Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಗಾಳಿ ಬೆಳಕು
  5. ಬಾಬಾ ಸಾಹೇಬರ ಕೊನೆಯ ದಿನಗಳು

ಬಾಬಾ ಸಾಹೇಬರ ಕೊನೆಯ ದಿನಗಳು

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್9 Dec 2024 1:01 PM IST
share
ಬಾಬಾ ಸಾಹೇಬರ ಕೊನೆಯ ದಿನಗಳು
‘ಯಾಕೆ ಮಹಾಭಾರತ, ರಾಮಾಯಣಗಳನ್ನೇ ಓದಲು ನನ್ನನ್ನು ಒತ್ತಾಯ ಮಾಡುತ್ತಿದ್ದಿರಿ? ಇವು ಬ್ರಾಹ್ಮಣರ, ಕ್ಷತ್ರಿಯರ ಹಿರಿಮೆಯನ್ನು ಒತ್ತಿ ಹೇಳುತ್ತವೆ; ಶೂದ್ರರ, ಅಸ್ಪಶ್ಯರ ಹೀನಸ್ಥಾನವನ್ನು ಪ್ರತಿಪಾದಿಸುತ್ತವೆ.’ ಅಪ್ಪನಿಗೆ ನನ್ನ ಮಾತಿನ ಧಾಟಿ ಇಷ್ಟವಾಗಲಿಲ್ಲ. ಆದರೂ ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಅಪ್ಪ ಮಾತಾಡಲಿಲ್ಲ. ಸುಮ್ಮನಿದ್ದರು. ‘ಮನೆಯಲ್ಲಿ ಒಂದು ದಂಗೆಯೆದ್ದಿದೆ ಎಂಬುದು ಅವರ ಅರಿವಿಗೆ ಬಂದಿತ್ತು...’

ಮೊನ್ನೆ ಡಿಸೆಂಬರ್ 6ರಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಿನಿಬ್ಬಾಣದ ದಿನ ಅವರ ಕೊನೆಯ ದಿನದ ವಿವರವನ್ನು ಅವರ ಪತ್ನಿ ಸವಿತಾ ಅಂಬೇಡ್ಕರ್ ಈಚೆಗೆ ಪ್ರಕಟಿಸಿದ ‘ಬಾಬಾಸಾಹೇಬ್: ಮೈ ಲೈಫ್ ವಿತ್ ಡಾ. ಅಂಬೇಡ್ಕರ್’ ಪುಸ್ತಕದಲ್ಲಿ ಹುಡುಕಿದೆ: 1956ರ ಡಿಸೆಂಬರ್ 6ರ ಬೆಳಗ್ಗೆ ಸವಿತಾ ಎಂದಿನಂತೆ ಚಹಾದ ಟ್ರೇ ಹಿಡಿದು ಬಾಬಾಸಾಹೇಬರ ಕೊಠಡಿಗೆ ಬಂದಾಗ ಅವರು ಕೊನೆಯುಸಿರೆಳೆದು ಕೆಲವು ಗಂಟೆಗಳಾಗಿದ್ದವು.

ಇದಕ್ಕೂ ಮೊದಲು ಅಂಬೇಡ್ಕರ್‌ಗೆ ತಮ್ಮ ಕೊನೆಯ ಸೂಚನೆಗಳು ಇದ್ದವೇನೋ ಎಂಬುದನ್ನು ಇನ್ನಿತರ ಪುಸ್ತಕಗಳ ವಿವರಗಳು ಹೇಳುತ್ತವೆ: ಡಿಸೆಂಬರ್ 3ರಂದು, ಕಾಯಿಲೆಯಾಗಿ ಮಲಗಿದ್ದ ತಮ್ಮ ಕೈತೋಟದ ಮಾಲಿಯ ಆರೋಗ್ಯ ವಿಚಾರಿಸಲು ಅಂಬೇಡ್ಕರ್ ತಮ್ಮ ಪ್ರಿಯ ಶಿಷ್ಯ ನಾನಕ್‌ಚಂದ್ ರತ್ತುವಿನ ಜೊತೆ ಆ ಮಾಲಿಯ ಮನೆಗೆ ಹೋಗಿದ್ದರು. ಸಾವಿನಂಚಿನಲ್ಲಿದ್ದ ಮಾಲಿಯ ಕಣ್ಣೀರು ಕಂಡ ಅಂಬೇಡ್ಕರ್ ರತ್ತುವಿಗೆ ಹೇಳಿದರು: ‘ನೋಡು, ಈ ಮನುಷ್ಯ ಸಾವಿನ ಕಲ್ಪನೆಯಿಂದ ಅಂಜಿಕೊಂಡಿದ್ದಾನೆ. ನನಗೆ ಸಾವಿನ ಭಯವೆಂಬುದಿಲ್ಲ. ಮರಣ ಯಾವಾಗಲಾದರೂ ಬರಲಿ, ನಾನು ಅದನ್ನು ಬರಮಾಡಿಕೊಳ್ಳಲು ಸಿದ್ಧನಿದ್ದೇನೆ.’

