ಮಣಿಪುರದ ಸಿಂಧೂರ ರಕ್ಷಣೆಗೆ ಬೇಡವೆ ಸರ್ವಪಕ್ಷ ನಿಯೋಗ?

PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಬೆನ್ನಿಗೇ ಕೇಂದ್ರ ಸರಕಾರ ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಜಾಗೃತಿಗೆ ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕ ಅಭಿಯಾನವೊಂದನ್ನು ಹಮ್ಮಿಕೊಂಡಿದೆ. ಈ ಮೂಲಕ ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಜಾಗತಿಕವಾಗಿ ಅಭಿಪ್ರಾಯ ರೂಪಿಸುವಲ್ಲಿ ಭಾರತ ವಿಫಲವಾಗಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಪಾಕಿಸ್ತಾನದ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತಕ್ಕೆ ಯಾವುದೇ ದೇಶಗಳು ನೈತಿಕ ಬೆಂಬಲವನ್ನು ಘೋಷಿಸದಿರುವುದು ಬಹುದೊಡ್ಡ ಹಿನ್ನಡೆಯಾಗಿದೆ ಎನ್ನುವುದನ್ನು ಇದು ಹೇಳುತ್ತದೆ. ಪಾಕಿಸ್ತಾನವನ್ನು ಟರ್ಕಿ ಬಹಿರಂಗವಾಗಿ ಬೆಂಬಲಿಸಿತ್ತು ಮಾತ್ರವಲ್ಲ ಚೀನಾ ಪಾಕ್ ಪರವಾಗಿ ತನ್ನ ಹೇಳಿಕೆಯನ್ನು ನೀಡಿತ್ತು. ಇದೇ ಸಂದರ್ಭದಲ್ಲಿ ಭಾರತದ ಪರವಾಗಿ ರಶ್ಯ, ಅಮೆರಿಕದಂತಹ ಬಲಿಷ್ಟ ದೇಶಗಳು ಮೌನ ಪಾಲಿಸಿದ್ದವು. ಕಾರ್ಯಾಚರಣೆ ನಿರ್ಣಾಯಕ ಹಂತವನ್ನು ತಲುಪಬೇಕು ಎನ್ನುವಾಗ ಅಮೆರಿಕ ವ್ಯಾಪಾರದ ಹೆಸರಿನಲ್ಲಿ ಒತ್ತಡಗಳನ್ನು ಹಾಕಿ ‘ಕದನ ವಿರಾಮ’ ಘೋಷಿಸುವಂತೆ ಮಾಡಿತು. ಇದೇ ಹೊತ್ತಿಗೆ ಐಎಂಎಫ್ನಿಂದ ಪಾಕಿಸ್ತಾನಕ್ಕೆ ನಿರಾತಂಕವಾಗಿ ಸಾಲ ಮಂಜೂರಾಗಿತ್ತು. ಉಗ್ರವಾದ, ಭಯೋತ್ಪಾದನೆಯ ಜೊತೆಗೆ ಪಾಕಿಸ್ತಾನದ ಸಂಬಂಧ ಜಗತ್ತಿಗೆ ಹೊಸತೇನೂ ಅಲ್ಲ. ಭಯೋತ್ಪಾದನೆಯ ವಿರುದ್ಧ ಜಗತ್ತು ಸಂಘಟಿತ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಭಾರತ ಮಾತನಾಡುವಾಗ ಜಗತ್ತು ಯಾಕೆ ನಮ್ಮೊಂದಿಗೆ ನಿಲ್ಲುತ್ತಿಲ್ಲ? ಎನ್ನುವುದರ ಆತ್ಮವಿಮರ್ಶೆಗೆ ಇದು ಸರಿಯಾದ ಸಮಯವಾಗಿದೆ. ಭಾರತ ತನ್ನ ವಿದೇಶಾಂಗ ನೀತಿಯಲ್ಲಿ ಎಲ್ಲಿ ಎಡವಿದೆ ಎನ್ನುವುದನ್ನು ಕಂಡುಕೊಳ್ಳುವುದು ಇಂದಿನ ಅಗತ್ಯವಾಗಿದೆ.
