ಗದಗ: ಜು.27ಕ್ಕೆ ಥರ್ಡ್ ಐ ಕಲೆಯ ಕುರಿತು ಉಚಿತ ಪ್ರದರ್ಶನ ಶಿಬಿರ

ಗದಗ: ನೆಲದನುಡಿ ಟ್ರಸ್ಟ್ ಆಶ್ರಯದಲ್ಲಿ ಸಾಕ್ರೇಡ್ ಎನಲೈಟ್ ಅಕಾಡೆಮಿಯಿಂದ ಮೂರನೇ ಕಣ್ಣಿನ ಕಲೆ ಕುರಿತು ಆರನೇಯ ಇಂದ್ರಿಯದ ಬಗ್ಗೆ 5ರಿಂದ 16 ವರ್ಷದ ವಯಸ್ಸಿನವರಿಗೆ ನಗರದಲ್ಲಿ ಉಚಿತ ಡೆಮೊ(ಪ್ರದರ್ಶನ) ಶಿಬಿರವನ್ನು ಜು.27ರಂದು ಏರ್ಪಡಿಸಲಾಗುತ್ತಿದೆ ಎಂದು ಋಷಿಕೇಶ ಗುರುಕುಲಂ ಟ್ರಸ್ಟ್ ಅಧ್ಯಕ್ಷ ಸುರೇಶ್ ಕುಮಾರ ಗುರೂಜಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಮಕ್ಕಳಿಗೆ ಕಣ್ಣು ಮುಚ್ಚಿಸಿ ಕಣ್ಣಿನ ಮೇಲೆ ಪಟ್ಟಿ ಕಟ್ಟಿದಾಗಲೂ 6ನೇ ಇಂದ್ರಿಯ, ಥರ್ಡ್ ಐ (ಚಿತ್ತ) ಸಂಯಮ ಶಕ್ತಿಯಿಂದ ಬಣ್ಣ, ವಸ್ತುಗಳನ್ನು, ಉಡುಗೆ-ತೊಡುಗೆಗಳನ್ನು ಗುರುತಿಸುವ, ಓಡುವ, ಓದುವ, ಆಟ ಆಡುವ, ಬರೆಯುವ, ಬಣ್ಣ ಹಾಕುವ, ಚಿತ್ರ ಬಿಡಿಸುವ ಇತ್ಯಾದಿ ಚಟುವಟಿಕೆಗಳನ್ನು ಮಾಡಿ ಧನಾತ್ಮಕ ಸ್ಫೂರ್ತಿಯನ್ನು ಈ ವಿದ್ಯೆಯಿಂದ ಪಡೆದುಕೊಳ್ಳುತ್ತಾರೆ. 5ರಿಂದ 16 ವರ್ಷದ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಈ ಕಾರ್ಯಕ್ರಮ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿದೆ. ಅವರ ಮೂರನೇ ಕಣ್ಣನ್ನು ಸಕ್ರಿಯಗೊಳಿಸಿ, ವಿಶೇಷ ಸಾಧನೆ ಹಾಗೂ ಮಾನಸಿಕ ಜಾಗೃತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಮಗುವಿನ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಈ ವಿದ್ಯೆ ಹಚ್ಚು ಪ್ರಯೋಜನಕಾರಿಎಂದರು.
ನೆಲದನುಡಿ ಟ್ರಸ್ಟ್ ಅಧ್ಯಕ್ಷೆ ರಝಿಯಾ ಬೇಗಂ ಮಕಾನದಾರ ಮಾತನಾಡಿ, ಈ ವಿದ್ಯೆ ಮಕ್ಕಳಲ್ಲಿ ಗ್ರಹಿಸುವ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಮಗುವಿನಲ್ಲಿ ದಿವ್ಯದೃಷ್ಟಿ ಜಾಗೃತಗೊಳ್ಳುತ್ತದೆ. ಎಲ್ಲಾ ತರಹದ ಶೈಕ್ಷಣಿಕ ಬುದ್ಧಿವಂತಿಕೆ ಚುರುಕುಗೊಳ್ಳುತ್ತದೆ. ಅತೀಯಾದ ಮೊಬೈಲ್ ಹಾಗೂ ಟಿವಿ ಬಳಕೆಯನ್ನು ನಿಯಂತ್ರಿಸಬಹುದು. ಮಗುವಿನ ಸುಪ್ತ ಶಕ್ತಿಯ ಸಾಮರ್ಥ್ಯ ಪಾಲಕರ ಗಮನಕ್ಕೂ ಬರುತ್ತದೆ. ಮಕ್ಕಳು ಹೊಸ ಚೈತನ್ಯ, ಉಲ್ಲಾಸ ಹೊಂದುವರು. ಮಕ್ಕಳಲ್ಲಿ ಲವಲವಿಕೆಯ ಚಟುವಟಿಕೆ ಉಂಟಾಗಿ ಸೋಮಾರಿತನ, ಹಠಮಾರಿತನ, ಒರಟುತನ ಕಡಿಮೆಯಾಗುತ್ತದೆ. ಮಕ್ಕಳಲ್ಲಿ ಆಸಕ್ತಿ, ಏಕಾಗ್ರತೆ, ನೆನಪಿನ ಶಕ್ತಿ ಬೆಳೆಯುತ್ತದೆ.
ಈ ಭಾಗದ ಮಕ್ಕಳಿಗೆ ಇದರ ಉಪಯೋಗ ಲಭಿಸಬೇಕು ಎನ್ನುವ ಕಾರಣಕ್ಕೆ ಈ ಬಗೆಗಿನ ಜಾಗೃತಿಗಾಗಿ ಜು.27ರಂದು ಡೆಮೊ ಕ್ಲಾಸ್ ಆಯೋಜಿಸಲಾಗಿದೆ ಎಂದರು.
ಈ ಡೆಮೊ ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ಮುಂಚಿತವಾಗಿ ಹೆಸರು ನೋಂದಾಯಿಸಬೇಕು. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ರಝಿಯಾ ಬೇಗಂ ಮಕಾನದಾರ, ಅಧ್ಯಕ್ಷರು ನೆಲದನುಡಿ ಟ್ರಸ್ಟ್, ಮೊ.9141102826 ಇವರನ್ನು ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿಯೋಗಸಾಧಕಿ ರಾಧಾ ಮಾತಾಜಿ, ಶಿಬಿರ ಸಂಚಾಲಕ ಮಾ ವಜ್ರೇಶ್ವರಿ ಫೌಂಡೇಶನ್ ಅಧ್ಯಕ್ಷೆ ಡಾ.ಸುವರ್ಣಾ ನಿಡಗುಂದಿ, ಪತ್ರಕರ್ತ ವೆಂಕಟೇಶ್ ಇಮರಾಪೂರ, ತೋಟಯ್ಯ ಗುಡ್ಡಿಮಠ, ಅಲ್ತಾಫ್ ಲಕ್ಷ್ಮೇಶ್ವರ ಇದ್ದರು.