ಡಿಸೆಂಬರ್ 5ರ ಸಂಜೆ ಅಂಬೇಡ್ಕರ್ ಕೊಂಚ ಉದ್ವಿಗ್ನರಾಗಿದ್ದಂತೆ ರತ್ತುವಿಗೆ ಕಂಡಿತು. ರಾತ್ರಿ ಎಂಟು ಗಂಟೆಯ ಹೊತ್ತಿಗೆ ಜೈನ ಸಮಾಜದ ನಾಯಕರು ಬಂದು ‘ಜೈನ್ ಔರ್ ಬುದ್ಧ’ ಪುಸ್ತಕವನ್ನು ಅಂಬೇಡ್ಕರರಿಗೆ ಕೊಟ್ಟು, ಅವರನ್ನು ಜೈನಸಭೆಯೊಂದಕ್ಕೆ ಆಹ್ವಾನಿಸಿ ಹೊರಟರು. ನಂತರ ರತ್ತು ಅಂಬೇಡ್ಕರರ ದಣಿದ ಕಾಲುಗಳನ್ನು ಒತ್ತತೊಡಗಿದರು; ಚಣ ಬಿಟ್ಟು ಅವರ ತಲೆಗೆ ಎಣ್ಣೆ ಹಚ್ಚಿದರು. ಕೊಂಚ ಹಾಯೆನ್ನಿಸಿದಂತಾಗಿ, ಅಂಬೇಡ್ಕರ್ ಕಂಠದಿಂದ ಮೆಲುವಾಗಿ ಹೊರಟ ‘ಬುದ್ಧಂ ಶರಣಂ ಗಚ್ಛಾಮಿ’ ಪ್ರಾರ್ಥನೆ ಬರಬರುತ್ತಾ ಗಟ್ಟಿಯಾಗಿ ಕೇಳತೊಡಗಿತು. ಅವರ ಬಲಗೈ ಬೆರಳುಗಳು ಸೋಫಾದ ಮೇಲೆ ತಾಳ ಹಾಕುತ್ತಿದ್ದವು. ಅವರ ಇಚ್ಛೆಯಂತೆ ರತ್ತು ರೇಡಿಯೊಗ್ರಾಂನಲ್ಲಿ ‘ಬುದ್ಧಂ ಶರಣಂ ಗಚ್ಛಾಮಿ’ ಪ್ರಾರ್ಥನೆ ಹಾಕಿದರು. ಅಂಬೇಡ್ಕರ್ ಪ್ರಾರ್ಥನೆಗೆ ದನಿಗೂಡಿಸಿದರು. ಮೇಲೆದ್ದ ಅಂಬೇಡ್ಕರ್ ಕಪಾಟುಗಳಿಂದ ಹಲವು ಪುಸ್ತಕಗಳನ್ನು ತೆಗೆದುಕೊಂಡು, ಅವನ್ನು ಹಾಸಿಗೆಯ ಬಳಿಯ ಮೇಜಿನ ಮೇಲಿಡಲು ರತ್ತುವಿಗೆ ಹೇಳಿದರು. ಸ್ವಲ್ಪ ಊಟ ಮಾಡಿ, ಕೋಲೂರಿಕೊಂಡು ಮೇಲೆದ್ದ ಅಂಬೇಡ್ಕರ್ ಬಾಯಿಂದ ‘ಚಲ್ ಕಬೀರ್ ತೇರ ಭವಸಾಗರ್ ಡೇರಾ’ ಎಂಬ ಕವಿ ಕಬೀರರ ಸಾಲು ತೇಲಿ ಬರುತ್ತಿತ್ತು. ‘ನಡೆ ಕಬೀರಾ ನಿನ್ನ ಭವಸಾಗರವು ಡೇರೆಯಂತೆ’ ಎಂದು ಜೀವನಪಯಣದ ತಾತ್ಕಾಲಿಕತೆಯನ್ನು ಸೂಚಿಸುವ ಈ ಪದವನ್ನು ಗುಣುಗುಣಿಸುತ್ತಾ ಅವರ ಕಣ್ಣು ದಣಿವಿನಿಂದ ಮುಚ್ಚಿಕೊಳ್ಳತೊಡಗಿದ್ದವು. ಹೊರಡುವ ಮುನ್ನ ಅವರ ಗಮನ ಸೆಳೆಯಲು ರತ್ತು ಟೇಬಲ್ ಮೇಲಿದ್ದ ಪುಸ್ತಕಗಳನ್ನು ಸರಿಸಿದಾಗ ಅಂಬೇಡ್ಕರ್ ಕಣ್ತೆರೆದರು. ರಾತ್ರಿ 12 ಗಂಟೆಗೆ ತನ್ನ ಮನೆಗೆ ಹೊರಡಲು ರತ್ತು ಸೈಕಲೇರಿ ಗೇಟು ದಾಟುವಷ್ಟರಲ್ಲಿ ಅಡಿಗೆಯ ಸುದಾಮ ರತ್ತುವನ್ನು ಕರೆಯಲು ಓಡೋಡಿ ಬಂದ.

ಮತ್ತೆ ಒಳಬಂದ ರತ್ತುವಿಗೆ ಅಂಬೇಡ್ಕರ್ ತಾವು ಬರೆದಿಟ್ಟಿದ್ದ ‘ಬುದ್ಧ ಆ್ಯಂಡ್ ಹಿಸ್ ದಮ್ಮ’ ಪುಸ್ತಕದ ಮುನ್ನುಡಿ ಹಾಗೂ ಪ್ರಸ್ತಾವಗಳ ಟೈಪಾದ ಹಾಳೆಗಳನ್ನು, ಪತ್ರಗಳನ್ನು ತರಲು ಹೇಳಿದರು. ಅಡುಗೆಯ ಸುದಾಮ ಎಂದಿನಂತೆ ಕಾಫಿ ಫ್ಲಾಸ್ಕ್ ಹಾಗೂ ಸಿಹಿತಿಂಡಿಗಳನ್ನು ತಂದು ಹಾಸಿಗೆಯ ಬದಿಯಲ್ಲಿಟ್ಟ. ಅಂಬೇಡ್ಕರ್ ರತ್ತು ತಂದಿತ್ತ ಹಾಳೆಗಳು, ಪತ್ರಗಳನ್ನು ನೋಡುತ್ತಾ, ‘ಈಗ ಹೊರಡು. ಬೆಳಗ್ಗೆ ಬಂದು ಇವನ್ನೆಲ್ಲ ತಪ್ಪದೆ ಕಳಿಸಬೇಕು. ಇವನ್ನೆಲ್ಲ ರಾತ್ರಿಯೇ ಓದಿ ಮುಗಿಸುತ್ತೇನೆ’ ಎಂದರು. ಇದು ರತ್ತುವಿನ ಕಿವಿಗೆ ಬಿದ್ದ ಅಂಬೇಡ್ಕರ್ ಅವರ ಕೊನೆಯ ಮಾತು. ಆದರೆ ಆ ರಾತ್ರಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮನೆಯಿಂದ ಹೊರಟ ನಾನಕ್ ಚಂದ್ ರತ್ತುವಿಗೆ ಬಾಬಾಸಾಹೇಬರ ಸಾವಿನ ಸೂಚನೆಗಳೇನೂ ಕಂಡಿರಲಿಲ್ಲ.

ಈ ವಿವರಗಳೆಲ್ಲ ರತ್ತು ಅವರ ‘ಲಾಸ್ಟ್ ಡೇಸ್ ಆಫ್ ಅಂಬೇಡ್ಕರ್’ ಪುಸ್ತಕದಲ್ಲಿವೆ. ಆ ರಾತ್ರಿ ಅಂಬೇಡ್ಕರ್ ತಮ್ಮ ಕೊನೆಯ ಮಹತ್ವದ ಕರ್ತವ್ಯವೊಂದನ್ನು ಮುಗಿಸಹೊರಟವರಂತೆ ‘ಬುದ್ಧ ಆ್ಯಂಡ್ ಹಿಸ್ ದಮ್ಮ’ ಪುಸ್ತಕಕ್ಕೆ ತಾವು ಬರೆದ ಮುನ್ನುಡಿ ಹಾಗೂ ಪ್ರಸ್ತಾವ ಎರಡರ ಮೇಲೂ ಕಣ್ಣಾಡಿಸಿರಬಹುದು, ತಿದ್ದಿರಬಹುದು. ಪುಸ್ತಕದ ಪ್ರಸ್ತಾವ ಒಂದು ರೀತಿಯಲ್ಲಿ ಮುಗಿದಂತಿದೆ. ಆದರೆ ಅವರ ಅಪೂರ್ಣ ಮುನ್ನುಡಿ ಮಾತ್ರ ಮುಂದೆ ಎಷ್ಟೋ ವರ್ಷಗಳವರೆಗೂ ಅಚ್ಚಾಗಿರಲಿಲ್ಲ. ಆ ಮುನ್ನುಡಿಯ ಕೆಲವು ಮಾತುಗಳಿವು:

‘ನೀವು ಯಾಕೆ ಬೌದ್ಧಧರ್ಮದತ್ತ ವಾಲಿದ್ದೀರಿ?’ ಎಂದು ಜನ ಆಗಾಗ ನನ್ನನ್ನು ಕೇಳುತ್ತಾರೆ. ಇದಕ್ಕೆ ನನ್ನ ನೇರ ಉತ್ತರ: ‘ನನ್ನ ಪ್ರಕಾರ ಬುದ್ಧನ ದಮ್ಮ ಶ್ರೇಷ್ಠ ಧರ್ಮ. ಬೇರಾವ ಧರ್ಮವನ್ನೂ ಈ ದಮ್ಮಕ್ಕೆ ಹೋಲಿಸಲಾಗದು. ವಿಜ್ಞಾನವನ್ನು ಬಲ್ಲ ಯಾವುದೇ ಮನುಷ್ಯನಿಗೆ ದರ್ಮ ಬೇಕೆನ್ನಿಸಿದರೆ, ಅವನು ಆರಿಸಿಕೊಳ್ಳಲು ಬಯಸುವುದು ಬೌದ್ಧ ಧರ್ಮವನ್ನು ಮಾತ್ರ. ಕಳೆದ 35 ವರ್ಷಗಳಲ್ಲಿ ಎಲ್ಲ ಧರ್ಮಗಳನ್ನೂ ಅಧ್ಯಯನ ಮಾಡಿದ ಮೇಲೆ, ಈ ನಂಬಿಕೆ ಇನ್ನಷ್ಟು ಗಟ್ಟಿಯಾಗಿದೆ. ನನಗೆ ಬುದ್ಧಿಸಂ ಕುರಿತ ಪ್ರೇರಣೆ ಎಲ್ಲಿಂದ ಬಂತು ಎನ್ನುವುದನ್ನು ಹೇಳಹೊರಟರೆ ಅದೇ ಒಂದು ಕತೆಯಾಗುತ್ತದೆ. ಅದು ಆದದ್ದು ಹೀಗೆ. ನಾನು ಇಂಗ್ಲಿಷ್ ಫೋರ್ತ್ ಸ್ಟ್ಯಾಂಡರ್ಡ್ ಪಾಸಾದಾಗ ನಮ್ಮ ಸಮುದಾಯದವರು ನನ್ನನ್ನು ಅಭಿನಂದಿಸಲು ಒಂದು ಸಭೆ ಏರ್ಪಡಿಸಲು ಹೊರಟಿದ್ದರು. ಈ ಹಂತಕ್ಕೆ ಏರಿದ ಸಮುದಾಯದ ಮೊದಲ ಹುಡುಗ ನಾನೆಂದು ಅವರಿಗೆಲ್ಲ ಹೆಮ್ಮೆ. ನಮ್ಮಪ್ಪ ಅದೆಲ್ಲ ಬೇಡವೆಂದರು. ಆಗ ನಮ್ಮ ಜನ ಆ ಕಾಲದ ದೊಡ್ಡ ಲೇಖಕರಾದ ಕೇಳುಸ್ಕರ್ ಅವರಿಂದ ಅಪ್ಪನಿಗೆ ಹೇಳಿಸಿದರು. ಕೇಳುಸ್ಕರ್ ಅವರೇ ಆ ಸಭೆಗೆ ಬಂದರು. ತಾವು ಬರೆದ ‘ಲೈಫ್ ಆಫ್ ಗೌತಮ ಬುದ್ಧ’ ಎಂಬ ಹೊಸ ಪುಸ್ತಕವನ್ನು ನನಗೆ ಕೊಟ್ಟರು. ಆ ಪುಸ್ತಕವನ್ನು ಅಪಾರ ಆಸಕ್ತಿಯಿಂದ ಓದಿದೆ; ಭಾವುಕನಾದೆ, ಪ್ರಭಾವಿತನಾದೆ...