ನರೇಂದ್ರ ಮೋದಿಯವರು ಪ್ರಧಾನಿಯಾದ ದಿನದಿಂದ ವಿದೇಶಾಂಗ ಖಾತೆಯೊಂದಿದೆ, ಭಾರತಕ್ಕೆ ವಿದೇಶಾಂಗ ನೀತಿಯೊಂದಿದೆೆ ಎನ್ನುವುದು ಎಲ್ಲರಿಗೂ ಬಹುತೇಕ ಮರೆತೇ ಹೋಗಿದೆ. ಹೆಸರಿಗೆ ವಿದೇಶಾಂಗ ಸಚಿವರಿದ್ದರೂ, ಪ್ರಧಾನಿ ಮೋದಿಯವರೇ ಎಲ್ಲಾ ವಿಷಯಗಳಿಗೂ ವಿಮಾನ ಹತ್ತಿ ಹೊರಡುತ್ತಿದ್ದರು. ಪ್ರಧಾನಿ ಮೋದಿಯವರು ದೇಶದಲ್ಲಿದ್ದುದಕ್ಕಿಂತ ವಿದೇಶದಲ್ಲಿದ್ದುದೇ ಹೆಚ್ಚು ಎನ್ನುವ ವ್ಯಾಪಕ ಟೀಕೆಗಳು ಮಾಧ್ಯಮಗಳಲ್ಲಿ ಕೇಳಿ ಬಂದಿದ್ದವು. ಕೇವಲ 2022ರಿಂದ 2024 ಅಂದರೆ ಬರೇ ಎರಡು ವರ್ಷಗಳಲ್ಲಿ ಪ್ರಧಾನಿ ಮೋದಿಯವರು 38 ವಿದೇಶ ಪ್ರವಾಸಗಳನ್ನು ಮಾಡಿದ್ದರು. ಇದಕ್ಕಾಗಿರುವ ಒಟ್ಟು ಖರ್ಚು 258 ಕೋಟಿ ರೂಪಾಯಿ. 2023ರ ಜೂನ್ನ ಅಮೆರಿಕ ಪ್ರವಾಸ ಒಂದಕ್ಕೇ ಸುಮಾರು 22 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಖರ್ಚಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿಯವರು ನಡೆಸಿದ ನೂರಾರು ಪ್ರವಾಸಗಳು, ಅದಕ್ಕಾಗಿ ವೆಚ್ಚ ಮಾಡಿದ ಸಾವಿರಾರು ಕೋಟಿ ರೂಪಾಯಿಗಳ ಪರಿಣಾಮ ಏನು? ಇದರಿಂದ ಭಾರತ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ತನ್ನದಾಗಿಸಿಕೊಂಡದ್ದು ಏನನ್ನು? ಬರೇ ಅಂಬಾನಿ ಮತ್ತು ಅದಾನಿಗಳನ್ನು ಉದ್ಧರಿಸುವುದಕ್ಕಾಗಿ ಈ ಪ್ರವಾಸಗಳನ್ನು ಮೋದಿ ಹಮ್ಮಿಕೊಂಡಿದ್ದರೆ? ಎಂದು ದೇಶ ಈಗ ಕೇಳುತ್ತಿದೆ. ‘ದೇಶದಲ್ಲಿ ಬಂಡವಾಳ ಹೂಡಿಕೆ’ ಇದರ ಗುರಿ ಎಂದು ಮೋದಿ ಪರ ಮಾಧ್ಯಮಗಳು ವಿಶ್ಲೇಷಿಸಿದ್ದವಾದರೂ, ಭಾರತವು ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಬಹುತೇಕ ವಿಫಲವಾಗಿದೆ ಎನ್ನುವ ಅಂಶ ಈಗಾಗಲೇ ಬೆಳಕಿಗೆ ಬಂದಿದೆ. ಯಾವುದೇ ಪ್ರಧಾನಿ ನಡೆಸಿದ ವಿದೇಶಿ ಪ್ರವಾಸಕ್ಕಿಂತ ಅತ್ಯಧಿಕ ಪ್ರವಾಸಗಳನ್ನು ಪ್ರಧಾನಿ ಮೋದಿ ಮಾಡಿದ್ದರಾದರೂ, ಭಾರತ ಜಾಗತಿಕವಾಗಿ ಮಾತ್ರ ಒಂಟಿಯಾಗಿದೆ ಎನ್ನುವ ಅಂಶ ಇದೀಗ ಬಹಿರಂಗವಾಗುತ್ತಿದೆ. ಈ ಕಾರಣಕ್ಕಾಗಿಯೇ ಮೊದಲ ಬಾರಿಗೆ, ತನ್ನ ವೈಫಲ್ಯಗಳನ್ನು ಒಪ್ಪಿಕೊಂಡು ಪ್ರಧಾನಿ ಮೋದಿಯವರು ಸರ್ವ ಪಕ್ಷದ ಪ್ರತಿನಿಧಿಗಳ ನಿಯೋಗವನ್ನು ರಚಿಸುವ ಅನಿವಾರ್ಯತೆಗೆ ಸಿಲುಕಿಕೊಂಡಿದ್ದಾರೆ.
