ಲೇಖಕ, ಪ್ರಕಾಶಕ ಪ್ರೊ.ರಮಾಕಾಂತ ಜೋಶಿ ನಿಧನ

ಪ್ರೊ.ರಮಾಕಾಂತ ಜಿ. ಜೋಶಿ
ಧಾರವಾಡ : ಲೇಖಕ, ಪ್ರಕಾಶಕ ಪ್ರೊ.ರಮಾಕಾಂತ ಜಿ. ಜೋಶಿ (89) ಅವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾಗಿದ್ದಾರೆ.
ಡಾ.ರಮಾಕಾಂತ ಜೋಶಿ ಅವರು, ಧಾರವಾಡದ ಮನೋಹರ ಗ್ರಂಥಮಾಲಾ ಸಂಪಾದಕ, ವ್ಯವಸ್ಥಾಪಕಾಗಿದ್ದರು.
ಡಾ.ರಮಾಕಾಂತ ಜೋಶಿ ಅವರು ನಗರದ ಕರ್ನಾಟಕ ವಿದ್ಯಾಲಯದಲ್ಲಿ ಬಿ.ಎ, ಗುಜರಾತಿನ ಸರ್ದಾರ್ ಪಟೇಲ್ ವಿ.ವಿ.ಯಲ್ಲಿ ಎಂ.ಎ ಮತ್ತು ಪಿಎಚ್.ಡಿ ಪದವಿ ಪಡೆದಿದ್ದರು. ನಗರದ ಕಿಟೆಲ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, 1994ರಲ್ಲಿ ನಿವೃತ್ತರಾಗಿದ್ದರು.
ದೀನಾನಾಥ ಮಲ್ಹೋತ್ರಾ ಅವರ ‘ಬುಕ್ ಪಬ್ಲಿಷಿಂಗ್’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದರು. ‘ಎ.ಕೆ.ರಾಮಾನುಜನ್ ಸಮಗ್ರ ಸಂಪುಟ’, ‘ರಾಘವೇಂದ್ರ ಖಾಸನೀಸ ಸಮಗ್ರ’, ‘ಒಂದಿಷ್ಟು ಹೊಸ ಕತೆಗಳು’ ‘ಸವಣೂರ ವಾಮನರಾವ ಸಮಗ್ರ ನಾಟಕ’, ‘ಮಿತ್ ಇನ್ ಇಂಡಿಯನ್ ಡ್ರಾಮಾ’ ಮೊದಲಾದ ಕೃತಿಗಳನ್ನು ಸಂಪಾದಿಸಿದ್ದಾರೆ.
ಡಾ.ರಮಾಕಾಂತ ಜೋಶಿ ಅವರಿಗೆ ಹೊಸದಿಲ್ಲಿಯ ಭಾರತೀಯ ಪ್ರಕಾಶಕರ ಒಕ್ಕೂಟದ 'ವಿಶಿಷ್ಟ ಪ್ರಕಾಶಕ ಪ್ರಶಸ್ತಿ', ಕನ್ನಡ ಪುಸ್ತಕ ಪ್ರಾಧಿಕಾರದ ‘ಅತ್ಯುತ್ತಮ ಪ್ರಕಾಶನ‘ ಪ್ರಶಸ್ತಿ, 'ಆಳ್ವಾ ನುಡಿಸಿರಿ' ಪ್ರಶಸ್ತಿ ಸಹಿತ ಹಲವು ಪುರಸ್ಕಾರಕಗಳು ದೊರೆತಿವೆ.
ಡಾ.ರಮಾಕಾಂತ ಜೋಶಿ ಅವರ ಅಂತ್ಯಕ್ರಿಯೆ ರವಿವಾರ (ಮೇ.18) ರಂದು ಬೆಳಿಗ್ಗೆ 10 ಗಂಟೆಗೆ ಧಾರವಾಡ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.