‘...ನಮ್ಮಪ್ಪ ಯಾಕೆ ನಮಗೆ ಬೌದ್ಧಸಾಹಿತ್ಯದ ಪರಿಚಯ ಮಾಡಲಿಲ್ಲ ಎಂಬ ಪ್ರಶ್ನೆ ಆಗ ನನ್ನಲ್ಲಿ ಹುಟ್ಟಿತು. ಕೊನೆಗೆ ಅಪ್ಪನಿಗೆ ಹೇಳಿಯೇಬಿಟ್ಟೆ: ‘ಯಾಕೆ ಮಹಾಭಾರತ, ರಾಮಾಯಣಗಳನ್ನೇ ಓದಲು ನನ್ನನ್ನು ಒತ್ತಾಯ ಮಾಡುತ್ತಿದ್ದಿರಿ? ಇವು ಬ್ರಾಹ್ಮಣರ, ಕ್ಷತ್ರಿಯರ ಹಿರಿಮೆಯನ್ನು ಒತ್ತಿ ಹೇಳುತ್ತವೆ; ಶೂದ್ರರ, ಅಸ್ಪಶ್ಯರ ಹೀನಸ್ಥಾನವನ್ನು ಪ್ರತಿಪಾದಿಸುತ್ತವೆ.’ ಅಪ್ಪನಿಗೆ ನನ್ನ ಮಾತಿನ ಧಾಟಿ ಇಷ್ಟವಾಗಲಿಲ್ಲ. ಆದರೂ ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಅಪ್ಪ ಮಾತಾಡಲಿಲ್ಲ. ಸುಮ್ಮನಿದ್ದರು. ‘ಮನೆಯಲ್ಲಿ ಒಂದು ದಂಗೆಯೆದ್ದಿದೆ ಎಂಬುದು ಅವರ ಅರಿವಿಗೆ ಬಂದಿತ್ತು...’

‘ನಾನು ಬುದ್ಧನೆಡೆಗೆ ತಿರುಗಿದ್ದು ಹೀಗೆ; ದಾದಾ ಕೇಳುಸ್ಕರ್ ಅವರ ಪುಸ್ತಕದ ಮೂಲಕ. ಅಂದರೆ, ನಾನು ಖಾಲಿ ತಲೆಯಲ್ಲಿ ಬುದ್ಧನೆಡೆಗೆ ತಿರುಗಲಿಲ್ಲ. ಅದಕ್ಕೊಂದು ಹಿನ್ನೆಲೆಯಿತ್ತು. ಬುದ್ಧನ ಸಾಹಿತ್ಯವನ್ನು ಓದುತ್ತಾ, ಇತರ ಧರ್ಮಗಳಿಗೂ ಇದಕ್ಕೂ ಇರುವ ಹೋಲಿಕೆ, ವ್ಯತ್ಯಾಸಗಳನ್ನು ಗಮನಿಸಿದೆ. ಬುದ್ಧ ಮತ್ತು ಅವನ ದಮ್ಮದ ಬಗೆಗಿನ ನನ್ನ ಆಸಕ್ತಿಯ ಮೂಲ ಇದು. ‘ಬುದ್ಧ ಆ್ಯಂಡ್ ಹಿಸ್ ದಮ್ಮ’ ಪುಸ್ತಕ ಬರೆಯಲು ಶುರು ಮಾಡಿದ ಕಾಲಕ್ಕೆ ನನ್ನ ಆರೋಗ್ಯ ಕೆಡತೊಡಗಿತ್ತು; ಸ್ಥಿತಿ ಈಗಲೂ ಹಾಗೇ ಇದೆ. ಕಳೆದ ಐದು ವಷರ್ಗಳಲ್ಲಿ ನನ್ನ ಆರೋಗ್ಯ ಹಲವು ಏರಿಳಿತಗಳನ್ನು ಕಂಡಿದೆ. ಎಷ್ಟೋ ಸಲ ನನ್ನ ಆರೋಗ್ಯ ಎಷ್ಟು ಹದಗೆಟ್ಟಿತೆಂದರೆ, ವೈದ್ಯರು ನನ್ನನ್ನು ‘ನಂದಿಹೋಗುತ್ತಿರುವ ಜ್ವಾಲೆ’ ಎಂದಿದ್ದೂ ಇದೆ. ಆದರೆ ನಂದಿಹೋಗುತ್ತಿರುವ ಜ್ವಾಲೆಗೆ ಮತ್ತೆ ಜೀವ ತುಂಬಿದ್ದು ನನ್ನ ಪತ್ನಿ ಮತ್ತು ಡಾ. ಮಲ್ವಂಕರ್ ಅವರ ವೈದ್ಯಕೀಯ ಕೌಶಲ್ಯ. ಈ ಪುಸ್ತಕವನ್ನು ಮುಗಿಸಲು ನೆರವಾದವರು ಅವರಿಬ್ಬರೇ.’

ಅಂಬೇಡ್ಕರ್ ತಮ್ಮ ಕೊನೆಯ ರಾತ್ರಿ ಕಣ್ಣಾಡಿಸಿರಬಹುದಾದ ಈ ಮುನ್ನುಡಿಯ ಜೊತೆಗೇ ಈ ಪುಸ್ತಕದ ಪ್ರಸ್ತಾವವೂ ಇತ್ತು. ಅವರು ಈ ಪ್ರಸ್ತಾವದಲ್ಲಿ ಬೌದ್ಧ ಧರ್ಮವನ್ನು ಆರ್ಯರ ಸುಳ್ಳುಗಳಿಂದ ಬಿಡಿಸುವ ತಮ್ಮ ಬೌದ್ಧಿಕ ಪ್ರಯತ್ನ ಕುರಿತು ಹೇಳುತ್ತಾ ಕೊನೆಗೆ ಬರೆಯುತ್ತಾರೆ: ‘ನಾನು ಈ ಪುಸ್ತಕದಲ್ಲಿ ಎತ್ತಿರುವ ಪ್ರಶ್ನೆಗಳು ಓದುಗರನ್ನು ಪ್ರಶ್ನೆಗಳಿಗೆ ಪರಿಹಾರ ಹುಡುಕುವಂತೆ ಉತ್ತೇಜಿಸುತ್ತವೆಂದು ನಿರೀಕ್ಷಿಸುವೆ.’

ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೊನೆಯ ರಾತ್ರಿ ಕಣ್ಣಾಡಿಸಿದ ಪುಟಗಳ ಮುನ್ನುಡಿಯಲ್ಲಿರುವ ನಿರೀಕ್ಷೆ ಒಂದರ್ಥದಲ್ಲಿ ಸಫಲವಾಗಿದೆ. ‘ಬುದ್ಧ ಆ್ಯಂಡ್ ಹಿಸ್ ದಮ್ಮ’ ಪುಸ್ತಕ ಇಂಡಿಯಾದಲ್ಲಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಲಕ್ಷಾಂತರ ಓದುಗರು ಈ

ಪ್ರಶ್ನೆಗಳಿಗೆ ಪರಿಹಾರ ಹುಡುಕುವಂತೆ ಪ್ರೇರೇಪಿಸಿದೆ. ಕೊನೆಯ ರಾತ್ರಿಯವರೆಗೂ ಪ್ರಖರವಾಗಿದ್ದ ಅವರ ಕರ್ತವ್ಯ ಪ್ರಜ್ಞೆ ಹಾಗೂ ಬದ್ಧತೆ ನಮ್ಮನ್ನು ಸದಾ ನಿದ್ದೆಯಿಂದ ಏಳಿಸುತ್ತಿರಲಿ!.

share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X