ಭಾರತದ ಭಯೋತ್ಪಾದನಾ ವಿರೋಧಿ ಹೋರಾಟವನ್ನು ಇತರ ದೇಶಗಳು ಯಾಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವ ಆತ್ಮವಿಮರ್ಶೆಗೆ ಇದು ಸಕಾಲವಾಗಿದೆ. ನೆಹರೂ ಅಲಿಪ್ತ ನೀತಿಯನ್ನು ಪಾಲಿಸಿಕೊಂಡು ಬಂದರು ಮಾತ್ರವಲ್ಲ, ತೃತೀಯ ಶಕ್ತಿಯಾಗಿ ಭಾರತವನ್ನು ಬೆಳೆಸಿದ್ದರು. ಭಾರತದ ಮಾತುಗಳನ್ನು ಜಗತ್ತು ಗಂಭೀರವಾಗಿ ತೆಗೆದುಕೊಳ್ಳುವ ಕಾಲ ಒಂದಿತ್ತು. ಇಂದಿರಾಗಾಂಧಿಯ ಆಡಳಿತ ಕಾಲದಲ್ಲಂತೂ ಭಾರತ ತನ್ನ ವರ್ಚಸ್ಸನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಹೆಚ್ಚಿಸಿಕೊಂಡಿತು. ಆದರೆ, ಕಳೆದ ಒಂದು ದಶಕದಿಂದ ಭಾರತದ ಗೊಂದಲಕಾರಿಯಾದ ವಿದೇಶಾಂಗ ನೀತಿಯಿಂದಾಗಿ ಯಾರಿಗೂ ಸಲ್ಲದ ದೇಶವಾಗಿ ಬಿಂಬಿತವಾಗತೊಡಗಿತು. ನೆರೆ ದೇಶಗಳ ನಡುವೆ ವಿಷಮ ಸನ್ನಿವೇಶ ಹೆಚ್ಚಾಯಿತು. ಚೀನಾದ ಜೊತೆಗಿರುವ ಬಿರುಕು ಇನ್ನಷ್ಟು ವಿಸ್ತಾರವಾಯಿತು. ಅಮೆರಿಕ ಜೊತೆಗಿನ ಭಾರತದ ಓಲೈಕೆಯಿಂದ ರಶ್ಯದ ಜೊತೆಗಿನ ಸಂಬಂಧ ಹಳಸಿತು. ಭಾರತದೊಂದಿಗೆ ಇರಾನ್ನಂತಹ ದೇಶಗಳು ಕೂಡ ಎಚ್ಚರಿಕೆಯಿಂದ ವ್ಯವಹರಿಸತೊಡಗಿತು. ಇತ್ತ, ಅಮೆರಿಕವಾದರೂ ಭಾರತಕ್ಕೆ ಸನಿಹವಿದೆಯೇ ಎಂದರೆ ಅದೂ ಇಲ್ಲ. ಅಮೆರಿಕವು ತನ್ನ ಆರ್ಥಿಕತೆಗೆ ಪೂರಕವಾಗಿ ಪಾಕಿಸ್ತಾನ, ಭಾರತವನ್ನು ಬಳಸಿಕೊಳ್ಳಲು ನೋಡುತ್ತಿದೆ. ಕನಿಷ್ಠ ಭಯೋತ್ಪಾದನೆಯ ವಿಷಯದಲ್ಲೂ ಭಾರತವನ್ನು ಅಮೆರಿಕದಂತಹ ದೇಶಗಳು ನಂಬದ ಸ್ಥಿತಿ ಯಾಕೆ ನಿರ್ಮಾಣವಾಯಿತು? ಯಾಕೆಂದರೆ ಸ್ವತಃ ಭಾರತವೇ ‘ಭಯೋತ್ಪಾದನೆಯನ್ನು ಪೋಷಿಸುವ ದೇಶ’ ಎಂಬ ಕುಖ್ಯಾತಿಗೆ ನಿಧಾನಕ್ಕೆ ಬಲಿಯಾಗುತ್ತಿದೆ. ಈ ಬಗ್ಗೆ ನಾವು ಎಚ್ಚರಗೊಳ್ಳಬೇಕಾಗಿದೆ.
