಯತೆಯನ್ನು ನೀಡಬೇಕು. ಪ್ರತಿವರ್ಷ 40ರಿಂದ 50 ಕೋಟಿ ಯಷ್ಟು ಬೊಕ್ಕಸದ ಹಣವನ್ನು ಕನ್ನಡದ ಹೆಸರಿನಲ್ಲಿ ನಡೆಯುವ ಸಮ್ಮೇಳನ, ಜಾತ್ರೆ, ಉತ್ಸವಗಳಿಗಾಗಿ ದುಂದುವೆಚ್ಚ ಮಾಡುವ ಬದಲಾಗಿ ಕನ್ನಡ ಶಾಲೆಗಳ ಸರ್ವಾಂಗೀಣ ಸಬಲೀಕರಣಕ್ಕಾಗಿ ಉಪಯೋಗಿಸಿಕೊಳ್ಳಬೇಕು.
ಈಗ ಮಳೆಗಾಲ ಆರಂಭವಾಗಿದೆ. ಬಹುತೇಕ ಸರಕಾರಿ ಕನ್ನಡ ಶಾಲೆಗಳು ಸುಸ್ಥಿತಿಯಲ್ಲಿ ಇಲ್ಲ. ಮಳೆ ನೀರು ಸೋರಿ ಅನೇಕ ಶಾಲೆಗಳಲ್ಲಿ ನೀರು ನಿಲ್ಲುತ್ತದೆ. ಇನ್ನು ಕೆಲವು ಶಾಲೆಗಳು ಸುರಕ್ಷಿತವಾಗಿಲ್ಲ. ಸುರಿಯುವ ಮಳೆಯಲ್ಲಿ ಕುಸಿದು ಬೀಳುವ ಸಂಭವವಿದೆ. ಇಂಥ ಶಾಲೆಗಳಲ್ಲಿ ಮಕ್ಕಳು ಕೈಯಲ್ಲಿ ಜೀವ ಹಿಡಿದುಕೊಂಡು ಪಾಠ ಕೇಳಬೇಕಾಗಿದೆ. ಹಾಗಾಗಿ ಸರಕಾರ ಇಂಥ ಶಾಲೆಗಳ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು.