Fact Check: ಶಾಲೆಗಳ ಅಭಿವೃದ್ಧಿಗೆ ನೀಡಿರುವ ಅನುದಾನವನ್ನು ಉರ್ದು ಭಾಷೆಗೆ ನೀಡಿರುವುದಾಗಿ ಬಿಜೆಪಿ ಅಪಪ್ರಚಾರ

ಸರಕಾರಿ ಉರ್ದು ಶಾಲೆ ಗಂಗೊಳ್ಳಿ, ಕುಂದಾಪುರ (ಸಾಂದರ್ಭಿಕ ಚಿತ್ರ)
ಬೆಂಗಳೂರು, ಮೇ 26: ರಾಜ್ಯದಲ್ಲಿ ಅತ್ಯಂತ ದುಸ್ಥಿತಿಯಲ್ಲಿರುವ 100 ಸರಕಾರಿ ಉರ್ದು ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಒದಗಿಸಿರುವ ಅನುದಾನವನ್ನು ಉರ್ದು ಭಾಷೆಯ ಅಭಿವೃದ್ಧಿಗಾಗಿ ನೀಡಲಾಗಿದೆ ಎಂದು ಬಿಂಬಿಸುವಂತೆ ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ ನಡೆಸಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ರಾಜ್ಯದಲ್ಲಿ ಬಹುಪಾಲು ಸರಕಾರಿ ಉರ್ದು ಶಾಲೆಗಳ ಕಟ್ಟಡಗಳ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಅಲ್ಲಿನ ಮೂಲಸೌಕರ್ಯಗಳನ್ನು ಉತ್ತಮಗೊಳಿಸಿ, ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸರಕಾರ 100 ಕೋಟಿ ರೂ. ಅನುದಾನ ಒದಗಿಸಿದೆ. ಆದರೆ, ರಾಜ್ಯ ಬಿಜೆಪಿಯು ಕನ್ನಡ ಭಾಷೆಗೆ ಕೇವಲ 32 ಕೋಟಿ ರೂ., ಉರ್ದು ಭಾಷೆಗೆ 100 ಕೋಟಿ ರೂ.ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒದಗಿಸಿದ್ದಾರೆ ಎಂದು ಆರೋಪಿಸಿದೆ.
ಇದಲ್ಲದೇ, ಕೊಂಕಣಿ ಭಾಷೆಗೆ 45 ಲಕ್ಷ ರೂ., ಕೊಡವ ಭಾಷೆಗೆ 45 ಲಕ್ಷ ರೂ., ಬ್ಯಾರಿ ಭಾಷೆಗೆ 45 ಲಕ್ಷ ರೂ. ಹಾಗೂ ಅರೆಭಾಷೆಗೆ 45 ಲಕ್ಷ ರೂ.ಗಳನ್ನು ನೀಡಲಾಗಿದೆ. ಒಟ್ಟು ಈ ಎಲ್ಲ ಭಾಷೆಗಳಿಗೆ ಒದಗಿಸಿರುವುದು 2.7 ಕೋಟಿ ರೂ. ಆದರೆ, ಉರ್ದು ಭಾಷೆಗೆ ಮಾತ್ರ 100 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಒದಗಿಸಿದ್ದಾರೆ ಎಂದು ಬಿಜೆಪಿ ತನ್ನ ಪೋಸ್ಟ್ನಲ್ಲಿ ದೂರಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿದ್ದ ಉರ್ದು ಅಕಾಡಮಿಯನ್ನು ಈ ಹಿಂದೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬೇರ್ಪಡಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರ್ಪಡೆ ಮಾಡಲಾಗಿತ್ತು. ಅಂದಿನಿಂದಲೂ ಉರ್ದು ಅಕಾಡಮಿಗೆ ರಾಜ್ಯ ಬಜೆಟ್ನಲ್ಲಿ ಒದಗಿಸುತ್ತಿರುವ ಅನುದಾನವು 1 ರಿಂದ 2 ಕೋಟಿ ರೂ.ಗಳಿಗೆ ಸೀಮಿತವಾಗಿದೆ. ಪ್ರಸಕ್ತ ಸಾಲಿನ ಬಜೆಟ್ನಲ್ಲಿಯೂ ಉರ್ದು ಅಕಾಡಮಿಗೆ ಒದಗಿಸಿರುವ ಅನುದಾನ 1.50 ಕೋಟಿ ರೂ. ಮಾತ್ರ.