ಕೆನಡಾದಲ್ಲಿ ನಡೆದ ಸಿಖ್ ಮುಖಂಡನೊಬ್ಬನ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಆ ದೇಶ ಆರೋಪಿಸಿತ್ತು. ಈ ಕಾರಣಕ್ಕಾಗಿಯೇ ಉಭಯ ದೇಶಗಳ ನಡುವೆ ಸಂಬಂಧ ಕೆಟ್ಟಿದೆ. ಇದೇ ಸಂದರ್ಭದಲ್ಲಿ ಅಮೆರಿಕದಲ್ಲಿ ನಡೆದ ಸಿಖ್ ಮುಖಂಡನ ಹತ್ಯೆಯಲ್ಲೂ ಭಾರತದ ಪಾತ್ರದ ಬಗ್ಗೆ ಅಲ್ಲಿನ ಅಧಿಕಾರಿಗಳು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಕೆಲವು ಹಿಂದುತ್ವವಾದಿ ಸಂಘಟನೆಗಳ ಬಗ್ಗೆ ವಿದೇಶಗಳು ಅತ್ಯಂತ ಕಳವಳಗಳನ್ನು ವ್ಯಕ್ತಪಡಿಸಿವೆ ಮಾತ್ರವಲ್ಲ, ಅವುಗಳು ಉಗ್ರವಾದಿ ಚಟುವಟಿಕೆಗಳಲ್ಲಿ ಭಾಗಿಯಾಗಿವೆ ಎಂದು ಆರೋಪಿಸಿವೆ ಮತ್ತು ಈ ಹಿಂದುತ್ವವಾದಿ ಸಂಘಟನೆಗಳಿಗೆ ಭಾರತ ಸರಕಾರ ಬಹಿರಂಗವಾಗಿ ಬೆಂಬಲ ನೀಡುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಭಾರತದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿರುವುದು ವಿದೇಶಿ ಭಯೋತ್ಪಾದಕರಲ್ಲ. ಮಣಿಪುರದಲ್ಲಿ ಕಳೆದ ಎರಡು ವರ್ಷಗಳಿಂದ ಹಿಂಸಾಚಾರ ಭುಗಿಲೆದ್ದಿರುವುದರ ಹಿಂದೆಯೂ ವಿದೇಶ ಭಯೋತ್ಪಾದನಾ ಶಕ್ತಿಗಳಿಲ್ಲ. ಭಾರತದೊಳಗೆ ನಡೆದ ಮಕ್ಕಾ ಮಸೀದಿ ಸ್ಫೋಟ, ಅಜ್ಮೀರ್ ಸ್ಫೋಟ, ಸಂಜೋತಾ ರೈಲು ಸ್ಫೋಟಗಳಲ್ಲಿ ಕೇಸರಿ ಭಯೋತ್ಪಾದಕರ ಪಾತ್ರವಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಮಾಲೆಗಾಂವ್ ಸ್ಫೋಟ ಆರೋಪಿ ಶಂಕಿತ ಭಯೋತ್ಪಾದಕಿ ಪ್ರಜ್ಞಾ ಸಿಂಗ್ಗೆ ಮರಣದಂಡನೆ ನೀಡಬೇಕು ಎಂದು ಎನ್ಐಎ ತಂಡ ನ್ಯಾಯಾಲಯದಲ್ಲಿ ವಿನಂತಿ ಮಾಡಿದೆ. ಮರಣದಂಡನೆಗೆ ಅರ್ಹಳಾಗಿರುವ ಶಂಕಿತ ಭಯೋತ್ಪಾದಕಿಗೆ ಟಿಕೆಟ್ ನೀಡಿ, ಆಕೆಯನ್ನು ಗೆಲ್ಲಿಸಿ ಸಂಸತ್ ಪ್ರವೇಶಿಸುವಂತೆ ಮಾಡಿದ ಮೋದಿ ನೇತೃತ್ವದ ಸರಕಾರ ಭಯೋತ್ಪಾದನೆಯ ಬಗ್ಗೆ ಭಾಷಣ ಮಾಡಿದರೆ ಅದನ್ನು ಇತರ ದೇಶಗಳು ಯಾಕೆ ನಂಬಬೇಕು? ಇದೀಗ ಅಪರೇಷನ್ ಸಿಂಧೂರ ಬಳಿಕ ರಚನೆಯಾಗಿರುವ ರಾಜತಾಂತ್ರಿಕ ನಿಯೋಗವೂ ಪ್ರಧಾನಿ ಮೋದಿಯ ರಾಜಕೀಯಕ್ಕೆ ಬಲಿಯಾಗಿದೆ. ಕಾಂಗ್ರೆಸ್ಗೆ ಮುಜುಗರ ಸೃಷ್ಟಿಸುವುದಕ್ಕಾಗಿ, ಕಾಂಗ್ರೆಸ್ನ ಅನುಮತಿಯಿಲ್ಲದೆಯೆ ಸರಕಾರ ತರೂರನ್ನು ನಿಯೋಗಕ್ಕೆ ಸೇರಿಸಿಕೊಂಡಿದೆ. ಈ ನಿಯೋಗವನ್ನು ಶಿವಸೇನಾ ನಾಯಕ ಸಂಜಯ್ ರಾವತ್ ‘ಮದುವೆ ದಿಬ್ಬಣ’ ಎಂದು ವ್ಯಂಗ್ಯವಾಡಿದ್ದಾರೆ. ನಿಯೋಗದೊಳಗೆ ಸದಸ್ಯರಾಗಿ ಸಂಸದ ತೇಜಸ್ವಿ ಸೂರ್ಯನಂತಹವರೂ ಸೇರಿಕೊಂಡಿದ್ದಾರೆ. ತಮ್ಮ ಸಡಿಲ ನಾಲಗೆಯ ಭಾಷಣಗಳ ಮೂಲಕ ದೇಶದೊಳಗೆ ಜನರ ನಡುವೆ ಭಯವನ್ನು ಬಿತ್ತುವ ಈ ಸಂಸದರು ವಿದೇಶಕ್ಕೆ ತೆರಳಿ ಭಯೋತ್ಪಾದನೆಯ ವಿರುದ್ಧ ಜಾಗೃತಿಯನ್ನು ಮೂಡಿಸುತ್ತಾರೆ ಎನ್ನುವುದೇ ಬಹುದೊಡ್ಡ ವಿಡಂಬನೆಯಾಗಿದೆ. ಭಯೋತ್ಪಾದನೆಯ ಕುರಿತಂತೆ ಭಾರತ ಸರಕಾರ ತನ್ನ ದ್ವಂದ್ವ ನೀತಿಯಿಂದ ಹಿಂದೆ ಸರಿಯಬೇಕಾಗಿದೆ. ಭಾರತದ ನೆಲದಲ್ಲಿ ಸ್ವದೇಶಿ ಭಯೋತ್ಪಾದನೆಯನ್ನು ಪೋಷಿಸುತ್ತಾ, ವಿದೇಶಕ್ಕೆ ತೆರಳಿ, ಭಯೋತ್ಪಾದಕರ ಬಗ್ಗೆ ಜಾಗೃತಿ ಮೂಡಿಸುತ್ತೇನೆ ಎಂದರೆ ಅದನ್ನು ನಂಬುವವರು ಯಾರು? ಮೊದಲ ಹಂತವಾಗಿ, ಪ್ರಧಾನಿ ನೇತೃತ್ವದಲ್ಲಿ ಮಣಿಪುರಕ್ಕೆ ಸರ್ವಪಕ್ಷ ನಿಯೋಗವೊಂದು ತೆರಳಿ ಅಲ್ಲಿರುವ ನಮ್ಮದೇ ಜನರಲ್ಲಿ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾದರೆ, ಎರಡನೇ ಹಂತವಾಗಿ ವಿದೇಶಕ್ಕೆ ತೆರಳಿ ಭಯೋತ್ಪಾದನೆಯ ವಿರುದ್ಧ ಜಾಗೃತಿ ಮೂಡಿಸುವ ನೈತಿಕ ಶಕ್ತಿಯನ್ನು ಭಾರತ ಪಡೆದುಕೊಳ್ಳುತ್ತದೆ.