ಬಿಜೆಪಿಯ ಪೋಸ್ಟ್ನಲ್ಲಿ ಏನಿದೆ?
‘ಉರ್ದು ಪ್ರಿಯ ಸಿದ್ದರಾಮಯ್ಯನವರಿಂದ ಕನ್ನಡಿಗರಿಗೆ ಮತ್ತೊಂದು ಮಹಾ ದ್ರೋಹ. ಉರ್ದು ಭಾಷೆಯ ಅಭಿವೃದ್ಧಿಗೆ 100 ಕೋಟಿ ರೂ.ಮೀಸಲು, ಕನ್ನಡ ಭಾಷೆಗೆ ಕೇವಲ 32 ಕೋಟಿ ರೂ.ಗಳು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಕನ್ನಡ ಭಾಷೆಯ ಮೇಲೆ ಏಕಿಷ್ಟು ಅಸಡ್ಡೆ. ತುಳು, ಕೊಂಕಣಿ, ಕೊಡವ ಹಾಗೂ ಅರೆಭಾಷೆ ನಮ್ಮ ಕರ್ನಾಟಕದ ಭಾಷೆಗಳಲ್ಲವೇ?’ ಎಂದು ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಉರ್ದು ಭಾಷೆಯ ಅಭಿವೃದ್ಧಿಗಾಗಿ ನೀಡಿರುವ ಅನುದಾನ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ರಾಜ್ಯದಲ್ಲಿ ಅತ್ಯಂತ ದುಸ್ಥಿತಿಯಲ್ಲಿರುವ 100 ಉರ್ದು ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಸರಕಾರ ಅನುದಾನ ನೀಡಿದೆ.
-ಜಿಲಾನಿ ಮೊಕಾಶಿ, ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕ
ಉರ್ದು ಅಕಾಡಮಿಯು ಕೇವಲ ಉರ್ದು ಭಾಷೆಗೆ ಸೀಮಿತವಾಗಿಲ್ಲ. ಕನ್ನಡ ಭಾಷೆಯಲ್ಲಿ ಪ್ರಕಟವಾಗುವ ಹಲವು ಸಾಹಿತ್ಯ ಪ್ರಕಾರಗಳನ್ನು ಉರ್ದು ಭಾಷೆಗೆ ಭಾಷಾಂತರಗೊಳಿಸುವ ಕೆಲಸವನ್ನು ಮಾಡುತ್ತಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಕೊಡುಗೆ ನೀಡಿರುವ ಉರ್ದು ಭಾಷೆಯ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕು. ಬಿಜೆಪಿಯ ಐಟಿ ಸೆಲ್ನವರು ಭಾಷೆಯನ್ನು ಮುಂದಿಟ್ಟುಕೊಂಡು ತಪ್ಪು ಸಂದೇಶಗಳನ್ನು ಹಂಚುವ ಮೂಲಕ ಸಮಾಜದ ಸ್ವಾಸ್ಥ್ಯ ಕದಡುವುದು ಬೇಡ. ಈ ತಪ್ಪು ಮಾಹಿತಿ ಹಂಚಿಕೆಯಾಗುತ್ತಿರುವ ಬಗ್ಗೆ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ಪಷ್ಟೀಕರಣ ನೀಡಬೇಕು.
-ಶಾಹಿದ್ ಖಾಝಿ, ರಾಜ್ಯ ಉರ್ದು ಅಕಾಡಮಿ ಸದಸ್ಯ